Wednesday 27 September 2023

ಕಾನನದ ಕಳವಳ, ಜಲಜೀವನದ ಧ್ಯಾನ.ʻʻ ಯಾನ.ʼʼ

 

           ಪ್ರವಾಸ  ಪ್ರವೃತ್ತಿ  ಬೆಳೆದಂತೇ  ಪ್ರವಾಸ  ಸಾಹಿತ್ಯಕ್ಕೂ  ಸುಗ್ಗಿ ಮೂಡುತ್ತಿದೆ.  ದೂರ ದೂರದ  ಪ್ರದೇಶಗಳನ್ನು,  ದೇಶ  ವಿದೇಶಗಳನ್ನು  ಸುತ್ತುವ,  ಅದರ  ಅನುಭವಗಳನ್ನು  ದಾಖಲಿಸುವ  ಉತ್ಸಾಹ  ಕಂಡಾಗ  ಖುಷಿಯ ಜೊತೆಗೇ  ಸಂಕಟವೂ  ಮೂಡುತ್ತದೆ.  ಅಲ್ಲಿ  ತನಗಾದ  ಖುಷಿ  ಕಷ್ಟಗಳ  ವಿವರಗಳೇ  ಇಡಿಕಿರಿದು  ತುಂಬಿ,  ಅಲ್ಲಿಯ  ವೈಶಿಷ್ಟ್ಯಗಳು  ಕಣ್ಮರೆಯಾಗುವ,  ಸ್ವಯಂ  ವೈಭವೀಕರಣವೇ  ವಿಜ್ರಂಭಿಸುವಾಗ,  ಅದೇಕೆ  ಬರೆಯಬೇಕಿತ್ತೋ  ಎಂದೆನ್ನಿಸಿದರೆ  ಆಶ್ಚರ್ಯವಿಲ್ಲ.  ಆದರೂ  ಕನ್ನಡದ  ನವೋದಯಕಾಲದಿಂದ  ಈವರೆಗೂ  ನೂರಾರು  ಕೃತಿಗಳು,  ಅಪರೂಪದ   ಅನನ್ಯವಾದ  ಸಾಕಷ್ಟು  ಪ್ರವಾಸ  ಕಥನಗಳು  ಬಂದಿರುವುದು  ನಿಜಕ್ಕೂ  ಹೆಮ್ಮೆತರುವ  ಸಂಗತಿ.

     ಆದರೆ  ಇತ್ತೀಚೆಗೆ   ನಮ್ಮ  ಜಿಲ್ಲೆಯವರೇ  ಆದ   ಚಿಂತಕ  ಪತ್ರಕರ್ತ,  ಕತೆಗಾರ   ಗಂಗಾಧರ  ಕೊಳಗಿ   ಅತ್ಯಂತ  ವಿಶಿಷ್ಟವಾದ,  ಅಷ್ಟೇ  ಅಪರೂಪವಾದ  ತಿರುಗಾಟದ   ಅನುಭವಗಳನ್ನು,  ರಸಮಯ  ಶೈಲಿಯಲ್ಲಿ  ಆಪ್ತವಾಗಿ  ಕಟ್ಟಿಕೊಟ್ಟಿರುವುದು, ಶ್ಲಾಘನೀಯ.   ಇದೇ  ವಾರ  ಬಿಡುಗಡೆಗೊಂಡ  ʻʻಯಾನ ʼʼ  ಎಂಬ   ಅಲೆಮಾರಿಯ  ಅನುಭವ  ಕಥನವೊಂದು  ಸಿದ್ದಾಪುರದಲ್ಲಿ   ಬಿಡುಗಡೆಗೊಂಡಿತು.

