Vishwambhara
-5. ಸುಮನಾಂಬರ ಅಂಕಣ - ೨೦.
ಪುರಾಣದಿಂದೆದ್ದು ಬಂದ
ಆಧುನಿಕತೆಯ ದ್ವಂದ್ವ.
ʻʻ ಶುನಶ್ಯೇಪ ʼʼ
ಸತ್ಯ –ಮಿಥ್ಯೆಗಳೀಗ ಗೆಳೆತನದ ಎಳೆಯಲ್ಲಿ, ದರ್ಶನದ ಆಂತರ್ಯ ಅರಿಯಲೆನಲು |
ಅನ್ನ ನೀರದು ತಾನು, ಸಂಗ ಸಂಬಂಧದಲಿ, , ಜೀವಯಾತ್ರೆಗೆ ಭಾವ ಶಕ್ತಿ ಕೀಲು. || (ಶ್ರೀ ಅರವಿಂದರು )
ಸಿದ್ದಾಪುರದ ಒಡ್ಡೋಲಗ,
ರಂಗ ತಂಡ ಉತ್ತರ ಕರ್ನಾಟಕದ ಕೆಲವೇ ಕೆಲವು
ಚಲನಶೀಲ, ನಾಟಕ ತಂಡಗಳಲ್ಲಿ ಒಂದು. ನಿರಂತರ ಪ್ರಾಯೋಗಿಕ
ರಂಗಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತ, ಜಿಲ್ಲೆಯಾದ್ಯಂತ ಸಂಚರಿಸುತ್ತ,
ರಂಗಭೂಮಿಯನ್ನು ಜೀವಂತವಾಗಿರಿಸುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿರುವುದು, ಸಂತಸದ ಕ್ಷಣವಾಗಿದೆ. ರಂಗ ಸಂಘಟನೆಯ
ಸಂಸ್ಥಾಪಕ ಗಣಪತಿ ಹೆಗಡೆ ಹಿತ್ತಲಕೈ, ಪ್ರಸ್ತುತ ವರ್ಷ ರಜತಮಹೋತ್ಸವದ ಹೊಸಿಲಲ್ಲಿ ನಿಂತು, ತಮ್ಮ ಒಡ್ಡೋಲಗದಿಂದ ಈವರ್ಷದ
ಮಹತ್ವಾಕಾಂಕ್ಷೀ ಕೊಡುಗೆಯಾಗಿ, ಸಾಕಷ್ಟು ಹಳೆಯದಾದ ನಿಸರ್ಗಪ್ರಿಯ
ರಿಂದ ರಚಿತಗೊಂಡ, ಶುನಶ್ಯೇಪ
ನಾಟಕ ಕೃತಿಯನ್ನು ರಂಗಪ್ರಿಯರಿಗೆ ಅರ್ಪಿಸಿದ್ದಾರೆ.
ಈಗಾಗಲೇ ಮೂರ್ನಾಲ್ಕು ಯಶಸ್ವೀಪ್ರದರ್ಶನವನ್ನು ಕಂಡ, ಈ ನಾಟಕ ಇತ್ತೀಚೆಗೆ ವಾಜಗದ್ದೆಯ
ಶ್ರೀ ದುರ್ಗಾವಿನಾಯಕ ದೇವಾಲಯದ ಸಭಾಭವನದಲ್ಲಿ,
ಒಡ್ಡೋಲಗ, ಇನ್ನೊಂದು ಪ್ರಯೋಗವನ್ನು ಪ್ರಸ್ತುತ ಪಡಿಸಿತು.
ಸಾಂಸ್ಕೃತಿಕ ಚಟುವಟಿಕೆಗಳು,
ಕೇವಲ ರಂಜನೆಯ ಆಟವಲ್ಲ. ರಂಜನೆಯ ಜೊತೆಗೇ ಮಾನವ ಬದುಕಿನ
ದ್ವಂದ್ವಗಳ ಬಗೆಗೆ ಗಮನಸೆಳೆಯಬೇಕು.
ಪ್ರೇಕ್ಷಕನ ಮನಸ್ಸನ್ನು ಭೌತಿಕ ಆವರಣದಿಂದ ಸೆಳೆದು,
ಅಂತರಂಗಕ್ಕೆ ಕರೆದೊಯ್ದು, ಚಿಂತನೆಗೆ ತೊಡಗಿಸಬೇಕು.
ಮುದ ನೀಡುವುದರ ಜೊತೆಗೇ ಕಾಡುವ ಕೆಲಸವನ್ನು
ಕೈಗೊಂಡರೆ, ತನ್ನಂತಾನೇ ಒಂದಿಷ್ಟು ಪ್ರಶ್ನೆಗಳು ಸಹೃದಯನಲ್ಲಿ ಮೂಡತೊಡಗುತ್ತವೆ. ಪ್ರಶ್ನೆಯಾಗಿಯೇ
ಇರುವ ರಂಗಪ್ರಯೋಗ, ಸಹೃದಯನನ್ನು ಕೆಣಕುತ್ತ, ವರ್ತಮಾನದ ಬದುಕಿನ
ಅದೆಷ್ಟೋ ಸವಾಲುಗಳನ್ನು ಅರ್ಥೈಸಿಕೊಳ್ಳಲು ಸಹಾಯ ಸಲ್ಲಿಸಿದಂತಾಗಬಹುದು.
ವಾಜಗದ್ದೆಯ ಪ್ರಸ್ತುತ
ಪ್ರಯೋಗಾನಂತರದ ಪ್ರೇಕ್ಷ್ಕಕರಿಂದ ಬಂದ ವೈವಿಧ್ಯಮಯ ಪ್ರಶ್ನೆಗಳು, ಜಿಜ್ಞಾಸೆಗಳು ಕುತೂಹಲ
ಕೆರಳಿಸುವಂತಿತ್ತು. ಪ್ರೇಕ್ಷಕರ ಉತ್ಸಾಹಪೂರ್ಣ
ಸ್ಪಂದನವೇ ರಂಗಪ್ರಯೋಗದ ಯಶವನ್ನು ಸಾರುತ್ತಿತ್ತು.
ನಾಟಕ ಋಗ್ವೇದದಲ್ಲೇ
ಉಲ್ಲೇಖಗೊಂಡ ಶುನಶ್ಯೇಪ ನೆಂಬ ಬಾಲಕನ
ನರಬಲಿಗೆ ಈಡಾದ ಕಥೆಯೊಂದನ್ನು ಆಧರಿಸಿದೆ. ಸತ್ಯಕ್ಕೆ
ಘನ ಪ್ರತೀಕವಾದ ಹರಿಶ್ಚಂದ್ರ ಮಹಾರಾಜನ ಬದುಕು ಅದೆಷ್ಟು ಅಸತ್ಯದಿಂದ, ಮೋಹದ ಮಾಯಾಜಾಲದಿಂದ
ಆವರಿಸಿಕೊಂಡಿತ್ತು, ಎಂಬುದನ್ನು, ಅನಾವರಣಗೊಳಿಸುತ್ತ, ಪ್ರಭುತ್ವವೊಂದು
ತನ್ನ ಉಳಿವಿಗಾಗಿ ಸಾಮಾನ್ಯ ಪ್ರಜೆಗಳನ್ನು
ಬಲಿಕೊಡುವ ದುರಂತವನ್ನು ಪರಿಣಾಮಕಾರಿಯಾಗಿ ಬಿಂಬಿಸತೊಡಗುತ್ತದೆ. ಮನುಷ್ಯರಿಗೇನು,
ದೇವರಿಗೂ ಕೊಟ್ಟ ವಚನವನ್ನು ಉಪಾಯವಾಗಿ
ಅಡಗಿಸುವ ರಾಜಕಾರಣದ ಕುತಂತ್ರವನ್ನು
ನಾಟಕ ಬಯಲಿಗೆಳೆಯುತ್ತದೆ.
