Saturday 13 August 2011

ಸದಾ “ಆನಂದ ” ಉಳಿಯುವುದೇ..............??

ರಜ್ಯಾದ್ಯಂತ ಸಮೃದ್ಧ ಮಳೆ ಹೊಯ್ದಂತೆ ರಾಜಧಾನಿಯಲ್ಲಿ ರಾಜಕೀಯಕ್ಕೆ ಮಹಾಪೂರವೇ ಬಂದಿತು.  ಸರಿ ಸುಮಾರು ಒಂದು ತಿಂಗಳ ಕಾಲ ಅತ್ತ ವಿಧಾನ ಸೌಧ ಸ್ಥಬ್ಧ ಗೊಂಡಿತು. ಇತ್ತ ನಗರದ ತಾರಾ ಹೊಟೆಲುಗಳಿಗೆ ಸುಗ್ಗಿ ಮೂಡಿತು. ಲೋಕಾಯುಕ್ತರು ಸಿಡಿಸಿದ ಗಣಿ ಬಾಂಬ್ ರಾಜ್ಯದ ರಾಜಕಾರಣದಲ್ಲಿ ಮೂಡಿಸಿದ ವಿಪ್ಲವ ಐತಿಹಾಸಿಕವಾಯಿತು. ಬಸವನನ್ನಾಗಿ ಬಿಟ್ಟ ತುಂಡು ಗೂಳಿಗಳು ತಮ್ಮ ಎಲ್ಲೆ ಮೀರಿ ಬೇಲಿ ಮುರಿದು ಎರ್ರಾ ಬಿರ್ರಿಮೆಂದು ದುಪಳಿ ಎಬ್ಬಿಸುತ್ತ, ಅಂಕೆಮೀರಿ ಅಂಡಲೆಯುತ್ತಿರುವ ಕ್ರಿಯೆಗೆ ಲೋಕಾಯುಕ್ತರು ತಮ್ಮ ಮಿತಿಯಲ್ಲಿ ತಡೆಯೊಡ್ಡಿದರು.  ಷಂಡ ವಿರೋಧ ಪಕ್ಷ. ಕೈಕಟ್ಟಿ ಕುಳಿತ ನ್ಯಾಯಾಂಗ, ಬಾಯಿ ಕಟ್ಟಿದ ಸಾಮಾನ್ಯ ಜನತೆಯ ತಲ್ಲಣದ ಕ್ಷಣದಲ್ಲಿ, ಪ್ರಜಾಪ್ರಭುತ್ವ ಇನ್ನೂ ಉಸಿರಾಡುತ್ತಿದೆ ಎಂಬುದನ್ನ ತೋರಿಸಲು ಲೋಕಾಯುಕ್ತರು ಧೈರ್ಯ ಮಾಡಿದ್ದು ನಮ್ಮ ರಾಜ್ಯದ ಸುದೈವ.
ಅರವತ್ತು ವರ್ಷವಾದರೂ ಈ ಮಣ್ಣಿನಲ್ಲಿ ಜನತಂತ್ರ ಸಮರ್ಥವಾಗಿಚಿಗುರೊಡೆದಿಲ್ಲ. ಮಂತ್ರಿ ಶಾಸಕರು ವಾಹನದ ಮೇಲೆಯೇ ಇರಲಿ, ಅದ್ದೂರಿ ಬಂಗಲೆಯಲ್ಲಿಯೇ ಪವಡಿಸಲಿ, ಹಿಂದೆ ಮುಂದೆ ಪೋಲಿಸ್ ವಾಹನಗಳು ಸುತ್ತುವರೆದಿರಲಿ, ಎಂದು ಬಯಸುವ ಜನ, ಅಪರೂಪದಲ್ಲಿ ಸರಳವಾಗಿರುವರಾಜಕಾರಣಿ ಕಂಡರೆ ಅದೇ ಜನ ಗಂಭೀರವಾಗಿ ಸ್ವೀಕರಿಸುವುದೇ ಇಲ್ಲ,
ಪ್ರತಿನಿಧಿಗಳಲ್ಲಿಯೂ ಅಷ್ಟೆ   ನಾಯಕತ್ವದ ಗುಣ ಲವ ಲೇಶವಿಲ್ಲದಿದ್ದರೂ ತಾನೇ ಮಹಾಮಾಲಿಕಎಂದು ಭ್ರಮಿಸಿಬಿಡುತ್ತಾನೆ. ಜನಸೇವಕ ತಾನುಎಂಬುದನ್ನು ಮರೆತು ರಾಜ್ಯವೇ ತನ್ನ ಜಹಗೀರೆಂದು ತಿಳಿದು ಸರ್ವಾಧಿಕಾರಿಯಾಗಿ ಪರಿವರ್ತನೆ ಗೊಂಡು ಬಿಡುತ್ತಾನೆ.    ಯಾರೊ ಒಬ್ಬ ಸಾಮಾನ್ಯ ಮನುಷ್ಯ ತನ್ನ ವಾಹನವನ್ನು ಹಿಂದೆಹಾಕಿದ ಎಂಬ ಕಾರಣಕ್ಕೆ ರಾಜಕಾರಣಿ,  ಬೀದಿಗಿಳಿದು ತೋಳು ಸೇರಿಸುತ್ತಾನೆ.
ಇಷ್ಟೆಲ್ಲ ಗೊಂದಲಗಳ ನಡುವೆ ಆಡಳಿತ ಪಕ್ಷವೇ ಬಣ ಬಣವಾಗಿ ಛಿದ್ರಗೊಂಡು  ಬೀದಿರಂಪವಾದ ಅಯೋಮಯ ಸಂದರ್ಭದಲ್ಲಿ ಯೂರಾಜ್ಯದಲ್ಲಿ ಒಂದು ಸುಂದರವಾದ ಬೆಳಗು ಮೂಡಿದೆ. ದೇವ ದಾನವರ ಸಮುದ್ರ ಮಥನದಲ್ಲಿ ಕೊಂಚ ಅಮೃತ ಚಿಮ್ಮಿದೆ.    ಈ ವರೆಗೆಲ್ಲ ಸ್ನೇಹ ಶೀಲ  ಸೌಹಾರ್ದಜೀವಿ, ಸೂಕ್ಷ್ಮ ಮನಸ್ಕ ಎಂದೆನ್ನಿಸಿಕೊಂಡ ಮಲೆನಾಡ ಮಡಿಲಿನ ರಾಜಕೀಯ ಯೋಧ  ಸದಾನಂದ ಗೌಡರುಪ್ರಥಮ ಬಾರಿಗೆ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ.   ಕರಾವಳಿ ಮತ್ತು ಮಲೆನಾಡು ಎರಡನ್ನೂ ಹೊಂದಿದ ಕಕ್ಷಿಣಕನ್ನಡದ  ವಿಭನ್ನ ಭೌಗೋಳಿಕ ವಾತಾವರಣದಲ್ಲಿ ಹುಟ್ಟಿ ಬೆಳೆದ ಸದಾನಂದ ಗೌಡರು ಮಧ್ಯಮ ವರ್ಗದ ಬೇಸಾಯಗಾರ ಕುಟುಂಬದವರು.
ಐದು ಗಂಡಂದಿರೊಂದಿಗೆ ಬದುಕು ನಿಭಾಯಿಸಿದ ದ್ರೌಪದಿಯ ಜವಾಬ್ದಾರಿಗಿಂತ ಸದಾನಂದರ ಹೊಣೆ ಮತ್ತೂ ಬೃಹತ್ತಾದುದು. ಅವಳ ಗಂಡಂದಿರು ಬಣಗಳಾಗಿ ಚೂರು ಚೂರಾಗಿರಲಿಲ್ಲ. ಒಗ್ಗಟ್ಟಾಗಿದ್ದರು. ದುಶ್ಶಾಸನ ಸೀರೆ ಸೆಳೆಯುವಾಗ ಕೃಷ್ಣ ಬಲಕ್ಕಿದ್ದ. ಆದರೆ ಇಲ್ಲಿ ಹೈಕಮಾಂಡ ಕೃಷ್ಣ ದುರ್ಬಲ. ಅವರನ್ನೇ ನಂಬಿದರೆ ಸಂಧಾನ ಅಥವಾ ಸಂಗ್ರಾಮ ಎರಡೂ ವಿಫಲ ಗೊಳ್ಳುವ ಸಾಧ್ಯತೆಯೇ ಹೆಚ್ಚು. ಇಂಥ ಸಂದಿಗ್ಧದಲ್ಲಿ ಸ. ಗೌಡರು ಅತ್ಯಂತ ಎಚ್ಚರ ಮತ್ತು ಸೂಕ್ಷ್ಮ ವಾಗಿಹೆಜ್ಜೆಯಿಡಬೇಕಾಗಿದೆ. ವಿದ್ಯಾರ್ಥಿ ಜೀವನದಿಂದ ರಾಜಕಾರಣದವರೆಗೆಹತ್ತು ಹಲವು ಮಜಲುಗಳಲ್ಲಿ ಯಶಸ್ವೀಯಾಗಿ ಸಾಗಿಬರಲು ಅವರ ಸಜ್ಜನಿಕೆ, ಹೊಂದಾಣಿಕೆ, ಮತ್ತು ಮುಗ್ಧ ನಗುವಿನಂಥ ಧನಾತ್ಮಕ ಗುಣಗಳೇ ಕಾರಣವಾಗಿವೆ.  ಗೌಡರ ಈಗಿನ ಸ್ಥಿತಿ ಕೆಂಡದ ಮೇಲಿನ ನಡಿಗೆಯಂತೆ. ಈ ಸವಾಲು ಅತ್ಯಂತ ಸೂಕ್ಷ್ಮದ್ದು, ಎಚ್ಚರದ್ದು, ಮತ್ತು ವೇಗದ್ದು ಕೂಡಾ. ಈ ಅಲ್ಲೋಲ ಕಲ್ಲೋಲ ಸಂದರ್ಭದಲ್ಲಿಯೇ ಸ್ವಂತಿಕೆಯ ಬೀಜ ಬಿತ್ತಬೇಕಿದೆ. ಇನ್ನು ಆರೇ ತಿಂಗಳಿಗೆ ಮತ್ತೆ ಬರುತ್ತೇನೆಂದು ಘೋಷಿಸುವವರನ್ನ ನಿಭಾಯಿಸ ಬೇಕಿದೆ.
ಎಲ್ಲ ಸಮುದಾಯಕ್ಕೂ ನ್ಯಾಯ ಸಲ್ಲಿಸುತ್ತ, ರಾಜಕೀಯ ಉರಿಗಿಚ್ಚನ್ನು ತಣಿಸುತ್ತ, ಸಾವಕಾಶವಾಗಿ ರಾಜಕೀಯ ವಿಪ್ಲವ ವಿಧ್ವೇಷ ಗಳನ್ನು ಅಡಗಿಸಬೇಕಾಗಿದೆ.        ಮಂತ್ರಿ ಸ್ಥಾನವೊಂದು ಸೇವಾ ಸಾಧನವೆಂದು ತಿಳಿಯದೇ  ಹಣ ಗಳಿಸುವ ಉದ್ಯಮವೆಂದುಕೊಂಡಿರುವ ಬಹುಪಾಲು ಆಕಾಂಕ್ಷಿಗಳಿಗೆ ಆ ಸ್ಥಾನದ ಪಾವಿತ್ರ್ಯವನ್ನು ಮನಗಾಣಿಸಿ ಕೊಡಬೇಕಾದ ಗುರುv   ಹೊಣೆ ಗಾರಿಕೆ ಗೌಡರ ಮೇಲಿದೆ.  ಕಳೆದ ಮೂರು ವರ್ಷಗಳ ಆಡಳಿತಕಾಲ ಅಂತರ್ಯುದ್ಧ, ಭೃಷ್ಟಾಚಾರ, ಮತ್ತು ದೇವಾಲಯ ಮಠಮಾನ್ಯಗಳ ಸುತ್ತಾಟದಲ್ಲಿಯೇ ಕಳೆದು ಹೋದದ್ದನ್ನು ಗಮನದಲ್ಲಿರಿಸಿಕೊಳ್ಳದೇ ಹೋದಲ್ಲಿ  ರಾಜ್ಯದ ಜನ ಇನ್ನೆಂದೂ ಕ್ಷಮಿಸಲಾರರು.
ಪ್ರಮಾಣವಚನ ಸಮಾರಂಭದ ನಂತರದ ನೂತನ ಮು. ಮ. ಯವರ ಪ್ರಥಮ ಸಂದೇಶಕ್ಕಾಗಿ ಇಡೀ ರಾಜ್ಯ ತುದಿಗಾಲಲ್ಲಿ ನಿಂತು ಕಾಯುತ್ತಿತ್ತು. ಹೊಸ ಕನಸು  ಹೊಸ ಕಾರ್ಯಕ್ರಮ, ವಿಭಿನ್ನ ಶೈಲಿ ಮತ್ತು ಹೊಸ ಹರಿವನ್ನು  ಕಾತರದಿಂದ ನಿರೀಕ್ಷಿಸುತ್ತಿತ್ತು.     ಆದರೆ ಮು. ಮಂ ರ ಮಾತು ಭ್ರಮ ನಿರಸನಗೊಳಿಸಿತು, ಹಿಂದಿನ ಕಾರ್ಯಕ್ರಮಗಳನ್ನೇ ಮುಂದುವರೆಸುವ ಬಾಲಿಶ ಆಶ್ವಾಸನೆ ಮೂಡಿಬಂದಾಗಕಾತರ ನಿರೀಕ್ಷೆ ಗಳೆಲ್ಲ ಪಾತಾಳಕ್ಕಿಳಿಯಿತು.  ಈಗಾಗಲೇ ರಬ್ಬರ್ ಸ್ಟಾಂಪ್ ಎಂಬ ಮುದ್ರೆ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.   ಅನರ್ಹರೆಂದು ಗೊತ್ತಿದ್ದೂ ಇನ್ನಷ್ಟು ಮಂತ್ರಿಗಳನ್ನು ಸಂಪುಟಕ್ಕೆ ಸೇರಿಸಿಯಾಯಿತು.  ಗಣಿ ಸರ್ಪ ಸರಕಾರದ ಕೊರಳ ಸುತ್ತುತ್ತಿದೆ.  ಸಾಮಾನ್ಯ ಜನತೆ ಭ್ರಷ್ಟತೆ ಬೆಲೆಯೇರಿಕೆ ಗಳಲ್ಲಿ ನರಳುತ್ತಿದ್ದಾರೆ.
ಸದಾ ನಂದನದ ಕನಸು ಮಾತ್ರ ಹೆಮ್ಮರವಾಗುತ್ತಿದೆ.
  ನಂದದನನಸು ಕನಸಲ್ಲಿಯೇ  ಕೊಳೆತು ಹೋಗುತ್ತದೆಯೇ  ??