     ಅದು  ದೂರದ  ಹಿಮಾಲಯದ್ದೋ,  ಅಮೇರಿಕಾದಂತ  ದೂರದೇಶದ್ದೋ  ಅಲ್ಲ.  ಇಲ್ಲೇ  ನಾವಿರುವ   ಭೌಗೋಲಿಕವಾಗಿ  ನಮಗೆಲ್ಲ  ಸುಪರಿಚಿತವಾಗಿರುವ  ತಾಣದ  ಆಂತರ್ಯಕ್ಕೆ  ಇಳಿದಿರುವ   ಕಥನವಿದು.  ಅತೀ  ಪರಿಚಯ  ಅತೀ ಅವಜ್ಞೆಗೂ  ಒಳಗಾಗುವುದು  ಸಹಜ.  ದಿನನಿತ್ಯ  ಒಡನಾಡುವ  ಮನುಷ್ಯನೊಬ್ಬನ   ಅಂತರಂಗದ  ವಿಶೇಷವನ್ನು  ನಾವು  ಗಮನಿಸಲಾರೆವು.   ನಡೆದಾಡುವ   ನೆಲದ  ಮಹಿಮೆ ಯ  ಬಗೆಗೆ   ಅಲಕ್ಷಿಸುತ್ತೇವೆ.  ಒಡನಾಡುವ  ಸುತ್ತಲಿನ  ಪರಿಸರದ   ಸೂಕ್ಷ್ಮ  ಅವಲೋಕನವಿಲ್ಲದೇ   ಅದರ  ಮಹತ್ವವನ್ನು  ಕಡೆಗಣಿಸುತ್ತೇವೆ. 

   ಅದೆಲ್ಲಿಯದೋ     ದೇಶ  ವಿದೇಶಗಳ  ಬೆರಗು  ಮೂಡಿಸುವ  ದೃಶ್ಯಾವಳಿಗಳನ್ನು  ದೂರದರ್ಶನದಲ್ಲಿ  ಕಂಡು,  ಪ್ರತ್ಯಕ್ಷನೋಡಿಬರುವ  ಕನಸು  ಕಾಣುತ್ತೇವೆ.  ನಮ್ಮ  ಸುತ್ತಲಿನ  ಮಹತ್ವಪೂರ್ಣ  ದೃಶ್ಯಗಳನ್ನ,  ಪಶು  ಪಕ್ಷಿ  ಸಸ್ಯಾದಿಗಳನ್ನ  ಅಲಕ್ಷಿಸುತ್ತೇವೆ.   ಮನೆಗೆದ್ದು  ಮಾರುಗೆಲ್ಲುವವರು  ನಾವಲ್ಲ. 

     ಗಂಗಾಧರ್‌  ದೇಶ ವಿದೇಶ  ಸುತ್ತಿದವರಲ್ಲ.  ಮಹತ್ವದ  ಗ್ರಂಥಗಳ  ಅಧ್ಯಯನ,  ತನ್ನ  ಪರಿಸರವನ್ನೇ  ಆಳವಾಗಿ  ಬಗೆದು,  ಚಿಕಿತ್ಸಕ್‌  ದೃಷ್ಟಿಕೋನದಿಂದ  ವೀಕ್ಷಿಸುತ್ತ,  ಅದರ  ವೈಶಿಷ್ಟ್ಯಗಳನ್ನು   ಬರಹದ  ಮೂಲಕ  ದಾಖಲಿಸುತ್ತಿರುವ   ಅಪರೂಪದ  ವ್ಯಕ್ತಿ.  ಬಿಡುವಾದಾಗೆಲ್ಲ.  ತೋಟ ಪಟ್ಟಿ,  ಕಾಡು ಗುಡ್ಡ,   ನದಿ  ಸಾಗರಗಳನ್ನು  ಸಂದರ್ಶಿಸುತ್ತ,  ಒಂಟಿಯಾಗಿ  ಧ್ಯಾನಿಸುತ್ತಿರುವ   ವಿಚಿತ್ರ  ವ್ಯಕ್ತಿ.  ಹಾಗೆಂದು  ತಮ್ಮ  ಪರಿಸರದ, ಪ್ರಾಣಿ  ಪಕ್ಷಿ  ಸಸ್ಯಾದಿಗಳ  ಅಗಾಧ  ಅನುಭವಗಳನ್ನೆಲ್ಲವನ್ನೂ  ಅಕ್ಷರಕ್ಕಿಳಿಸದೇ  ತಮ್ಮೊಳಗೇ  ಇಟ್ಟುಕೊಂಡ   ಅಸಾಧ್ಯ  ಜಿಪುಣರೂ  ಅವರೇ.  ಆದರೂ  ಅವುಗಳಲ್ಲಿ  ಕೆಲವನ್ನು   ದಾಖಲಿಸುವ  ಸಾಹಸವನ್ನು  ಕೈಗೊಂಡುದು  ನಿಜಕ್ಕೂ  ಖುಷಿತರುವ  ಸಂಗತಿ.