ರಾಜನಾದವನ ಮೊದಲ ಆದ್ಯತೆ ಪ್ರಜೆಗಳ
ಕ್ಷೇಮವಾಗಬೇಕಿತ್ತು. ಆದರೆ ತನ್ನ ವೈಯಕ್ತಿಕ
ಸ್ವಾರ್ಥಕ್ಕೆ ಪ್ರಜೆಗಳನ್ನೇ ಬಲಿಕಂಬಕ್ಕೆ ಒಡ್ಡುವ ಪ್ರಭುತ್ವದ
ಕಪಟತನವನ್ನು, ಪುರಾಣದ ವಿಶಾಲ ಅಂಗಳದಲ್ಲಿ ಧ್ವನಿಸುವ
ಪ್ರಯತ್ನ ಈ ರಂಗಕೃತಿಯಲ್ಲಿದೆ.
ಪೌರಾಣಿಕತೆ ಎಂಬುದು ಕೇವಲ
ಭೂತದ ಹಳವಂಡವಲ್ಲ. ಅದು ಕಾಲಾತೀತ ಮಾನವ ಚೈತನ್ಯದ ಪ್ರತಿಬಿಂಬ. ಈ ಆಧುನಿಕ ಬದುಕಿನಲ್ಲಿ ನಾವು ಎದುರಿಸುವ ನೈತಿಕ ಗೊಂದಲ, ಅಸ್ತಿತ್ವದ ಆತಂಕ, ಅಧಿಕಾರ
ಮತ್ತು ಧರ್ಮಗಳ ಸಂಘರ್ಷ, ಶ್ರೀಮಂತಿಕೆಯ ದರ್ಪ,
ದಾರಿದ್ರ್ಯದ ದೈನ್ಯ, ಇವು ಕೇವಲ
ಈಕಾಲದ ಘಟನೆಗಳಲ್ಲ. ಅದರ ಬೀಜಗಳು ಪುರಾಣದಲ್ಲೇ ಅಡಗಿವೆ.
ಪ್ರಸ್ತುತ ನಾಟಕದ ಧ್ಯೇಯವೂ ಇದೇ ಆಗಿದೆ. ವರ್ತಮಾನವನ್ನು
ವಿದ್ಯುನ್ಮಾನ ಮಾಧ್ಯಮ ಆವರಿಸಿಕೊಂಡಿದೆ. ಅಯಾಚಿತವಾಗಿ, ವಿದ್ಯುನ್ಮಾನ ಪ್ರತಿಯೊಬ್ಬನ
ಮನಸ್ಸನ್ನೂ ಅಪಹರಿಸಿ, ಜನಾರಣ್ಯದಲ್ಲೂ
ಮನುಷ್ಯನನ್ನು ಒಂಟಿಯಾಗಿಸುತ್ತಿರುವ, ಮತ್ತು
ಯಂತ್ರದೊಂದಿಗಿನ ಒಡನಾಟ ಮನುಷ್ಯ ಸಂಬಂಧವನ್ನೇ ಛಿದ್ರಗೊಳಿಸಿದ
ಕಟುವಾಸ್ತವದ ಸನ್ನಿವೇಶದಿಂದ ನಾಟಕ ಕಾಲಯಂತ್ರದಲ್ಲಿ ಹಿಂದಕ್ಕೆ ಸಾಗತೊಡಗುತ್ತದೆ. ಹರಿಶ್ಚಂದ್ರ
ಸತ್ಯಸಂಧನೆಂಬ ಅರಿವಿನಲ್ಲಿರುವ ಸಾಮಾನ್ಯ ಜನರನ್ನು, ಹರಿಶ್ಚಂದ್ರನ ಅಸತ್ಯದ
ಬದುಕಿನೆಡೆ ಕೊಂಡೊಯ್ಯುತ್ತದೆ. ಚಕ್ರವರ್ತಿಗೆ
ಮಕ್ಕಳಾಗದೇ ಪರಿತಪಿಸುತ್ತಿರುತ್ತಾನೆ. ಪುತ್ರಪ್ರಾಪ್ತಿಗಾಗಿ ವರುಣನನ್ನು
ಯಜ್ಞದ ಮೂಲಕ ಪ್ರಾರ್ಥಿಸುತ್ತಾನೆ. ವರುಣ ಪ್ರತ್ಯಕ್ಷನಾಗಿ ಹರಿಶ್ಚಂದ್ರನಿಗೆ ಪುತ್ರಪ್ರಾಪ್ತಿಯಾಗುವಂತೇ ವರನೀಡುತ್ತಾನೆ.
ಆದರೆ ಒಂದು ಶರತ್ತಿನೊಂದಿಗೆ. ಬಾಲಕನಿಗೆ
ಎಂಟುವರ್ಷವಾಗುತ್ತಿದ್ದಂತೇ ಆತನನ್ನು ಯಜ್ಞದ ಮೂಲಕವೇ
ತನಗೆ ಬಲಿನೀಡಬೇಕೆಂದು ಆಗ್ರಹಿಸುತ್ತಾನೆ. ಮಗ ರೋಹಿತನಿಗೆ ಎಂಟುವರ್ಷ
ಪೂರೈಸಿದರೂ ಹರಿಶ್ಚಂದ್ರ ಪುತ್ರವ್ಯಾಮೋಹಿಯಾಗಿ, ಬಲಿ ನೀಡಲು
ನಿರಾಕರಿಸಿದಾಗ, ವರುಣ ವ್ಯಗ್ರನಾಗಿ
ರಾಜನಿಗೆ ಮಹಾರೋಗ ತಗಲುವಂತೇ, ರಾಜ್ಯಕ್ಕೆ
ಭೀಕರ ಬರಗಾಲ ಬರುವಂತೇ ಶಾಪ ನೀಡಿದಾಗ, ರಾಜ ಅದಕ್ಕೆ ಪರ್ಯಾಯ
ಮಾರ್ಗವನ್ನು ಅನ್ವೇಷಿಸತೊಡಗುತ್ತಾನೆ. ಯಾರದ್ದೇ ಒಬ್ಬ ಪುತ್ರನನ್ನು ಹಣ ಆಸ್ತಿ ನೀಡಿ
ಖರೀದಿಸಿ, ನರಬಲಿ ನೀಡುವ ನಿರ್ಣಯಕ್ಕೆ ಬರುತ್ತಾನೆ. ಸ್ವಾರ್ಥಕ್ಕಾಗಿ ದೇವರಿಗೇ
ವಂಚಿಸುವ ಕ್ರಿಯೆಯಲ್ಲಿ ನಿರತನಾಗುತ್ತಾನೆ.
