Monday 6 January 2014

ದೇವರು ಧರ್ಮ ಮಾನವೀಯತೆ ಇತ್ಯಾದಿ



   ಪ್ರಕೃತಿ ಮನುಷ್ಯನನ್ನು ಸೃಷ್ಟಿಸಿತು. ಮನುಷ್ಯ ದೇವರನ್ನು ಸೃಷ್ಟಿಸಿದ. ಇದೊಂದು ಜನಪ್ರಿಯ ನುಡಿ. ಪ್ರಕೃತಿಯ ಅನಿರೀಕ್ಷಿತ ಆಟಾಟೋಪ ಬದುಕಿನ ಏರಿಳಿತ ಮತ್ತು ನಾಳಿನ ನಿಘೂಡತೆ ಇವುಗಳೇ ದೇವರ ಸೃಷ್ಟಿಯ ಮೂಲವೆನ್ನುತ್ತಾರೆ.
          ಮನುಷ್ಯ ಮೂಲಭೂತವಾಗಿ ದುರ್ಬಲ. ಆನೆಯ ಬಲ ಹುಲಿಯ ಶೌರ್ಯ ಚಿರತೆಯ ಓಟ ಹದ್ದಿನ ಕಣ್ಣು ಯಾವುದನ್ನೂ ಪಡೆಯದ ಮನುಷ್ಯ  ವಿಶಿಷ್ಟ ಭಯದಲ್ಲಿ ನರಳುವುದು ಸ್ವಾಭಾವಿಕ. ಆದರೆ ಆತ ಉಳಿದೆಲ್ಲ ಪ್ರಾಣಿಗಳಿಗಿಂತ ಚುರುಕಾದ ಬುದ್ಧಿಶಕ್ತಿ ಪಡೆದಿದ್ದಾನೆ.
ಪ್ರಜ್ಞಾವಂತಿಕೆ ಹೊಂದಿದ್ದಾನೆ. ಪ್ರಜ್ಞೆಯ ಜೊತೆಗೊಂದಿಷ್ಟು ಅವಜ್ಞೆಯನ್ನೂ ಹೊಂದಿದ್ದಾನೆ.  ಬುದ್ದಿ ಮನುಷ್ಯನ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು.
          ಪ್ರತಿಯೊಬ್ಬ ಮನುಷ್ಯನಲ್ಲಿಯೂ ಮಾನವತೆ ದಾನವತೆ, ಶಿಶುತನ-ಹಸುತನ,
ಪ್ರೀತಿ ಧ್ವೇಷ, ಗೆಳೆತನ-ಮೋಸ, ಸತ್ಯ ಅಸತ್ಯ, ಪ್ರಾಮಾಣಿಕತೆ ಕಾಪಟ್ಯ, ಗಳು ತುಂಬಿಕೊಂಡೇ ಇರುತ್ತವೆ.  ಬದುಕಿನ ಕಟುವಾಸ್ತವದ ರಣಾಂಗಣದಲ್ಲಿ ಮನುಷ್ಯ ತನ್ನ ದೌರ್ಬಲ್ಯಗಳೊಂದಿಗೆ ಸೆಣಸಾಡುತ್ತಲೇ  ಮಾನವ ಜಗತ್ತಿನ ದಾನವತನದ ವಿರುದ್ಧ ಹೋರಾಡುವ ಗುಣಗಳನ್ನು ಪಡೆಯಲು ಬುದ್ಧಿಯ ರಥಕ್ಕೆ ಪ್ರಜ್ಞಾವಂತಿಕೆಯ ಸಾರಥ್ಯವನ್ನ ಗಳಿಸಿಕೊಳ್ಳಬೇಕು.
          ಯುಗ ಯುಗಗಳಿಂದಲೂ ಮಾನವ ಜಗತ್ತಿನಲ್ಲಿ ಸಮಾನ ವಿರದ್ಧ ಪ್ರವಾಹಗಳು ಪರಸ್ಪರ ಸಂಘಷರ್ಿಸುತ್ತ ಸಾಗುತ್ತಿವೆ. ರಕ್ಕಸ ಪ್ರವೃತ್ತಿಯನ್ನು ತಹಬಂದಿಯಲ್ಲಿಟ್ಟು ಮಾನವತೆಯನ್ನು ಜಾಗೃತಗೊಳಿಸಲೆಂದೇ  ಸಂತರು ಪ್ರವಾದಿಗಳು ಋಷಿಗಳು ಜನಿಸಿದರು. ಅವತಾರಗಳು ಅವತರಿಸಿದವು. ಧರ್ಮ ತತ್ವಜ್ಞಾನ ಪುರಾಣ ಕಾವ್ಯಗಳು ಸೃಷ್ಟಿಯಾದವು. ದೌಷ್ಟ್ಯತೆಯ ಮಾರಕತೆಯನ್ನು ವಣರ್ಿಸುತ್ತ  ಶಿಷ್ಟ ಬದುಕಿನ ಮಹತ್ವವನ್ನು ಸಾರಿದವು.
           ಉಪನಿಷತ್ತಿನ ಆಕರ್ಷಕ ರೂಪಕವೊಂದು ಇಲ್ಲಿ ಪ್ರಸ್ತುತವೆನ್ನಿಸುತ್ತದೆ.
``ಇಂದ್ರನ ವೈಭವೋಪೇತ ಸಭಾಭವನ, ಸುವರ್ಣಲೇಪಿತ ಗೋಡೆ ಛಾವಣಿಗಳು
ಕಲಾತ್ಮಕ ಸ್ಥಂಭಗಳು. ಅವುಗಳ ತುಂಬೆಲ್ಲ ನೇತಾಡುವ ಹೊಳೆಯುವ ಅಸಂಖ್ಯಾತ ನವರತ್ನ ಮಣಿಗಳು,  ಇಂದ್ರ ಮತ್ತು ಸಭಾಸದರೆಲ್ಲರ ಪ್ರತಿಬಿಂಬ ಗೋಡೆ ಛಾವಣಿ ಸ್ಥಂಭಗಳ ಮೇಲೆ ಮತ್ತು ರತ್ನ ಮಣಿಗಳಲ್ಲಿ  ಮೂಡಿದ್ದವು. ಸಭಾಸದರ ಕಣ್ಣುಗಳಲ್ಲಿ  ಇಡೀ ಸಭಾಭವನ ಪ್ರತಿಬಿಂಬಿಸುತಿತ್ತು. 