Wednesday 10 August 2011

ಕವನವೆಂದರೆ.......................

ಕವನ ಕಟ್ಟುವುದು ಸುಲಭ ಕಾಯಕ
ಕಟ್ಟಿ ಎನ್ನುವ ಜನರಿದ್ದರೆ
 ಕವಿಯಾಗುವುದು ಸುಲಭವಲ್ಲ
 ಸಾಲದು ಒಂದಿಷ್ಟು ಶಬ್ಧವಿದ್ದರೆ


ಶಬ್ದಗಳೆಲ್ಲ ಪದ್ಯವಾದರೆ
ಸದ್ದುಗಳೆಲ್ಲ ಕಾವ್ಯಗಳೇ
ಹೃದ್ಯತೆಯಿಲ್ಲದ ಪ್ರತಿಮೆಗಳಿದ್ದರೆ
ಪದ್ಯಗಳಲ್ಲ; ಅವು ವದ್ಯಗಳೇ
   
    ಕಾವ್ಯವೆಂದರೆ ಹುಡುಗಾಟವಲ್ಲ
    ಸತ್ಯದ ಸೂಕ್ಷ್ಮ ಹುಡುಕಾಟ
    ಕವನವೆಂದರೆ ಗುಡುಗಾಟವಲ್ಲ
    ದಿವ್ಯ ಮೌನಕೆ ತಡಕಾಟ


ಕಾವ್ಯವೆಂದರೆ ಹೂದೋಟ
ಅರಳಿ ಉದುರುವ ಆಟ
ಹೂಮುಟ್ಟಿ ಹಿಸುಕಿದರೆ ಹಿಟ್ಟು ಹಿಟ್ಟು
ಹೀರಿ ಅರಗಿಸಿದಲ್ಲಿ  ಸವಿಜೇನು ಹುಟ್ಟು


    ಕಾವ್ಯವೆಂದರೆ ಧ್ಯಾನ, ಅಂತರಂಗದಿ ಯಾನ
    ತುರೀಯತೆಯ ತಾರಕಕೆ ಉಲ್ಲಂಘನ
    ಏರುತ್ತ ಎಡವುತ್ತ ಇಳಿಯುತ್ತ ಕಳಿಯುತ್ತ
    ಅಗ್ನಿ ದಿವ್ಯದ ನಡುವೆ ಒಡಲ ಹವನ


ಗೋಡೆ ಛಾವಣಿಯೊಳಗೆ ಕಾವ್ಯ ಜನಿಸುವುದಿಲ್ಲ
ಬೇಕದಕೆ  ಅವನಿ ಅಂಬಾರ
ಹೊರ ಬಂದು ನೆಲಮುಟ್ಟಿ  ತಲೆಯೆತ್ತಿ ನೋಡಿದರೆ
ತೆರೆದೀತು ನಿಗೂಡ ಮುಗಿಲ ದ್ವಾರ
ಧರೆಯ ನಿರಿ ನಿರಿ ಯೊಳಗೆ ಸುರಿದೀತು
ನವಕವನ; ಧಾರಾಕಾರ.
=========================== ಸುಬ್ರಾಯ ಮತ್ತೀಹಳ್ಳಿ
  .


--

ಓ ಕವಿತೆ; ನೀನೆಲ್ಲಿ ಅವಿತೆ ??