     ಲೋಕಾರ್ಪಣಗೊಂಡಿರುವ  ಪ್ರಸ್ತುತ   ಕೃತಿ ʻʻ ಯಾನ ʼʼ  ಸಾವಿರಾರು  ಮೈಲಿ  ದೂರದ   ರಮ್ಯವಿವರಗಳಲ್ಲ.  ನಮ್ಮದೇ  ಪಶ್ಚಿಮ ಘಟ್ಟ,  ನಮ್ಮದೇ  ಶರಾವತಿ  ನದಿ ಯ    ಒಡನಾಟದ   ಕುತೂಹಲಕರ   ಸಂಗತಿಗಳ   ಆಪ್ತ  ಅನುಭವಗಳ  ಪುಟ್ಟ  ಗುಚ್ಛವಾಗಿದೆ.  ಮೂರೇಮೂರು   ಕ್ಷೇತ್ರಾನುಭವಗಳ  ದಾಖಲೆ,  ನಮ್ಮನ್ನು  ನಮ್ಮದೇ  ನೆಲದಲ್ಲಿ  ಅಚ್ಚರಿಗೆ  ಒಳಗಾಗಿಸುತ್ತದೆ.  ಹಾಗೆಂದು  ಸಾಂಪ್ರದಾಯಿಕ  ಪ್ರವಾಸ  ಕಥನಕ್ಕಿಂತ  ಭಿನ್ನ  ಮಾದರಿಯಲ್ಲಿ  ಕೃತಿ  ಅಭಿವ್ಯಕ್ತಗೊಂಡಿದೆ.  ಪರಿಸರದ  ವಿಭಿನ್ನ  ಒಡಲೊಳಗಿದ್ದಾಗ  ಗಂಗಾಧರ್‌  ಅಂತರಂಗದ  ಶೋಧನೆಗೂ  ಇಳಿದು ಬಿಡುತ್ತಾರೆ.  ಕಾಡನ್ನು ಆಧುನಿಕ ಮನುಷ್ಯ  ಒಂದು ರೀತಿಯಲ್ಲಿ  ವಿರೋಧಿಯಾಗಿಯೂ  ಪರಿಗಣಿಸುತ್ತ,  ಸ್ವಾರ್ಥಕ್ಕೆ  ಬಳಸಿಕೊಳ್ಳುತ್ತ, ಅವ್ಯಾಹತವಾಗಿ  ಸವರಿ  ನಾಶಗೈಯ್ಯುವುದೋ,  ಬೆಳೆಗಳಿಗೆ  ಹಾನಿ,  ಸಾಕುಪ್ರಾಣಿಗಳಿಗೆ  ಹಾನಿ ಎಂದು  ಕಾಡು  ಪ್ರಾಣಿಗಳನ್ನು  ನಿಷ್ಕರುಣೆಯಿಂದ  ಬೇಟೆಯಾಡುವುದೋ  ಕಂಡಾಗ   ಕನಲುತ್ತಾರೆ.