            ಪ್ರಸ್ತುತ ರೂಪಕ  ವಿಶ್ವದ ಪ್ರತಿಯೊಂದು ಸೃಷ್ಟಿಯೂ ಪರಸ್ಪರ ಹೇಗೆ ಹೆಣೆದುಕೊಂಡಿದೆ ಪರಸ್ಪರ ಹೇಗೆ ಒಂದನ್ನೊಂದು ಅವಲಂಬಿಸಿವೆ ಎಂಬುದನ್ನ ಸುಂದರವಾಗಿ ಧ್ವನಿಸುತ್ತದೆ.
              ಆದರೂ ಜಗತ್ತು ದಾನವರಿಂದ ಏಕೆ ಬಿಡುಗಡೆ ಗೊಂಡಿಲ್ಲ.? ರಕ್ಕಸತನವೇ ಏಕೆ ವಿಜ್ರಂಭಿಸುತ್ತದೆ..? ಯುದ್ಧ ಧ್ವೇಷ ಕಪಟತನಗಳೇ ಏಕೆ ಮೇಲುಗೈ ಸಾಧಿಸುತ್ತವೆ..? ದೇವರು ಧರ್ಮಗಳು ಜಡಗೊಳ್ಳುತ್ತಿರುತ್ತವೆ ಏಕೆ..? ಜನಪರ ಸೃಷ್ಟಿ ಜನವಿರೋಧಿಯಾಗಲು ಕಾರಣಗಳೇನು..?
               ಒಗಟೆಯೇನೀ ಸೃಷ್ಟಿ ? ಬಾಳಿಗರ್ಥವದೇನು?
               ಬಗೆದು ಬಿಡಿಸುವರಾರು ಸೋಜಿಗವನಿದನು ?
               ಜಗವ ನಿರವಿಸಿದ ಕೈಯೊಂದಾದಡೇಕಿಂತು
               ಬಗೆ ಬಗೆಯ ಜೀವಗತಿ ?- ಮಂಕುತಿಮ್ಮ
              ಇಂಥ ಪ್ರಶ್ನೆಗಳು ನಮ್ಮೊಂದಿಗೇ ಹುಟ್ಟುತ್ತವೆ ಹುಟ್ಟಬೇಕು. ನಮ್ಮಿಂದಲೇ
ಅಂತ್ಯವನ್ನೂ ಕಾಣಬೇಕು.  ಪ್ರತಿಯೊಂದಕ್ಕೂ ಆದಿಯಿದೆ ಅಂತ್ಯವೂ ಇದೆ. ಅದು ನದಿಗೆ ಮಹಾಪೂರವಿದ್ದಂತೆ. ಮಹಾಪೂರದ ಮಾರಕತೆಯನ್ನು ತಡೆಯುವ ಮಹಾಪೂರ ಕಾಲುವೆ ತೋಡಿದಂತೆ  ಸಮುದಾಯವೊಂದು ದಿಕ್ಕು ತಪ್ಪುತ್ತಿರುವಾಗ ಸಂಭವಾಮಿ ಯುಗೇ ಯುಗೇ  ಉದ್ಘೋಷ ಮೊಳಗಲೇಬೇಕು.
              ನಮ್ಮ ಮನಸ್ಸು  ನಮ್ಮ ಸಮುದಾಯಗಳು  ಕ್ರಿಯಾಶೀಲ ವಾಗಿರುವಾಗಲೇ ಕೊಳೆಯ ಮಾಯೆಯಿಂದ ಆವೃತಗೊಳ್ಳುತ್ತಿರುತ್ತದೆ.ಕೊಳೆಯ ಪ್ರಭಾವದಲ್ಲಿ ದಿಕ್ಕು ತಪ್ಪುತ್ತಿರುತ್ತದೆ. ದೇಹದ ಕೊಳೆ ನಿವಾರಿಸಲು ನಿತ್ಯಸ್ನಾನ ದಂತೆ  ಸಮುದಾಯದ ಕಶ್ಮಲ ತೊಳೆಯುವ ಕ್ರಿಯೆ ನಿತ್ಯನಿರಂತರವಾಗಿರಬೇಕು.  ಮನುಷ್ಯ ತನ್ನ ಮೃಗೀಯತೆಯನ್ನು ಮೀರಿ  ನಿಜವಾದ ಮನುಷ್ಯತ್ವ ಪಡೆಯುವ ಹಂಬಲದ ಹೋರಾಟದಲ್ಲಿ ದೊರಕಿಸಿಕೊಂಡ  ಅಮೂಲ್ಯ ಸಂಪತ್ತು ಎಂದರೆ, ತತ್ವಜ್ಞಾನ ಮತ್ತು ದೇವರು ಎಂಬ ಮೌಲ್ಯ.  ದೇವರು ಎಂದರೆ ವಿಶ್ವಶಕ್ತಿ. ಅದನ್ನು ಅಥರ್ೈಸುವ ಕ್ರಿಯೆಯೇ ತತ್ವಜ್ಞಾನ. ತತ್ವಜ್ಞಾನ   ದೇವರ ತಾಯಿ, ವಿಜ್ಞಾನದ ತಂದೆ. ಇದೇ ಕಾರಣಕ್ಕೇ
``ತತ್ವವಿಲ್ಲದ ವಿಜ್ಞಾನ ವ್ಯರ್ಥ  ವಿಜ್ಞಾನವಿಲ್ಲದ ತತ್ವ ವ್ಯರ್ಥ ಎಂಬ ನಾಣ್ಣುಡಿ ಹುಟ್ಟಿಕೊಂಡಿದೆ.
               ಕವಿ ಶಿವರುದ್ರಪ್ಪ ನಮ್ಮ ಬದುಕಿನ ಇದೇ ಸಂಧಿಗ್ಧವನ್ನು ತಮ್ಮ ಕವಿತೆಯೊಂದರಲ್ಲಿ
ಮನೋಜ್ಞವಾಗಿ ಬಿಂಬಿಸಿದ್ದಾರೆ.
