Thursday 21 September 2023

ಅಡಿಕೆ ಸಂಸ್ಕರಣೆಗೆ ಹೊಸ ಆಯಾಮʻʻಬಿಂಗ್ ಲಾಂಗ್ ಮತ್ತು ಲಂಬನಾಗ್ʼʼ

 

        ನಿತ್ಯವೂ  ನೆಲವನ್ನೇ  ಅವಲಂಬಿಸಿದ  ನೆಲಮೂಲಿಗಳಿಗೆ, ಮೂರು ದಶಕಗಳಿಂದ  ನೆಲವೆಂದರೇನೆಂದು  ಮೌನ ಬೋಧನೆಗೈಯ್ಯುತ್ತಿರುವ  ಹಸಿರ ಧ್ಯಾನಿ, ʻʻ ಬಾಲಚಂದ್ರ  ಸಾಯಿಮನೆʼʼ  ನಮ್ಮ ನಡುವಣ  ಅನುಪಮ  ಸಾಧಕ.  ಅರಣ್ಯ ನದಿ ಪರ್ವತ  ಮಣ್ಣು  ಮರಗಿಡಗಳ  ಸಹಯಾನಿ.  ಕೃಷಿ ಸಂಸ್ಕೃತಿಯ  ಆಳದಲ್ಲಿರುವ  ಚಿಂತನೆಯನ್ನೇ  ಉಸಿರಾಡುತ್ತಿರುವ  ಅಪರೂಪದ  ಸಂಪನ್ಮೂಲ  ವ್ಯಕ್ತಿ. 

     ಅವರ  ಸಿದ್ಧಿ  ಸಾಧನೆಯನ್ನು  ಸೂಕ್ಷ್ಮವಾಗಿ  ಗುರುತಿಸಿ  ಗೌರವಿಸಿದ, ಆತ್ಮೀಯವಾಗಿ  ಸಮ್ಮಾನಿಸಿದ  ಉತ್ತರಕನ್ನಡ  ಜಿಲ್ಲೆಯ  ʻʻ ಪಾವನಾ ಪ್ರತಿಷ್ಠಾನʼʼ  ೧೯೨೨ ನೇ  ವರ್ಷದ  ಪರಿಸರ  ಪ್ರಶಸ್ತಿಯನ್ನು   ಬಾಲಚಂದ್ರ  ಸಾಯಿಮನೆಯವರಿಗೆ  ನೀಡಿತು. ಐವತ್ತು  ಸಾವಿರ  ರೂಪಾಯಿ  ಮತ್ತು  ಫಲತಾಂಬೂಲ ನೀಡಿ  ಗೌರವಿಸಿದವರು,  ನಿವೃತ್ತ  ಉಚ್ಛನ್ಯಾಯಾಲಯದ   ನ್ಯಾಯಾಧೀಶ   ಎಚ್. ಎನ್. ನಾಗಮೋಹನದಾಸರು.  ಪ್ರಸ್ತುತ  ಪಾವನಾ  ಪ್ರತಿಷ್ಠಾನ,  ಸುಪ್ರಸಿದ್ಧ  ವಿಜ್ಞಾನ  ಲೇಖಕ  ನಾಗೇಶ  ಹೆಗಡೆಯವರ  ತಂದೆ  ತಾಯಿಯವರ  ನೆನಪಿನಲ್ಲಿ  ಸ್ಥಾಪಿಸಿದ,  ಕಳೆದ  ಒಂದು  ದಶಕದಿಂದ  ಪರಿಸರ  ನಿಷ್ಟ  ಚಟುವಟಿಕೆಗಳಲ್ಲಿ   ತೊಡಗಿಕೊಂಡಿರುವ  ಸಂಘಟನೆ.

