ಅರವಿಂದ
ಶಿಷ್ಯವೃಂದಕೆ ಪಾಂಡಿಚೇರಿ. /
ನನಗೆ ಯಾವಾಗಲೂ ಹರಿಜನರ
ಕೇರಿ
ಹೊಲೆಯ ಚಮಗಾರ ಮಾದಿಗರ
ನಡುಮಧ್ಯೆ/
ನಿಂತು ದೇವರ ಜೊತೆಗೆ
ಕಸಗುಡಿಸುತಿದ್ದೆ. (ದಿನಕರ ದೇಸಾಯಿ )
ʻʻ ಒಂದೇ ನೆಲ
ಒಂದೇ ಗಾಳಿ ಆದರೆ ಮನುಷ್ಯರಲ್ಲೇ
ಅಗಾಧ ಅಂತರ. ಕೋಟಿ ಕೋಟಿ ಜನತೆ ವಾಸಿಸಲು ಯೋಗ್ಯ ಮನೆ, ಹೊಟ್ಟೆ ತುಂಬ ಆಹಾರ, ನಿಲ್ಲಲು ಅವರದೇ ಆದ ನೆಲೆಯಿಲ್ಲದೇ
ಆಕ್ರಂದಿಸುವಾಗ, ಅವರಲ್ಲಿ ದೇಶಪ್ರೇಮ ಸಂಸ್ಕೃತಿ ಪ್ರೇಮ, ದಂತಹ ಭಾವವನ್ನು
ನಿರೀಕ್ಷಿಸಲು ಸಾಧ್ಯವೇ...? ನಮ್ಮ ದೇಶದ ಅಗಾಧ ತತ್ವಜ್ಞಾನ,
ಅಧ್ಯಾತ್ಮ ವೇದ ಪುರಾಣಗಳನ್ನು
ಕೇವಲ ನೆನಪಿಸಿಕೊಳ್ಳುತ್ತ, ಪಾವನ ಭೂಮಿಯಿದು
ಎಂದು ಉದ್ಗರಿಸುವುದು ಅದು ಎಷ್ಟು ಕಪಟ...?
ಎಲ್ಲರಿಗೂ ಆಹಾರ ವಸತಿ ಶಿಕ್ಷಣ ರಕ್ಷಣೆ
ಸಿಕ್ಕಾಗ ಮಾತ್ರ ಇಂಥ ಅಭಿಮಾನಕ್ಕೆ ಬೆಲೆ. ನಮ್ಮ ಭೂತವನ್ನು
ಕೀರ್ತಿಸಿಕೊಳ್ಳುತ್ತ, ಆದಿವಾಸಿ, ಹಿಂದುಳಿದ
, ಅಸ್ಪ್ರಶ್ಯ ಜನಕೋಟಿಯ ಬಗೆಗೆ ನಿರ್ಲಕ್ಷರಾಗಿರುವುದು ಮಾನವೀಯ
ಮೌಲ್ಯಕ್ಕೇ ನಾಗರಿಕರು ಮಾಡುವ ದ್ರೋಹʼʼ
ಹೀಗೆಂದು ೧೯೪೫ ರಲ್ಲೇ ವಿಷಾದಪೂರ್ಣವಾಗಿ ನುಡಿದವರು ಕನ್ನಡದ
ಮೊಟ್ಟಮೊದಲ ಬಂಡಾಯ ಲೇಖಕ ದಿನಕರ ದೇಸಾಯಿ.
ದಿನಕರ
ದೇಸಾಯಿ ಎಂಬ ಹೆಸರೆತ್ತಿದರೆ
ಸಾಕು, ವಯೋ ಪರಿಭೇದವಿಲ್ಲದೇ ʻʻ ಚುಟುಕು ಕವಿʼʼ ಎಂದು ಪ್ರತಿಕ್ರಿಯಿಸುವ ಕನ್ನಡಿಗರಿಗೆ,
ಅವರ ವೈವಿಧ್ಯಪೂರ್ಣ ಬದುಕಿನ
ಅಸಾಮಾನ್ಯ ಸಾಮಾಜಿಕ ಚಳುವಳಿಯ
ರೋಚಕ ಇತಿಹಾಸ ಒಂದಿನಿತೂ
ಅರಿವಿಲ್ಲದಿರುವುದು, ವಿಷಾದದ ಸಂಗತಿ.
ಇದು ಕನ್ನಡದ ತಿಂಗಳು.
ಕಾರ್ತೀಕ ಮಾಸ. ಅಂದರೆ ಕನ್ನಡ ಕಾರ್ತಿಕ.