                ``ಎಲ್ಲೊ ಹುಡುಕಿದೆ ಇಲ್ಲದ ದೇವರ
                 ಕಲ್ಲು ಮಣ್ಣುಗಳ ಗುಡಿಯೊಳಗೆ
                 ಇಲ್ಲೇ ಇರುವ ಪ್ರೀತಿಸ್ನೇಹಗಳ
                 ಕಾಣದಾದೆನು  ನಮ್ಮೊಳಗೆ   ಎಂದು.
              ಆಧ್ಯಾತ್ಮಿಕತೆಯ ತೆಕ್ಕೆಯಲ್ಲಿ ಜಾಗ್ರತ ಮನಸ್ಸಿರಬೇಕು. ತಾತ್ವಿಕತೆಯ
ನೆರಳಿನಲ್ಲಿ ಬುದ್ಧಿ ನೆಲೆಸಿರಬೇಕು. ಸಾತ್ವಿಕ ಪ್ರತಿಭಟನೆ ಚಿತ್ತದ ಅಸ್ತ್ರ ವಾಗಬೇಕು.
ನಾನುತನದ ಮುಳ್ಳು ಅಳಿದು  ನಾವುತನದ ಹೂ ಅರಳಬೇಕು.
                                                  [ಆಕಾಶವಾಣಿ ಕೃಪೆ 

ಸಾಯಬೇಡ ಗೆಳೆಯಾ...........



ಬೇಸಾಯವೆನ್ನುತ್ತ  ಸಾಯಬೇಡ ಗೆಳೆಯಾ
ಒಂಟಿಯಲ್ಲ ನೀನು  ನಿನ್ನಂತೆ ನಾನು

ಚಳಿಯುದುರಿಸಿದ ತರಗೆಲೆಗಳ ರಾಶಿಯಲ್ಲಿ
ಕಣ್ಣಲ್ಲಿ ಕಣ್ಣಿಟ್ಟು ಹುಡುಕೋಣ
ಅದರಡಿಯಲ್ಲಿ ಒಂದಾದರೂ ದೊರಕೀತು
ಘಟ್ಟಿ ಬೀಜ

ಎಲ್ಲ ಮರಗಳೂ ಬರ ಬರಲು
ರೆಂಬೆ ಕೊಂಬೆಗಳೆಲ್ಲ ಬತ್ತಲೋ ಬತ್ತಲು
ನದಿಯ ಒಡಲಲ್ಲಿ ಶುಷ್ಕ ಮಳಲು
ಸುತ್ತಲೆಲ್ಲ ಧ್ವನಿಯಿಲ್ಲದ ಕೊರಳು

ಖಾಲಿ ಖಾಲಿ ಆಕಾಶ  ಅಲ್ಲಷ್ಟು ಇಲ್ಲಷ್ಟು ಬಿಳಿಮೋಡ
ಸುಡುವ ಅಗ್ನಿಗೋಳ  ಸೂರ್ಯ
ಬಿಸಿ ಬಿಸಿ ಬಿರುಗಾಳಿ ಸುತ್ತೆಲ್ಲ ಸ್ಥಬ್ಧ
ಅಲ್ಲ  ರಣಗಂಭೀರ ಮೌನ

ಇದು ಪ್ರಕೃತಿ  ವಿಕೃತಿಯಲ್ಲ ಗೆಳೆಯಾ
ಸತ್ತ ಮರಗಳಲ್ಲ ಅವು ಸುಪ್ತ ಸತ್ಯದ
ಗರುಡ ಗಂಬಗಳು. ಅಂತರ್ಜಲಕ್ಕಾಗಿ
ಕಾದಿರುವ ಮಣ್ಣ ಕುಂಭಗಳು.
ವಸಂತನ ನಿರೀಕ್ಷೆಯಲ್ಲಿ ನಿಂತ
ಹಸಿರು ಕನಸುಗಳು.
ಚಿಗುರಿ ಎಲೆಯಾಗುವ ಹೂವು ಫಲವಾಗುವ
ಪ್ರಫುಲ್ಲ ಮನಸುಗಳು.

ಮಳೆ ಹನಿದರೆ ಸಾಕು ಮೊಳೆತು ಆಕಾಶಕ್ಕೆ
ಕೈಚಾಚುವ ಕಾತರ ನಮಗೆ ಕಾಣಬಹುದು
ಗಟ್ಟಿ ನೆಲದಲ್ಲೂ ಬೇರೂರುವ ಸಾಹಸ
ನಮ್ಮನ್ನೆಚ್ಚರಿಸ ಬಹುದು.

ಬಿಸಿಯಾಗಲಿ ಭೂಮಿ ಕಳೆಯಲಿ ಚಳಿಗಾಲ
ಎಲ್ಲಾದರೂ ಒಂದಿಷ್ಟು ನೆರಳು ಹುಡುಕು
ಮಣ್ಣಮರೆಯಲ್ಲಿ ಮರೆಯಾಗಿರುವ ಬೀಜದಂತೆ
ಶಿಲಾಸ್ಥರದಡಿಯ ಜಲ ನಿಕ್ಷೇಪದಂತೆ
ಒಮ್ಮೆಲೇ ಚಿಗುರೋಣ  ಚಿಮ್ಮೋಣ
ನಗರ ನಾಗರವೇ ಬೆಚ್ಚುವಂತೆ 

ಗಾನ ಮಂಟಪದಲ್ಲಿ ನುಡಿಯ ಧ್ಯಾನ...


``ಗಾನ ಮಂಟಪದಲ್ಲಿ  ನುಡಿಯ ಧ್ಯಾನ

          ``ಮಾತು ಮಾನವ ಜಗತ್ತಿಗೆ  ಪ್ರಕೃತಿ ನೀಡಿದ ಮಹತ್ವಪೂರ್ಣ ವರ. ಅದೊಂದು ಭವ್ಯ ದಿವ್ಯ ನಂದನ. ಮೌನದ ಜೊತೆಗಿನ ಅನುಸಂಧಾನ. ಮೌನಕ್ಕೆ ಮೆರಗು ನೀಡಿ ಹೊಳಪು ಕೊಟ್ಟು ಸಿಂಗರಿಸಿದ ನುಡಿಶಿಲ್ಪವೇ ಕಾವ್ಯ ಎಂದರೆ ಸರಿಯೇನೋ. ಸುಸ್ಥಿತಿಯಲ್ಲಿರುವ ಮನುಷ್ಯನಲ್ಲಿ ಮಾತು ಎನ್ನುವುದು ಸಹಜವ್ಯಾಪಾರ.