    ಅಡಕೆಗೆ  ಹೋದ  ಮಾನ  ಆನೆಕೊಟ್ಟರೂ  ಬಾರದು.  ನಿಜಕ್ಕೂ  ನಮ್ಮ  ಮಲೆನಾಡಿನ  ಅಡಿಕೆಬೆಳೆಗಾರರನ್ನೇ  ಉದ್ದೇಶಿಸಿ  ಸೃಷ್ಟಿಸಿರುವ  ಗಾದೆಮಾತಾಗಿರಬಹುದು.  ಶತಮಾನಗಳಿಂದ  ಅಡಿಕೆ  ಬೆಳೆಯಲ್ಲೇ  ಬದುಕುತ್ತಿರುವ   ಇಲ್ಲಿನ ಸಾಂಪ್ರದಾಯಿಕ ಕೃಷಿಕರು,  ಬೆಳೆಯುವುದು, ಮಾರುವುದು  ಬದುಕುವುದು,  ಇದೇ  ಮೂರು  ಸಿದ್ದಾಂತವನ್ನು  ನೆಚ್ಚಿಕೊಂಡು   ಸಾಲದ  ಶೂಲದಲ್ಲಿ  ಸದಾ  ನರಳುತ್ತಿರುವ  ಸ್ಥಿತಿಯನ್ನು  ನೋಡುತ್ತಿರುವಾಗಲೇ,   ನಮ್ಮದೇ  ಪಕ್ಕದ  ಚೈನಾ ,  ಅಡಿಕೆ ಮತ್ತು  ಬಿದಿರು  ಬೆಳೆಗಳಿಂದ  ರೈತರೇ  ವೈವಿಧ್ಯಮಯ ಪರ್ಯಾಯ ಉತ್ಪನ್ನಗಳನ್ನು  ಸೃಷ್ಟಿಸಿ, ವಿಶ್ವಮಾರುಕಟ್ಟೆಯಲ್ಲಿ  ಮಿಂಚುತ್ತಿರುವ,  ಕೃಷಿಯನ್ನು  ಉದ್ಯಮವಾಗಿ  ಪರಿವರ್ತಿಸಿಕೊಂಡ,  ಅಲ್ಲಿಯ  ರೈತರ  ಯಶೋಗಾಥೆಯನ್ನು, ನಮ್ಮನಾಡಿನಲ್ಲಿ  ಬಿತ್ತಿದ  ಅನನ್ಯ  ಸಾಧನೆ  ಬಾಲಚಂದ್ರರದ್ದು.

     ಚೈನಾ  ಅಂದರೆ  ಸಾಕು  ಮೂಗು  ಮುರಿಯುವವರೇ  ಹೆಚ್ಚು.  ಸಾಕಷ್ಟು  ಬಾರಿ  ಪೆಟ್ಟುತಿಂದು  ಸೋತ  ಭಾರತೀಯ  ಮನಸ್ಸು    ಚೀನಾದ  ಆಹಾರ  ಮತ್ತು  ರಾಜಕಾರಣಗಳನ್ನು  ವ್ಯಂಗ್ಯವಾಗಿ  ಚಿತ್ರಿಸಿಕೊಳ್ಳುತ್ತ,  ಹತಾಶೆಯನ್ನು  ಮರೆಯಲು  ಪ್ರಯತ್ನಿಸುತ್ತದೆ.  ಆದರೆ  ಕಳೆದೊಂದೆರಡೇ  ದಶಕಗಳಲ್ಲಿ,  ಆರ್ಥಿಕವಾಗಿ  ಬಲಿಷ್ಟಗೊಂಡು  ವಿಶ್ವದ  ದೊಡ್ಡಣ್ಣನಾಗುವ  ಹಂತ  ತಲುಪಿದ  ಸಾಧನೆ  ಮಾತ್ರ  ನಮಗೆ  ಮಾದರಿಯಾಗಲೇ  ಇಲ್ಲ.  ಅವರೇ  ನೀಡಿದ  ಅಗ್ಗದರದ ಟಾರ್ಚ ಮತ್ತು  ಐಷಾರಾಮೀ   ಸಾಮಗ್ರಿಗಳು  ಸಹ  ಅವರನ್ನು  ಅರ್ಥಮಾಡಿಕೊಳ್ಳಲು  ಸೋತಿತು.  ಕೇವಲ  ದೇವಾಲಯ, ಧರ್ಮ  ಪ್ರತಿಮೆಗಳಲ್ಲೇ  ದಿನದೂಡುತ್ತಿರುವ  ನಾವು   ನಮ್ಮ  ಹಳ್ಳಿಗಳಿಗೆ  ಕೊಳ್ಳಿಯಿಟ್ಟೆವು.  ನಗರಗಳನ್ನು  ಕೊಳೆಗೇರಿಯಾಗಿಸಿದೆವು.   ಚೈನಾ  ಮಾತ್ರ  ನಗರಗಳನ್ನೇ  ಹಳ್ಳಿಗೆ  ಕರೆ  ತಂದಿತು.  ಗ್ರಾಮದ  ಹಸಿರಿಗೆ  ಕಸುವನ್ನಿತ್ತಿತು.  ಇಂದು  ಅಲ್ಲಿಯ  ರೈತ  ಕೇವಲ  ಕೃಷಿಕನಲ್ಲ.  ಕೃಷಿ  ಉದ್ಯಮಿ. 