ನಮ್ಮ ನುಡಿಯ ಉಳಿವಿಗಾಗಿ,
ಕನ್ನಡ ನಾಡಿನ ಒಕ್ಕೂಟಕ್ಕಾಗಿ,
ಇದೇ ಮಣ್ಣಲ್ಲಿ ಹುಟ್ಟಿಯೂ
ನೆಲೆಯಿಲ್ಲದೇ ಅಂತರ್ ಪಿಶಾಚಿಗಳಾಗಿ
ಅಲೆದಾಡುತ್ತಿದ್ದ ಅಸಂಖ್ಯ ಜನಜಾತಿಗಳ
ಜಾಗ್ರತಿಗಾಗಿ ಜೀವನವನ್ನೇ ಮೀಸಲಿಟ್ಟ,
ಹತ್ತು ಹಲವು ಮಹನೀಯರುಗಳನ್ನು
ಸ್ಮರಿಸಿಕೊಳ್ಳುವ, ಮತ್ತು ಅವರ ಧ್ಯೇಯೋದ್ದೇಶಗಳನ್ನು ನಮ್ಮ ವ್ಯಕ್ತಿತ್ವಕ್ಕೆ ಆವಾಹಿಸಿ
ಕೊಳ್ಳಬೇಕಾದ ಮಹತ್ವಪೂರ್ಣ ದಿನ ಇದು ಎಂದು ತಿಳಿದಿದ್ದೇನೆ. ನಮ್ಮ ಮನಸ್ಸುಗಳಿಗೆ
ಅದೆಷ್ಟು ವಿಸ್ಮೃತಿ ಆವರಿಸುತ್ತದೆಯೆಂದರೆ ಕೇವಲ ವರ್ತಮಾನದ ಕ್ಷಣಿಕ ಏರಿಳಿವಿನ ಬದುಕನ್ನೇ
ಅಪ್ಪಿಕೊಂಡು, ದಿನಪತ್ರಿಕೆಯ ತುಂಡುಸುದ್ದಿಯನ್ನೊಂದೇ ಓದುತ್ತ,
ನಮ್ಮ ಬೆನ್ನಹಿಂದಿನ ಅಗಾಧ ಚರಿತ್ರೆಯನ್ನೇ ಮರೆತುಬಿಡುತ್ತೇವೆ. ಇಂದು ನಮ್ಮ
ಸುಗಮ ಬದುಕಿಗೆ ಅನುಕೂಲವಾಗುವಂತಹ ಅಸಂಖ್ಯ
ಸೌಲಭ್ಯ ಸವಲತ್ತುಗಳಿಗೆಲ್ಲ ಅದೆಷ್ಟು
ಮನಸ್ಸುಗಳು, ತಮ್ಮ ವೈಯಕ್ತಿಕ
ಬದುಕನ್ನೇ ಮರೆತು ಶ್ರಮಿಸಿದ್ದಾರೆಂಬ ಕನಿಷ್ಟ
ನೆನಹೂ ಇಲ್ಲದೇ ದಿನಕಳೆಯುತ್ತಿರುವ ನಮ್ಮ ಬಗೆಗೇ ನಮಗೆ ಜಿಗುಪ್ಸೆಯುಂಟಾಗುತ್ತದೆ. ದೇಶದ ದಾಸ್ಯವಿಮೋಚನೆಗಾಗಿ ಪ್ರಾಣವನ್ನೇ
ತ್ಯಾಗಗೈದ ಅಮೂಲ್ಯ ವ್ಯಕ್ತಿತ್ವಗಳಾಗಲೀ, ನಮ್ಮ ಸುತ್ತಲಿನ ಸಮುದಾಯದ
ನಡುವೆ ಬೇರುಬಿಟ್ಟ ಜೀವವಿರೋಧೀ, ಜೀವನವಿರೋಧೀ ಶಕ್ತಿಗಳ
ವಿರುದ್ಧ ಸಂಸಾರದ ಹಂಗುತೊರೆದು
ಹೋರಾಟಗೈದ ಅದೆಷ್ಟೋ ಅಪ್ರತಿಮ ವ್ಯಕ್ತಿಗಳನ್ನೇ ಆಗಲೀ, ಚರಿತ್ರೆಯ ಗೋದಾಮಿನ
ಕತ್ತಲೆ ಮೂಲೆಯಲ್ಲಿ ಒತ್ತಿ,
ಬದುಕುವುದಿದೆಯಲ್ಲ, ಅದರಂತಹ ಅಪಚಾರ ಬೇರೊಂದಿಲ್ಲ. ಕನಿಷ್ಟ
ಅವರ ಸ್ಮರಣೆಯಾದರೂ ನಮ್ಮಲ್ಲಿ
ಜೀವಂತವಾಗಿದ್ದರೆ ಅಷ್ಟರ ಮಟ್ಟಿಗೆ
ನಮ್ಮೊಳಗೆ ಮಾನವೀಯ ಮೌಲ್ಯ ಉಸಿರಾಡುತ್ತಿದೆಯೆಂದರ್ಥ.