         ಬೆಳಗಾವಿಯಿಂದ  ಪ್ರಾರಂಭಿಸಿ   ಮೈಸೂರಿನ  ವರೆಗಿನ  ಸುಮಾರು   ಒಂದೂವರೆ  ಸಾವಿರ  ಕಿಲೋಮೀಟರ್‌  ದೂರದ   ಸೈಕಲ್‌  ಪ್ರವಾಸದ  ರೋಚಕ  ವಿವರಗಳು,  ಮೊದಲನೆಯ  ಸುದೀರ್ಘ  ಲೇಖನದಲ್ಲಿ  ಬಿಚ್ಚಿಕೊಂಡರೆ, 

ಶರಾವತಿ ನದಿಗೆ  ನಿರ್ಮಿಸಿದ  ಲಿಂಗನಮಕ್ಕಿ  ಜಲವಿದ್ಯುತ್‌  ಆಣೇಕಟ್ಟಿನಿಂದ    ನದಿಯ  ಹಿನ್ನೀರಿನಲ್ಲಿ,  ಪುಟ್ಟ ದೋಣಿಯಮೇಲೆ,  ಕುಳಿತು,   ಹೊಸನಗರದ  ವರೆಗಿನ   ಮೂರು  ರಾತ್ರಿ  ಮೂರು  ಹಗಲುಗಳ   ಜಲಯಾನದ  ಮೈ  ಜುಮ್ಮುದಟ್ಟಿಸುವ   ವರ್ಣನೆ   ಎರಡನೆಯ  ಲೇಖನದಲ್ಲಿ   ಮೂಡಿದೆ.

    ಸ್ವಂತ  ಊರಿನ  ಪಕ್ಕದಲ್ಲಿಯೇ  ಇರುವ   ದಟ್ಟ  ಕಾಡಿನ  ಒಳಗಿನ   ಅಪರೂಪದ  ಸಸ್ಯ   ʻʻ  ಚೌತಿ  ಮೆಣಸಿನ  ಬಳ್ಳಿʼʼ   ಶೋಧನೆಗಾಗಿ,   ಸುರಿಯುವ  ಮಳೆಯಲ್ಲಿಯೇ   ಕಾಡು  ನುಗ್ಗಿದ   ಸಾಹಸ ದ   ವಿವರಗಳು  ಆಸಕ್ತಿ  ಕೆರಳಿಸುತ್ತದೆ.

       ಪ್ರಾರಂಭದಲ್ಲಿ  ಲೇಖಕರು  ತಮ್ಮ  ಬಾಲ್ಯಕ್ಕೆ  ಮರಳುತ್ತಾರೆ.  ಬಾಲ್ಯದ  ತುಂಬೆಲ್ಲ  ಸೈಕಲ್‌ ಹುಚ್ಚಿನಲ್ಲಿ  ಬಳಲುವ  ಮಕ್ಕಳು,  ಯಾರೂ  ಇಲ್ಲದ ಸಂದರ್ಭಸಿಕ್ಕರೆ  ಸಾಕು   ಯಾರೋ  ನಿಲ್ಲಿಸಿದ  ಸೈಕಲ್ಲನ್ನು  ಅಪಹರಿಸಿ  ಸವಾರಿಮಾಡುವುದನ್ನು  ಬಿಡುತ್ತಲೇ  ಇರಲಿಲ್ಲ.  ಸೈಕಲ್‌  ಒಡೆಯ  ಬಂದು  ನೋಡಿ,  ಎರಡು  ತಪರಾಕಿಯಿಟ್ಟು, ಬೈಗಳಸುರಿಸಿ  ಹೋದರೂ  ಕ್ಯಾರೇ  ಎನ್ನದ  ಮಕ್ಕಳು,  ಮತ್ತೊಬ್ಬರ  ಸೈಕಲ್‌  ಎಲ್ಲಿದೆ  ಎಂದು  ನೋಡುತ್ತಿದ್ದರು.  ಲೇಖಕರೂ  ಹಾಗೆಯೇ.   ಇದೀಗ  ಐವತ್ತು  ದಾಟಿದ  ಎಲ್ಲ ಪುರುಷರ  ಬಾಲ್ಯವೂ  ಸಾಮಾನ್ಯವಾಗಿ  ಹಾಗೆಯೇ  ಇತ್ತು.  ಆಗ  ಸೈಕಲ್‌  ಎಂದರೆ  ಹಣವಂತರ,  ಪ್ರತಿಷ್ಠಿತರ  ಸೊತ್ತಾಗಿತ್ತು.  ಮಕ್ಕಳಿಗೆ  ಮಾತ್ರ  ಅದು  ಕೇವಲ  ಕನಸಾಗಿತ್ತು.