ಬಲಿಪೀಠದಲ್ಲಿ ಖರೀದಿಸಿದ
ಬಾಲಕನನ್ನು ಅಣಿಗೊಳಿಸಿ, ಇನ್ನೇನು ಬಲಿನೀಡುತ್ತಾರೆಂಬ ಸಮಯದಲ್ಲಿ
ಕಠೋರ ಋಷಿ ವಿಶ್ವಾಮಿತ್ರನ
ಪ್ರವೇಶವಾಗುತ್ತದೆ. ಆತನ ಅತ್ಯುಗ್ರ
ಪ್ರತಿಭಟನೆಯಿಂದ, ಆಸ್ಥಾನ ಪುರೋಹಿತ ವಸಿಷ್ಠಮಹರ್ಷಿಯೂ ಸಹ ಸೋಲೊಪ್ಪಿಕೊಳ್ಳುತ್ತಾನೆ. ವಿಶ್ವಾಮಿತ್ರನ
ಪ್ರತಿಭಟನೆ, ಮತ್ತು ಧರ್ಮದಲ್ಲಿಯ ನರಬಲಿಯಂತಹ
ದುಷ್ಟ ಮೂಢ ಆಚರಣೆಯಲ್ಲಿಯ ಪೊಳ್ಳುತನಗಳ
ವಿಡಂಬನೆ, ನಾಟಕವನ್ನು ಆಳವಾಗಿಸುತ್ತದೆ. ಧರ್ಮ ಭಕ್ತಿಯ
ಹೆಸರಲ್ಲಿ ಪ್ರಭುತ್ವವೊಂದು ಜನವಿರೋಧಿಯಾಗುವ ಪ್ರಕ್ರಿಯೆಗೆ
ತಾತ್ವಿಕ ಪ್ರತಿಭಟನೆಯ ಸಂಕೇತವಾಗಿ
ಇಲ್ಲಿ ವಿಶ್ವಾಮಿತ್ರ ಮೂಡಿಬರುತ್ತಾನೆ.
ಪ್ರಭುತ್ವದ ಓಲೈಕೆಗಾಗಿ,
ವಸಿಷ್ಠನಂತಹ ಬುದ್ಧಿಜೀವಿಯೂ ಸಹ ಮನುಷ್ಯವಿರೋಧೀ ಜೀವವಿರೋಧಿ
ಕೃತ್ಯಗಳಿಗೆ ಸಹಮತವನ್ನು ನೀಡುವ ಕ್ರಿಯೆ ಇಲ್ಲಿ
ವರ್ತಮಾನವನ್ನು ನೆನಪಿಸುತ್ತದೆ.
ಸಮಾಜದಲ್ಲಿ ನೆಲೆನಿಂತಿರುವ
ಬಡತನ ದಾರಿದ್ರ್ಯಗಳನ್ನು ದುರುಪಯೋಗ ಗೊಳಿಸಿಕೊಳ್ಳುವ ಪ್ರವೃತ್ತಿ,
ಅಂದಿಗಿಂತ ಇಂದೇ ಅತಿಹೆಚ್ಚು
ಕಂಡು ಬರುತ್ತಿರುವುದು, ಕ್ರೂರ ಸತ್ಯ.
ಅಜೀಗರ್ತ ನೆಂಬ ವ್ಯಕ್ತಿ ಭೀಕರ ಬರಗಾಲದಿಂದ, ತನಗೊದಗಿದ ದಾರಿದ್ರ್ಯವನ್ನು ನಿವಾರಿಸಿಕೊಳ್ಳಲು ತನ್ನ ಮಗ
ಶುನಶ್ಯೇಪನನ್ನೇ ಮಾರಾಟಮಾಡಲು ಸಿದ್ಧಗೊಳ್ಳುವುದು, ದಯನೀಯವೆನ್ನಿಸಿದರೂ, ಭಾರತದಂತಹ
ದೇಶಗಳಲ್ಲಿ ಈಗಲೂ ಕಂಡುಬರುತ್ತಿರುವ ಕಟು ಘಟನೆಯಿದು.
ಪುರಾಣದ ಪ್ರಕಾರ
ಅಜೀಗರ್ತ ನೂ ಒಬ್ಬ ಋಷಿಯೇ. ಆದರೆ ನಾಟಕದಲ್ಲಿ ಆತ ಭಾರೀ ಹಸಿವೆಯಿಂದ
ಬಳಲುತ್ತಿರುವ ಬಿಕ್ಷುನನ್ನಾಗಿ ರೂಪಿಸಿರುವ
ನಿರ್ದೇಶಕರ ನಡೆ ಇರಿಸುಮುರಿಸಾಗಿಸುತ್ತದೆ. ಅಷ್ಟು ಅತಿ ದೈನ್ಯದ ಅವಶ್ಯಕತೆಯಿತ್ತೇ ಎಂದೆನ್ನಿಸಿದರೆ
ಆಶ್ಚರ್ಯವಿಲ್ಲ.
ಸರಳ ರಂಗಸಜ್ಜಿಕೆ, ಮಿತವಾದ ಪ್ರಸಾದನ,
ಸುಂದರ ಬೆಳಕಿನ ವ್ಯವಸ್ಥೆ, ಅದಕ್ಕೆ ತಕ್ಕ,
ಮಂಕುತಿಮ್ಮನ ಕಗ್ಗದ ಸುಶ್ರಾವ್ಯ ಹಾಡುಗಾರಿಕೆ ನಾಟಕವನ್ನು ರಂಜನೀಯವಾಗಿಸುವಲ್ಲಿ, ಯಶಕಂಡರೆ,
ಪೌರಾಣಿಕ ಸನ್ನಿವೇಶಕ್ಕೆ ತಕ್ಕ ಶ್ರುತಿ ಬದ್ಧ ಸಂಭಾಷಣೆ, ಆಧುನಿಕ ಪಾತ್ರಗಳು ಮಾತನಾಡುವ
ವರ್ತಮಾನದ ಮಾತುಗಳು, ಪರಂಪರೆ ಮತ್ತು ಆಧುನಿಕತೆಗಳಲ್ಲಿಯ ದ್ವಂದ್ವ ಮತ್ತು ಸಂಘರ್ಷಗಳನ್ನು ಪರಿಣಾಮಕಾರಿಯಾಗಿ ಸಂವಹಿಸಲು
ಸಹಾಯವಾಯಿತು. ನರಬಲಿ ಯಜ್ಞದ ದೃಶ್ಯದಲ್ಲಿ, ಪ್ರಸ್ತುತ ಪಡಿಸಿದ ವೇದಮಂತ್ರಗಳು
ಇನ್ನಷ್ಟು ನಿಖರವಾಗಿ ಸ್ವರನಿಷ್ಠವಾಗಿ ಮೂಡಿಬಂದಿದ್ದರೆ ಸೊಗಸೆನಿಸುತ್ತಿತ್ತು.
ರಂಗಪಠ್ಯ ಸಿದ್ಧಪಡಿಸಿ, ರಂಗಪ್ರಯೋಗಕ್ಕೆ
ಅಳವಡಿಸಿದ ನಿರ್ದೇಶಕ ಮಂಜುನಾಥ್
ಬಡಿಗೇರ್ ರವರ ಕಾಳಜಿ, ಶ್ರಮ, ಮತ್ತು ಕಲಾಪ್ರಜ್ಞೆ ಮೆಚ್ಚುವಂತಹದ್ದಾಗಿದೆ. ರಂಜನೆ
ಮತ್ತು ಚಿಂತನೆಗಳಿಗೆ ಸಮಾನ ಅವಕಾಶ ನಿರ್ಮಿಸಿ, ಪರಂಪರೆ
ಮತ್ತು ವಾಸ್ತವಗಳ ಸಂಬಂಧಗಳಲ್ಲಿಯ
ಗೊಂದಲಗಳನ್ನು ಅಭಿವ್ಯಕ್ತಿಸಲು ಸಾಕಷ್ಟು
ಪ್ರಯತ್ನಿಸಿದ್ದಾರೆ.
ಪ್ರಯೋಗದ ತುಂಬೆಲ್ಲ
ಚುರುಕಾದ ಸಾಂಕೆತಿಕ ಅರ್ಥವುಳ್ಳ ಸಂಭಾಷಣೆ
ತಕ್ಷಣ ಗಮನಸೆಳೆಯುತ್ತದೆ. ನಡುವೆ
ಕವಿ, (ನಾಟಕದ ಸೂತ್ರಧಾರ ) ನುಡಿಯುವ
ಸತ್ಯ ಮತ್ತು ಮಿಥ್ಯೆಗಳ ದ್ವಂದ್ವವನ್ನು ಎತ್ತಿ ತೋರಿಸುತ್ತದೆ.