ಅದಕ್ಕೊಂದು
ಸಮರ್ಥ ಉದಾಹರಣೆ ಈಗಲೂ ನಮಗೆ ತಮ್ಮ ಸಾವಿರ ಸಾವಿರ ಚುಟುಕುಗಳ ಮೂಲಕ ಚುಚ್ಚುವ ಬೆಚ್ಚಿಬೀಳಿಸುವ, ಎಚ್ಚರದ
ಆಯಾಮಕ್ಕೆ ಕರೆತರುವ ಕನ್ನಡದ
ಅಭಿನವ ಸರ್ವಜ್ಞ, ಚುಟುಕು ಬ್ರಹ್ಮ, ಕವಿ
ದಿನಕರ ದೇಸಾಯಿಯವರು.
೧೯೦೯
ರಲ್ಲಿಯೇ ಉತ್ತರಕನ್ನಡ ಜಿಲ್ಲೆಯ
ಪುಟ್ಟ ಹಳ್ಳಿ ಅಲಗೇರಿಯ
ಜಮೀನುದಾರಿ ಸಾಂಪ್ರದಾಯಿಕ ಮನೆತನದಲ್ಲಿ ಜನಿಸಿದ
ದೇಸಾಯಿ,ಯವರ ಪ್ರಾಥಮಿಕ ಪ್ರೌಢ ಶಿಕ್ಷಣ ತಾಲೂಕು
ಸ್ಥಳ ಅಂಕೋಲೆಯಲ್ಲಾದರೆ, ಕಾಲೇಜು
ಶಿಕ್ಷಣ ಬೆಂಗಳೂರು, ಮೈಸೂರುಗಳಲ್ಲಿ
ಮುಂದುವರೆಯುತ್ತದೆ. ಮೈಸೂರಿನಲ್ಲಿ ವಿದ್ಯಾರ್ಥಿಯಾದಾಗಲೇ ಕನ್ನಡದ
ಕಣ್ವ ಬಿ,ಎಂ, ಶ್ರೀಕಂಠಯ್ಯನವರ ಪ್ರಿಯಶಿಷ್ಯರಾಗುತ್ತಾರೆ. ಅವರೊಂದಿಗೆ ತಿ.ನಂ. ಶ್ರೀಕಂಠಯ್ಯ, ವಿ,ಸೀತಾರಾಮಯ್ಯ ಮುಂತಾದ
ಮೇರುವ್ಯಕ್ತಿತ್ವಗಳ ಪ್ರಭಾವಲಯದಲ್ಲಿ ವೈಚಾರಿಕತೆ,
ದಾರ್ಶನಿಕತೆ, ಸತ್ವವನ್ನು ಮೈಗೂಡಿಸಿಕೊಂಡು, ಸಾಹಿತ್ಯ
ಸಂಸ್ಕೃತಿ, ಮತ್ತು ಕನ್ನಡದ
ಭವ್ಯ ಚರಿತ್ರೆಯ ಉಪಾಸಕರಾಗಿ ರೂಪುಗೊಳ್ಳುತ್ತಾರೆ. ಮುಂದೆ ಮುಂಬೈ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರ
ಅಧ್ಯಯನಗೈದು, ಸುವರ್ಣಪದಕ ವಿಜೇತರಾಗುತ್ತಾರೆ.
ದೇಸಾಯಿ
ಮೂಲಭೂತವಾಗಿ ಸಮಾಜ ನಿಷ್ಠ ಹೋರಾಟಗಾರರು.