     ಭೌತವಿಜ್ಞಾನ  ಪದವೀಧರರಾಗಿಯೂ ಉತ್ತರ ಕನ್ನಡ ಜಿಲ್ಲೆಯ  ಗ್ರಾಮವಾಸಿ.  ಕೃಷಿವ್ಯವಸಾಯವನ್ನೇ  ಅಪ್ಪಿಕೊಂಡ, ಬಾಲಚಂದ್ರರು,  ಅರಣ್ಯ ಸಮೀಕ್ಷೆ, ವನ್ಯಜೀವಿ  ಸಂಶೋಧನೆಯನ್ನು  ಕೈಗೊಳ್ಳುತ್ತಲೇ,  ಚೈನಾ  ಜರ್ಮನಿ  ನೆದರ್ಲೇಂಡ್‌,  ಚೈನಾಗಳಲ್ಲಿ  ಅಧ್ಯಯನ  ಪ್ರವಾಸದಲ್ಲಿ  ನಿರತರಾಗುತ್ತಾರೆ.  ಅಲ್ಲಿಯ  ಪರಿಸರ,  ಕೃಷಿಸಾಧನೆಗಳನ್ನೇ  ಗುರಿಯಾಗಿಸಿಕೊಂಡು,  ಅವರ  ಪ್ರಯೋಗಶೀಲತೆ,  ಆರ್ಥಿಕ  ಪ್ರಗತಿಗಳ  ಮೂಲವನ್ನು  ಶೋಧಿಸುತ್ತಾರೆ.  ತಮ್ಮ  ಆಸುಪಾಸಿನ  ಗಿಡಮರ  ಕಾಡು  ಕಣಿವೆಗಳನ್ನೇ  ತಮ್ಮ  ಪ್ರಯೋಗಕ್ಷೇತ್ರವಾಗಿಸಿ ಕೊಂಡಿರುವ  ಇವರ   ಜ್ಞಾನಸಾಮರ್ಥ್ಯವನ್ನು  ಗುರುತಿಸಿರುವ  ಬೆಂಗಳೂರು, ಪುಣೆ ನಗರಗಳ  ವಿಜ್ಞಾನ ಸಂಸ್ಥೆಗಳು,  ಅವರಿಂದಲೇ  ದತ್ತಾಂಶ  ಪಡೆಯುತ್ತಿವೆ. 