ʻʻʻʻಹೌದು ಕದಿಯದೇ ಕವಿಯಾಗಲಾರ, ಅದನ್ನೇ ನಾವು ಸ್ಫೂರ್ತಿ ಎಂದು ಕರೆಯುತ್ತೇವೆ. ಕಾವ್ಯ ಪುರಾಣವೂ ಅಲ್ಲ. ಚರಿತ್ರೆಯೂ ಅಲ್ಲ. ಹಾಗೆಯೇ ಕವಿ ದೇವರಲ್ಲ,
ಋಷಿಮುನಿಯೂ ಅಲ್ಲ. ನಮ್ಮ ದೇವರುಗಳಿಗೇ ದೌರ್ಬಲ್ಯಗಳಿರುವಾಗ ಮನುಷ್ಯನಾದ
ಕವಿಗೆ ದೌರ್ಬಲ್ಯಗಳಿರಲಾರವೇ...? ʼʼ ಎಂದು ಕವಿ ತನ್ನನ್ನು
ಸಮರ್ಥಿಸಿಕೊಳ್ಳುತ್ತಾನೆ.
ಅಲ್ಲಿಯೇ ಮತ್ತೊಂದು
ಪಾತ್ರ ಹೇಳುತ್ತದೆ. ʻʻ ನನಗೆ ಹರಿಶ್ಚಂದ್ರ ಅರ್ಥವಾದ.
ಆದರೆ ಸತ್ಯ ಅರ್ಥವಾಗಿಲ್ಲ. ಸತ್ಯದ ಹುಡುಕಾಟಕ್ಕಾಗಿ, ಪತಿವೃತೆಯರ,
ಋಷಿಮುನಿಗಳ ಕಥೆಯನ್ನೋದಿದೆ. ಸತ್ಯ ಸಿಗಲಿಲ್ಲ. ಕೊನೆಗೂ
ಸಿಕ್ಕೇ ಬಿಡ್ತು, ಎಲ್ಲಿ ಗೊತ್ತಾ..? ಸರ್ಕಾರಿ
ಕಚೇರಿಗಳ ಲಾಂಛನದ ಮೇಲೆ ಸ್ಪಷ್ಟವಾಗಿ ಬರೆದಿದೆ,
ʻʻ ಸತ್ಯಮೇವ ಜಯತೇ
“” ಎಂದು.
ಇಡೀ ನಾಟಕವೇ
ಸತ್ಯ ಮತ್ತು ಅಸತ್ಯಗಳ ನಡುವಣ ಅಯೋಮಯ ಸ್ಥಿತಿಯನ್ನು ಯಶಸ್ವೀಯಾಗಿ
ತಲುಪಿಸುವಲ್ಲಿ ಗೆಲ್ಲುತ್ತದೆ.
ಒಟ್ಟಿನಲ್ಲಿ ಈ ನಾಟಕ ಪೌರಾಣಿಕ
ಬಿಂಬಗಳನ್ನು ವರ್ತಮಾನದ ಮನುಷ್ಯನ
ಅಂತರಂಗದ ಪ್ರಶ್ನೆಗಳಿಗೆ ಸಂವಾದಕ್ಕಿಳಿಸುತ್ತದೆ. ಇಲ್ಲಿಯ
ಪುರಾಣದ ಪಾತ್ರಗಳು ಕೇವಲ ದೇವರುಗಳಲ್ಲ.
ವೀರರಲ್ಲ. ಮನುಷ್ಯನ ಮನೋಭಾವದ ರೂಪಕಗಳಾಗಿ
ಕಾರ್ಯನಿರ್ವಹಿಸುತ್ತವೆ. ಇಲ್ಲಿ ವೇಶ್ಯೆಯೊಬ್ಬಳು
ʻʻ ರಾಜ್ಯದ ರಾಜಕಾರಣದ
ನಿಖರ ಸತ್ಯ ಮೊಟ್ಟಮೊದಲು ಸ್ಪೋಟಗೊಳ್ಳುವುದೇ ನಮ್ಮಂತಹ
ವೇಶ್ಯೆಯರ ಪದತಳದಲ್ಲಿʼʼ ಎಂಬ ಅವಳ ಉದ್ಗಾರ,
ಸದ್ಯದ ರಾಜಕಾರಣವನ್ನೇ ಧ್ವನಿಸುತ್ತದೆ.
ಪ್ರಥಮ ಭಾಗ ವಿಲಂಬಿತ
ಲಯದಲ್ಲಿ ಸಾಗಿ, ವಿಶ್ವಾಮಿತ್ರನ
ರೋಷಾವೇಶದ ಪ್ರವೇಶದೊಂದಿಗೆ ವೇಗವನ್ನು
ಪಡೆದುಕೊಳ್ಳುತ್ತದೆ. ನರಬಲಿಯನ್ನು ಪ್ರತಿಭಟನೆಯಿಂದಲೇ ಸ್ಥಗಿತಗೊಳಿಸಿದ
ದೃಶ್ಯದೊಂದಿಗೆ ನಾಟಕ ಮುಕ್ತಾಯಗೊಳ್ಳುತ್ತದೆ. ಬಲಿ ನರನಾದ
ಶುನಶ್ಶೇಪನ ನಗುವಿನ ಆಹ್ಲಾದಪೂರ್ಣ
ದೃಶ್ಯ ಗಮನಸೆಳೆಯುತ್ತದೆ.
ಕವಿಯಾಗಿ ಗಣಪತಿ ಹೆಗಡೆ
ಹಿತ್ಲಕೈ, ಹರಿಶ್ಚಂದ್ರನಾಗಿ, ಪ್ರಸಾದ್ ಹಲಗೇರಿ, ವಿಶ್ವಾಮಿತ್ರನಾಗಿ, ಗಣಪತಿ ಹೆಗಡೆ
ನಂದೀತಳೆ, ವಸಿಷ್ಠನಾಗಿ ಪ್ರಶಾಂತ್ ವರದಾಮೂಲ,
ಗಣಿಕಾ ಸ್ತ್ರೀಯಾಗಿ, -ಪುಷ್ಪಾ ರಾಘವೇಂದ್ರ,
ಚಂದ್ರಮತಿಯಾಗಿ, ನೇಹಾ ದೇಶಬಂಡಾರಿ, ಅಜೀಗರ್ತ ನಾಗಿ- ನವೀನ ಕುಣಜಿ, ಬಾಲಕ ಶುನಶ್ಯೇಪನಾಗಿ, ವರುಣ, ಮುಂತಾದವರ ಹಿತ ಮಿತ ಆಭಿನಯ ದಿಂದ
ರಂಗ ವಿಜ್ರಂಭಿಸಿತು.
ಗುರುಮೂರ್ತಿ ವರದಾಮೂಲ ರವರ
ರಂಗಸಜ್ಜಿಕೆ, ಬೆಳಕು- ಶ್ರೀಧರ ಭಾಗವತ,
ಧ್ವನಿ- ಪ್ರಸನ್ನ ಹೆಗಡೆ, ಮತ್ತು ಮುರುಗೇಶ್ ರವರ ತಾಂತ್ರಿಕ ನೆರವುಗಳಿಂದ
ಪ್ರಯೋಗಕ್ಕೆ ಘನತೆಯೊದಗಿತು.
ಭಾರ್ಗವ್ ಹೆಗ್ಗೋಡು
ರವರ ಸುಶ್ರಾವ್ಯ ಸಂಗೀತ ನಾಟಕಕ್ಕೆ ಮುದ ನೀಡಿತು.