ರೈತರ, ಹಿಂದುಳಿದವರ, ಶೋಷಿತರ ಕಾರ್ಮಿಕರ
ಶೋಚನೀಯ ಬದುಕಿಗೆ ಹೊಸ ಹರಿವು,
ಹೊಸ ಬೆಳಕ ನೀಡಲು ಬದುಕಿಡೀ
ಶ್ರಮಿಸಿದವರು. ಅವರ ಕಾರ್ಯಕ್ಷೇತ್ರ ಕೇವಲ ಒಂದು ಜಿಲ್ಲೆಯಲ್ಲ,
ಕರ್ನಾಟಕ ಮಹಾರಾಷ್ಟ್ರ ಬಂಗಾಲ ರಾಜ್ಯಗಳ
ವ್ಯಾಪ್ತಿಯಲ್ಲಿ ಚಟುವಟಿಕೆ ವ್ಯಾಪಿಸಿತ್ತು. ದೇಶದಲ್ಲೇ
ಅತಿ ಹೆಚ್ಚು ಕೃಷಿಕ್ಷೇತ್ರ
ಅತೀ ಕಡಿಮೆ ಭೂಮಾಲಕರ
ಕೈಯಲ್ಲಿ ಸಿಲುಕಿ, ಗೇಣೀದಾರರ
ಅವ್ಯಾಹತ ಶೋಷಣೆ ಜರುಗುತ್ತಿದ್ದ
ಉತ್ತರಕನ್ನಡ ಜಿಲ್ಲೆಯ, ಈ ಸಂಕಟವನ್ನು ಪರಿಹರಿಸಲೆಂದೇ
ಮೂವತ್ತು ವರ್ಷಗಳ ಕಾಲ ಅವ್ಯಾಹತವಾಗಿ ಶ್ರಮಿಸಿದ
ಅಪರೂಪದ ವ್ಯಕ್ತಿ ಇವರು. ರೈತ ಹೋರಾಟದ
ಕಾರಣದಿಂದಲೇ ಆಂಗ್ಲ ಸರಕಾರ ನಲ್ವತ್ತರ ದಶಕದಲ್ಲಿ,
ದೇಸಾಯಿಯವರಿಗೆ ಐದು ವರ್ಷಗಳಕಾಲ
ಜಿಲ್ಲೆಯಿಂದ ಗಡಿಪಾರು ಶಿಕ್ಷೆಗೆ
ಗುರಿಯಾಗಿಸುತ್ತದೆ.
ಅವರ ಗಂಭೀರ ಕಾರ್ಯಕ್ಷೇತ್ರ
ಮುಂಬಯಿಯೂ ಆಗಿತ್ತು. ಅವರು ಅಲ್ಲಿ ಸಂಘಟಿಸಿದ
ಹಡಗು ಕಾರ್ಮಿಕರ ಸಂಘಟನೆ,
ಅದರ ಹತ್ತು ಸಾವಿರ ಸದಸ್ಯರು,
ಮತ್ತು ಅವರ ಏಳ್ಗೆಗಾಗಿ ನಡೆಸಿದ
ಹೋರಾಟ ಇಂದಿಗೂ ದೇಶಮಟ್ಟದ
ಅದ್ಭುತ ದಾಖಲೆಯಾಗಿ ಉಳಿದಿದೆ.
೧೯೪೫ ರಲ್ಲಿ
ಭಾರತ ಸರ್ಕಾರದ ಪ್ರತಿನಿಧಿಯಾಗಿ, ಡೆನ್ಮಾರ್ಕ
ದೇಶಕ್ಕೆ ವಿಶ್ವಕಾರ್ಮಿಕ ಸಮ್ಮೇಳನದ
ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ
ಭೇಟಿನೀಡುತ್ತಾರೆ. ಸಮ್ಮೇಳನದಲ್ಲಿ ಅಂದು ಅವರು ನೀಡಿದ ಭಾಷಣ,
ಇಂದಿಗೂ ಒಂದು ಸರ್ವಶ್ರೇಷ್ಠ
ದಾಖಲೆಯಾಗಿ ಉಳಿದಿದೆ.
ಅದೇವರ್ಷ
ಇಂಗ್ಲೆಂಡಿಗೂ ಭೇಟಿನೀಡಿ, ಅಲ್ಲಿಯ
ಭಾರತೀಯ ಸಾವಿರಾರು ಹಡಗು ಕಾರ್ಮಿಕರ
ದಯನೀಯ ಸ್ಥಿತಿಯನ್ನು ಕಂಡು, ಬ್ರಿಟಿಶ್
ಸರಕಾರದೊಂದಿಗೆ ಜಗಳವನ್ನೇ ಕಾದು, ಕಾರ್ಮಿಕರಿಗೆ
ನ್ಯಾಯ ಕೊಡಿಸಿದ ಪ್ರಸಂಗ
ರೋಮಾಂಚನಕಾರಿಯಾಗಿದೆ. ಅದೊಂದು ನಲವತ್ತು
ದಿನಗಳ ಯಾತನಾಮಯ ಹೋರಾಟವಾಗಿತ್ತು. ಭಾರತೀಯ
ಕಾರ್ಮಿಕರ ಬದುಕಿನ ಸಂಕಷ್ಟಗಳ
ವಿವರಗಳನ್ನೊಳಗೊಂಡ ಮೂರ್ನಾಲ್ಕು ಇಂಗ್ಲಿಶ್
ಕೃತಿಗಳು ದಾಖಲೆ ನಿರ್ಮಿಸಿವೆ.