ಕವಿತೆಗಳ ಸೃಷ್ಟಿಯಾಗಿರುವುದೇ  ಮಾನವನ ಅಂತರಂಗ ದರ್ಶನಕ್ಕಾಗಿ ನಿಜವಾಗಿಯೂ  ಕಾವ್ಯ ಮನುಷ್ಯ ಜಗತ್ತಿನ ಅನನ್ಯ ಅನ್ವೇಷಣೆ. ಬಾಹ್ಯ ಜಗತ್ತನ್ನೇ ಅವಲಂಬಿಸಿ ಆಮೂಲಕ ಅಂತರಂಗದ ವಿಶಿಷ್ಟ ವೈವಿಧ್ಯಮಯ  ಪ್ರಪಂಚವನ್ನು ಕಾಣಿಸುವ ಕಾವ್ಯ, ಸಹೃದಯನನ್ನು ಹೊಸದೊಂದು ಅನುಭವ  ಲೋಕಕ್ಕೆ ಕೊಂಡೊಯ್ಯುವ ಅಪ್ರತಿಮ ಕೆಲಸ ಮಾಡುತ್ತದೆ.  ಮನುಷ್ಯ ಜಗತ್ತಿನಲ್ಲಿ  ಕವಿಗಳ ಸಂಖ್ಯೆ  ಎಂದಿಗೂ ಕಡಿಮೆಯೇ.
ಹಾಗೆಂದು ಕಾವ್ಯವನ್ನು ನೇರವಾಗಿ ಆಸ್ವಾದಿಸುವವರೂ ಸಹ ಅಲ್ಪಸಂಖ್ಯಾತರೆ.  ಇದೇ ಕಾರಣಕ್ಕೇ ಗಮಕಿಗಳು, ವ್ಯಾಖ್ಯಾನಕಾರರು, ಮೀಮಾಂಸಕರು, ವಿಮರ್ಶಕರು ಸೃಷ್ಟಿಯಾದರು.  ಇವರೆಲ್ಲ ಕಾವ್ಯಕ್ಕೂ ಮತ್ತು ಶ್ರೀಸಾಮಾನ್ಯರಿಗೂ  ಸಮರ್ಥ ಕೊಂಡಿಯಾಗಿ ಕಾರ್ಯ ನಿರ್ವಹಿಸಿದರು. ನಿರ್ವಹಿಸುತ್ತಿದ್ದಾರೆ.
ಹಾಗಾದರೆ ಕಾವ್ಯವೆಂದರೇನು ಎಂಬ ಪ್ರಶ್ನೆ ಮೂಡಬಹುದು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಹೋರಾಟವೂ ಇಂದು ನಿನ್ನೆಯದಲ್ಲ. ಗೌರೀಶ ಕೈಕಿಣಿ ಯವರು ಒಂದು ಲೇಖನದಲ್ಲಿ  ಕಾವ್ಯದ ಬಗೆಗೆ ಬರೆಯುತ್ತ, ಒಂದು ರೂಪಕವನ್ನು ಉದಹರಿಸುತ್ತಾರೆ. ಸತ್ಯವೆಂದರೇನು ?” ಆಕುಚೋದ್ಯಗಾರ ಪೈಲತ ಯೇಸುಕ್ರಿಸ್ತನಿಗೆ ಸವಾಲು ಹಾಕಿದ’; ಆದರೆ ಉತ್ತರಕ್ಕಾಗಿ ಕಾಯಲೇ ಇಲ್ಲ, ಕ್ರಿಸ್ತನನ್ನು ನೇರ ಸಿಲುಬೆಗೇರಿಸಲು ಅಪ್ಪಣೆಯಿತ್ತ.
ಇದೀಗ ಕಾವ್ಯವೆಂದರೇನು ? ಎಂದು ನನಗೆ ನಾನೇ ಸವಾಲು ಹಾಕಿಕೊಳ್ಳುತ್ತಿದ್ದೇನೆ. ಆದರೆ ಈ ಸವಾಲಿಗೆ ಜವಾಬು ಕೊಡುವುದೆಂದರೆ ನನ್ನನ್ನೇ ನಾನು ಸಿಲುಬೆಗೇರಿಸಿಕೊಂಡಂತೆ.  ಏಕೆಂದರೆ ಸತ್ಯದ ವ್ಯಾಖ್ಯೆಯಷ್ಟೇ  ಕಾವ್ಯದ ವ್ಯಾಖ್ಯೆ ಗಡಚು. ಅದರ ಸ್ವರೂಪ ನಿರ್ಣಯ ಅಷ್ಟೇ ಗೊಂದಲದ್ದು.  ಮಗು ಕಿಲಕಿಲನೇ ನಗುವುದು ಕಾವ್ಯ. ಅದರ ಬಾಲಲೀಲೆ, ಲಲ್ಲೆಮಾತು ಅಂಬೆಗಾಲು ಎಲ್ಲವೂ ಕವಿತೆಯೇ. ಬೋರೆಂದು ಸುರಿಯುವ ಮಳೆ, ಧುಮುಕುವ ಜಲಪಾತ, ತುಂಬಿ ಹರಿಯುವ ನದಿ, ಭೋರ್ಗರೆವ ಸಮುದ್ರ , ನೀಲಿ ಆಕಾಶ ತಾರಾಸಮೂಹ ಎಲ್ಲವೂ ಕಾವ್ಯವೇ.  ಪ್ರಕೃತಿಯ ಯಾವ ವಸ್ತು ಯಾವ ದೃಶ್ಯ, ಅಥವಾ ಯಾವುದೇ ಸುಂದರ ಬದುಕು ನಮ್ಮ ಮನಸ್ಸನ್ನು ಕಲಕುತ್ತದೆಯೋ, ನಮ್ಮನ್ನು ಅಂತರ್ಮುಖಿ ಯಾಗಿಸುತ್ತದೆಯೋ , ಅದೇ ನಿಜವಾದ ಕಾವ್ಯ.
ಕವಿ ಉದ್ಗರಿಸುತ್ತಾನೆ-
         ಕಾವ್ಯವೆಂದರೆ ಹೂದೋಟ
         ಅರಳಿ ಉದುರುವ ಆಟ
         ಹೂ ಮುಟ್ಟಿ ಹಿಸುಕಿದರೆ ಹಿಟ್ಟು ಹಿಟ್ಟು
         ಹೀರಿ ಅನುಭವಿಸಿದಲ್ಲಿ; ಸವಿಜೇನ ಹುಟ್ಟು
ಕಾವ್ಯ ನಮ್ಮ ನಿಮ್ಮ ಆಡು ಭಾಷೆಯೇ ಆದರೂ  ಆಡು ಮಾತಿಗಿರುವ ವಾಚ್ಯತೆ, ಯಾಂತ್ರಿಕತೆ, ಕಾವ್ಯಕ್ಕಿರುವುದಿಲ್ಲ. ಅಲ್ಲಿ ವಾಚ್ಯಕ್ಕಿಂತ ಸೂಚ್ಯಕ್ಕೆಬೆಲೆ. ಮಾತಿಗಿಂತ ಮೌನಕ್ಕೆ ಬೆಲೆ. ಅಲ್ಲಿ ಮೌನವೇ ಮಾತಿನ ಸ್ವರೂಪ
ಪಡೆದು ಬಿಡುತ್ತದೆ. ಅದಕ್ಕಾಗಿ ಕವಿ ಹೇಳುತ್ತಾನೆ....
       ಕಾವ್ಯವೆಂದರೆ ಹುಡುಗಾಟವಲ್ಲ
        ಸತ್ಯದ ಸೂಕ್ಷ್ಮ ಹುಡುಕಾಟ
        ಕವನವೆಂದರೆ  ಗುಡುಗಾಟವಲ್ಲ
        ದಿವ್ಯ ಮೌನಕೆ  ತಡಕಾಟ,,
ಎಂದು. ನಿಜವಾದ ಕವಿತೆ ಸೃಷ್ಟಿಯಾಗುವುದು ಗಾಢ ಮೌನದಲ್ಲಿ. ಹೋಗಿ ತಲುಪುವುದೂ ಮೌನಕ್ಕೇ. ಕವಿತೆ ಯಿಂದ ಏನು ಸೃಷ್ಟಿಯಾಗುತ್ತದೆ  ಎಂದುಕೇಳಿದರೆ ಸೃಷ್ಟಿಯಾಗುವುದು ಮತ್ತೊಂದು ಕವಿತೆಯೇ  ಎಂದು ಹೇಳಬೇಕಾಗುತ್ತದೆ. ಮಾತು ಮನುಷ್ಯನಿಗೆ ಪ್ರಕೃತಿ ನೀಡಿದ ಅದ್ಭುತ ವರ.ಕೇವಲ ಮಾತು ವ್ಯವಹಾರಕ್ಕಾದರೆ  ಮಾತಿನಿಂದಲೇ ಜನಿಸಿದ ಕಾವ್ಯ ಹೃದಯ ಸಂವಾದಕ್ಕೆ ಅನುವು ಮಾಡಿಕೊಡುತ್ತದೆ.  ನಮ್ಮೊಳಗಿನ ಭಾವ ಎಂದೂ ಅಮೂರ್ತವೇ. ಅದು ಪ್ರತ್ಯಕ್ಷಗೊಳ್ಳುವುದು ಭಾಷೆಯ ಮೂಲಕ ಮಾತ್ರ. ಪ್ರಜ್ಞೆ ಪಡೆದ ಮನುಷ್ಯ ರೆಲ್ಲರಿಗೂ ಭಾವ ಇರಲೇಬೇಕಷ್ಟೆ. ಹಾಗೆಂದು ಎಲ್ಲರೂ ಕವಿಯಾಗಲಾರರು.  ಕಾಣುವ ಕೇಳುವ ಅನುಭವವೆಲ್ಲ ಅಂತರಂಗದ ಕುಲುಮೆಯಲ್ಲಿ ಕುದಿದು ಅದೊಂದು ದರ್ಶನವಾಗಿ ರೂಪುಗೊಳ್ಳುವುದು ಪ್ರತಿಭಾಶಕ್ತಿ ಪಡೆದ ವ್ಯಕ್ತಿತ್ವದಲ್ಲಿ ಮಾತ್ರ. ಈ ಸಂದರ್ಭದಲ್ಲಿ ಇಂಗ್ಲಿಶ್ ಕವಿ ಶೆಲ್ಲಿ ನೆನಪಾಗುತ್ತಾನೆ. ಅತ್ಯಂತ ಉದಾತ್ತ
ವಾದ ಮನಸ್ಸುಗಳ ಅತ್ಯುದಾತ್ತವಾದ ಅನುಭವ ಲಕ್ಷಣಗಳನ್ನು  ಆನಂದಾತ್ಮಕವಾಗಿ ಹಿಡಿದಿಡುವ ಪ್ರಯತ್ನವೇ ಕಾವ್ಯ.ಎಂದು ಹೇಳಿದರೆ, ಮ್ಯಾಥ್ಯೂ ಅರ್ನಾಲ್ಡ  ಇನ್ನೂ ಸ್ವಲ್ಪ ಮುಂದೆ ಹೋಗಿ,“ಕಾವ್ಯ ಮನುಷ್ಯನ ಭಾಷೆಯ ಅತ್ಯಂತ ಪರಿಪೂರ್ಣ ರೂಪ, ಮತ್ತು ಆ ರೂಪದಲ್ಲಿ ಅದು ಸತ್ಯಾನ್ವೇಷಣೆಯ ಅತಿ ಹತ್ತಿರಕ್ಕೆ ಬರುತ್ತದೆ. ಕಾವ್ಯ ಸತ್ಯವನ್ನೂ ಕಾವ್ಯ ಸೌಂದರ್ಯದ ಹಿನ್ನೆಲೆಯನ್ನೂ ಅವಲಂಬಿಸಿದ ಜೀವನ ವಿಮರ್ಶೆಯೇಕಾವ್ಯ ಎಂದು ಅರ್ಥಪೂರ್ಣವಾಗಿ ಉದ್ಘರಿಸುತ್ತಾನೆ. ಅತ್ಯಂತ ಉದಾತ್ತವಾದ ಮನಸ್ಸು ಸೃಷ್ಟಿಸುವ ಕಾವ್ಯ ದ ಉದ್ದೇಶ  ಮತ್ತಷ್ಟು ಉದಾತ್ತ ಮನಸ್ಸುಗಳನ್ನು ಸೃಷ್ಟಿಸುವುದೇ ಆಗಿದೆ. ದಿನದಿಂದ ದಿನಕ್ಕೆ ಜಗತ್ತು ಅತಿ ನಾಗರಿಕತೆ ಅತಿ ಭೌತಿಕತೆ ಯ ಮಹಾ ಪ್ರವಾಹಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿರುವಾಗ  ಕಾವ್ಯದಂಥ ಸೂಕ್ಷ್ಮ ಸುಕೋಮಲ ವಸ್ತುವನ್ನು ಗಮನಿಸುವ ವ್ಯವಧಾನ ವಾದರೂ ಎಲ್ಲಿದೆ ?
ಕಾವ್ಯ ಸೃಷ್ಟಿಯ ಸಂದರ್ಭದಲ್ಲಿ ಕವಿ ಭಾವ ತೀವ್ರ ಸ್ಥಿತಿಗೆ ಏರುವಂತೇ  ಕಾವ್ಯದ ಆಸ್ವಾದಕನೂ ಅದೇ ಸ್ಥಿತಿಗೆ ಬರಬೇಕಾಗುತ್ತದೆ. ಸಂವೇದನಾ ಶೀಲನಾಗಬೇಕಾಗುತ್ತದೆ. ಕಾವ್ಯದ ಓದು ಅಂದರೆ ಅದೊಂದು  ಧ್ಯಾನ. ಕವಿಯ ಮಾತಿನಲ್ಲಿಯೇ ಹೇಳಬೇಕೆಂದರೆ,
         ಕಾವ್ಯವೆಂದರೆ ಧ್ಯಾನ, ಅಂತರಂಗದಿ ಯಾನ
         ತುರೀಯಕೆ : ತಾರಕಕೆ ಉಲ್ಲಂಘನ
         ಏರುತ್ತ ಎಡವುತ್ತ, ಇಳಿಯುತ್ತ ಕಳಿಯುತ್ತ
         ಅಗ್ನಿ ದಿವ್ಯದ ನಡುವೆ ಒಡಲ ಹವನ 

