ʻʻವಿಟ್ಠಲʼʼ ಅಂದು ಅರ್ಥವಾಗಿರಲಿಲ್ಲ , ಇಂದು ಅರಿವಾಗಿದೆ ಆದರೆ ಅವನಿಲ್ಲ.
ವಾಸ್ತವಕ್ಕೇಕೋ ಅರಿವಳಿಕೆ. ಗತಕೆ ಜೀವನೀಡಲು ಈಗ ವ್ಯರ್ಥ ಹವಣಿಕೆ
ಅವನು ಕುಂತಲ್ಲಿ ಕುಂತಿಲ್ಲ. ಕೂಡ್ರಲೂ ಬಿಡಲಿಲ್ಲ.
ದಿನವಿಡೀ ಯೋಚನೆಯಲ್ಲಿ ಯೋಜನೆಗಳ ಗುಪ್ಪೆ. ನಮಗೋ ಕಿರಿ ಕಿರಿ.
ಸಾಕೋ ಮಾರಾಯಾ, ಒಂದೊಂದೇ ಮುಗಿಸು. ಎಲ್ಲವನೂ ಶುರುಹಚ್ಚಿ
ಕಾಟಕೊಡಬೇಡ ಮಾರಾಯಾ, ಚುಚ್ಚಿ ಚುಚ್ಚಿ.
ಸಲಹೆ ಕಿವಿಗೆ ಬೀಳದು. ನಮ್ಮನ್ನೇ ಎಳೆದೆಳೆದು, ಪ್ರೀತಿಯಲೇ ಚಚ್ಚುವುದು,
ಮೆಚ್ಚು ಆತನಿಗೆ.
ನೀನೊಂದಿಷ್ಟು ಕುಂತು ಬರೆ ಮಾರಾಯಾ ಅಂದರೂ ಬರೆಯಲಾರ.
ಬರೆಸುವುದ ಮಾತ್ರ ಬಿಡಲಾರ.
ವರ್ತಮಾನದ ಸಂಕಟವ, ಜಂಜಡವ ಬೆಂಬಿಡದೆ ಬಡಿಬಡಿದು,
ಎದುರಾಗಿ ಎದೆಸೆಟೆಸಿ ನಿಲ್ಲುವುದೇ ಅವನ ಜಾಯಮಾನ.
ಅದಕೇ ಹುಡುಕಿದ, ತಡಕಾಡಿದ. ಕತ್ತಲೆಯಿಂದೆದ್ದಿತು ಸಂವಿಧಾನ
ಜೀವತಳೆದನಾಗ -
ಮೋಹನದಾಸನ ಅವಿರತ ಸಂಚಲನ.
ಮಸ್ತಕದ ತಳಪಾಯ ಪುಸ್ತಕದ ಮಹಲು
ಸುತ್ತಲೂ ಯಮುನೆಯ ಕಣ್ಗಾವಲು.
ಕೆಂಪಾದ ಗಾಳಿಯಲಿ ಸೊಂಪಾದ ನಗು ಬೀರಿ
ಚಿಂತನದ ತೋಟದಲಿ ಬೆಳೆ ತೆಗೆದ ಕೃಷಿಕ.
ಫಲಕೊಯ್ಯದೇ ನಮಗೆ ಕೊಟ್ಟ. ಖಾಲಿಕೈಯ್ಯಲ್ಲಿ ಹೊರಟು-
ಹೋಗಿಬಿಟ್ಟ.
ಸುಬ್ರಾಯ ಮತ್ತೀಹಳ್ಳಿ. ತಾ- ೩೦-೬-೨೦೨೧.
No comments:
Post a Comment