        ಮಾತೆ ಜೀವ ನೀಡಿದರೆ ಮಾತು ವ್ಯಕ್ತಿತ್ವ ನೀಡುತ್ತದೆ. ಮಾತು ಮತ್ತು ಮಾತೆ ಈ ಎರಡು ಮೌಲ್ಯ ಬಿಟ್ಟರೆ ಜಗತ್ತಿನಲ್ಲಿ ಇನ್ನೂ ಮೌಲಿಕವಾದ ವಸ್ತು ಇನ್ನೆಲ್ಲಿದೆ ?. ಒಂದು ಕ್ರಿಯಾಶೀಲ ವ್ಯಕ್ತಿತ್ವಕ್ಕೆ ನುಡಿಯೊಂದು ಶಕ್ತಿಯೂ ಹೌದು, ಸುಂದರ ಆಭರಣವೂ ಹೌದು.  ಮಾನವ ಸಂಬಂಧದ ಸರಪಳಿಯನ್ನ ಸೃಷ್ಟಿಸುವ ಮಾತು  ತನ್ನ ಮಿತಿ ಮೀರಿದರೆ ಉತ್ಪಾತವನ್ನೂ ಉಂಟುಮಾಡಬಹುದು.
         ಮನುಷ್ಯನ ಕ್ರಿಯಾಶೀಲತೆಗೆ ಸತ್ವವಾಗಿ ಶಕ್ತಿಯಾಗಿ ವತರ್ಿಸುವ ನುಡಿ ಅದೊಂದು ಸಮರ್ಥ ಸಾಧನ. ವ್ಯಕ್ತಿತ್ವದ ವಿಕಾಸಕ್ಕೆ ಮಾತು ಬಳಕೆಯಾಗಬೇಕು. ಅದು ನಿಜವಾದ ಪ್ರಯೋಜನ. ಆದರೆ ಮಾತು ತನ್ನ ಭಾವ ಕೋಶವನ್ನು ಮರೆತು ಕೇವಲ ಬೌದ್ಧಿಕಗೊಳ್ಳುತ್ತ ಸಾಗಿದರೆ ಕೇವಲ ಯಾಂತ್ರಿಕ ಕ್ರಿಯೆಯಾದೀತು (ಸಂವಹನ).  ಮಾಂತ್ರಿಕತೆ ಮರೆಯಾದೀತು.
         ಆಗ ವಿಕಾಸದ ಬದಲು ವಿನಾಶದೆಡೆಗೆ ಸಾಗೀತು. ಮಾತೆಂಬ ವರಪಡೆದ  ಏಕೈಕ ಜೀವಿಯಾದ ಮನುಷ್ಯ  ಮಾತನ್ನೇ ಅಸ್ತ್ರವಾಗಿಸಿ ಆಸ್ತಿಯಾಗಿಸಿ ಸ್ವಾರ್ಥ ಸಾಧಿಸಿ ಕೊಳ್ಳುವ ನೆಲೆಗೆ ಪ್ರವೇಶಿಸಿದ್ದು ಮಾತ್ರ ದುರಂತ.  ಜಗತ್ತಿನ  ಕಲಾಸೃಷ್ಟಿಗಳೆಲ್ಲ ಮಾತಿನ ವಿಸ್ತಾರವೇ.   ಅದು ಕಾವ್ಯವಾಗಿರಬಹುದು ಅಥವಾ ಶಾಸ್ತ್ರವಾಗಿರಬಹುದು.
         ಮಾತೆಂಬ ವರ ಮಾನವ ಬದುಕಿನ ಸಾಂತ್ವನವಾಗುವ ಬದಲು  ಭಯೋತ್ಪಾದನವಾಗಲು, ಶಕ್ತಿಯಾಗುವ ಬದಲು ದೌರ್ಬಲ್ಯವಾಗಲು,  ಕಲೆಯಾಗುವ ಬದಲು ವ್ಯಾಪಾರವಾಗಲು ,  ಮೌನಕ್ಕೆ ಮೆರಗಾಗಿ ಜ್ಞಾನದ
ಸ್ಪೂತರ್ಿಯಾಗುವ ಬದಲು ಒಣ ಗದ್ದಲವಾಗಲು ಮಾತಿನ ನಿಜವಾದ ತಾತ್ವಿಕತೆ ಮತ್ತು ಅಧ್ಯಾತ್ಮಿಕತೆ ಯೆಡೆಗಿನ ಅಶೃದ್ಧೆಯೇ ಕಾರಣ ಎಂದು ತಿಳಿದಿದ್ದೇನೆ.
          ಭಾರತೀಯ ತಾತ್ವಿಕ ಪರಂಪರೆಯಲ್ಲಿ ವೇದೋಪನಿಷತ್ತುಗಳಿಂದ ವಚನಗಳು ಮತ್ತು ಸರ್ವಜ್ಞ ರ ವರೆಗೆ  ಮಾತಿನ ಮಹತ್ವ ಸತ್ವ ಮತ್ತು ಪ್ರಯೋಜನ ಗಳ ಬಗೆಗೆ ಸಾವಿರಾರು ಉದಾಹರಣೆ ದೊರೆಯುತ್ತದೆ.
ಆದರೆ ಮಾತಿನ ಸದ್ಬಳಕೆಯ ನೆಲೆಯಲ್ಲಿ ಒಂದು ಸ್ವತಂತ್ರ ಕಲಾಪ್ರಕಾರ ಸೃಷ್ಟಿಯಾದ ಉದಾಹರಣೆ ನಮಗೆ ಸಿಗಲಾರದು. ಅಂಥ ಅಪರೂಪದ  ಒಂದು ಕಲಾಪ್ರಕಾರವನ್ನು ಜೀವಂತವಾಗಿ ಕಾಣಲೇಬೇಕಾದರೆ ದಕ್ಷಿಣೋತ್ತರ
ಕನ್ನಡಜಿಲ್ಲೆಗೇ ಬರಬೇಕಾದೀತೇನೋ.
