ʻʻಕನ್ನಡದ ಮುದ್ದು.... ಮುದ್ದಣ.ʼʼ
ಕನ್ನಡದ ಮುದ್ದುಕಾಜಾಣ ಮುದ್ದಣ ಹೊನ್ನ ಹಾರಕ್ಕೆ ರತ್ನ , ನುಡಿ ತೋರಣ ಪದ ಪದಕೆ ಹೊಸ ಮಿಂಚು ನವ ಜೀವೋದಯ ಪಾದವೂರುವ ಮೊದಲೇ ಪಾರಾದೆಯ ....? ಕನ್ನಡದ ಮುಂಗೋಳಿ, ಸಹಸ್ರಮಾನದ ಪ್ರತಿಭೆ, ಹಿರಿಯ ಸಾಧನೆಗೈದು ಕಿರಿವಯದಲ್ಲೇ ಕಾಣೆಯಾದ ಕನ್ನಡದ ಮಹಾಕವಿ ಮುದ್ದಣ, ಕನ್ನಡದ ಮಣ್ಣು ಸೃಷ್ಟಿಸಿದ ಅನುಪಮ ಪ್ರತಿಭೆ. ಒಂದೂವರೆ ಶತಮಾನದ ಪೂರ್ವದಲ್ಲೇ ಜನಿಸಿ,(ನಂದಳಿಕೆ, ಉಡುಪಿ ೧೮೭೦ - ೧೯೦೧) ಶತ ಶತಮಾನಗಳ ಕಾಲ ಕನ್ನಡದ ಮನೋನಂದನದಲ್ಲಿ ಹೂವಾಗಿ ಅರಳಿ, ಸದಾ ಬಾಡದಂತೇ ಜೀವಂತವಾಗಿ ನಮ್ಮೊಂದಿಗೆ ಬಾಳಿ ಬೆಳಗುತ್ತಿರುವ ಮುದ್ದಣ, ಯಾವ ವಿಶ್ವವಿದ್ಯಾಲಯದ ಉತ್ಪನ್ನವಲ್ಲ. ಅದ್ಯಾವ ಗುರುಕುಲವೂ ಮುದ್ದಣನನ್ನು ಸಾಕಿಲ್ಲ. ಸಂಸ್ಕೃತಿ ನಿಷ್ಠೆ, ಕಲೆಯಮೇಲಣ ಪ್ರೀತಿ, ಶೋಧನಾಸಕ್ತಿ, ಸಂವೇದನಾ ಶೀಲತೆ, ನುಡಿಯಬಗೆಗಿನ ಧ್ಯಾನ,ಸ್ವಯಂ ಅಧ್ಯಯನ. ಮುದ್ದಣನನ್ನು ಸೃಷ್ಟಿಶೀಲತೆಯ ಶೃಂಗಕ್ಕೆ ಕರೆದೊಯ್ದು ಕನ್ನಡ ಕಾವ್ಯಾಕಾಶದ ಧ್ರುವತಾರೆಯಾಗಿಸಿತೆಂದರೆ ಅತಿಶಯೋಕ್ತಿಯಂತೂ ಅಲ್ಲ. ಕಿತ್ತು ತಿನ್ನುವ ಬಡತನ, ಬದುಕಿಗಾಗಿ ಅಂಡಲೆಯುವಂತ ದಯನೀಯತೆ, ಅಧ್ಯಯನಕ್ಕೆ ಯಾವ ಕನಿಷ್ಠ ಸೌಲಭ್ಯವೂ ಇಲ್ಲದ ವಾತಾವರಣದಲ್ಲಿ, ಮುದ್ದಣ ಹೇಗೆ ಮಹಾಕವಿಯಾಗಿ ರೂಪುಗೊಂಡ ಎಂಬುದೇ ಬಗೆಹರಿಯದ ಸವಾಲು. ದಕ್ಷಿಣ ಕನ್ನಡ ಹತ್ತೊಂಬತ್ತನೆಯ ಶತಮಾನದ ...