 ಕಾವ್ಯ ಸಾಮಾನ್ಯ ಓದುಗನ ದೃಷ್ಟಿಯಲ್ಲಿ  ಅದೊಂದು ಪದ್ಯ ಅದೊಂದು  ಹಾಡು ಅಷ್ಟೆ. ಆದರೆ ಅವುಗಳನ್ನೆಲ್ಲ ಒಳಗೊಂಡು ಅದನ್ನೂ ಮೀರಿದ್ದು ಕಾವ್ಯ. ಕಾವ್ಯ ಪದ್ಯದಲ್ಲಿ ಗದ್ಯದಲ್ಲಿ  ಕಲೆಯಲ್ಲಿ ನೃತ್ಯದಲ್ಲಿ ಸಂಗೀತದಲ್ಲಿ ಪ್ರಕೃತಿಯಲ್ಲಿ  ಮಾತಿನಲ್ಲಿ  ನಡೆ ನುಡಿಯಲ್ಲಿ  ಹಾಸು ಹೊಕ್ಕಾಗಿರುತ್ತದೆ.  ಆದರೆ ಅದನ್ನು ಕಾಣುವ ಮತ್ತು ಅನುಭವಿಸುವ  ವಿಶಿಷ್ಟ ದೃಷ್ಟಿ ಮತ್ತು ವಿಶಿಷ್ಟ ಮನೋಭಾವ ಇರಬೇಕಾಗುತ್ತದೆ.  ನಿಜವಾದ ಕಾವ್ಯ  ಅದರ ಭಾಷಾ ಶರೀರ ವನ್ನು ಮೀರಿ ಬೆಳೆದುಕೊಳ್ಳುತ್ತದೆ. ಶರೀರ ಅದಕ್ಕೆ ಅನಿವಾರ್ಯವಾದರೂ ಅದೇ ಕಾವ್ಯ ವಲ್ಲ.  ಕಾವ್ಯದ ಆತ್ಮವಿರುವುದು  ಕವಿಯಲ್ಲಿ ಮತ್ತು ಓದುಗನ ಹೃದಯದಲ್ಲಿ.
                      ಗೋಡೆ ಛಾವಣಿಯೊಳಗೆ  ಕಾವ್ಯ ಜನಿಸುವುದಿಲ್ಲ
                      ಬೇಕದಕೆ ಅವನಿ  ಅಂಬಾರ
                      ಹೊರ ಬಂದು ನೆಲ ಮುಟ್ಟಿ ತಲೆಯೆತ್ತಿ ನೋಡಿದರೆ
                      ತೆರೆದೀತು ನಿಗೂಢ ಮುಗಿಲ ದ್ವಾರ
                      ಧರೆಯ  ನಿರಿ ನಿರಿ ಯೊಳಗೆ ಸುರಿದೀತು  ನವಕವನ
                      ಧಾರಾಕಾರ
                                                              

   

Thursday 4 August 2011

ಅವತಾರಗಳು ಮತ್ತು ರಾಕ್ಷಸರು

ಭಾರತೀಯ ಪುರಾಣಗಳು ಮಹಾಕಾವ್ಯಗಳೊಂದೇ ಅಲ್ಲ, ಜಗತ್ತಿನಎಲ್ಲ ಮಹಾಕಾವ್ಯಗಳ ಗುರಿಯೂ ಮನುಷ್ಯನೊಳಗೆ ಇದ್ದಕ್ಕಿದ್ದಂತೇಸೃಷ್ಟಿಯಾಗುವ ರಾಕ್ಷಸ ಪ್ರವೃತ್ತಿಯನ್ನು ನಾಶ ಮಾಡುವುದೇ ಆಗಿದೆ. ಯಾವುದೋ ಒಂದು ದೇವತೆ ತಪಸ್ಸಿಗೆ ಮೆಚ್ಚಿ ವರ ನೀಡುತ್ತದೆ.ವರಪಡೆದ ಮನುಷ್ಯ ಏಕಾಏಕಿ ಮದವೇರಿ ಲೋಕಕಂಟಕನಾಗಿ ಪರಿವರ್ತನೆ ಗೊಳ್ಳುತ್ತಾನೆ. ಆಗ ಸಮಸ್ತ ಜಗತ್ತು ಸಂಕಟದಲ್ಲಿ ತಲ್ಲಣಿಸುತ್ತದೆ. ವರ ಮದದಿಂದ ರಾಕ್ಷಸನಾಗಿ ಪರಿವರ್ತಿತಗೊಂಡ ಮನುಷ್ಯನನುತಹಬಂದಿಗೆ ತರಲು ದೇವರು ವಿಶೇಷ ಅವತಾರವನ್ನೇ ಎತ್ತಿ ಬರಬೇಕಾಗುತ್ತದೆ. ನಮ್ಮ ದೇಶದ ಪುರಾಣಗಳೆಲ್ಲ ದುಷ್ಟರನ್ನ ನಿಗ್ರಹಿಸುವದೃಷ್ಟಾಂತಗಳಿಂದಲೇ ತುಂಬಿಹೋಗಿದೆ.
ಈ ವಾರ ನಮ್ಮ ರಾಜ್ಯದಲ್ಲಿ ನಡೆದ ಇನ್ನೂ ನಡೆಯುತ್ತಿರುವರಾಜಕೀಯದ ನಾಟಕೀಯ ವಿದ್ಯಮಾನಗಳನ್ನು ನೋಡಿದರೆ ಪುರಾಣಕಾಲ್ ಮತ್ತೆ ಪುನರಾವರ್ತನೆ ಗೊಳ್ಳುತ್ತಿದೆಯೇನೊ ಎಂದೆನ್ನಿಸುತ್ತದೆ. ದೇಶಾದ್ಯಂತ ಎಲ್ಲ ಮಾಧ್ಯಮಗಳಲ್ಲಿ ವರ್ಣರಂಜಿತವಾಗಿ ವಿಜ್ರಂಭಿಸಿದ ನಮ್ಮ ರಾಜ್ಯದ ರಾಜಕೀಯ ಪ್ರಹಸನ, ಭಾರತೀಯ ಪ್ರಜಾಪ್ರಭುತ್ವವನ್ನು ಮತ್ತು ಪ್ರಜೆಗಳನ್ನು ಹಗಲಿನಲ್ಲಿಯೇ ನಗ್ನಗೊಳಿಸಿಬಿಟ್ಟಿತು.  ಭಾರತೀಯ ಸಂದರ್ಭದಲ್ಲಿ ಭೃಷ್ಟಾಚಾರ ಸ್ವಜನಪಕ್ಷಪಾv  ಅಧಿಕಾರ ಲಾಲಸೆ, ಸ್ವಾರ್ಥ ಸಂಕುಚಿತತೆ ಅಪರೂಪವೇನಲ್ಲ. ರಾಜಶಾಹಿಯಿಂದ ಈವರೆಗೂ ನಾವು ಕಂಡಿದ್ದು ಇದನ್ನೇ. ನಮ್ಮ ರಾಜ್ಯದಲ್ಲಿಯೂ ಇದು ಅಪರೂಪವೇನಲ್ಲ.  ದೇವರಾಜ ಅರಸ್ ಮತ್ತು ರಾಮಕೃಷ್ಣಹೆಗಡೆ ಯವರ ಮುಖ್ಯಮಂತ್ರಿತ್ವದ ಕಾಲದಲ್ಲಿ ಭ್ರಷ್ಟಾಚಾರದ ಆರೋಪ ಮುಗಿಲುಮುಟ್ಟಿತ್ತು. ಅಂಥ ಸಂದರ್ಭದಲ್ಲಿ ಎಲ್ಲ ಸಾಮಾನ್ಯವಾಗಿಮುಖ್ಯಮಂತ್ರಿಗಳು ತಕ್ಷಣದಲ್ಲಿ ರಾಜೀನಾಮೆ ನೀಡಿದ್ದನ್ನು ಸ್ಮರಿಸ ಬಹುದಾಗಿದೆ. sಆದರೆ ಇಲ್ಲಿ ಅದರ ತದ್ವಿರುದ್ಧ ಪರಿಸ್ಥಿತಿ. ರಾಷ್ಟ್ರೀಯ ಪಕ್ಷವೊಂದರ ಲಾಂಛನದಡಿಯಲ್ಲಿ ಬೆಳೆದ ಒಂದು ವ್ಯಕ್ತಿತ್ವ ಅಧಿಕಾರ ಮತ್ತು ಹಣದ ಪ್ರಭಾವದಲ್ಲಿ, ಅದರ ಅಮಲಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ದಾರುಣ ದುರಂತವನ್ನು ನಾವಿಂದು ಕಾಣುತ್ತಿದ್ದೇವೆ.ಎಡಿಯೂರಪ್ಪ ಇಂದು ನಿನ್ನೆಯ ವ್ಯಕ್ತಿಯಲ್ಲ. ಮೂರು ದಶಕದಿಂದ ರಾಜಕೀಯರಂಗದಲ್ಲಿಮನೆಮಾತಾದ ವ್ಯಕ್ತಿ. ಅವರ ಶಕ್ತಿ ಮತ್ತು ದೌರ್ಬಲ್ಯ ವೆರಡನ್ನೂ ಜನ ಸಮುದಾಯ ಅರಿತಿದೆ. ಅವರ ಒರಟುತನ,ಹಟಮಾರಿತನ, ಗಳ ನಡುವೆ ಹೋರಾಟದ ಪ್ರವೃತ್ತಿ ಮೆಚ್ಚುವಂಥಹದ್ದಾಗಿದೆ.
ಆದರೆ ಅವರಿಗೆ ಎಂದು ಅಧಿಕಾರ ಬಂತೊ  ಅಂದೇ ಯೆಡ್ಡಿಯ ಎರಡನೆಯ ಅವತಾರದ ಪ್ರಾದುರ್ಭಾವವಾಯಿತೆನ್ನಬಹುದು.  ಕುಮಾರಸ್ವಾಮಿ ಕೂಡ ಅಧಿಕಾರ ಮಾಯಾಜಾಲಕ್ಕೆ ಸಿಲುಕಿಯೇ ಅಲ್ಲವೇ ಯೆಡ್ಡಿಗೆ ಅಧಿಕಾರ ಬಿಡದೇ ಜನರಿಂದ ಛೀ ಥೂ ಎನ್ನಿಸಿಕೊಂಡಿದ್ದು ? ಚುನಾವಣೆಯಲ್ಲಿ ನೆಲಸಮಗೊಂಡಿದ್ದು. ಈಗ ಮತ್ತೆ ಅದೇ ಇತಿಹಾಸದ ಪುನರಾವರ್ತನೆಯಾಗಿದೆ. ಅಧಿಕಾರ ಮನುಷ್ಯನನ್ನು ಭೃಷ್ಟನನ್ನಾಗಿಸುತ್ತದೆ, ಅತಿ ಅಧಿಕಾರ ಅತಿ ಭೃಷ್ಟತೆಗೆ ನೂಕುತ್ತದೆ, ಎನ್ನುವ ಜನಪ್ರಿಯ ನಾಣ್ಣುಡಿಯೇ ಇದೆ.
ಕರ್ನಾಟಕದ ಬಿ ಜೆ ಪಿ ಗೆ ಜೀವ ಕೊಟ್ಟವನೇ ತಾನು, ತನ್ನಿಂದಮಾತ್ರ ಈ ಪಕ್ಷಕ್ಕೆ ಅಸ್ತಿತ್ವ, ತಾನೇ ಸರ್ವೋಚ್ಛ ನಾಯಕ ಎಂಬ iಹಾ ಅಹಂ, ಎಡೆಯೂರಪ್ಪನವರನ್ನು ಅದೆಷ್ಟು ಆಕ್ರಮಿಸಿತ್ತು ಎಂಬುದು  ಕಳೆದ ವಾರವಷ್ಟೇ ಇಡೀ ದೇಶ ಕಾಣುವವಂತಾಯಿತು.  ಬಿ ಜೆ ಪಿ ಯ ರಾಷ್ಟ್ರೀಯ ನಾಯಕರ ಅಂಕೆಗೂ ಸಿಗದೇ  ಪುಂಡು ಹೋರಿಯಂತೆ ಸೆಣಸಾಡಿದ ದೃಶ್ಯ ಹಾಸ್ಯಾಸ್ಪದವೆನ್ನಿಸಿತು.
ಲೋಕಾಯುಕ್ತವರದಿ  ಎಷ್ಟು ಸತ್ಯ ಅದೆಷ್ಟು ಅಸತ್ಯ ಎಂಬುದು ಮುಂದೆ ನ್ಯಾಯಾಲಯ ನಿರ್ಣಯಿಸುತ್ತಿತ್ತು,ಅವರ ಆರೋಪ ಮತ್ತು ಅದಕ್ಕೆ ಸಂಭಂಧ ಪಟ್ಟ ಘಟನೆಗಳು ಕಣ್ಣೆದುರೇ ಹರಡಿ ಬಿದ್ದಿರುವಾಗ ತಾನು ಸತ್ಯ ಹರಿಶ್ಚಂದ್ರನೆಂದು ಬಾಲಂಗೋಚಿಗಳ ಮೂಲಕ ಸಮರ್ಥನೆ ಮಾಡಿಸುತ್ತಿದ್ದ ದೃಶ್ಯ ನಗುಬರಿಸುತ್ತಿತ್ತು. ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲು ಮೆರವಣಿಯ ಮೇಲೆ ಸಾಗಿದ್ದು ಒಂದು ಅಪರೂಪದ ದೃಶ್ಯ. ಅದೊಂದು ಗಾಂಧಿಯವರ ಧಾಂಡಿ ಉಪ್ಪಿನ ಸತ್ಯಾಗ್ರಹವನ್ನು ನೆನಪಿಸುವ ಘಟನೆಎಂದು  ಎಡ್ಡಿಯವರ ಮಗಳು ಉದ್ಗಾರವೆತ್ತಿದರೆ, ಅವರ ಬಾಲಂಗೋಚಿ ಶಾಸಕರು ಲೋಕಾಯುಕ್ತರನ್ನೆ ಹಿಗ್ಗಾ ಮುಗ್ಗಾ ಹೀಗಳೆಯುತ್ತಿರುವ ದೃಶ್ಯ ಹೇಸಿಗೆ ಹುಟ್ಟಿಸಿಬಿಟ್ಟಿತು.
ಅಧಿಕಾರ ಎಂಬ ಅಮಲು ಪ್ರಜಾಪ್ರಭುತ್ವ ದ ಆಶಯವನ್ನೇ ಮರೆಸುತ್ತದೆ ಎಂಬುದಕ್ಕೆ ಈ ಎಲ್ಲ ಘಟನೆಗಳು ಸಾಕ್ಷಿಯಾಗುತ್ತವೆ. ತಾನೊಬ್ಬ ನಾಯಕ ಎಂಬುದು ಮರೆತು  ಮಾಲಿಕರಾಗಿ ಬದಲಾಗಿಬಿಡುತ್ತಾರೆ. ಸಾವಿರ ಸಾವಿರಕೋಟಿಕಪ್ಪು ಹಣ ಮತ್ತಷ್ಟು ಕತ್ತಲೆಗೆ ದೂಡುತ್ತದೆ. ತಾತ್ವಿಕವಾಗಿ ಅಕ್ಷರಶಹ ಬತ್ತಲೆಯಾಗಿ ಬಿಡುತ್ತಾರೆ. ಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವ ಕಾರ್ಯಕರ್ತರು  ಪ್ರತೀ ಪಕ್ಷದಲ್ಲಿ ಇರುತ್ತಾರೆ. ನಿಜವಾಗಿ ಜನರೆದುರು ಸಾಧನೆಯ ಸಂದೇಶವನ್ನು ಹೊತ್ತೊಯ್ಯುವವರು ಅವರು.  ಎಡ್ಡಿಯವರ ಹಟಮಾರಿತನ  ಸ್ವಜನಪಕ್ಷಪಾತ ಗಳನ್ನು ಕಣ್ಣಾರೆ ಕಂಡ, ಖಾಲಿ ಕಿಸೆಯ ಕಾರ್ಯಕರ್ತನ ಸ್ಥಿತಿಯಂತೂ ದಯನೀಯ. ಸಾವಿರ ವರ್ಷ ಗುಲಾಮಗಿರಿ ಕಂಡ ಈ ದೇಶ  ಮಾನಸಿಕವಾಗಿ ಸಾಕಷ್ಟು ಘಾಸಿಗೊಂಡಿದೆ. ಇನ್ನೂ ಪ್ರಜಾಪ್ರಭುತ್ವ
ಈಮಣ್ಣಿನಲ್ಲಿ ಬೇರು ಬಿಟ್ಟಿಲ್ಲ, ಚಿಗುರೂ ಸಹ ಒಡೆದಿಲ್ಲ. ಮನೆ ಮನೆ ಬಾಗಿಲು ಬಡಿದು ಮತ ಬೇಡಿ ತಾನು ನಾಯಕನಾಗಿದ್ದೇನೆ, ಎಂಬ ನೆನಪು ಸಹ ಬಾರದಷ್ಟು  ಅಧಿಕಾರದ ಅಮಲು ನೆತ್ತಿಗೇರುತ್ತಿರುವಾಗ, ಪ್ರಜಾಪ್ರಭುತ್ವ ಸುಪ್ತಸ್ಥಿತಿಯಲ್ಲಿ ಕುಳಿತು  ತನ್ನ ಕಾಲಕ್ಕಾಗಿ ಕಾಯುತ್ತಲೇ ಇರುತ್ತದೆಯೇನೋ ??