ಮಹಾತ್ಮಾ ಗಾಂಧಿಯವರ ಗುರುವಾದ
ಗೋಪಾಲಕೃಷ್ಣ ಗೋಖಲೆ ಸ್ಥಾಪಿಸಿದ್ದ,
ʻʻಭಾರತ ಸೇವಕ ಸಮಾಜʼʼ
ಸಂಸ್ಥೆಯ ಪ್ರಮುಖ ಸದಸ್ಯರಾಗಿದ್ದ
ದೇಸಾಯಿಯವರು, ಆ ಸಂಸ್ಥೆಯ
ಮೂಲಭೂತ ಧ್ಯೇಯವಾದ, ಸರಳತೆ,
ಸಾಮಾನ್ಯತೆ, ಸಂಕಷ್ಟದಲ್ಲಿರುವ ಜನಾಂಗದ ಬಗೆಗೆ
ಸೇವಾನಿಷ್ಠತೆ, ಯಂಥ ನಿಯಮಗಳಿಗೆ ಬದ್ಧರಾಗಿ
ಬದುಕನ್ನು ವ್ಯಯಿಸಿದವರು.
ನಲ್ವತ್ತರ
ದಶಕದಲ್ಲಿ ಬಂಗಾಲ ರಾಜ್ಯ ಎಂದೂ ಕೇಳರಿಯದ
ಬರಗಾಲಕ್ಕೆ ತುತ್ತಾಯಿತು. ಲಕ್ಷ ಲಕ್ಷ ಜನ ಉಪವಾಸದಿಂದ
ನರಳಿ ಸತ್ತರು. ಅಂಥ ದುರ್ಭರ ಪರಿಸ್ಥಿತಿಯಲ್ಲಿ, ಬರಪರಿಹಾರ
ಸೇವಕರಾಗಿ ಅವರು ಸಲ್ಲಿಸಿದ
ಸೇವೆ ಅವಿಸ್ಮರಣೀಯವಾಗಿದೆ. ಇಂದೂ ಬಂಗಾಲದ ಕೆಲವು ಮನೆಗಳಲ್ಲಿ ದಿ.ದೇಸಾಯಿಯವರ
ಚಿತ್ರವಿದೆಯಂತೆ. ಅದರಂತೇ ವಿಜಾಪುರ ಜಿಲ್ಲೆಯ ಬರಗಾಲದ
ಸಂದರ್ಭದಲ್ಲಿ ಸಹ ದೇಸಾಯಿಯವರು,
ಮುಂಬಯಿ, ಬೆಂಗಳೂರುಗಳಿಂದ ಹಣಸಂಗ್ರಹಿಸಿ,
ಪೀಡಿತ ಜನರಿಗೆ ಆಹಾರ ನೀರನ್ನೊದಗಿಸಿದ್ದು,
ಸದಾ ಸ್ಮರಣೀಯವಾದುದಾಗಿದೆ.
೧೯೬೭ ರಲ್ಲಿ
ಒಂದು ಬಾರಿ ಸಂಸತ್ ಸದಸ್ಯರಾಗಿ
ಆಯ್ಕೆಯಾಗುತ್ತಾರೆ. ಸಂಸತ್ತಿನಲ್ಲಿ ಅವರು ಮಾಡಿದ ಹತ್ತು ಹಲವು ಭಾಷಣಗಳು
ಇಂದಿಗೂ ಮಾದರಿಯಾಗಿ ಬೆಳಗುತ್ತಿದೆ.
ಅವರನ್ನು ಮೆಚ್ಚಿ ಆದರಿಸಿದ
ನಾಯಕರುಗಳಲ್ಲಿ, ಇಂದಿರಾ ಗಾಂಧಿ,
ವಾಜಪೇಯಿ, ರಾಮ ಮನೋಹರ ಲೋಹಿಯಾ
ರವರೂ ಸೇರಿದ್ದಾರೆ.
೧೯೩೫
ರಲ್ಲಿ ದಿನಕರರ ನೇತ್ರತ್ವದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಸಂಘಟಿತ ಗೊಂಡ, ರೈತ ಗೇಣೀದಾರರ
ಹೋರಾಟ ಇಡೀ ದೇಶಕ್ಕೆ
ಮಾದರಿಯಾಗಿದೆ. ಕರ್ನಾಟಕ ರಾಜ್ಯದ ಮೊದಲ ರೈತ ಚಳುವಳಿಯಾಗಿ ಇತಿಹಾಸ
ನಿರ್ಮಿಸಿದೆ. ಉಳುವವನೇ ಹೊಲದೊಡೆಯ
ಎಂಬ ಘೋಷಣೆ ಇಡೀ ರಾಜ್ಯದಲ್ಲಿ ಮೊಳಗಿತು.
