ಕುರುಡು ಆಧುನಿಕತೆ
ಮಣ್ಣಿಂದ ದೂರವಾದ ಮೇಲೆ ಆಧುನಿಕತೆಯ ಬುಲ್ಡೋಜರ್ ಅರಣ್ಯಗಳನ್ನ ಕೃಷಿ ಭೂಮಿಗಳನ್ನ ಮುಂದೊತ್ತುತ್ತಾ ಒತ್ತುತ್ತಾ ಸಾಗಿದಂತೆಮರುಭೂಮಿ ಆಕ್ರಮಿಸಿ ಅಪ್ಪುತ್ತಾ ಅಪ್ಪುತ್ತಾ ಬರುತ್ತದೆ. ವೈಭೋಗಲಾಲಸೆ ಯಲ್ಲಿ ನಾವು ಲೀನವಾದಂತೆ ನಮ್ಮ ಅಂತರಂಗ ಮರುಭೂಮಿಯಾಗತೊಡಗುತ್ತದೆ. ಗ್ರಾಮಗಳನ್ನು ನಾಶಮಾಡುತ್ತ ನಗರಗಳನ್ನು ಸೃಷ್ಟಿಸುತ್ತ ಸಾಗಿದಂತೆ ಗ್ರಾಮವೊಂದೇ ಅಲ್ಲ ಕಾಡುಗಳೂ ನೆಲಸಮ ಗೊಳ್ಳುತ್ತವೆ. ಕಾಡುತನ ಮಾತ್ರ ಮನುಷ್ಯನಲ್ಲಿ ಉಳಿದುಕೊಳ್ಳುತ್ತದೆ. ಸದ್ಯ ನಾವು ಅದೇ ಕಾಡುತನದ ಸ್ಥಿತಿಯನ್ನ ಕಾಣತೊಡಗಿದ್ದೇವೆ. ಈ ಸಂದರ್ಭದಲ್ಲಿ ಒಂದು ರೂಪಕ ನೆನಪಾಗುತ್ತಿದೆ. ಟಿಪ್ ಟಾಪಾಗಿ ಡ್ರೆಸ್ ಮಾಡಿದ ಒಬ್ಬ ಹುಚ್ಚ ಒಂದು ದಿನ ಬಹುಮಹಡಿ ಕಟ್ಟಡವನ್ನೇರುತ್ತಾನೆ. ಅಲ್ಲಿ ಅಂಬೆಗಾಲಿಕ್ಕುತ್ತಿದ್ದ ಒಂದು ಮಗುವನ್ನು ಎತ್ತಿಕೊಳ್ಳುತ್ತಾನೆ. ಟೆರೇಸಿನ ಅಂಚಿಗೆ ಬಂದು ನಿಂತು ಮಗುವನ್ನು ಕೈಯಿಂದ ಎತ್ತಿ ಹಾರಿಸಿ ಹಿಡಿಯುತ್ತ ಆಟವಾಡಿಸತೊಡಗುತ್ತಾನೆ. ಕಟ್ಟಡದಲ್ಲಿ ಮತ್ತು ಕಟ್ಟಡದ ತಳದಲ್ಲಿ ನಿಂತ ಜನ ನೋಡುತ್ತ ಚಪ್ಪಾಳೆಯಿಕ್ಕಿ ಖುಷಿಪಡತೊಡಗುತ್ತಾರೆ. ಹುಚ್ಚ ಮಗುವನ್ನು ಆಡಿಸುತ್ತ ಅಷ್ಟೆತ್ತರದಿಂದ ಕೈಬಿಟ್ಟು ಅಟ್ಟಹಾಸದಿಂದ ನಗತೊಡಗುತ್ತಾನೆ. ಮಗು ಎತ್ತರದಿಂದ ಕೆಳಬಿದ್ದು ಸತ್ತು ಚೂರು ಚೂರಾಗುತ್ತದೆ. ಈಗ ಜಗತ್ತಿಗೆ ಆಧುನಿಕತೆಯ ಮತ್ತು ಅಭಿವೃದ್ಧಿಯ ಅದ್ಭುತ ಹುಚ್ಚು ಹಿಡಿದಿದೆ. ಮನುಷ...