Saturday 23 July 2011

ಕುರುಡು ಆಧುನಿಕತೆ

ಮಣ್ಣಿಂದ ದೂರವಾದ ಮೇಲೆ   ಆಧುನಿಕತೆಯ ಬುಲ್ಡೋಜರ್ ಅರಣ್ಯಗಳನ್ನ ಕೃಷಿ ಭೂಮಿಗಳನ್ನ  ಮುಂದೊತ್ತುತ್ತಾ ಒತ್ತುತ್ತಾ ಸಾಗಿದಂತೆಮರುಭೂಮಿ ಆಕ್ರಮಿಸಿ ಅಪ್ಪುತ್ತಾ ಅಪ್ಪುತ್ತಾ ಬರುತ್ತದೆ. ವೈಭೋಗಲಾಲಸೆ ಯಲ್ಲಿ  ನಾವು ಲೀನವಾದಂತೆ ನಮ್ಮ ಅಂತರಂಗ ಮರುಭೂಮಿಯಾಗತೊಡಗುತ್ತದೆ. ಗ್ರಾಮಗಳನ್ನು ನಾಶಮಾಡುತ್ತ  ನಗರಗಳನ್ನು ಸೃಷ್ಟಿಸುತ್ತ ಸಾಗಿದಂತೆ ಗ್ರಾಮವೊಂದೇ ಅಲ್ಲ ಕಾಡುಗಳೂ ನೆಲಸಮ ಗೊಳ್ಳುತ್ತವೆ. ಕಾಡುತನ ಮಾತ್ರ ಮನುಷ್ಯನಲ್ಲಿ ಉಳಿದುಕೊಳ್ಳುತ್ತದೆ. ಸದ್ಯ ನಾವು ಅದೇ ಕಾಡುತನದ ಸ್ಥಿತಿಯನ್ನ ಕಾಣತೊಡಗಿದ್ದೇವೆ.
ಈ ಸಂದರ್ಭದಲ್ಲಿ ಒಂದು ರೂಪಕ ನೆನಪಾಗುತ್ತಿದೆ.  ಟಿಪ್ ಟಾಪಾಗಿ ಡ್ರೆಸ್ ಮಾಡಿದ ಒಬ್ಬ ಹುಚ್ಚ ಒಂದು ದಿನ ಬಹುಮಹಡಿ ಕಟ್ಟಡವನ್ನೇರುತ್ತಾನೆ. ಅಲ್ಲಿ ಅಂಬೆಗಾಲಿಕ್ಕುತ್ತಿದ್ದ ಒಂದು ಮಗುವನ್ನು ಎತ್ತಿಕೊಳ್ಳುತ್ತಾನೆ.  ಟೆರೇಸಿನ ಅಂಚಿಗೆ ಬಂದು ನಿಂತು ಮಗುವನ್ನು ಕೈಯಿಂದ ಎತ್ತಿ ಹಾರಿಸಿ ಹಿಡಿಯುತ್ತ ಆಟವಾಡಿಸತೊಡಗುತ್ತಾನೆ.  ಕಟ್ಟಡದಲ್ಲಿ ಮತ್ತು ಕಟ್ಟಡದ ತಳದಲ್ಲಿ ನಿಂತ ಜನ ನೋಡುತ್ತ ಚಪ್ಪಾಳೆಯಿಕ್ಕಿ ಖುಷಿಪಡತೊಡಗುತ್ತಾರೆ. ಹುಚ್ಚ ಮಗುವನ್ನು ಆಡಿಸುತ್ತ ಅಷ್ಟೆತ್ತರದಿಂದ ಕೈಬಿಟ್ಟು ಅಟ್ಟಹಾಸದಿಂದ ನಗತೊಡಗುತ್ತಾನೆ.  ಮಗು ಎತ್ತರದಿಂದ ಕೆಳಬಿದ್ದು ಸತ್ತು ಚೂರು ಚೂರಾಗುತ್ತದೆ. ಈಗ ಜಗತ್ತಿಗೆ ಆಧುನಿಕತೆಯ ಮತ್ತು ಅಭಿವೃದ್ಧಿಯ ಅದ್ಭುತ ಹುಚ್ಚು ಹಿಡಿದಿದೆ.  ಮನುಷ್ಯನ ಸಂವೇದನೆಯನ್ನೇ ಅಭಿವೃದ್ಧಿ ಎಂಬ ಹುಚ್ಚ ಎತ್ತಿ ಆಡಿಸುತ್ತಿದ್ದಾನೆ.  ಅಭಿವೃದ್ಭಿ ಮತ್ತು ವಿಕಾಸ  ಈ ಎರಡರ ನಡುವಿನ ಅಂತರವನ್ನೇ ಅರಿಯಲಾರದಷ್ಟು ಜಡ್ಡುಗಟ್ಟಿರುವ ವರ್ತಮಾನದ ಬದುಕಿಗೆ  ವಿಚಿತ್ರವಾದ ವಿಸ್ಮೃತಿ ಕಾಡುತ್ತಿದೆ. ವಿಜ್ಞಾನವೆಂಬ ಹೆಸರಿನ ತಂತ್ರಜ್ಞಾನ,   ಸೃಷ್ಟಿಸಿ ರಾಶಿಹಾಕಿರುವ ಅಸಂಖ್ಯಾತ ಐಷಾರಾಮೀ ಸಾಮಗ್ರಿಗಳೆದುರು ಮನುಷ್ಯ ಬೆರಗಿನಲ್ಲಿ ಮೈಮರೆತು ಬಿಟ್ಟಿದ್ದಾನೆ. ಕಾರು ಬಂಗಲೆ ವೇಷ ಭೂಷಣ, ಮನರಂಜನೆ, ಯ ಹಪಾಹಪಿಯಲ್ಲಿ ತನ್ನತನವನ್ನೇ ಕಳೆದುಕೊಳ್ಳತೊಡಗಿ ದ್ದಾನೆ. ಇವುಗಳನೆಲ್ಲ ಪಡೆದೇತೀರುವ ಛಲದಲ್ಲಿ ನೈತಿಕತೆಯನ್ನ ಮಾನವ ಸಂಬಂಧಗಳನ್ನ ತೊರೆದು ನಗ್ನಗೊಳ್ಳುತ್ತಿದ್ದಾನೆ. ಹಣ ಮತ್ತು ಅಧಿಕಾರ ಪಡೆಯುವ ಹೋರಾಟ ಮಾತ್ರ ಜೀವನ ಎಂದೆನ್ನಿಸಿಕೊಳ್ಳುವ ಸ್ಥಿತಿ ಈಗ ನಿರ್ಮಾಣಗೊಳ್ಳುತ್ತಿರುವುದು  ಇಂದಿನ ದುರಂತವಾಗಿದೆ. 