       ಮಾತೃಭಾಷೆಗೊಂದು ಪಾವಿತ್ರ್ಯತೆ  ಶುದ್ಧತೆ ಮತ್ತು ಜೀವಂತಿಕೆ ಇರುವ ಪ್ರದೇಶವೆಂದರೆ ಇದೇ ಜಿಲ್ಲೆಗಳು  ಎಂದು ಧೈರ್ಯದಿಂದ ಸಾರಬಹುದೇನೊ. ಪಂಪ ವಣರ್ಿಸುವ ``ಚಾಗ ಭೋಗ ಅಕ್ಕರ ಗೊಟ್ಟಿ ಇಂಪು ಮುಂತಾದ ಜನಜೀವನದ ಬಗೆಗಿನ ವಿವರಗಳನ್ನ ಗಮನಿಸಿದಾಗ ಇಲ್ಲಿಯ ಜನಪದಕ್ಕೆ ಅಂಥ ಶಕ್ತಿ ದೊರಕಿದ್ದು  ತಾಳಮದ್ದಲೆ ಯಕ್ಷಗಾನದಂಥ ಅಪೂರ್ವ ಕಲಾಪ್ರಕಾರಗಳಿಂದ  ಎಂದೇ ತಿಳಿಯಬೇಕಾಗುತ್ತದೆ.
     ತಾಳಮದ್ದಲೆ ಎಂಬ ಕಲಾಪ್ರಕಾರ ನಮ್ಮ ಈ ಮಣ್ಣು ಜಗತ್ತಿಗೆ ನೀಡಿದ ಒಂದು ಅನನ್ಯ ಕೊಡುಗೆ.  ಈ ಪ್ರಕಾರವೇ ಮುಂದೆ ಹಲವು ವೈವಿಧ್ಯಗಳನ್ನು ಮೈಗೂಡಿಸಿಕೊಂಡು ಯಕ್ಷಗಾನವೆಂಬ ರೂಪ ಧರಿಸಿತು ಎನ್ನುತ್ತಾರೆ ತಜ್ಞರು.
      ತಾಳಮದ್ದಲೆಯ  ನಿರಾಭರಣತ್ವ ವನ್ನು ಕಂಡು  ಈ ಕಲೆಯನ್ನು ಯಕ್ಷಗಾನದ್ದೇ ಆದ ಉಪಸೃಷ್ಟಿ ಎನ್ನುವವರಿದ್ದಾರೆ. ಕುಳಿತು ಸೃಷ್ಟಿಸಿದ ಕಲಾಲೋಕ ಯಕ್ಷಗಾನದ ಮೂಲಕ ಕುಣಿದು ಪ್ರದಶರ್ಿಸಿದೆ ಎಂದರೇನೇ
ಸರಿಯಾದೀತೇನೋ. ಯಕ್ಷಗಾನ ತನ್ನ ವಿಶಿಷ್ಟ ವೇಷ ಭೂಷಣ ಮತ್ತು ನೃತ್ಯ ವೈವಿಧ್ಯದ ಮೂಲಕ ಒಂದು ಮನೋರಂಜಕ  ಭಾವನಾತ್ಮಕ ಕಲಾಸೃಷ್ಟಿಯಾಗಿ ರೂಪುಗೊಂಡರೆ  ತಾಳಮದ್ದಲೆ ಒಂದು ಬುದ್ಧಿಪ್ರಧಾನವಾದ
ವೈಚಾರಿಕ ತಾತ್ವಿಕ ವೇದಿಕೆಯಾಗಿ ರೂಪ ಪಡೆಯಿತು  ಎಂಬ ಅಭಿಪ್ರಾಯ  ಮೇಲ್ಮಟ್ಟದಲ್ಲಿ  ಸರಿಯಾಗಿಯೇ ತೋರುತ್ತದೆ.
          ಹೇಗೇ ಇರಲಿ ಯಕ್ಷಗಾನ ರಂಗಭೂಮಿಯಷ್ಟೇ ಫಲವತ್ತಾಗಿ  ತಾಳಮದ್ದಲೆ ತನ್ನ ವೈಶಿಷ್ಟ್ಯವನ್ನು
ಪ್ರಕಟಿಸುತ್ತಿದೆ.  ತನ್ನದೇ ಆದ ಅಭಿಮಾನೀ ಪ್ರೇಕ್ಷಕ ಸಮುದಾಯವನ್ನು ಸೃಷ್ಟಿಸಿಕೊಂಡಿದೆ.
          ಈ ಮಾತಿಗೆ  ಇತ್ತೀಚೆಗೆ  ಕನ್ನಡನುಡಿ ಮಾತೆ ಎನ್ನಿಸಿಕೊಂಡ ದೇವಿ ಭುವನೇಶ್ವರಿ ಇರುವ ಭುವನಗಿರಿಯಲ್ಲಿ ಎರಡುದಿನಗಳ ಕಾಲ ನಡೆದ ತಾಳಮದ್ದಲೆ ಸಮ್ಮೇಳನ ಪ್ರಸ್ತುತ ಕಲಾಪ್ರಕಾರದ ತಲಸ್ಪಶರ್ೀ ಅಧ್ಯಯನಕ್ಕೆ ನಾಂದಿ ಹಾಡಿತು. ಕಳೆದ ಕಾಲು ಶತಮಾನದಿಂದ ತಾಳಮದ್ದಲೆ ಕಲಾಪ್ರಸ್ತುತಿಗಾಗಿಯೇ  ಜನ್ಮಿಸಿ ಯಶಸ್ವೀಯಾಗಿ ನೂರಾರು ಪ್ರಯೋಗಗಳ ಮೂಲಕ ಮನೆಮಾತಾದ  ಶ್ರೀ ಭುವನೇಶ್ವರೀ ತಾಳಮದ್ದಳಾ ಕೂಟ, ತನ್ನ ರಜತಮಹೋತ್ಸವದ ಪ್ರಯುಕ್ತ ಏರ್ಪಡಿಸಿದ ವಿಚಾರಸಂಕಿರಣದಲ್ಲಿ,  ತಾಳಮದ್ದಲೆಕಲೆ ಸ್ವತಂತ್ರವೇ  ಅದು ಭಾವ ಪ್ರಧಾನವೇ  ಅಥವಾ ತರ್ಕಪ್ರಧಾನವೇ ?ಎಂಬ ಮೂಲಭೂತ ಪ್ರಶ್ನೆಗಳಿಗೆ ಚಿಂತನ ಮಂಥನದ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿತು  ಎನ್ನಬಹುದಾಗಿದೆ.