ರೈತ ಚಳುವಳಿ ಬೃಹತ್ತಾಗಿ ಬೆಳೆಯಿತು.ಮುಖ್ಯ ಮಂತ್ರಿ ದೇವರಾಜ
ಅರಸರ ಆಡಳಿತ ಕಾಲದಲ್ಲಿ
ಯಶಸ್ವೀಯಾಗಿ, ಭೂ ಸುಧಾರಣಾ ಕಾನೂನು
ಜಾರಿಗೆ ಬಂದಿತು. ಈ ಕಾನೂನು
ಜಾರಿಗೆ ಬರುವ ಹಿನ್ನೆಲೆಯಲ್ಲಿ, ದೇವರಾಜ
ಅರಸರು ದೇಸಾಯರ ಅನುಭವದ
ಸಹಾಯ ಪಡೆದರ;ಲ್ಲದೇ ಮಂತ್ರಿಸ್ಥಾನ ನೀಡಲು ಆಹ್ವಾನಿಸಿದ್ದರು. ಆದರೆ ದೇಸಾಯಿಯವರು ಮಂತ್ರಿಪದವಿಯನ್ನು ನಿರಾಕರಿಸಿದರು.
ದೇಸಾಯಿಯವರ
ವ್ಯಕ್ತಿತ್ವಕ್ಕೆ ಹತ್ತು ಹಲವು ಆಯಾಮಗಳಿವೆ. ಅವರು ಇಂದು ಕೇವಲ ಚುಟುಕು ಕವಿಯಾಗಿ
ಮಾತ್ರ ಜನಮಾನಸದಲ್ಲಿ ನೆಲೆಸಿರುವುದು
ಅವರ ವ್ಯಕ್ತಿತ್ವಕ್ಕೆ ಮಿತಿ ನೀಡಿದಂತೆ. ಅವರ ಎಪ್ಪತ್ತೆರಡು ವರ್ಷಗಳ
ಜೀವಿತದಲ್ಲಿ ಹತ್ತು ಸಾವಿರ ಚುಟುಕು ಸೃಷ್ಟಿಸಿದ್ದಾರೆ. ಅಭಿನವ ಸರ್ವಜ್ಞ,
ಚುಟುಕು ಬ್ರಹ್ಮ, ಮುಂತಾದ ಹಲವು ಪ್ರಶಸ್ತಿಗಳಿಗೆ
ಭಾಜನರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ
ಇಷ್ಟು ಬ್ರಹತ್ ಪ್ರಮಾಣದ ಮುಕ್ತಕಗಳನ್ನು
ನೀಡಿ, ಅದರ ಪ್ರಭಾವದಲ್ಲಿ ನೂರಾರು ಚುಟುಕು
ಕವಿಗಳನ್ನು ಸೃಷ್ಟಿಸಿದ ಅನುಪಮ ಕವಿ ಅವರು. ಇದೀಗ ರಾಜ್ಯಮಟ್ಟದಲ್ಲಿ ಚುಟುಕು
ಸಾಹಿತ್ಯ ಪರಿಷತ್ ಎಂಬ ಸಂಸ್ಥೆಯೇ
ಹುಟ್ಟಿ ಬೆಳೆಯುತ್ತಿದೆ. ನಿಜಕ್ಕೂ
ಆ ಸಂಸ್ಥೆಯ ಹೆಸರು ದಿನಕರ ಸಾಹಿತ್ಯ
ಪರಿಷತ್ ಎಂದು ಹೆಸರಿಸಿದ್ದರೆ,
ದೇಸಾಯರಿಗೆ ನಿಜಕ್ಕೂ ಗೌರವ ಸಲ್ಲಿಸಿದಂತಾಗುತ್ತಿತ್ತು. ಆದರೆ ಅವರು ಕೇವಲ ಚುಟುಕು ಕವಿಯಾಗಿರಲಿಲ್ಲ. ನೂರಾರು
ಗಂಭೀರ ಕವಿತೆಗಳನ್ನು ಸೃಷ್ಟಿಸಿದ್ದರು. ʻʻ ನನ್ನ ದೇಹದ ಬೂದಿ ಗಾಳಿಯಲಿ
ತೂರಿಬಿಡಿʼʼ ಕನ್ನಡ ಕಾವ್ಯದ
ಕಣಜದಲ್ಲಿ ರತ್ನವಾಗಿ ಮಿಂಚುತ್ತಿದೆ. ʻʻ ಗಂಟೆಯ ನೆಂಟನೆ ಓ ಗಡಿಯಾರ,ʼʼ ʻಬೆಕ್ಕೆ
ಬೆಕ್ಕೇ ಮುದ್ದಿನ ಸೊಕ್ಕೆʼ,
ʻʻತಿಪ್ಪಾಭಟ್ಟರು ನೇಗಿಲ ಹಿಡಿದರು,ʼʼ
ಮುಂತಾದ ಮಕ್ಕಳಿಗಾಗಿ ಬರೆದ, ಹಿರಿಯರನ್ನೂ ಆಕರ್ಷಿಸಿದ
ನೂರಾರು ಕವನಗಳು, ಅಜರಾಮರವಾಗಿ ಉಳಿಯುತ್ತವೆ.