ಆಧುನಿಕ ಶಿಕ್ಷಣವೂ ಇದಕ್ಕೆ ಒತ್ತು ನೀಡುತ್ತಿದೆ. ಮೂಲಭೂತ ಸಂಸ್ಕೃತಿ  ಸ್ವಂತ ಪರಿಸರ ಗಳ ಬಗೆಗೆ ಕುರುಡಾಗಿರುವ ಶಿಕ್ಷಣ ವ್ಯವಸ್ಥೆ ಮಗುವಿನಲ್ಲಿ ಅಜೀರ್ಣವಾಗುವಷ್ಟು ಮಾಹಿತಿ ತುಂಬತೊಡಗಿದೆ. ವ್ಯಕ್ತಿತ್ವ ವಿಕಾಸಕ್ಕೆಒತ್ತು ಕೊಡುವ ಬದಲು  ವ್ಯಕ್ತಿಯನ್ನ ಮತ್ತೊಂದು ಯಂತ್ರವಾಗಿಸುವ ಕೈಂಕರ್ಯದಲ್ಲಿ ತೊಡಗಿದೆ. ನಮ್ಮ ಸುತ್ತಲಿನ ಪರಿಸರ ಮತ್ತು ಸಂಸ್ಕೃತಿ ನಮ್ಮ ವ್ಯಕ್ತಿತ್ವದ ಒಂದು ಭಾಗವಾಗಬೇಕಾದರೆ, ನಮಗೆನಮ್ಮ ನೆಲದ ಸಾನ್ನಿಧ್ಯ ಅತ್ಯಂತ ಅವಶ್ಯ. ಆಧುನಿಕತೆ ನೆಲದ ಸಂಪರ್ಕದಿಂದಲೇ ನಮ್ಮನ್ನು ದೂರಗೊಳಿಸಿದೆ.ಮನೆಯಿಂದ ಹೊರಬಿದ್ದಕೂಡಲೇ ಮಗು ವಾಹನವಿಲ್ಲದೇ ಶಾಲೆಗೆ ಹೊರಡಲಾರದು. ಮನೆಯಿಂದ ಶಾಲೆವರೆಗಿನ
ಸುತ್ತಲಿನ ಮರ ಗಿಡ ಹೂ ಬಳ್ಳಿ ಪಶು ಪಕ್ಷಿ ಮತ್ತು ಸಮುದಾಯದ ಜೀವನ ವಿಧಾನ ತನ್ನಂತಾನೇ ಮಗುವಿನ ಕಣ್ಣಿಗೆ ಬೀಳುತ್ತಿತ್ತು.  ಆಧುನಿಕತೆ ಎಂದರೆ ಐಷಾರಾಮಿತನ  ಆಧುನಿಕತೆ ಎಂದರೆ ಶ್ರಮರಹಿತ ಜೀವನ, ಎಂಬುದೇ ಪ್ರಧಾನ ಮೌಲ್ಯವಾಗಿ ಮಗುವಿನ ಮುಗ್ಧ ಕಣ್ಣಿಗೆ ಕಂಡರೆ ಆಶ್ಚರ್ಯವಿಲ್ಲ. ಅದು ಮಗುವಿನ ತಪ್ಪಲ್ಲ. ಇಡಿ ಸಮುದಾಯದ ನಡಿಗೆ ಯೇ  ಆಕಾಶದಲ್ಲಿ ನಡೆಯುತ್ತಿದೆ. ಯಾವ ಮನುಷ್ಯನೂ ದಿನಕ್ಕೆ ಒಂದು ಮೈಲಿ ನೆಲದ ಮೇಲೆ ನಡೆಯಲಾರ. ನಡೆದಾಡುವ ಮನುಷ್ಯ ಕೀಳು, ವಾಹನ ಸವಾರ ಶ್ರೇಷ್ಟ ಎಂಬ ಅಲಿಖಿತ ನಿಯಮವೇ ಸೃಷ್ಟಿಯಾಗಿರುವುದು ಕ್ರೂರ ವಾಸ್ತವ. 
ಇಂದಿನ ಮನುಷ್ಯನಿಗೆ ಈ ನೆಲ ಈ ಮಣ್ಣು ಕೇವಲ ವೈಭೋಗ ವಸ್ತು ಅಷ್ಟೆ. ಆತ ಈಗಾಗಲೇ ಕುಂಡದಲ್ಲಿಬೆಳೆಸಿಟ್ಟ ಗಿಡವಾಗಿಬಿಟ್ಟಿದ್ದಾನೆ. ಈಭೂಮಿ  ಈ ಮಣ್ಣು ಮಾನಸಿಕವಾಗಿ ದೂರಗೊಳ್ಳುತ್ತಿದೆ.ನಮ್ಮ ದೇಶದ ತತ್ವ ಸತ್ವ ಮತ್ತು ಸ್ವತ್ವ ಈಮೂರೂ ಹುಟ್ಟಿದ್ದು ಬೆಳೆದದ್ದು ಮತ್ತು ಬಾಳಿದ್ದು ಅರಣ್ಯ ಪರಿಸರದಲ್ಲಿ ಎಂಬುದನ್ನ ನಾವು ಮತ್ತೆ ನೆನಪಿಸಿಕೊಳ್ಳಬೇಕಾಗಿದೆ.  ಸಾಹಿತ್ಯ ಸಂಗೀತ ಕಲೆ ಗಳೆಲ್ಲ ಬೆಳೆದು ಬೆಳೆದು ಒಂದು ತುದಿ ತಲುಪಿದಾಗ ಯಾಂತ್ರಿಕಗೊಳ್ಳುತ್ತದೆ. ಮತ್ತೆ ಸತ್ವ ತುಂಬಿಕೊಳ್ಳಲು  ಜಾನಪದಕ್ಕೆ ಶರಣಾಗಬೇಕಾಗುತ್ತದೆ. ಅದೇ ರೀತಿ ಬದುಕು ಅತಿ ಆಧುನಿಕ ಗೊಳ್ಳುತ್ತ ಸಾಗಿದಂತೆ ಖಾಲಿತನ ಜಿಗುಪ್ಸೆ ನಿರಾಶೆ ಮುತ್ತಿಕೊಳ್ಳುತ್ತದೆ. ಆಗ ಮತ್ತೆ ಹೊಸ ಚೈತನ್ಯ  ಹೊಸ ಸತ್ವ ದ ಪೂರೈಕೆಯಾಗದಿದ್ದರೆ, ಅದು ಸತ್ತ ಬದುಕಾಗುತ್ತದೆ. ಆಗ ಉಳಿಯುವುದು ಒಂದೇ ಮಾರ್ಗ, ತನ್ನ ಮೂಲದ ಗ್ರಾಮ ಮತ್ತು ಅರಣ್ಯಕ್ಕೆ ಮರಳುವದು. ಶುದ್ಧ ಮಾನವೀಯ ಗಾಳಿ ಬೆಳಕುಗಳನ್ನ ಆಸ್ವಾದಿಸುವುದು.
 ಆದರೆ ಯಾವ ಪರಿಸರ ನಮ್ಮ ಮನುಷ್ಯತ್ವವನ್ನು ನೆನಪಿಸುವುದೊ, ಯಾವ ಅರಣ್ಯ ನಮ್ಮ ದೇಶೀಯ ಚಿಂತನೆಗೆ ಇಂಬಾಗುವುದೋ, ಅದೇ ನಮ್ಮ ಅಜ್ಞಾನದಿಂದ, ಕ್ಷಣಿಕ ದುರಾಸೆಯಿಂದ ಸರ್ವನಾಶವಾಗುತ್ತಿರುವುದುಬಹು ದೊಡ್ಡ ದುರಂತ.
                        ಮಂಜಾದ ಕಣ್ಣಲ್ಲೇ, ಕಟ್ಟಿದ ಕಿವಿಯಲ್ಲೇ
                        ನಾ ಒಳಗೆ ಕಟ್ಟಿರುವೆ ನಿನ್ನನ್ನು
                        ನೀ ಮತ್ತೆ ಊದಿದರೆ ನಾ ಹೇಗೆ ತಾಳಲಿ ?
                        ನಾ ಹೇಗೆ ಕಟ್ಟಲಿ ನನ್ನನ್ನು ??
                                            [ ಗ. ಸು. ಭಟ್ಟ ]