     ಇವರನ್ನು  ಸಮ್ಮಾನಿಸಿದ  ಸಂಸ್ಥೆಯೇ  ಪ್ರಕಟಿಸಿದ   ʻʻ ಬಾಲಚಂದ್ರರು  ಇತ್ತೀಚೆಗೆ  ಬರೆದ  ʻʻ ಬಿಂಗ್‌  ಲಾಂಗ್‌, ಮತ್ತು  ಲಂಬನಾಗ್‌ ʼʼ  ಕೃತಿ  ಒಂದುದೃಷ್ಟಿಯಲ್ಲಿ  ನಮ್ಮ  ದೇಶದ  ಸಾಂಪ್ರದಾಯಿಕ  ಕೃಷಿಕರ  ಕಣ್ಣು ತೆರೆಸುವ  ಕೃತಿ.  ಅಪ್ಪನೆಟ್ಟ  ಆಲದ ಮರಕ್ಕೇ  ಜೋತು  ಬೀಳುವ  ಇಲ್ಲಿಯ  ಸಾಂಪ್ರದಾಯಿಕ  ಕೃಷಿಕರೆಲ್ಲರೂ  ಅವಶ್ಯವಾಗಿ  ಓದಬೇಕಾದ  ಮಹತ್ವದ  ಪುಸ್ತಕವಿದು.    ಚೀನಾ  ಮತ್ತು  ಪಿಲಿಪೈನ್ಸ   ದೇಶದ  ಅಡಿಕೆ,  ಭತ್ತ ತೆಂಗು ಮತ್ತು  ಬಿದಿರು  ಬೆಳೆಗಳ,   ಬೆಳೆಗಾರರ  ಬಗೆಗೆ  ಅವರೊಂದಿಗೇ  ಉಳಿದು   ಅಧ್ಯಯನ ಗೈದ  ಅಪೂರ್ವ ಕೃತಿಯಿದು.  

      ನಮ್ಮ  ರಾಜ್ಯದ   ಶಾಸಕರು,  ಮಂತ್ರಿಮಹೋದಯರು,  ಸರಕಾರೀ  ಖರ್ಚಿನಲ್ಲಿ  ಸಾಕಷ್ಟುಬಾರಿ  ಚೈನಾ  ಅಧ್ಯಯನ  ಪ್ರವಾಸ  ಕೈಗೊಂಡಿದ್ದಾರೆ.  ಐಷಾರಾಮಿ  ಹೋಟೆಲ್ಗಳಲ್ಲಿ  ಉಳಿದು,  ಅಲ್ಲಿಯ  ನಗರವೈಭವಗಳನ್ನು  ಕಣ್ತುಂಬಿಕೊಂಡು  ಮರಳಿದ್ದಾರೆ.  ಜನತೆಗೆ  ಮಾತ್ರ  ಸಿಕ್ಕಿದ್ದು  ಅವರ  ಪ್ರವಾಸದ  ಸುದ್ದಿಮಾತ್ರ. 

    ಸ್ವಥಃ  ಪುಟ್ಟ  ಅಡಿಕೆ  ಕೃಷಿಕರಾದ  ಭಾಲಚಂದ್ರರ  ಪ್ರವಾಸ   ಇಂಥ  ಮಾದರಿಯದ್ದಲ್ಲ.   ಅಧ್ಯಯನದ  ಯೋಜನಾಬದ್ಧ  ಕ್ಷೇತ್ರಕಾರ್ಯ.  ಸಾಹಸ  ಪೂರ್ಣ  ಚಟುವಟಿಕೆ.  ಚೈನಾದಂಥಹ  ಕಮ್ಯೂನಿಷ್ಟ  ದೇಶದ  ನಿಗೂಢ  ಕಾನೂನಿನ  ಬಲೆ  ಬೇಧಿಸಿ   ಕೈಗೊಳ್ಳುವ ಅಧ್ಯಯನ  ಅದೊಂದು  ಅಪಾಯಕಾರೀ  ಕೆಲಸ.   ಅವರ  ಆಸಕ್ತಿ  ಮತ್ತು  ಧೈರ್ಯವನ್ನು  ನಾವು  ಮೆಚ್ಚಲೇಬೇಕು.  ಅದು  ಹೇಗೆ  ಪವಾಡಸದೃಷವಾಗಿ  ಚೈನಾ  ಪ್ರಗತಿಸಾಧಿಸಿತು,  ಅಲ್ಲಿಯ  ವಿಜ್ಞಾನಿಗಳ,  ಕೃಷಿಕರ,  ಸಾಮಾಜಿಕ  ಕಾರ್ಯಕರ್ತರ   ರಚನಾತ್ಮಕ  ಸೇವೆ  ಹೇಗಿತ್ತು.   ಸಾಂಪ್ರದಾಯಿಕ  ಕೃಷಿಕನನ್ನೂ  ತರಬೇತು  ಗೊಳಿಸಿ,  ಕೃಷಿಗೆ  ಹೊಸ  ಹರಿವು  ಹೊಸ  ಆಯಾಮ  ನೀಡಿದ   ಚೈನಾದೇಶದ  ಸಾಧನೆಯ  ಹಿನ್ನೆಲೆಯನ್ನು  ಶೋಧಿಸಿದ   ಬಾಲೂ,  ನಮ್ಮ ಕಣ್ಣಿಗೆ  ಕಟ್ಟುವಂತೇ  ವರ್ಣಿಸಿದ  ಪರಿ  ನಿಜಕ್ಕೂ  ರೋಮಾಂಚನಗೊಳಿಸುತ್ತದೆ. 