ಅತಿ ಯಾಂತ್ರಿಕತೆ, ಕೇವಲ ವ್ಯಾವಹಾರಿಕತೆ ಯಂತಹ ವರ್ತನೆಗಳಿಂದ
ಸಂಸ್ಕೃತಿಯೆಡೆಗೆ ಸಮುದಾಯದ ಗಮನವನ್ನು ಕೊಂಚವಾದರೂ ಸೆಳೆದುಕೊಳ್ಳಬಹುದಾದ ಇಂತಹ ರಂಗಚಟುವಟಿಕೆ ಇನ್ನಷ್ಟು ಚುರುಕು ಮತ್ತು ನಿರಂತರತೆಯನ್ನು ಪಡೆದುಕೊಳ್ಳುವಂತಾಗಲೆಂದು ಹಾರೈಸುತ್ತಿದ್ದೇನೆ.
ಸುಮನಾಂಬರ ಅಂಕಣಕ್ಕೆ. ( ಪೋಟೋಗಳನ್ನು ಮೇಲ್ ಮಾಡಲಾಗಿದೆ.)
Vishwambhara- 5.
ಸುಮನಾಂಬರ ಅಂಕಣ – ೨೧
ʻʻಸಂಸ್ಕೃತಿʼʼ
ಪತನ ಮತ್ತು
ಪುನರುತ್ಥಾನ.
ಬರಿಯೋದು ಬರಿವಾದ ಬರಿಬುದ್ಧಿ ದೊರಕಿಸದು |
ಪರತತ್ವವನು
: ಬೇಕು ಬೇರೆ ಕಣ್ಣದಕೆ ||
ಚಿರದ ಮಮತಾ ವೇಷ್ಟಿತದ
ಪೊರೆಯ ಪರಿದಂದು |
ಅರಳ್ವುದು
ಅರಿವಿನ ಕಣ್ಣು--------ಮಂಕುತಿಮ್ಮ ||
ಸಂಸ್ಕೃತಿ,
ಅದೆಷ್ಟು ಸುಂದರ ಪದ.! ಆತ ಸಂಸ್ಕೃತಿ ವಂತ,
ಅದು ಸಂಸ್ಕೃತಿನಿಷ್ಠ ಊರು, ಎಂದಾಗಲೆಲ್ಲ
ಖುಷಿ ಆವರಿಸುತ್ತದೆ. ಅಲ್ಲೊಂದು ಸಾಂಸ್ಕೃತಿಕ
ಕಾರ್ಯಕ್ರಮ ಎಂದಾಗ ಅವಶ್ಯ ಹೋಗೋಣ
ಅನ್ನಿಸುತ್ತದೆ. ಸಂಸ್ಕೃತಿ ಎಂಬ
ಶಬ್ದವೇ ಅಷ್ಟು ಆಕರ್ಷಕ, ಮೋಹಕ.
ಆದರೆ ಆ ಶಬ್ಧದ
ಮೋಹ, ಅದರ ಬಳಕೆ
ಅದೆಷ್ಟು ದುರ್ಬಳಕೆಯಾಗಿದೆಯೆಂದರೆ,
ಇನ್ನು ಅದರ ಬದಲು
ಇನ್ನೊಂದು ಶಬ್ದವನ್ನೇ ಸೃಷ್ಟಿಸಬಾರದೇಕೆ…? ಎಂದೆನ್ನಿಸಿದರೆ
ಆಶ್ಚರ್ಯವೇನಿಲ್ಲ. ರಾಜಕೀಯ ಸಂಸ್ಕೃತಿ,
ಗೂಂಢಾ ಸಂಸ್ಕೃತಿ, ವಂಚನೆಯ
ಸಂಸ್ಕೃತಿ, ಕಳ್ಳರ ಸಂಸ್ಕೃತಿ,
ಆಧುನಿಕ ಸಂಸ್ಕೃತಿ, ಐಷಾರಾಮೀ
ಸಂಸ್ಕೃತಿ, ಹೀಗೆ ಅದರ
ಬಾಲ ದೀರ್ಘವಾಗುತ್ತ ಹೋಗುತ್ತದೆ. ಪ್ರಸ್ತುತ
ಈ ಶಬ್ಧ ಕನ್ನಡಕ್ಕೆ ಪ್ರವೇಶವಾಗಿ
ಒಂದು ಶತಮಾನವಾಯಿತಷ್ಟೇ. ಅದೊಂದು ಶಬ್ದವನ್ನು ಎಲ್ಲೆಂದರಲ್ಲಿ ಎಳೆದಾಡಿ,
ಆ ಶಬ್ದವನ್ನೇ ಕ್ಲೀಷೆಯಾಗಿಸಿದ
ಆರೋಪ ಆಧುನಿಕರಾದ ನಮ್ಮೆಲ್ಲರ
ಮೇಲಿದೆ.
ಸಂಸ್ಕೃತಿ ಅಂದರೇನು ಎಂಬುದರ
ಬಗೆಗೆ ಅರ್ಧ ಶತಮಾನದಷ್ಟು ಹಿಂದೆಯೇ
ಡಿ.ವಿ.ಜಿ ಯವರು ಸುಂದರವಾದ ಪುಸ್ತಕವನ್ನೇ
ಬರೆದಿದ್ದರು. ಭಾರತೀಯ
ತಾತ್ವಿಕ ಸತ್ವದೊಂದಿಗೆ, ವಿಶ್ವದ
ಶ್ರೇಷ್ಠ ತತ್ವ ಸಂಪತ್ತನ್ನೂ ತನ್ನ ಒಡಲೊಳಗೆ
ಹುದುಗಿಸಿಕೊಂಡ ಭಾರತೀಯ ಭಾಷೆಗೆ ಡಿ.ವಿ.ಜಿ. ನೀಡಿದ ಅದ್ಭುತ
ಕೃತಿ ಅದು. ಸಂಸ್ಕೃತಿ
ಕೇವಲ ಒಂದು ಆಡು ನುಡಿಯಲ್ಲ. ನಮ್ಮ ಪರಂಪರೆ
ಸೃಷ್ಟಿಸಿದ ಉನ್ನತ ಜೀವನ ಮೌಲ್ಯ .
ಅದು ನಮ್ಮ ಭೂತವನ್ನು ಅರಿವಿಗೆ ತಂದು
ವರ್ತಮಾನವನ್ನು ಬೆಳಗಿಸುತ್ತದೆ. ಸುಂದರ
ಭವಿಷ್ಯಕ್ಕೆ ಅಡಿಗಲ್ಲು
ಇಡುತ್ತದೆ, ಎಂದೆನ್ನುತ್ತ, ಸಂಸ್ಕೃತಿ
ಎಂಬ ಮಾನವೀಯ ಚಟುವಟಿಕೆ
ಲೌಕಿಕವನ್ನು ಅಲೌಕಿಕಗೊಳಿಸುತ್ತದೆ.
ಬದುಕನ್ನು ಸಹ್ಯವಾಗಿಸುತ್ತದೆ ಎಂಬುದನ್ನು ತಾತ್ವಿಕವಾಗಿ
ವಿವರಿಸಿದ್ದರು.
ಸಂಸ್ಕೃತಿ
ಎಂದರೆ ಏನು? ಎಂಬ
ಪ್ರಶ್ನೆಗೆ ತಡಕಾಟವೇ ಉಂಟಾಗಬಹುದು.
ಅದು ನಮ್ಮ
ಉಡುಗೆ–ತೊಡುಗೆ
ಮಾತ್ರವಲ್ಲ, ಆಹಾರ
ಪದ್ಧತಿಯಷ್ಟೇ ಅಲ್ಲ;
ಅದು ನಮ್ಮ
ಮೌಲ್ಯಗಳು, ಸಂಬಂಧಗಳು,
ಭಾಷೆ, ಕಲೆ,
ಚಿಂತನೆ ಮತ್ತು
ಬದುಕಿನ ದರ್ಶನ.
