ಕಾನು ಮಾತೆಯೆ ಜೀವದಾತೆಯೆ, ನಿನ್ನಡಿಗೆ ನಮ್ಮ ನಮನ
ಹಸಿರು ಉಸಿರಿನ ಸೃಷ್ಟಿಮೂಲಳೆ, ಹರಿಯಿತೋ ನಮ್ಮ ಗಮನ,
1 ) ಮಳೆಗೆ ಮೂಲಳೆ, ನದಿಗೆ ತಾಯಿಯೆ, ಚಿನ್ನದೊಡವೆಯ ಚಲುವೆಯೇ
ಪ್ರಾಣದುಸಿರನು ನೀಡಿ ಕಾಯುವ, ಮಮತೆಯಾ ಪ್ರತಿ ಮೂರ್ತಿಯೇ
ಕಾಡಕಡಿದೆವು ನಾಡ ನೆಟ್ಟೆವು, ಹೊಟ್ಟೆಪಾಡಿಗೆ ಮಣ್ಣ ಹಿರಿದೆವು
ಹಣದ ಆಸೆಗೆ ಮರದ ಕೊರಳಿಗೆ, ಕುಣಿಕೆಯಿಕ್ಕಿ ಕುಣಿದೆವು.
2) ಗಾಳಿಯೊಡಲಿಗೆ ದೂಳ ತೂರಿ ಹೊಗೆಯ ಹೀರಿ ಹೀರಿ
ಹುಸಿಯ ಬದುಕಿಗೆ ಹಸಿದು ಕಾದೆವು , ಮಾನ ಮಾರಿ ಮಾರಿ.
ಕಹಿಯ ಬಿತ್ತಿ ಸಿಹಿಯ ಬಯಸುತ, ಸುಖದ ಕನಸಿನಲಿ
ಮುಗುದ ಪ್ರಕೃತಿಯ ಮಾನ ಕಳೆದೆವು, ವಿಕೃತ ಮನದಲ್ಲಿ.
3) ಕಾಲ ಕಟು ಕಹಿ, ನಿಸ್ಸಾರವಾಗಿದೆ, ಮನಸು ತಲ್ಲಣಗೊಂಡಿದೆ.
ಜೇನು ಕಾನನು ತೊರೆದಿದೆ, ದೂರ ದೂರಕೆ ಸಾಗಿದೆ.
ಪ್ರಾಣಿ ಪಕ್ಷಿ ಕೀಟ ಸಂಕುಲ, ಉಳಿಯಬೇಕು ಇಳೆಯಲಿ,
ಸ್ವಾರ್ಥ ಕಳೆಯಲಿ, ಸೌ- ಹಾರ್ದ ನೆಲೆಸಲಿ, ಜೇನು ಗಾನ ಉಲಿಯಲಿ.
4) ಬೇಕು ಬದುಕಲು ಜೇನು, ಬೇಕು ಜೇನಿಗೆ ಕಾನು
ನೂಕು ಸ್ವಾರ್ಥದ ಹೊರೆಯನು, ಕೇಳು ತಿರೆಯಾ ಕರೆಯನು
( ಜೇನುಳಿದರೇ ..!! ಉಳಿದಾನು ಮಾನವನು
ಬದುಕೆಂದರೇನು....? ಕಲಿಯೋಣ ನಾನು - ನೀನು.)
ಸುಬ್ರಾಯ ಮತ್ತೀಹಳ್ಳಿ. ತಾ- ೧೯-೨-೨೨
(ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ
ಜೇನು ಕೃಷಿ ತರಬೇತಿಗಾಗಿ
ರಚಿಸಿದ, ಪ್ರಾರ್ಥನಾ ಗೀತೆ.
ರಾಗಸಂಯೋಜನೆ, ಶ್ರೀಮತಿ
ಶುಭಾಪಾಟೀಲ್.)
No comments:
Post a Comment