                                                              sಸುಬ್ರಾಯ ಮತ್ತೀಹಳ್ಳಿ

Friday 13 May 2011

ಕೃತಿಯೊಂದಿಗೆ ಶೃತಿಯಾಗಿ

ಬರಹದ ಹುಚ್ಚು ಹೇಳುವ ಕೆಚ್ಚು ಎರಡಿದ್ದರೆ ಬದುಕಿನ ಎಲ್ಲ ಘಟನೆಗಳು ಕಾದಂಬರಿಯೇ ಆದೀತು. ಬರಹಕ್ಕೆ ಮಾತ್ರ ಭಾಷೆ ಬೇಕೇಬೇಕು, ಭಾಷೆ ಕರಗತವಾದಷ್ಟೂ ಬರಹ ಬನಿಗೊಳ್ಳುತ್ತದೆ. ಬರಹ ಬನಿಗೊಳ್ಳಲು ಭಾಷೆಯ ಕಡಗೋಲಿನಲ್ಲಿ ಭಾವದ ಕಡೆತ ಅವಶ್ಯ.  ಬರಹವೆಲ್ಲವೂ ಅನುಭವದ ಅಭಿವ್ಯಕ್ತಿಯಲ್ಲ, ಅನುಭವ ಸರಳತೆ ಸೂಕ್ಷ್ಮತೆ ಮತ್ತು ಸಮಗ್ರತೆ ಯುಳ್ಳ ವ್ಯಕ್ತಿತ್ವವನ್ನು ಬಯಸುತ್ತದೆ. ಅನುಭವದ ಮೇಲ್ಪದರದ ಸ್ಪರ್ಶಕ್ಕಿಂತ ಅದರ ಆಳದ ಅನ್ವೇಷಣೆ ಬರಹಕ್ಕೆ ಹೊಸತನ ನೀಡಬಲ್ಲದು. ತೀರಾ ಸರಳ ಅನುಭವವೂಪ್ರತಿಭೆಯ ಸ್ಪರ್ಶದಿಂದ ಹೊಸತನದಿಂದ ಮಿಂಚಬಲ್ಲದು. ಕತೆಯಾಗಲೀ ಳದನೋಟ ಕಲಾತ್ಮಕ ಸ್ಪರ್ಶ ದಿಂದ ಆಕರ್ಷಣೆ ಪಡೆಯುತ್ತದೆಬರಹಗಾರನಿಗೆಬರಹವೇ ಅಭಿವ್ಯಕ್ತಿ ಮಾಧ್ಯಮ. ಅದೇ ಅಸ್ತ್ರ , ಎಷ್ಟೆಷ್ಟು ಬರೆದನೊ ಅಷ್ಟಷ್ಟು ಪರಿಣತಿ ಒದಗುತ್ತ ಹೋಗುತ್ತದೆ.  ಅಕ್ಷರದ ಗರಡೀಮನೆಯಲ್ಲಿ ಸಾಮುಮಾಡಿದಷ್ಟೂಅಭಿವ್ಯಕ್ತಿಯಲ್ಲಿ ಸಿದ್ಧಿ ದೊರಕುತ್ತಾ ಹೋಗುತ್ತದೆ.  ಇಂಥ ಒಬ್ಬ ಅಕ್ಷರ ಪೈಲ್ವಾನ ಇಂದು ನಮ್ಮೆದುರು ನಿಂತಿದ್ದಾರೆ. ಕಿರಿ ಕಿರಿ ಕಥೆಯ ಕಥನ ಕಿರಿಕಿರಿ ಕೃತಿಯನ್ನ ಮುದ್ದಾಗಿ ಪ್ರಕಟಿಸಿ ನಮ್ಮ ಕೈಗಿಟ್ಟಿದ್ದಾರೆ
 ದತ್ತಗುರು ಕಂಠಿ ಇತ್ತೀಚೆಗೆ ಬೆಳಕಿಗೆ ಬಂದ ಪ್ರತಿಭಾವಂತಯುವ ಲೇಖಕಉತ್ತರಕನ್ನಡ ಜಿಲ್ಲೆಯ ಸ್ಥಳೀಯ ಪತ್ರಿಕೆಯಿಂದಾರಂಭಿಸಿ ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿಸಣ್ಣಕಥೆ ಲೇಖನ ನುಡಿಚಿತ್ರ ಗಳನ್ನು ಪ್ರಕಟಿಸಿ ಗಮನ ಸೆಳೆದ ಉತ್ಸಾಹಿ ಯುವಕ.   ವೃತ್ತಿಯಲ್ಲಿ ಕೃಷಿಕರಾಗಿ ಕೃಷಿರಂಗದ ಹತ್ತು ಹಲವು ನೋವು ತಲ್ಲಣಗಳನ್ನುಅನುಭವಿಸುತ್ತ, ಅಕ್ಷರ ಕೃಷಿಯಲ್ಲಿಯೂ ಹೊಸ ಹೂ ಅರಳಿಸುವ ಇವರ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ ಸಂಗತಿ.
 ಹಸಿರು ಗುಡ್ಡಬೆಟ್ಟ ತೋಟಪಟ್ಟಿ ಹಳ್ಳಕೊಳ್ಳ ಗಳಲ್ಲಿ ಏಕಾಂತ ಸಾಧಿಸುತ್ತ ದೈಹಿಕ ಶ್ರಮದ ಜೊತೆಗೇ ಸಾಹಿತ್ಯದ ಧ್ಯಾನವನ್ನೂ ಸಾಧಿಸಿದ ಅಪರೂಪದ ವ್ಯಕ್ತಿ.ಕಂಠಿಯವರ ಅಭಿವ್ಯಕ್ತಿ ಗ್ರಾಮಮುಖಿಯಾದದ್ದು. ಇಂದಿನ ಆಧುನಿಕ ಸಂದರ್ಭದಲ್ಲಿಇಡೀ ಜಗತ್ತೇ ಹಳ್ಳಿಯಾಗಿದೆ ನಿಜ, ಆದರೆ ನಮ್ಮ ಹಳ್ಳಿಗಳೂ ಒಂದು ಜಗತ್ತು ಎಂಬುದನ್ನ ದೇಶ ಮರೆತಿದೆ. ಹಳ್ಳಿಗಳು ತಮ್ಮ ಅನನ್ಯತೆಯನ್ನು ತಾವೇ ಉಳಿಸಿಕೊಳ್ಳಬೇಕಾಗಿದೆ.ತಮ್ಮ ಪ್ರಗತಿ ತಮ್ಮಿಂದಲೇ ಎಂಬುದನ್ನ ಮನಗಾಣಬೇಕಿದೆ.
ದತ್ತಗುರು ಕಂಠಿ ಯವರ ಆಳದಲ್ಲಿ ಕೃಷಿಕನೋರ್ವನ ತುಡಿತವಿದೆ. ಏನಾದರೂ ಮಾಡಲೇಬೇಕೆಂಬ ತೀವ್ರ ಮಿಡಿತವಿದೆ. ಗ್ರಾಮ ಸಮುದಾಯದೊಂದಿಗೆ ಬೆರೆತು ಕೃಷಿ ಮತ್ತು ಸಾಂಸ್ಕೃತಿಕ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಲೇ, ಸಾಹಿತ್ಯದ ಸಂವೇದನೆಯನ್ನು ಜೀವಂತ ಉಳಿಸಿಕೊಳ್ಳುವ ಅವರ ಹೋರಾಟ ಮೆಚ್ಚುವಂಥದ್ದು,    ನಗರದಿಂದ ದೂರವಿರುವ  ನಮ್ಮ ದೇಶದ ಗ್ರಾಮಗಳು ಇನ್ನೂ ಮುಗ್ಧತೆಯನ್ನು ಉಳಿಸಿಕೊಂಡಿವೆ. ಅವುಗಳ ಕನ್ಯತ್ವ ಇನ್ನೂ ಭಂಗವಾಗಿಲ್ಲ. ಅಲ್ಲಿ ಸೃಷ್ಟಿಯಾಗುವ ಹತ್ತುಹಲವು ಸನ್ನಿವೇಶಗಳು ನಗು ತರಿಸುತ್ತವೆ. ದುಃಖ ದುಗುಡ ದುಮ್ಮಾನಕಲಹ ಸರಸ ಗಳ ನಡುವೆ ಮುಗ್ಧ ಪ್ರೀತಿಯುಕ್ಕಿಸುತ್ತದೆ. ಗ್ರಾಮಗಳು ದಟ್ಟ ಬಡತನದಲ್ಲಿ
ನಾಗರೀಕತೆಯ ಕಣ್ಣಿಗೆ ಪೇಲವವಾಗಿ ತೋರಬಹುದು. ಅವುಗಳ ಹಬ್ಬ ಹರಿದಿನ ತೇರು ಜಾತ್ರೆ ಮದುವೆ ಮುಂಜಿ ಯಂಥ ಸಾಂಸ್ಕೃತಿಕ ಪ್ರಕ್ರಿಯೆಗಳು ಈಗಲೂ ಯಾಂತ್ರಿಕ ಗೊಂಡಿಲ್ಲ.ಅಲ್ಲಿ ಉಕ್ಕುವ ಜೀವನೋತ್ಸಾಹ, ಮನುಷ್ಯ ಸಂಬಂಧಗಳಲ್ಲಿಯ ಘಾಡತೆ, ಯನ್ನ ನೋಡಿಯೇ ಅನುಭವಿಸ ಬೇಕು. ಇದೇ ಕಾರಣಕ್ಕೆ ಈಗಲೂ ನಮ್ಮ ಗ್ರಾಮಗಳು ಅನುಭವಕ್ಕೆ ಅಭಿವ್ಯಕ್ತಿಗೆ ಅದ್ಭುತಗಣಿಗಳೇ ಆಗಿವೆ. ಇಲ್ಲಿ ಕಂಡುಬರುವ ನಿಷ್ಕಲ್ಮಷ ಬದುಕು ಸದಾ ನಗರದ ಯಾಂತ್ರಿಕತೆಗೆಸವಾಲೊಡ್ಡುತ್ತಲೇ ಇರುತ್ತದೆ.