     ಎಸ್ಎಲ್ಲೆನ್‌  ಸ್ವಾಮಿ,  ಚಾರಣವಾಗಲಿ,  ಜಲಯಾನವಾಗಲೀ,    ಕ್ಷೇತ್ರದಲ್ಲಿ  ತಜ್ಞತೆಯುಳ್ಳವರು.  ಸದಾ  ಅಂಥ  ಚಟುವಟಿಕೆಯಲ್ಲಿ  ತೊಡಗಿಕೊಂಡಿರುವುದಲ್ಲದೇ   ಯುವ  ಸಮುದಾಯವನ್ನು   ಸಾಹಸ ಕ್ರೀಡಾ  ಕ್ಷೇತ್ರಕ್ಕೆ  ಆಹ್ವಾನಿಸುತ್ತ, ಅವರಿಗೆ  ಸೂಕ್ತ  ತರಬೇತಿ  ನೀಡುತ್ತಿರುವ  ಉತ್ಸಾಹಿಗಳು  ಅವರು. ಅವರದೇ  ಮುಖಂಡತ್ವದಲ್ಲಿ  ನಡೆದ  ಅಭಿಯಾನವಿದು.

       ಎರಡನೆಯ  ಲೇಖನ  ಜಲಯಾನಕ್ಕೆ  ಸಂಬಂಧಿಸಿದ್ದು.   ಶರಾವತಿ  ಹಿನ್ನೀರ  ಪಯಣ.  ಅದೂ  ಸಹ  ಸ್ವಾಮಿಯವರದೇ  ಕಲ್ಪನೆಯ  ಕೂಸು.   ಕೃತಿಯಲ್ಲಿ   ಅತ್ಯಂತ  ಮನಮೋಹಕವಾಗಿ,  ನೀರಪ್ರಪಂಚವನ್ನು  ಅನಾವರಣ  ಗೊಳಿಸಿದ  ಲೇಖನವಿದು.  ಸರಳ  ಸುಭಗ  ಶೈಲಿ,  ಸುತ್ತಲಿನ  ಪ್ರಕೃತಿ  ವರ್ಣನೆ,  ಪುಟ್ಟ  ದೋಣಿಯಲ್ಲಿ,  ಪ್ರವಾಹದ  ವಿರುದ್ದ  ಹುಟ್ಟುಹಾಕುತ್ತ  ಸಾಗುವಾಗಿನ  ಸಮಸ್ಯೆ,   ಹಗಲಿನ  ಬಿಸಿಲುರಿ, ರಾತ್ರಿಯ  ಕಡುಚಳಿಯಲ್ಲಿಯೂ,  ನೀರಮೇಲಣ  ಕ್ಷಣಗಳ  ರೋಚಕತೆಗಳು   ಓದುಗರನ್ನು  ಇಂಥ  ಸಾಹಸಕ್ಕೆ  ಆಹ್ವಾನಿಸುತ್ತದೆ. 

       ಮೂರನೆಯ  ಲೇಖನ  ಪುಟ್ಟದು.  ಅಪರೂಪದಲ್ಲಿ  ಪಶ್ಚಿಮ ಘಟ್ಟದಲ್ಲಿ  ದೊರಕುವ   ಚೌತಿ  ಕಾಳುಮೆಣಸಿನ  ಅನ್ವೇಷಣೆಯ  ಸಾಹಸ,   ಬಳ್ಳಿ  ಅಪರೂಪವಾದರೂ  ಕಾಡಿನ  ಅನುಭವ,  ಅಲ್ಲಿಯ  ರಕ್ತಹೀರುವ  ಉಂಬಳ,  ಕಾಡುಪ್ರಾಣಿಗಳ  ಆವಾಸದ  ವಿವರಗಳು  ಆಕರ್ಷಕವಾಗಿ  ಮೂಡಿ  ಬಂದಿವೆ. 