      ಮೊದಲನೆಯ ದಿನದ ಮೊದಲ ಗೋಷ್ಠಿ  ತಾಳಮದ್ದಲೆ ಕಲಾಪ್ರಕಾರದ ಭವಿಷ್ಯ  ಬೆಳವಣಿಗೆ, ಬದಲಾದ ಜೀವನ ಕ್ರಮ  ಬದಲಾದ ಕಲಾಸಕ್ತಿ ಮತ್ತು ವರ್ತಮಾನದ ಸವಾಲುಗಳ ಬಗೆಗೆ ತಲಸ್ಪಶರ್ೀ ಚಿಂತನೆಯಲ್ಲಿ ತೊಡಗಿಸಿಕೊಂಡಿತು. ಡಾ|| ವಸಂತ ಭಾರದ್ವಾಜ  ಸಂಸ್ಕೃತಿ ಮತ್ತು ಪರಂಪರೆಯ  ಜೊತೆಗೆ ಮುಖಾಮುಖಿಯಾದರೆ  ಡಾ|| ವಿಟ್ಠಲ್ ಭಂಡಾರಿ ಸಮಕಾಲೀನ ಸಾಮುದಾಯಿಕ ಬದುಕಿನಲ್ಲಿ  ತಾಳಮದ್ದಲೆಯಂಥ ಕಲೆ
ಇನ್ನಷ್ಟು ಜನಪರವಾಗಬೇಕು.  ಜಾತ್ಯತೀತ ಆಯಾಮ ಪಡೆಯಬೇಕು ಎಂದರು.
        ಎರಡನೆಯ ದಿನದ ಪ್ರಾರಂಭದ ಗೋಷ್ಠಿ  ಕಾಶ್ಯಪ ಪರ್ಣಕುಟಿಯವರ ಅರ್ಥಪೂರ್ಣ ಪ್ರಸ್ತಾವನೆಯಿಂದ ಚಿಂತನೆಗೆ ತೆರೆದುಕೊಂಡಿತು.
         ಯುವ ಅರ್ಥಧಾರಿ  ದಿವಾಕರ ಹೆಗಡೆ ಕೆರೆಹೊಂಡ ``ತಾಳಮದ್ದಲೆ ಭಾವ ಪ್ರಧಾನ ಎಂಬ ವಿಷಯವನ್ನು ವಿಸ್ತರಿಸುತ್ತ, `` ತರ್ಕ ಸರಳವಾಗಿರಬೇಕು, ಸಂಕ್ಷಿಪ್ತವಾಗಿ ಮತ್ತು ಸಮಗ್ರತೆಯಿಂದ ಕೂಡಿದ್ದರೆ  ಮಾತುಗಾರಿಕೆಗೊಂದು ಘನತೆ ಪ್ರಾಪ್ತವಾಗಬಹುದಾಗಿದೆ. ಭಾವ ಮತ್ತು ತರ್ಕದ ಸಮತೋಲನ ಮಾತ್ರ  ನಿಜವಾದ ಕಲೆಯಾಗ ಬಹುದು. ತಾಳಮದ್ದಲೆ ಒಂದು ರಂಗಕಲೆ, ಅಲ್ಲಿ ಅತಿ ವೈಚಾರಿಕತೆ ಕಾವ್ಯದ ಸಂವೇದನೆ ಯನ್ನು ಘಾಸಿಗೊಳಿಸಿದರೆ  ಅತಿ ಭಾವುಕತೆ ಕಾವ್ಯದ ತಾತ್ವಿಕ ಸತ್ವವನ್ನು ಮಸಕು ಗೊಳಿಸುತ್ತದೆ. ಎಂದರು.
ಲಕ್ಷ್ಮೀಶ ಹೆಗಡೆ `` ಅರ್ಥ ರಸೋತ್ಪತ್ತಿಗೆ ಕಾರಣವಾಗಬೇಕು  ಹಿಮ್ಮೇಳ ಭಾವಮಯತೆಯನ್ನು ಉದ್ದೀಪಿಸಬೇಕು.
ಎಂದು ಪ್ರತಿಕ್ರಿಯಿಸಿದರೆ  ರಮಾನಂದ ಐನಕೈ ``ಇದೊಂದು ಸಾಂಸ್ಕೃತಿಕ  ಪ್ರಕ್ರಿಯೆ. ಸಂಗೀತ ಮತ್ತು ಅರ್ಥದ ಮೂಲಕ ತರ್ಕ ಮತ್ತು ಭಾವವನ್ನು ಮೀರಿದ ಒಂದು ಹೊಸ ಹೊಳಹು ಮೂಡಿದರೆ ಮಾತ್ರ ತಾಳಮದ್ದಲೆಗೆ
ತನ್ನದೇ ಆದ ಹೊಸ ಅಸ್ತಿತ್ವ ಮೂಡೀತು. ಎಂದರು.
      ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ  ಎಮ್ ಎನ್ ಹೆಗಡೆ ಹಳವಳ್ಳಿ ತಮ್ಮ ಸಮಾರೋಪದ ನುಡಿಯಲ್ಲಿ `` ಮಾತು ಒಂದು ಅದ್ಭುತ ಶಕ್ತಿ ಅದಕ್ಕೆ ಅಪರಿಮಿತ ಸಾಧ್ಯತೆಯಿದೆ. ಅರ್ಥಧಾರಿಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ
ಜವಾಬ್ದಾರಿಯಿರಬೇಕು. ನಡಿವ ನುಡಿ ಅರ್ಥವಾಗಬೇಕು  ಅನರ್ಥವಾಗಬಾರದು  ಎಂದರು.