    ಎಳೇ  ಅಡಿಕೆಯನ್ನು ಸಿಪ್ಪೆಸಹಿತ  ಬೇಯಿಸಿ,  ಪರಿಮಳ ವಸ್ತುವಿನೊಂದಿಗೆ  ಸಂಸ್ಕರಿಸಿ  ತಯಾರಿಸುವ  ಅಡಿಕೆಗೆ  ಚೈನಾ ಭಾಷೆಯಲ್ಲಿ  ʻʻ ಬಿಂಗ್‌  ಲಾಂಗ್‌ ʼʼ (ಚೂಯಿಂಗ್‌ ಗಮ್‌ ) ಎನ್ನುತ್ತಾರಂತೆ.  ʻʻ ಅದರ  ಜನಪ್ರಿಯತೆಯ  ಬಗೆಗೆ  ಲೇಖಕರೇ  ವರ್ಣಿಸುತ್ತಾರೆ.  ʻʻವಿದ್ಯಾರ್ಥಿಗಳಾಗಲೀ  ಅಧ್ಯಾಪಕರಾಗಲೀ  ಅಧಿಕಾರಿಗಳಾಗಲೀ  ಶ್ರೀ ಸಾಮಾನ್ಯರಾಗಲೀ  ಎಲ್ಲರಿಗೂ  ಬಿಂಗ್‌ ಲಾಂಗ್‌  ಬೇಕು. ಮದುವೆಯಾಗಲೀ, ಶವಸಂಸ್ಕಾರವಾಗಲೀ  ಬಿಸಿನೆಸ್‌  ಕೂಟವಾಗಲೀ  ಎಲ್ಲೆಡೆ  ಬಿಂಗ್‌ ಲಾಂಗ್‌  ಇರಲೇಬೇಕು.ʼʼ  ಎಂದು. ʻʻ ಲಂಬನಾಗ್‌‌ʼʼ ಎಂದರೆ  ತೆಂಗಿನಿಂದ ತಯಾರಿಸಿದ  ವೈನ್.

    ಚೈನಾದಲ್ಲೂ  ಅಡಿಕೆ  ಕೃಷಿಗೆ  1400 ವರ್ಷ ಇತಿಹಾಸವಿದೆಯಂತೆ.  ಅಲ್ಲಿಯೂ  ಉಳಿದ  ಕೃಷಿಕರಂತೇ  ಅಡಿಕೆ ಕೃಷಿಕರೂ  ಬಡತನದ  ಕತ್ತರಿಯಲ್ಲಿ  ಸಿಲುಕಿದವರೇ  ಆಗಿದ್ದರು.  ಇತ್ತೀಚಿನ  ಅಡಿಕೆಯ  ಪರ್ಯಾಯ ಉಪಯೋಗದ  ವಿವಿಧ  ಆಯಾಮಗಳು  ಸೃಷ್ಟಿಯಾದಮೇಲೆಯೇ  ಅವರ  ಬದುಕು  ಸುಸ್ಥಿರತೆಯ  ನೆಲೆಗೆ  ತಲುಪಿದೆ.   ಅಡಿಕೆಯ  ಮರ ಸಹ  ವಿವಿಧ  ಉಪಕರಣಗಳ, ಮತ್ತು ಸುಂದರ ಪೀಠೋಪಕರಣಗಳ ಸೃಷ್ಟಿಗೆ  ಮೂಲ  ಆಕರವಾಗಿದ್ದು,  ರೈತರ  ಆರ್ಥಿಕತೆಗೆ  ಮತ್ತಷ್ಟು  ಚುರುಕು  ಮೂಡಿಸಿದೆ.