ಅದು
ಮಾನವ ಸಮುದಾಯದ ಆತ್ಮವಿದ್ದಂತೆ. ಬದುಕು
ವೃತ್ತಿ ಸಾಹಿತ್ಯ ಮತ
ಮತ್ತು ಧರ್ಮಗಳ ಆಳದಲ್ಲಿ ಜೀವಂತವಾಗಿ
ಮಿಡಿಯುತ್ತ, ಚೈತನ್ಯ ಸೂಸುತ್ತಿರುವ
ಒಂದು ಪ್ರವಾಹ
ಮಾನವ ಸಮಾಜದ
ಅಸ್ತಿತ್ವವನ್ನು ರೂಪಿಸುವ
ಅತ್ಯಂತ ಮಹತ್ವದ
ಅಂಶವೆಂದರೆ ಸಂಸ್ಕೃತಿ.
ಸಂಸ್ಕೃತಿ ಎಂಬುದು
ಕೇವಲ ಆಚಾರ–ವಿಚಾರಗಳು
ಅಥವಾ ಆಚರಣೆಗಳ
ಸಮೂಹವಲ್ಲ; ಅದು
ಮಾನವನ ಚಿಂತನೆ,
ಮೌಲ್ಯಗಳು, ಭಾವನೆಗಳು,
ಸಂಬಂಧಗಳು ಹಾಗೂ
ಜೀವನ ದರ್ಶನವನ್ನು
ಒಳಗೊಂಡ ಸಮಗ್ರ
ವ್ಯವಸ್ಥೆ. ಒಂದು
ಸಮಾಜದ ಪ್ರಗತಿ
ಅಥವಾ ಅವನತಿ
ಅದರ ಸಾಂಸ್ಕೃತಿಕ
ಸ್ಥಿತಿಗತಿಯಲ್ಲಿಯೇ ಸ್ಪಷ್ಟವಾಗಿ
ಪ್ರತಿಫಲಿಸುತ್ತದೆ.
ಸಂಸ್ಕೃತಿ ಸದಾ
ಚಲನಶೀಲ. ಪರಿವರ್ತನ ಶೀಲ. ಸಂಪ್ರದಾಯಕ್ಕೂ
ಸಂಸ್ಕೃತಿಗೂ ಅಂತರವಿದೆ. ಜಡವಾದ, ನಿಂತ ನೀರಿನಂತಿರುವ ಸಂಪ್ರದಾಯವನ್ನೇ
ಸಂಸ್ಕೃತಿಯೆಂದು ಅರ್ಥೈಸುವ ಪರಿಪಾಠವಿದೆ.
ಸಂಪ್ರದಾಯದಲ್ಲಿ ಸಂಸ್ಕೃತಿಯ ಅಂಶವಿದ್ದರೂ
ಅದರ ಜಡ ಗುಣವೆಂಬುದು ಸಂಸ್ಕೃತಿಯ
ಆಳದಲ್ಲಿರುವ ತಾತ್ವಿಕ ಸೌಂದರ್ಯವನ್ನು ಮರೆಮಾಚಿ, ಕೇವಲ ಯಾಂತ್ರಿಕ
ಕ್ರಿಯೆಯಾಗಿಸಿ ಬಿಡುತ್ತದೆ.
ಸಂಸ್ಕೃತಿ ಎಂಬುದರ ಅರ್ಥವಂತಿಕೆಯನ್ನು ಡಿ.ವಿ.ಜಿ. ಯವರು ಸರಳವಾಗಿ
ಆಪ್ತವಾಗಿ ವಿವರಿಸುತ್ತಾರೆ.
ʻʻ ಪ್ರಕೃತಿ
ಬತ್ತ, - ಸಂಸ್ಕೃತಿ- ಅಕ್ಕಿ. ಅಕ್ಕಿ-
ಪ್ರಕೃತಿ. ಅನ್ನ- ಸಂಸ್ಕೃತಿ. ಶಿಲೆ – ಪ್ರಕೃತಿ. ವಿಗ್ರಹ –ಸಂಸ್ಕೃತಿ. ಪಕ್ಷಿ ಕೂಗು
ಪ್ರಕೃತಿ, ಅದರಲ್ಲಿಯ ಸ್ವರಗುರುತಿಸಿ
ರಾಗವಿನ್ಯಾಸ ಗೈದಿದ್ದು
ಸಂಸ್ಕೃತಿ. ಪ್ರಕೃತಿ ಸಿದ್ಧವಾದ ಪದಾರ್ಥವನ್ನು ಮನುಷ್ಯವಿವೇಕದಿಂದ ಸೊಗಸುಗೊಳಿಸಿದರೆ ಅದು ಸಂಸ್ಕೃತಿʼʼ
ಭಾರತೀಯ ಬದುಕಿನಲ್ಲಿ
ಇರುವಷ್ಟು ವೈವಿಧ್ಯಮಯ ಸಮುದಾಯವನ್ನು
ಜಗತ್ತಿನಲ್ಲೆಲ್ಲೂ ಕಾಣಲು ಸಾಧ್ಯವಾಗದು.
ಪ್ರತೀ ಸಮುದಾಯವೂ ತಮ್ಮ
ಭಾಷೆ, ಉಡುಗೆ, ಕಲೆ, ನಡೆ ನುಡಿಗಳಲ್ಲಿ
ತಮ್ಮದೇ ಆದ ಅಸ್ಮಿತೆಯನ್ನು ಕಾದುಕೊಂಡಿದೆ.
ಅಸಂಖ್ಯ ವೈವಿಧ್ಯತೆಯಲ್ಲೂ ಏಕತೆಯನ್ನು
ಸೃಷ್ಟಿಸಿಕೊಂಡಿದೆ. ಆದರೆ ಒಂದೊಂದು ಸಮುದಾಯವೂ ವರ್ಣ
ಜಾತಿ ಮೇಲು ಕೀಳು, ಅಸ್ಪ್ರಶ್ಯತೆ
ಮುಂತಾದ ದೌರ್ಬಲ್ಯಗಳಿಂದ, ವೈವಿಧ್ಯಮಯ
ಸೌಂದರ್ಯಕ್ಕೆ ಅಪಚಾರ ಗೈದುಕೊಂಡಿದ್ದು
ಮಾತ್ರ ವಿಷಾದನೀಯ.
ಇಂದಿನ
ಜಾಗತೀಕರಣದ ಯುಗದಲ್ಲಿ
ತಂತ್ರಜ್ಞಾನ, ಜಾಗತೀಕರಣ
ಮತ್ತು ಭೋಗವಾಧದ
ಪರಿಣಾಮವಾಗಿ ಸಂಸ್ಕೃತಿಯಲ್ಲಿ
ಒಂದು ರೀತಿಯ
ಪತನದ ಲಕ್ಷಣಗಳು
ಸ್ಪಷ್ಟವಾಗಿ ಕಾಣಿಸುತ್ತಿವೆ.
ಈ ಪತನವು
ಕೇವಲ ಪರಂಪರೆಯ
ನಾಶವಲ್ಲ; ಅದು
ಮೌಲ್ಯಗಳ ಕುಸಿತಕ್ಕೂ
ಕಾರಣವಾಗುತ್ತಿದೆ.