      ರವೀಂದ್ರ ಭಟ್ಟ ಐನಕೈ ಯವರ ಅಧ್ಯಕ್ಷತೆಯಲ್ಲಿ  ನಡೆದ ``ತಾಳಮದ್ದಳೆಯ  ಹಿಮ್ಮೇಳ  ಗೋಷ್ಠಿಯಲ್ಲಿ
ವಿ. ಉಮಾಕಾಂತ ಭಟ್ಟ ಮೇಲುಕೋಟೆ  ಮಾತನಾಡುತ್ತ  ``ಈ ಮಣ್ಣು ಯಕ್ಷಗಾನಕ್ಕೆ  ವಿಚಾರ ಸಂಪತ್ತು ಮತ್ತು
ಭಾವ ಸಂಪತ್ತು ಗಳನ್ನು ಯಥೇಚ್ಛವಾಗಿ ನೀಡಿದೆ. ಬಡಗಿನ ಹಿಮ್ಮೇಳ  ತೆಂಕಿನ ಮುಮ್ಮೇಳ ಇಡೀ ಯಕ್ಷರಂಗಭೂಮಿಗೆ ಜೀವತುಂಬಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ತಾಳಮದ್ದಲೆ ಪ್ರತ್ಯೇಕವಲ್ಲ. ಅದು ಯಕ್ಷಗಾನದೊಂದಿಗೇ ಬೆಳೆದುಕೊಂಡು ಬಂದಿದೆ. ಆದರೆ ತೆಂಕಿನಲ್ಲಿ  ಅದು ಪ್ರತ್ಯೇಕ ಅಸ್ತಿತ್ವ ಕಂಡುಕೊಂಡಿದೆ.  ಮನಸ್ಸನ್ನು ಇಂಪಾಗಿಸುವ ತಂಪಾಗಿಸುವ ಹಿಮ್ಮೇಳಕ್ಕೆ ಸೂಕ್ತ ಅವಕಾಶ ಇರಲೇಬೇಕು. ಅರ್ಥದ ಅಭಿವ್ಯಕ್ತಿಯಲ್ಲಿ ಆರೋಗ್ಯಯುತ ಸ್ಪಧರ್ೆ ಇದ್ದರೆ ಸಹ್ಯ. ಈಷರ್ೆ ಪ್ರವೇಶಿಸಿದರೆ ಅಸಹ್ಯ. ಎಂದು ನುಡಿದರು.
       ಸದಾನಂದ ಶಮರ್ಾ ಇಡುವಾಣಿ  ಪ್ರತಿಕ್ರಿಯೆ ನೀಡುತ್ತ ``ಅರ್ಥಗಾರಿಕೆ  ಭಾವವ್ಯಂಜಕ ವಾಗಲಿ ಬದಲಾಗಿ ಭಾವ ಭಂಜಕವಾಗುವುದು ಬೇಡ ಎಂದರು.  ಎಮ್. ಕೆ ,ನಾಯ್ಕ  ಹೊಸಳ್ಳಿ `` ಹಿಮ್ಮೇಳ ಸೂತ್ರವಾದರೆ ಮುಮ್ಮೇಳ ಗಾಳಿಪಟದಂತೆ.  ತಾಳಮದ್ದಲೆಯಲ್ಲಿ  ಕೇವಲ ಅರ್ಥದ ವೈಭವೀಕರಣವಾದರೆ  ಕಾವ್ಯದ ಭಾವತೀವ್ರತೆ ದೊರಕದೇ ಪ್ರಸಂಗ ಸೊರಗುತ್ತದೆ. ಯಾಂತ್ರಿಕ ಗೊಳ್ಳುತ್ತದೆ. ಎಂದರು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಪತ್ರಕರ್ತ
ರವೀಂದ್ರ ಭಟ್ಟರು `` ಅಪರೂಪದ ಈ ಮೌಖಿಕ ಕಲೆ ನಮ್ಮ ಮಣ್ಣಿನ ಕೊಡುಗೆ, ಹಿಮ್ಮೇಳವಾಗಲೀ ಮುಮ್ಮೇಳವಾಗಲೀ ಕಲಾವಿದರಿಗೆ ಸಾಂಸ್ಕೃತಿಕ ಜವಾಬ್ದಾರಿ ಅವಶ್ಯ. ಪರಂಪರೆಯೊಂದನ್ನ ಭವಿಷ್ಯಕ್ಕೆ ಕೊಂಡೊಯ್ಯುವ ಗುರುತರ ಹೊಣೆ ಅವರಮೇಲಿದೆ. ಎಂದರು.
      ಸಮಾರೋಪ ಸಮಾರಂಭದಲ್ಲಿ ಶಿವಾನಂದ ಹೆಗಡೆ ಕೆರೆಮನೆ ಯಕ್ಷಗಾನ ಕಲೆಯನ್ನು   ಪಾಶ್ಚಾತ್ಯ ಪೌರಾತ್ಯ ರಂಗಭೂಮಿಯ ಹಿನ್ನೆಲೆಯಲ್ಲಿಟ್ಟು ವಿಶ್ಲೇಷಿಸುತ್ತ  ಯಕ್ಷಗಾನದ ಅನನ್ಯತೆಯ ಬಗೆಗೆ
ಗಮನಸೆಳೆದರು.  ಪ್ರೊ|| ಎಂ. ಎ. ಹೆಗಡೆ  ತಮ್ಮ ಸಮಾರೋಪದ ನುಡಿಯಲ್ಲಿ``ತಾಳಮದ್ದಲೆ ಕಲೆ ಇನ್ನೂ ಯುವಜನಾಂಗವನ್ನು ತಲುಪಲು ಸಾಕಷ್ಟು ಶ್ರಮ ಪಡಬೇಕಾಗಿದೆ. ಆಧುನಿಕ ಬದುಕಿನ ಸಂಧಿಗ್ಧಗಳಿಗೂ ತಾತ್ವಿಕವಾಗಿ ಸ್ಪಂದಿಸಬೇಕಿದೆ. ಉದಯೋನ್ಮುಖ ಕಲಾವಿದರಲ್ಲಿ ಇನ್ನಷ್ಟು ಗುಣಾತ್ಮಕತೆಯನ್ನು ತುಂಬುವ,ಮತ್ತು ನವ ಉತ್ಸಾಹಿಗಳಿಗೆ ಸೂಕ್ತ ತರಬೇತಿ  ನೀಡುವ ಕೆಲಸ ಪ್ರಾರಂಭಗೊಳ್ಳಬೇಕಿದೆ. ಎಂಬ ಸಲಹೆಯನ್ನಿತ್ತರು.