     ಗಂಗಾಧರ  ಕೊಳಗಿ ಯವರ  ಗಾಢ  ಮೌನದ  ಅಳದಲ್ಲಿ,  ಪರಿಸರದ  ಅಸಂಖ್ಯಾತ  ಜ್ಞಾನ  ಹುದುಗಿದೆ.  ಅವರ  ಕತ್ತಲೆ  ಕಾನು,   ಕಾದಂಬರಿಯಾಗಲೀ,  ಬರೆದ  ಕೆಲವೇ  ಕೆಲವು  ಕತೆಗಳಲ್ಲಿಯಾಗಲೀ,  ಪರಿಸರದ  ಜನಜೀವನ,  ಸಸ್ಯಸಂಪತ್ತುಗಳೇ  ಜೀವಂತವಾಗಿ  ಮೂಡಿಬಂದಿವೆ. 

    ಕೃತಿಯ  ಬೆನ್ನುಡಿಯಲ್ಲಿ  ಲಿಖಿತ ಗೊಂಡ  ಮಾತುಗಳು  ಅರ್ಥಪೂರ್ಣವಾಗಿವೆ.

ʻʻ  ಕಥನದ ಪ್ರವಾಸ ಅಥವಾ  ಅಲೆದಾಟವೂ  ಭಿನ್ನವಾದದ್ದೇ.  ಆರಾಮವಾಗಿ, ಮೊದಲ  ಹೆಜ್ಜೆಯಲ್ಲೇ  ಕೊನೆಯ  ನೋಟದಲ್ಲಿ ಇಂಥದ್ದೇ  ಸಿಗುತ್ತದೆ ಎನ್ನುವ  ಪೂರ್ವನಿಶ್ಚಯದ  ಸಿದ್ಧಮಾದರಿಯದ್ದಲ್ಲ. ಪ್ರತೀ  ಹೆಜ್ಜೆಯಲ್ಲೂ  ಅಪಾಯ  ಎದುರಾಗಬಹುದಾದ  ಸಾಧ್ಯತೆಯಿದ್ದರೂ  ಹೊಸದನ್ನ  ಹುಡುಕುವ  ಕಾಣುವ  ಕುತೂಹಲದ್ದು.  ಯಾನದ  ಅಂತ್ಯದಲ್ಲಿ  ಏನು  ದಕ್ಕುತ್ತದೆ  ಎನ್ನುವುದೇ  ನಿಗೂಢವಾಗಿರುವ    ಅನುಭವ  ಕಥನ  ಒಂದು  ರೀತಿಯಲ್ಲಿ  ಆಧ್ಯಾತ್ಮಿಕ ಶೋಧನೆಯಂತೇ  ಭಾಸವಾಗುತ್ತದೆ.ʼʼ

       ಬಿಡುಗಡೆಯ    ಸಂತಸದ  ಕ್ಷಣದಲ್ಲಿ,  ತೇಜಸ್ವಿಯವರಂತೇ   ಗಂಗಾಧರರಿಂದಲೂ   ಸ್ವಂತ  ನೆಲದ   ಆಳದ  ಅನುಭವಗಳು  ಇನ್ನಷ್ಟು  ಚಿಮ್ಮಿಬರಲೆಂದು   ಹಾರೈಸುತ್ತಿದ್ದೇನೆ. 

                                                      ಸುಬ್ರಾಯ   ಮತ್ತೀಹಳ್ಳಿ.  ತಾ- ೫-೨-೨೦೨೧

ಯಾನ  (  ಅಲೆಮಾರಿಯ  ಅನುಭವ  ಕಥನ )   ಪುಟ- ೧೪೮.  ಬೆಲೆ-  ರೂ ೧೨೫-೦೦

ಲೇ...   ಗಂಗಾಧರ  ಕೊಳಗಿ.    ಪ್ರಕಾಶಕರು;- ಅಕ್ಷಯ  ಪ್ರಕಾಶನ.  ಬೆಂಗಳೂರು.     

No comments:

Post a Comment