    ಅದರಂತೇ  ಬಿದಿರು  ವ್ಯವಸಾಯಗಾರರ  ಕತೆಯೂ  ಸಹ.  ಭತ್ತ  ಬೆಳೆಗಾರರೂ  ಬಿದಿರು  ಬೆಳೆದು  ಕೋಟಿಗಳಿಸಿದ  ವಿವರಗಳು  ರೋಮಾಂಚನಗೊಳಿಸುತ್ತದೆ. ಬಿದಿರಿನಿಂದ ತಯಾರಿಸಲ್ಪಡುವ ವೈವಿಧ್ಯಮಯ ಕಲಾತ್ಮಕ ಸಾಮಗ್ರಿಗಳು ವಿಶ್ವಪ್ರಸಿದ್ಧವಾಗಿವೆ.

      ಚೀನಾ ದೇಶವೂ ದಶಕಗಳ  ಹಿಂದೆಯೇ  ಗ್ರಾಮಗಳು  ನಗರಕ್ಕೆ  ಗುಳೇ ಹೋಗುವುದನ್ನು  ಗಂಭೀರವಾಗಿ  ಪರಿಗಣಿಸಿತು.  ನಗರವನ್ನು  ಬಿಟ್ಟು ಹಳ್ಳಿಗೆ  ಮರಳಿ ಹೋಗಬಯಸುವವರಿಗೆ  ಚೀನಾ ಸರಕಾರ  ವಿಶೇಷ  ಯೋಜನೆಗಳನ್ನು  ರೂಪಿಸಿತು.  ರಿಯಾಯತಿ  ದರದಲ್ಲಿ  ಸರಕಾರಿ ಜಮೀನು  ಒದಗಿಸಿತು.  ಕೃಷಿಗೆ  ಕೈಗಾರಿಕೆಗೆ  ಹೆಚ್ಚುವರಿ  ಸವಲತ್ತು ನೀಡಿತು.  ಇಂದು  ಜಗತ್ತಿನಲ್ಲಿಯೇ  ಗ್ರಾಮಗಳ  ನಗರ  ವಲಸೆಯನ್ನು ತಹಬಂದಿಗೆ  ತಂದ  ಯಶಸ್ವೀ  ದೇಶ  ಚೀನಾ  ಆಗಿದೆ.  ʻʻವರ್ಕ್  ಪ್ರಾಮ್‌  ಹೋಮ್‌ʼʼ  ಎಂಬ  ನುಡಿಗಟ್ಟು  ನಮ್ಮ ದೇಶದಲ್ಲಿ,  ಕೊರೋನಾ  ಕಾಲದಲ್ಲಿ  ಜನಪ್ರಿಯವಾಯಿತು.  ಮತ್ತೆ  ಗ್ರಾಮಗಳು  ಖಾಲಿಯಾಗಿವೆ.  ಚೈನಾದಲ್ಲಿ  ʻʻ ಮರಳಿ  ಭೂಮಿಗೆ ʼʼ  ಚಳವಳಿ ಸ್ವರೂಪದಲ್ಲಿ  ಪ್ರಾರಂಭವಾಗಿ  ಯಶಪಡೆದ  ಕತೆ,   ನಮ್ಮನ್ನು  ಚುಚ್ಚುವಂತಿದೆ.  ಗ್ರಾಮಗಳು   ಹೊಸ  ಹೊಸ  ಬೆಳೆಯಲ್ಲಿ, ಮತ್ತು,  ಬೆಳೆಗಳ  ಸಂಸ್ಕರಿತ  ರೂಪದಲ್ಲಿ  ಸಿದ್ಧಗೊಂಡು  ವಿಶ್ವದಾದ್ಯಂತ  ಮಾರುಕಟ್ಟೆಯಲ್ಲಿ  ಮಿಂಚಿದ  ಯಶೋಗಾಥೆ  ಮೈನವಿರೇಳಿಸುತ್ತಿದೆ.  ಗ್ರಾಮಗಳು, ಮತ್ತೆ  ಹಸಿರಾಗುತ್ತಿದೆ.  ಯುವ  ಸುಶೀಕ್ಷಿತ ತಜ್ಞ  ಪಡೆಯೇ  ಗ್ರಾಮಗಳಲ್ಲಿ  ನೆಲೆಯೂರುತ್ತಿದೆ.  ಅವರೇ  ಅಭಿವೃದ್ಧಿಪಡಿಸಿದ  ಕೃಷಿಪೂರಕ  ಯಂತ್ರಗಳು,  ಸಂಸ್ಕರಿತ   ಹಣ್ಣು  ಆಹಾರ  ಮತ್ತು  ನಿತ್ಯೋಪಯೋಗಿ  ವೈವಿಧ್ಯಮಯ  ವಸ್ತುಗಳು  ಗ್ರಾಮಗಳಲ್ಲಿಯೇ  ತಯಾರಿಸುತ್ತಿರುವುದು, ನಮ್ಮ ದೇಶಕ್ಕೆ  ದೊಡ್ಡ  ಪಾಠವಾಗಬೇಕು.