      ಒಟ್ಟಿನಲ್ಲಿ ತಾಳಮದ್ದಲೆ ಕಲಾಪ್ರಕಾರಕ್ಕೊಂದು ಪ್ರತ್ಯೇಕ ಅಸ್ತಿತ್ವ ನೀಡುವ
ಅದರ ಅನನ್ಯತೆಯನ್ನು ಬೆಳಗಿಸುವ  ಗುರಿ ಸಂಘಟಕರಲ್ಲಿ ಎದ್ದು ತೋರುತ್ತಿತ್ತು. ಪ್ರತ್ಯೇಕ ಕಲಾಪ್ರಕಾರವಾಗಿಯೂ ಬೆಳೆಯ ಬಹುದಾದ ಎಲ್ಲ ಸಾಧ್ಯತೆಗಳೂ ತಾಳಮದ್ದಲೆಗಿದೆ.`` ಅರ್ಥಧಾರಿಗಳೆಲ್ಲ ಪಂಡಿತರಲ್ಲ, ಹೆಚ್ಚಿನವರ
ಬಂಡವಾಳ ಎಲ್ಲೋ ಓದಿದ್ದು ಅಥವಾ ಕೇಳಿದ್ದು. ಇದು ದಕ್ಷಿಣದ ಮತ್ತು ಉತ್ತರದ ಹೆಚ್ಚಿನ ಕಲಾವಿದರ ಸ್ಥಿತಿ. ಆದರೆ ಅದನ್ನೆ ಆಕರ್ಷಕವಾಗಿ ಪ್ರಸ್ತುತ ಪಡಿಸುವ ಕಲೆ ದಕ್ಷಿಣದ ಕಲಾವಿದರಲ್ಲಿದೆ. ಓದು ಜ್ಞಾನ ತರ್ಕ ಎಲ್ಲವೂ ಇರುವ ನಮ್ಮ ಕಲಾವಿದರು ನಿರೂಪಣಾ ಶೈಲಿ ಶುದ್ಧ ತರ್ಕ ಮತ್ತು ಭಾವಾಭಿವ್ಯಕ್ತಿಯನ್ನು ಸುಧಾರಿಸಿ ಕೊಂಡಲ್ಲಿ ನಮ್ಮ ಜಿಲ್ಲೆಯ ಅರ್ಥಗಾರಿಕೆಗೆ ಇನ್ನೂ ಮೊನಚು ಬನಿ ಮತ್ತು ಸೌಂದರ್ಯ ಒದಗಬಹುದಾಗಿದೆ. ಯಾವುದೇ
ಕಲಾವಿದನನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅವನೊಳಗಿನ ಕಲಾವಿದನನ್ನು ಪ್ರೋತ್ಸಾಹಿಸಬಹುದು ಅಷ್ಟೆ. ಎಂಬ ಇಡುವಾಣಿಯವರ ಅಭಿಪ್ರಾಯ ದಾಖಲಾರ್ಹವಾದುದು.
       ತಾಳಮದ್ದಲೆ ವೈಯಕ್ತಿಕ ತೀಟೆ  ಸ್ವಯಂ ಪ್ರತಿಷ್ಠೆ ಯ ಆಖಾಡವಾಗಿಯೂ ದುರ್ಬಳಕೆಯಾದ ಉದಾಹರಣೆ
ಸಾಕಷ್ಟಿದೆ. ಹಿಮ್ಮೇಳದ ಸೊಗಸು ಸವಿಯಲಾಗದಷ್ಟು  ಅರ್ಥಸ್ಖಲನವಾಗಿದ್ದಿದೆ.  ಕಲೆ ಪಾಂಡಿತ್ಯ ಪ್ರದರ್ಶನದ ವೇದಿಕೆಯಲ್ಲ. ಅದಕ್ಕೆ ಸಾಕಷ್ಟು ಶಾಸ್ತ್ರಗ್ರಂಥಗಳಿವೆ.  ಭಾವನಾತ್ಮಕತೆ ಸಂಪೂರ್ಣ ಮರೆಯಾಗುತ್ತ ಕೇವಲ ಬೌದ್ಧಿಕತೆ
ಯೇ ಮೆರೆಯುತ್ತಿರುವ ಈ ಕಟು ವಾಸ್ತವದಲ್ಲಿ  ಸಹೃದಯನಲ್ಲಿ ಭಾವಸ್ಪಂದನ ಉಂಟಾಗುವಂತೇ , ಕಾವ್ಯದ ತಾತ್ವಿಕತೆ ಮತ್ತು ಮಾನವೀಯ ಕಳಕಳಿಯ  ಸನ್ನಿಧಿಗೆ ಕೊಂಡೊಯ್ಯುವಂಥ  ವಾತಾವರಣವನ್ನು ಸೃಷ್ಟಿಸಬೇಕಾದರೆ
ಕಲಾವಿದ ಮೊದಲು  ಭಾವತೀವ್ರತೆಯ ತೆಕ್ಕೆಗೆ ಒಳಗಾಗಬೇಕಾಗುತ್ತದೆ.  ಸಂಗೀತ ಮತ್ತು ಮಾತುಗಳ ನಡುವಣ
ಮೌನದ ಬಗೆಗೆ ಚಿಂತಿಸಬೇಕಾಗುತ್ತದೆ.
       ಇಂಥಹ ಸಮ್ಮೇಳನಗಳು  ಸಹೃದಯ ಮತ್ತು ಕಲಾವಿದರಿಬ್ಬರಿಗೂ ಆತ್ಮಶೋಧನೆ ಮತ್ತು ಆತ್ಮವಿಮಶರ್ೆಗೆ ಅನವುಮಾಡಿಕೊಡುತ್ತದೆ. ಸಮೂಹಕ್ಕಾಗಿ  ಸಮೂಹಕಲೆಯನ್ನು ಸೃಜಿಸುತ್ತ  ವಿಕಾಸ ಗೊಳಿಸುತ್ತ
ಪರಸ್ಪರ ಹೃದಯ ಸಂವಾದವೇರ್ಪಡುವ  ಅಪೂರ್ವ ಕ್ಷಣವನ್ನು  ಸೃಷ್ಟಿಸುತ್ತವೆ.
       ಇಂಥಹ ಸಮ್ಮೇಳನ ವನ್ನು ಸಂಘಟಿಸಿದ ಶ್ರೀ ಭುವನೇಶ್ವರೀ ತಾ. ಮ. ಕೂಟ ನಿಜಕ್ಕೂ ಅಭಿನಂದನಾರ್ಹ
====================================================================
                                                  ಸುಬ್ರಾಯ  ಮತ್ತೀಹಳ್ಳಿ. ತಾ-6 -1 -201