ದತ್ತಗುರು ಕಂಠಿ ಒಂದು ಪುಟ್ಟ ಗ್ರಾಮದ ಪುಟ್ಟ ಕೃಷಿಕರಾಗಿ ತಮ್ಮ ಸುತ್ತಲಿನ ಹಳ್ಳಿಯ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅಲ್ಲಿಯ ಅನುಭವಗಳಿಗೆ ತಮ್ಮನ್ನುಒಡ್ಡಿಕೊಂಡಿದ್ದಾರೆ. ಹಳ್ಳಿಯ ಹಲವು ರಸನಿಮಿಷಗಳನ್ನು ಸರೆಹಿಡಿದು ದಾಖಲಿಸಿದ್ದಾರೆ.ದತ್ತಣ್ಣ, ಸುಬ್ಬಣ್ಣ, ಬುಲೆಟ್ ಬಾಬಣ, ನಾಣಿ ಭಟ್ರು, ಲಬಲಬ ಲಂಬೋದರ, ಗಿರಿಗಿಟ್ಟಿ ಗಿರಿಧರ, ಪಿಕಲಾಟಿ, ಲಡ್ಡೂತಿಮ್ಮಯ್ಯ, ಕಲ್ಯಾಣಿ,ಕಡ್ಡಿಕೆರಿಯ,ಇಗ್ಗಣ್ಣ ಮುಂತಾದ ಪಾತ್ರಗಳು ಇಲ್ಲಿ ಜೀವಂತವಾಗಿ ಮೂಡಿಬಂದಿವೆ.
 ಆ ಪಾತ್ರಗಳು ಸೃಷ್ಟಿಸುವ ವೈವಿಧ್ಯಮಯ ಸನ್ನಿವೇಷಗಳು ನಗೆಯುಕ್ಕಿಸುತ್ತವೆ.ಇಲ್ಲಿಆಯ್ದುಕೊಂಡ ಘಟನೆಗಳು ಪಾತ್ರಗಳು ಅದೆಷ್ಟು ಕುತೂಹಲ ನಿರ್ಮಿಸುತ್ತದೆಯೆಂದರೆಕೇವಲ ಅವುಗಳ ವರದಿ ನೀಡಿದರೆ ಸಾಕು,  ಆ ಪಾತ್ರಗಳು ನಗುವನ್ನು ಬೀರುತ್ತಲೇಗಂಭೀರ ಪರಿಣಾಮವನ್ನೂ ಬೀರಿಬಿಡುತ್ತವೆ.  ಇಲ್ಲಿ ; ಕಿತಾಪತಿ ಅಳಿಯ : ಘಟನೆ ಗಮನಿಸಬಹುದು. ಇಳಿವಯಸ್ಸಿನ ಭಾಗಮ್ಮಳಿಗೆ ಸದಾ ಮೈಕೈ ನೋವು ಬೆನ್ನುನೋವು ಮಂಡಿನೋವು. ಅದಕ್ಕೆ ಔಷಧಕ್ಕಿಂತಅವಳಿಗೆ ದೇವರು ದಿಂಡರು ಹರಕೆ ತೀರ್ಥ ಪ್ರಸಾದದಲ್ಲಿಯೇ ನಂಬಿಕೆ. ಅವಳಿಗೆ ಅದ್ಯಾರೋಪಕ್ಕದ ಊರಿನ ಗಂಜೀಮಠ ದ ಸ್ವಾಮಿಗಳು ನೀಡುವ ತೀರ್ಥ ಸರ್ವರೋಗಗಳಿಗೆ ರಾಮಬಾಣ ಎಂಬ ಸುದ್ದಿ ತಲುಪಿಸುತ್ತಾರೆ. ಭಾಗಜ್ಜಿ ತನಗೂ ಅಲ್ಲಿಯ ತೀರ್ಥ ತಂದು ಕೊಡಲು ಮಗಳು ಮಗನಲ್ಲಿ ದುಂಬಾಲು ಬೀಳುತ್ತಾಳೆ. ಅವರಿಗೆ ನಂಬಿಕೆಯಿಲ್ಲ, ಅವರುತರುವುದಿಲ್ಲ. ಅವಳು ತನ್ನ ಅಳಿಯನಿಗೆ ಒತ್ತಾಯಿಸುತ್ತಾಳೆ. ಆತ ತಿಂಡಿಪೋತ.
ತನ್ನ ಅತ್ತೆ ತಯಾರಿಸಿ ಕೊಡುವ ವಿವಿಧ ಖಾದ್ಯಗಳಿಗೆ ಆಸೆಪಟ್ಟು ಗಂಜೀಮಠದತೀರ್ಥ ತಂದುಕೊಡಲು ಪ್ರಾರಂಭಿಸುತ್ತಾನೆ. ಮಠಕ್ಕೂ ಮಾವನ ಮನೆಗೂ ತಿರುತಿರುಗಿಆತನಿಗೆ ಬೇಸರ ಬರುತ್ತದೆ. ಪ್ರತಿವಾರವೂ ಮಠಕ್ಕೆ ಪಾದಸವೆಸುವ ಬದಲು ಬೇರೊಂದುಉಪಾಯ ಕೈಗೊಳ್ಳುತ್ತಾನೆ. ಮಾವನ ಮನೆಯ ಸನಿಹದ ತೋಟದಲ್ಲಿ ಹರಿಯುವ ನೀರನ್ನೇಮಠದ ತೀರ್ಥವೆಂದು ಕ್ಯಾನ್ ತುಂಬಿಸಿ ತರತೊಡಗುತ್ತಾನೆ. ಅಜ್ಜಿ ಅದೇ ಮಠದ ಪವಿತ್ರತೀರ್ಥವೆಂದು ಸೇವಿಸುತ್ತಾಳೆ. ಒಂದು ದಿನ ಅಜ್ಜಿ ತೋಟಕ್ಕೆ ಹೋದಾಗ ತಾನೆ ನೀಡಿದಖಾಲಿ ಪ್ಲಾಸ್ಟಿಕ್ ಕ್ಯಾನ್ ಕಂಡಾಗ ಅಳಿಯ ತರುತ್ತಿದ್ದ ಮಠದ ತೀರ್ಥದ ಗುಟ್ಟು ಬಯಲಾಗಿಬಿಡುತ್ತದೆ.
 ಭಂಗಗೊಂಡ ಸಂಘ; ಲೇಖನದಲ್ಲಿ ಊರಿನ ಆಲಸಿಗಳು ಸೇರಿ ಸ್ವಸಹಾಯ ಸಂಘ ರಚಿಸಿಕೊಂಡು ಆಲಸ್ಯದಿಂದಲೇ ಒಕ್ಕೂಟ ಚೂರಾಗುವ ಪರಿ, ;ಐದ್ಕತ್ರಿಯಲ್ಲಿ ನೋಐತ್ರಿ; ಯಲ್ಲಿ ಹಳ್ಳಿಯ ಪುಂಡ ಯುವಕರು ಲಂಚತಿನ್ನುವ ಪೋಲೀಸನಿಗೇ ಚಳ್ಳೆಹಣ್ಣು ತಿನ್ನಿಸುವ ಪ್ರಸಂಗ, : ಕುಡುಕನ ಕೋಪ; ಲೇಖನದ ಕುಡುಕನ ಆವಾಂತರ, ಮುಂತಾದ
ಸಂದರ್ಭಗಳು ನಗು ಉಕ್ಕಿಸುತ್ತವೆ, ಹಳ್ಳಿಶಾಲೆಯ ತುಂಟ ಮಕ್ಕಳ ತುಂಟಾಟ, ಖುಶಿತರುತ್ತವೆ.
ಹೀಗೆ ಗ್ರಾಮಗಳ ರಸಮಯಸನ್ನಿವೇಶ ಪ್ರತಿ ಲೇಖನ ಗಳಲ್ಲಿ ವೈವಿಧ್ಯಮಯವಾಗಿ ಮೂಡಿ ಬಂದಿವೆ. ಇಲ್ಲಿಯ ಲೇಖನಗಳೆಲ್ಲ ನಿಜ ಜೀವನದ ನಗೆ ಮೊಗ್ಗುಗಳೆಂದೇ ಕರೆಯಬಹುದಾದರೂ ಪ್ರಾರಂಭಿಕ ಪ್ರಯತ್ನದಲ್ಲಿ ಹಲವಾರು ದೋಷಗಳುತೂರಿಕೊಂಡಿವೆ. ಮುದ್ರಣ ದೋಷವನ್ನು ಇನ್ನೂ ಸುಧಾರಿಸಬಹುದಿತ್ತು, ಭಾಷೆ ಇನ್ನೂ ಒನಪು ಗೊಳ್ಳಬಹುದಿತ್ತು. ಅಲ್ಲಲ್ಲಿ ಪ್ರಯೋಗಗೊಂಡ ಪ್ರಾದೇಶಿಕ ಶಬ್ಧಗಳು ಹೊರಜಿಲ್ಲೆಓದುಗರಿಗೆ ಅರ್ಥವಾಗದಿರಬಹುದು.   ಆದರೂ ಕೃತಿ ತನ್ನ ಅನುಭವ ಸಮೃದ್ಧಿಯಿಂದ ಓದಿಸಿಕೊಳ್ಳುತ್ತದೆ. ದತ್ತಗುರು ಕಂಠಿತಮ್ಮ ಗ್ರಾಮಾನ್ವೇಷಣೆಯನ್ನು ಇಲ್ಲಿಗೇ ಬಿಡದೆ ಮುಂದುವರೆಸಲೇಬೇಕು.
 ಮಾನವೀಯ ಅನುಭವದ ಭಂಡಾರವೇ ಆದ ಹಳ್ಳಿಯ ಬದುಕಿನ ನೈಜ ಚಿತ್ರಣಇನ್ನೂ ಪರಿಣಾಮಕಾರಿಯಾಗಿ ಮೂಡಿಬರಲೇ ಬೇಕು. ಕಂಠಿಯವರಲ್ಲಿ ಉತ್ಸಾಹವಿದೆ.ಸೂಕ್ಷ್ಮನಿರೀಕ್ಷಣೆಯಿದೆ. ಅನುಭವವನ್ನ ಹಾಸ್ಯ ಮತ್ತು ವಿಡಂಬನೆಯ ಕಣ್ಣಿನಲ್ಲಿ ಕಾಣುವಗುಣವಿದೆ.
       ಮುಂದಿನ ಕೃತಿಗಳು ಇನ್ನೂ ಯಶಪಡೆಯಲಿ ಎಂದು ಹಾರೈಸುತ್ತಿದ್ದೇನೆ.