     ಇಷ್ಟೆಲ್ಲ  ಮಹತ್ವಪೂರ್ಣ  ಸಾಧನೆಗಳನ್ನು, ಚೈನಾದಲ್ಲಿ  ಪ್ರತ್ಯಕ್ಷಕಂಡ   ಬಾಲಚಂದ್ರರು  ʻʻ ಹಳ್ಳಿಗಳಲ್ಲಿಯೇ  ಉದ್ಯೋಗ  ಸೃಷ್ಟಿಸಿರುವ  ಚೈನಾದ  ಸಾಧನೆಯ  ಬಗೆಗೆ  ನಮ್ಮ  ಸರಕಾರ  ಜಾಣ  ಕಿವುಡಾಗಿದೆ. ಆಡಳಿತದ  ಮಂದಿ, ಸರಕಾರದ  ಪ್ರತಿನಿಧಿಗಳು    ಸಮಸ್ಯೆಯನ್ನು  ವೇದಿಕೆಯಲ್ಲಿ  ಪ್ರಸ್ಥಾಪಿಸುವುದಕ್ಕಿಂತ, ಒಂದಿಂಚೂ  ಮುಂದೆ  ಹೋಗಿಲ್ಲ.  ಸಮಸ್ಯೆಯ  ಆಳವನ್ನು  ಅರ್ಥೈಸಿಕೊಳ್ಳುವ  ಪ್ರಯತ್ನವನ್ನೇ  ಮಾಡಿಲ್ಲ. ಏಕೆಂದರೆ  ಇದು  ((ನಗರ ವಲಸೆ ) ಹಳ್ಳಿ  ಮತ್ತು  ನಗರ ಎರಡನ್ನೂ  ಸಮಾನವಾಗಿ ಬಾಧಿಸುತ್ತದೆ. ಗ್ರಾಮಗಳು ನಿರ್ಜನಗೊಂಡರೆ  ನಗರಗಳು ಕೊಳೆಗೇರಿಗಳಾಗುತ್ತಿವೆ. ಚೀನಾದಿಂದ  ನಾವು  ಈಗಲಾದರೂ  ಕಲಿಯಬೇಕಾಗಿದೆ.ʼʼ  ಎಂಬ  ಎಚ್ಚರವನ್ನು  ನೀಡುತ್ತಾರೆ.

    ಫಿಲಿಪೈನ್ಸ  ಎಂಬ  ಪುಟ್ಟ  ದ್ವೀಪರಾಷ್ಟ್ರವೂ  ಸಹ  ಅಲ್ಲಿಯ  ಸಾಂಸ್ಕೃತಿಕ  ವೈವಿಧ್ಯ, ಪ್ರಯೋಗಶೀಲತೆ,  ಪುಟ್ಟ  ಪುಟ್ಟ  ಕೈಗಾರಿಕೆಗಳ  ಮೂಲಕ  ಬದುಕಿಗೆ  ಆಧುನಿಕತೆಯ ಸ್ಪರ್ಶಪಡೆದ,  ಯಶದ  ಪ್ರಕ್ರಿಯೆಯ  ವಿವರಗಳು,  ರೋಚಕವೆನ್ನಿಸುತ್ತಿವೆ.