ಅವರು
ಗೈದ ಶಿಕ್ಷಣ ಕ್ರಾಂತಿ ಇಡೀ ದಕ್ಷಿಣ ಭಾರತದಲ್ಲಿ
ಪ್ರಸಿದ್ಧವಾಯಿತು. ತನ್ನ ಮಾತೃಜಿಲ್ಲೆಯ
ಅನಕ್ಷರತೆಯನ್ನು ನಾಶಗೈಯ್ಯಲು, ಸರಿ ಸುಮಾರು
ನಲ್ವತ್ತು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕುತ್ತಾರೆ. ಅವೆಲ್ಲ ಇಂದಿಗೂ
ಮಾದರಿಯಾದ ಶಿಕ್ಷಣಸೇವೆ ಗೈಯ್ಯುತ್ತಿವೆ.
ಅವರು ಇಂಗ್ಲಿಶ್ ಭಾಷೆಯಲ್ಲಿ ಬರೆದ ಕನ್ನಡನಾಡಿನ ಸಂಶೋಧಿತ
ಚಾರಿತ್ರಿಕ ಗ್ರಂಥ ʻʻ ಕಲ್ಯಾಣ ಚಾಲುಕ್ಯರ ಕಾಲದ ಮಹಾ ಮಾಂಡಲೀಕರುʼʼ
ಕೃತಿಗೆ ಮುಂಬಯಿ ವಿಶ್ವವಿದ್ಯಾಲಯ
ಸುವರ್ಣಪದಕ ನೀಡಿ ಗೌರಿವಿಸುತ್ತದೆ. ಐವತ್ತರ
ದಶಕದಲ್ಲೇ ʻʻಜನಸೇವಕʼʼ ಪತ್ರಿಕೆಯನ್ನು
ಉತ್ತರಕನ್ನಡ ದಲ್ಲಿ ಪ್ರಾರಂಭಿಸಿ, ರಾಜ್ಯದೆತ್ತರದಲ್ಲಿ ಪ್ರಸಿದ್ಧಿ
ಪಡೆಯುತ್ತಾರೆ. ಅವರು ಬರೆದ ಸಾವಿರಕ್ಕೂ ಮಿಕ್ಕ ವೈಚಾರಿಕ ಸಾಂಸ್ಕೃತಿಕ, ರಾಜಕೀಯ ಸಂಪಾದಕೀಯಗಳು, ರಾಜ್ಯ ರಾಷ್ಟ್ರಗಳ ವಿವಿಧ ಭಾಷಾಪತ್ರಿಕೆಗಳಲ್ಲಿ ಪುನಃ ಮುದ್ರಣಗೊಳ್ಳುತ್ತವೆ.
ಒಬ್ಬ ಸಮಾಜಸುಧಾರಕರಾಗಿ, ಚಳುವಳಿಯ
ಸಂಘಟಕರಾಗಿ, ಶಿಕ್ಷಣ ತಜ್ಞರಾಗಿ, ರಾಜಕಾರಣಿಯಾಗಿ ಬದುಕಿಡೀ
ಚಲನಶೀಲರಾಗಿ ಜನರ ನಡುವೆ ಜೀವಿಸಿದರೂ, ತಮ್ಮೊಳಗಿನ
ಕವಿಯನ್ನು, ಕಾವ್ಯಸಂವೇದನೆಯನ್ನು ಜೀವಂತವಾಗಿರಿಸಿಕೊಂಡ ನಮ್ಮ ದೇಶದ
ಅಪರೂಪದ ಅಸಾಮಾನ್ಯ ಸಾಧಕರಾಗಿ
ಬದುಕಿ ಬಾಳಿದ ದಿನಕರರು
ಗತಿಸಿ ಮೂರು ದಶಕಗಳೇ
ಉರುಳಿಹೋದವು. ಕೇವಲವ್ಯಕ್ತಿಯಾಗಿ ಬಾಳಿ ಗತಿಸಿದವರಲ್ಲ ಅವರು. ಬದುಕಿಗೆ ಶ್ರೇಷ್ಠ
ಜೀವನ ಮೌಲ್ಯನೀಡಿ, ಅವರೇ ಒಂದು ಮೌಲ್ಯವಾಗಿ ನಮ್ಮ ನಡುವೆ
ಜೀವಂತವಾಗಿದ್ದಾರೆ.