ಅವಿರತ ಜಾಗತಿಕ ಸಂಪರ್ಕ,
ಆಧುನಿಕ ಶಿಕ್ಷಣ, ಮನರಂಜನೆಯ
ಹೆಸರಿನ ಉದ್ಯಮ, ಮತ್ತು
ಅತೀ ತಂತ್ರಜ್ಞಾನ, ಆಧುನಿಕ
ಮನಸ್ಸನ್ನು ವಿಚಿತ್ರ ಸ್ಥಿತಿಗೆ
ನೂಕುತ್ತಿದೆ. ಪ್ಯಾಶನ್ ನೆವದಲ್ಲಿ, ಅಸಭ್ಯ ಉಡುಗೆ, ಉದ್ರೇಕಕಾರಿ
ವರ್ತನೆ ಲೈಂಗಿಕ ವ್ಯಾಮೋಹವನ್ನೂ
ಉದ್ದೀಪಿಸುತ್ತಿದೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ
ಲೀಲಾಜಾಲವಾಗಿ
ಪ್ರಸಾರಗೊಳ್ಳುತ್ತಿರುವ ಲೈಂಗಿಕ ಚಿತ್ರಗಳು
ಹದಿಹರೆಯದ ಮುಗ್ಧತೆಯನ್ನು ಛಿದ್ರಗೊಳಿಸುತ್ತಿದೆ. ಅಪ್ರಾಪ್ತ
ತಾಯಂದಿರ ಸಂಖ್ಯೆ ಮಿತಿಮೀರುತ್ತಿದೆ. ಪಾಲಕರಲ್ಲೂ
ಸಂಸ್ಕೃತಿ ನಿಷ್ಠೆ, ಮೌಲ್ಯಾಸಕ್ತಿ ಕ್ಷೀಣಗೊಳ್ಳುತ್ತಿರುವುದರ ಜೊತೆಗೆ
ಮಕ್ಕಳಜೊತೆಗಿನ ಸಾಂಗತ್ಯದ ಸಮಯವನ್ನೂ
ಕಡಿತಗೊಳಿಸುತ್ತಿದೆ. ಪಾಲಕರ ಪ್ರಭಾವಕ್ಕಿಂತ
ಮಾಧ್ಯಮದ ಪ್ರಭಾವವೇ ಅತೀಯಾಗಿ
ಮಕ್ಕಳ ಮನಸ್ಸನ್ನು ಆಕ್ರಮಿಸುತ್ತಿರುವುದರಿಂದ, ಮಗುವಿನ
ಮನಸ್ಸು ವಿಚಲಿತಗೊಳ್ಳುವುದು ಸಹಜವೇ
ಆಗಿದೆ.
ಮೊಬೈಲ್ ಕೊಡಿಸದ ತಂದೆಯನ್ನೇ
ಕೊಲೆಗೈದ ಘಟನೆ, ಮೋಟರ್
ಬೈಕ್ ಕೊಳ್ಳಲು ನಿರಾಕರಿಸಿದ್ದಕ್ಕೆ ಆತ್ಮಹತ್ಯೆ
ಗೈದ ಬಾಲಕನ ಕೃತ್ಯ
ನಮ್ಮ ಕಣ್ಣೆದುರೇ ಘಟಿಸಿದೆ. ಶಿಕ್ಷಣದ
ನೆವದಲ್ಲಿ ನಿಜವಾದ ಜ್ಞಾನವನ್ನು ನೀಡುವುದರ ಬದಲು
ಮಾಹಿತಿಯ ಗುಢಾಣವನ್ನೇ ನಿರ್ಮಿಸುತ್ತಿದ್ದೇವೆ. ಕಲೆ
ಸಾಹಿತ್ಯ ತತ್ವಜ್ಞಾನರಹಿತ, ಕೇವಲ ತಂತ್ರಜ್ಞಾನಾಧಾರಿತ ಶಿಕ್ಷಣ
ಮಾನವಯಂತ್ರ ವನ್ನು ಸೃಷ್ಟಿಸುತ್ತ
ಸಾಗುತ್ತದೆ. ಭಾವಶಕ್ತಿಯಿಲ್ಲದ ಬುದ್ಧಿವಂತ
ಮನುಷ್ಯ ಭವಿಷ್ಯಕ್ಕೆ
ಮೌಲ್ಯವಾಗಲಾರ. ಮನಿ (money
)ಯಾಗುತ್ತಾನೆ ಅಷ್ಟೇ.
ಸ್ವ ಸಂಸ್ಕೃತಿ ಕೀಳಾಗಿ, ಆಧುನಿಕ
ನಡೆ ನುಡಿ ಶ್ರೇಷ್ಠವಾಗಿ, ಸಂಸ್ಕೃತಿ
ಹೀನ ಮನಸ್ಸುಗಳನ್ನು ನಾವು
ಸೃಷ್ಟಿಸುತ್ತಿದ್ದೇವೆ
ಸಹಾನುಭೂತಿ,
ಗೌರವ, ತ್ಯಾಗ,
ಶಿಸ್ತು ಮೊದಲಾದ
ನೈತಿಕ ಮೌಲ್ಯಗಳು
ನಿಧಾನವಾಗಿ ಅಸ್ತಂಗತವಾಗುತ್ತಿವೆ.
ವ್ಯಕ್ತಿ ಕೇಂದ್ರಿತ
ಬದುಕು ಸಮಾಜ
ಕೇಂದ್ರಿತ ಚಿಂತನೆಗೆ
ಅಡ್ಡಿಯಾಗುತ್ತಿದೆ. ಜನಪದ
ಕಲೆಗಳು, ಶಾಸ್ತ್ರೀಯ
ಸಂಗೀತ, ನೃತ್ಯ,
ಕೈತೋಟ ಕಲೆಗಳು
ವ್ಯಾಪಾರೀ ಮನೋಭಾವದ
ಮುಂದೆ ಹಿನ್ನಡೆಯಾಗುತ್ತಿವೆ. ಸಾಮಾಜಿಕ
ಮಾಧ್ಯಮಗಳು ತಕ್ಷಣದ
ಆನಂದ, ತೋರಾಟ
ಮತ್ತು ನಕಲಿ
ಬದುಕನ್ನು ಉತ್ತೇಜಿಸುತ್ತಿದ್ದು,
ಆಳವಾದ ಸಾಂಸ್ಕೃತಿಕ
ಚಿಂತನೆಗೆ ಅವಕಾಶ
ಕಡಿಮೆಯಾಗುತ್ತಿದೆ.
ಸಂಯುಕ್ತ
ಕುಟುಂಬಗಳ ಕುಸಿತದಿಂದ
ಸಂಸ್ಕಾರಗಳ ಸಹಜ
ಹಸ್ತಾಂತರ ಪ್ರಕ್ರಿಯೆ
ದುರ್ಬಲವಾಗಿದೆ. ಅವಿಭಕ್ತ ಕುಟುಂಬವ್ಯವಸ್ಥೆ ಮಗುವಿನಲ್ಲಿ
ಪರಂಪರೆಯ ಸಂಸ್ಕಾರವನ್ನು ಆಳವಾಗಿ
ಬಿತ್ತುವ ಅಮೂಲ್ಯ
ವ್ಯವಸ್ಥೆಯಾಗಿದ್ದು ಇಂದು ಇಲ್ಲವಾಗಿದೆ.
ಒಂದು ಕಾಲದಲ್ಲಿ
ಮೌಲ್ಯವಾಗಿದ್ದ ಗೌರವ,
ಸಹಾನುಭೂತಿ, ಶಿಸ್ತು,
ತ್ಯಾಗ — ಇಂದು
ಅವು ಅನಾವಶ್ಯಕವೆನ್ನಿಸುವ
ಮಟ್ಟಿಗೆ ಕುಗ್ಗುತ್ತಿವೆ. ವ್ಯಕ್ತಿ
ದೊಡ್ಡದಾಗುತ್ತಿದ್ದಾನೆ; ಸಮಾಜ
ಚಿಕ್ಕದಾಗುತ್ತಿದೆ.