  ಬಾಲೂರವರ  ಅನ್ವೇಷಣಾ ಪ್ರವೃತ್ತಿ,  ಅಧ್ಯಯನಾಸಕ್ತಿಗಳನ್ನು ನಿಜಕ್ಕೂ  ಮೆಚ್ಚಬೇಕು. ಪುಸ್ತಕವೆಂದರೆ ಕೇವಲ ಜಡ ಕಾಗದವಲ್ಲ. ಅಕ್ಷರವೆಂದರೆ ನಿರ್ಜೀವ ಚಿತ್ರವಲ್ಲ. ಆಸಕ್ತನನ್ನು ಹೊಸ ಚಿಂತನೆಗೆ ನೂಕುವ, ಅನೂಹ್ಯ ಆವರಣವನ್ನೂ ಅರಿವಿನ ತೆಕ್ಕೆಗೊಗ್ಗಿಸಿ, ಬದುಕಿಗೊಂದು ಸಂಚಲನ ಮೂಡಿಸುವ ಅಭೂತಪೂರ್ವ ವರ, ಎಂಬುದನ್ನು ಕೆಲವು ಕೃತಿಗಳಾದರೂ ಉದಾಹರಣೆಯಾಗಿ  ನಿಲ್ಲುತ್ತವೆ.  ಪ್ರಸ್ತುತ  ಪುಸ್ತಕ ಕಿರಿದಾದರೂ ಹಿರಿಯ ಭಾವವನ್ನು ನೀಡಿ, ಎಚ್ಚರಿಸುವ ಕೆಲಸವನ್ನು ಸಮರ್ಥವಾಗಿ  ಮಾಡಿದೆ.

     ಸಮುದಾಯದಲ್ಲಿರುವ  ಅಜ್ಞಾನ  ಮತ್ತು  ಆಲಸ್ಯ,  ಆಡಳಿತದಲ್ಲಿರುವ  ಅಶೃದ್ಧೆ  ಮತ್ತು  ಇಚ್ಛಾಶಕ್ತಿಯ  ಕೊರತೆಗಳ  ಬಗೆಗೆ,  ಕ್ಷ ಕಿರಣ  ಬೀರಿರುವ  ಪ್ರಸ್ತುತ  ʻʻ ಬಿಂಗ್‌ ಲಾಂಗ್‌ ಮತ್ತು  ಲಂಬನಾಗ್‌ʼʼ  ಕೃತಿ  ಕೃಷಿಕರನ್ನು ಮತ್ತು  ಆಳುವ ವರ್ಗ ಗಳಿಗೆ  ಏಕಕಾಲದಲ್ಲಿ  ಚುರುಕು  ಮುಟ್ಟಿಸುವ  ಮೂಲಕ,  ಗಮನಸೆಳೆಯುತ್ತಿದೆ.  ಇಂಥದೊಂದು  ಅಪರೂಪದ  ಕೃತಿ  ನೀಡಿದ  ಲೇಖಕರು  ನಿಜಕ್ಕೂ  ಅಭಿನಂದನಾರ್ಹರು.

  ಸುಮ ಸಂಪದ8.                       ಸುಬ್ರಾಯ  ಮತ್ತೀಹಳ್ಳಿ.

ತಾ- ೧೦-೨- ೨೦೨೩.

  ಕೃತಿ - ಬಿಂಗ್ಲಾಂಗ್ಮತ್ತು ಲಂಬನಾಗ್.

  ಲೇಖಕ ಬಾಲಚಂದ್ರ ಸಾಯಿಮನೆ.‌

  ಬೆಲೆ ರೂ ೨೦೦.

  ಪ್ರಕಾಶನ ಭೂಮಿಬುಕ್ಸ. ೧೫೦, ಮೊದಲ ಮುಖ್ಯರಸ್ತೆ. ಶೇಷಾದ್ರಿಪುರಂ. ಬೆಂಗಳೂರು.೫೬೦೦೨೦.

              

No comments:

Post a Comment