ಪ್ರಸ್ತುತದ
ಕ್ರೂರ ವರ್ತಮಾನದಲ್ಲಿ, ರಾಜಕಾರಣ, ಸಾಮಾನ್ಯ ಜನಜೀವನ, ಶಿಕ್ಷಣ, ಧರ್ಮ, ನ್ಯಾಯ
ಎಲ್ಲವೂ ಭೃಷ್ಟ ಗೊಂಡಿರುವಾಗ, ದಿನಕರದೇಸಾಯಿಯವರ ತಾತ್ವಿಕ ಬದುಕು
ಮತ್ತು ಬರಹಗಳು, ನಮ್ಮನ್ನು ಎಚ್ಚರಿಸುವ
ಗಂಟೆಯಾಗಬಹುದಾಗಿದೆ.
೧
ಗೆದ್ದರೂ ಕೊಡಬೇಕು
ಸೋತರೂ ಕೂಡ / ಎಂದೆಂದಿಗೂ ಇವರ ಸಹವಾಸ ಬೇಡ.
ಕಲಹದಿಂದಲೇ
ತುಂಬುವುದು ಇವರ ಚೀಲ / ಇವನಾರು
ಗೊತ್ತುಂಟೇ ? ಇವನು ವಕೀಲ.
೨
ಕಾಣೆಯಾದಳು
ಹುಡುಗಿ ! ಗೊತ್ತುಂಟೇ ನಿಮಗೆ ? / ಮಂತ್ರಿಗಳ ಮನೆಯೊಳಗೆ ಸಿಕ್ಕಿದಳು ಕೊನೆಗೆ.
ಈ ಖ್ಯಾತಿಯಲಿ
ಮಂತ್ರಿಪದ ಕಳೆದು ಕೊಂಡ / ಇತಿಹಾಸ ಪುಟದೊಳಗೆ ಇದು ಒಂದು
ಕೆಂಡ.
೩
ಅಪ್ರತಿಮವಾದದ್ದು ಈ ಲೋಕಶಾಹಿ /
ಮತ್ತಷ್ಟು ಅಗಲವಾಗಿದೆ ಇವರ ಬಾಯಿ.
ಸರಕಾರಿ ಪೇದೆಗಳಿಗೂ
ಬಂತು ಪುಕ್ಕ / ಕೊಡಬೇಕು ಅವರವರ ಯೋಗ್ಯತೆಗೆ
ತಕ್ಕ.
೪
ಅರಸುಗಳು ಮಣ್ಣು ಮುಕ್ಕಿದರು ಅಲ್ಲಲ್ಲಿ / ಇದ್ದ ಅರಸರಿಗಿಲ್ಲ
ಕಿಮ್ಮತ್ತು ಬಿಲ್ಲಿ.
ಅರಸುಗಳ ಬದಲಾಗಿ
ಮಂತ್ರಿಗಳು ಬಂದು / ರಾಜ್ಯವಾಳಿದರು ಸಖಿ ಬೇಕಷ್ಟು
ತಿಂದು.
೫
ಐದು ವರುಷದ ಅವಧಿ ಸಾಕು ಕೆಲವರಿಗೆ
/ಸರಿಯಾಗಿ ಗುಡಿಸುವರು ಹಿಡಿದು
ಕಸಬರಿಗೆ.
ಹಾಕುವರು ರಾಶಿ ಗುಡು
ಗುಡಿಸಿ ಅಲ್ಲಲ್ಲಿ / ಕೊನೆಯವರೆಗೂ ನುಂಗಬಹುದು
ಕೂತಲ್ಲಿ.
ನನ್ನ ಕನ್ನಡ ನುಡಿಯೇ
ನೀನೆಷ್ಟು ಚೆಂದ !
ಏನು ಗೀಚಿದರೂ
ಆಗುವುದು ಶ್ರೀಗಂಧ
ಸಿಂಗರದ ಗಣಿ ನಿನ್ನ ಶಬ್ದ ಸಂಪತ್ತು
ಬಂಗಾರಕಿಂತಲೂ ಶ್ರೇಷ್ಠ
ನುಡಿಮುತ್ತು ( ದಿನಕರ ದೇಸಾಯಿ
)
(ಗ್ರಂಥ ಋಣ-- ಕವಿ ಶ್ರೀ
ವಿಷ್ಣುನಾಯಕರ, ದಿನಕರ ದೇಸಾಯಿ ಕೃತಿ. )
ʻʻ ಸುಮ ಸಂಪದ ʼʼ ಅಂಕಣಕ್ಕಾಗಿ, ಸುಬ್ರಾಯ ಮತ್ತೀಹಳ್ಳಿ.
ತಾ - ೧೪- ೧೧ -೨೦೨೨..