ಮಾತೃಭಾಷೆಗಳು
ನಿಧಾನವಾಗಿ ಮೌನವಾಗುತ್ತಿವೆ. ಮಕ್ಕಳು ತಮ್ಮ
ಭಾಷೆಯಲ್ಲಿ ಮಾತನಾಡಲು
ಹಿಂಜರಿಯುತ್ತಾರೆ, ಆದರೆ
ಅನ್ಯಭಾಷೆಯಲ್ಲಿ ಹೆಮ್ಮೆಪಡುತ್ತಾರೆ. ಇದು ಭಾಷೆಯ
ಪತನವಲ್ಲ — ಅಸ್ಮಿತೆಯ
ಪತನ.
ಜನಪದ ಕಲೆಗಳು,
ಸಾಂಪ್ರದಾಯಿಕ ಸಂಗೀತ–ನೃತ್ಯಗಳು
ವೇದಿಕೆ ಹುಡುಕುತ್ತಿವೆ;
ಅದರೆ ಅಗ್ಗದ
ಮನರಂಜನೆ ಮಾತ್ರ
ಭಾರೀ ಪ್ರಸಿದ್ಧಿ
ಪಡೆಯುತ್ತಿದೆ.
ಸಾಮಾಜಿಕ ಮಾಧ್ಯಮಗಳು
ನಮ್ಮ ಕೈಯಲ್ಲಿ
ಇದ್ದರೂ,
ನಾವು ಅದರ
ಕೈಗೊಂಬೆಗಳಾಗುತ್ತಿದ್ದೇವೆಯೇ ಎಂಬ
ಪ್ರಶ್ನೆ ಕಾಡುತ್ತದೆ.
ಮೊನ್ನೆ ಮೊನ್ನೆ ಜರುಗಿದ
ಸರಕಾರಿ ಕೃಪಾಪೋಷಿತ ಕರಾವಳಿ ಉತ್ಸವ,
ಸಿನಿಮಾ ಗಾಯಕರ ಕೋಟಿವೆಚ್ಚದ
ಕಾರ್ಯಕ್ರಮಕ್ಕೆ ಹತ್ತೆಂಟು ಸಾವಿರ ಕುಣಿದು
ಕುಪ್ಪಳಿಸುವ ಪ್ರೇಕ್ಷಕ ವೃಂದ. ಸ್ಥಳೀಯ
ಕಲಾವಿದರ ಕಲಾ ಪ್ರಸ್ತುತಿಗೆ
ಬೆರಳೆಣಿಕೆಯ ಮಂದಿ. ಸ್ಥಳೀಯ
ಸಂಸ್ಕೃತಿಯನ್ನು ಬಿಂಬಿಸುವ ಕಲಾ
ಚಟುವಟಿಕೆ ನೆವಕ್ಕೆ ಬಳಕೆಯಾಗಿ, ಅತಿರಂಜಿತ ಕಲೆಯನ್ನು ಮತ ದ್ರುವೀಕರಣಕ್ಕಾಗಿ ಉಪಯೋಗಿಸುವ
ಜಾಣ್ಮೆಯನ್ನು ಪ್ರಭುತ್ವದ ನಡೆಯಲ್ಲಿ
ಕಾಣುವಂತಾಯಿತು.
ಈ ಪತನ ಆಕಸ್ಮಿಕವಲ್ಲ. ಅತಿಯಾದ ಪಾಶ್ಚಾತ್ಯೀಕರಣ,
ಭೋಗವಾಧದ ಜೀವನ
ಶೈಲಿ,
ಮೌಲ್ಯವಿಲ್ಲದ ಶಿಕ್ಷಣ,
ಹಣಕೇಂದ್ರಿತ ಬದುಕು
ಆರ್ಥಿಕ
ಸ್ಪರ್ಧಾತ್ಮಕ ಜೀವನಶೈಲಿ, ಪರಂಪರೆಯ
ಬಗೆಗೆ ಅಜ್ಞಾನ ಅಥವಾ
ನಿರ್ಲಕ್ಷ್ಯ,, ಇವುಗಳೆಲ್ಲ ಸೇರಿ
ನಮ್ಮ ಸಾಂಸ್ಕೃತಿಕ
ನೆಲೆಯನ್ನು ಅಲುಗಾಡಿಸುತ್ತಿವೆ.
ನಾವು
ಸಂಸ್ಕೃತಿಯನ್ನು ಜೀವಿಸುತ್ತಿದ್ದೇವೆಯೋ,
ಅಥವಾ ಕೇವಲ
ಪ್ರದರ್ಶಿಸುತ್ತಿದ್ದೇವೆಯೋ? ನಾವು ಪರಂಪರೆಯನ್ನು
ಹಳೆಯದು ಎಂದು
ತಿರಸ್ಕರಿಸಿದ್ದೇವೆ;
ಆಧುನಿಕತೆಯನ್ನು ಅರ್ಥಮಾಡಿಕೊಳ್ಳದೇ
ಅನುಕರಿಸುತ್ತಿದ್ದೇವೆ.
ಅಂದರೆ ಸ್ವಂತ
ಸಂಸ್ಕೃತಿಯ ಸತ್ವ ಮತ್ತು
ಮಹತ್ವಗಳನ್ನು ನಮ್ಮ ಅರಿವಿಗೆ ತಂದು ಕೊಳ್ಳದೇ
ಎಲ್ಲವೂ ಇದ್ದು ಏನೂ
ಇಲ್ಲದವರಾಗಿರುವ ನಮ್ಮೊಳಗೆ ತಾತ್ಕಾಲಿಕ
ವಿಸ್ಮೃತಿ ಅಂದರೆ ಮರೆವು
ವ್ಯಾಪಿಸಿದೆ.
ಸಂಸ್ಕೃತಿಯ ಘಾಸಿಗೆ
ಪರಿಹಾರ ವಿದ್ದೇ ಇದೆ.
ಮೊದಲು ಶಿಕ್ಷಣದಿಂದ
ಆರಂಭಿಸಬೇಕು.
ಅಕ್ಷರಜ್ಞಾನ ಮಾತ್ರವಲ್ಲ;
ಮೌಲ್ಯಜ್ಞಾನ ನೀಡುವ
ಶಿಕ್ಷಣ ಅಗತ್ಯ.ಮಾತೃಭಾಷೆಯನ್ನು
ಶಾಲೆಯಲ್ಲಷ್ಟೇ ಅಲ್ಲ,
ಮನೆಯಲ್ಲೂ ಜೀವಂತವಾಗಿಡಬೇಕು.
ಭಾಷೆ ಉಳಿದರೆ
ಸಂಸ್ಕೃತಿ ಉಳಿಯುತ್ತದೆ.
ಕಲೆ ಮತ್ತು
ಸಾಹಿತ್ಯವನ್ನು ಪಠ್ಯಕ್ರಮದ
ಹೊರಗಿಟ್ಟ ಅಲಂಕಾರವಾಗಿ
ಅಲ್ಲ,
ಜೀವನದ ಅಗತ್ಯ
ಅಂಗವಾಗಿ ನೋಡಬೇಕು.
ಕುಟುಂಬವನ್ನು
ಮತ್ತೆ ಸಂಸ್ಕಾರಗಳ
ಕೇಂದ್ರವಾಗಿಸಬೇಕು. ಯುವ ಪಾಲಕರಿಗೂ
ಸಂಸ್ಕೃತಿಯ ಅರಿವು ಮೂಡಿಸುವಲ್ಲಿ ಪ್ರಯತ್ನ
ಆರಂಭವಾಗಬೇಕು.
ಮಕ್ಕಳು ಮೊಬೈಲ್ಗಿಂತ
ಹಿರಿಯರ ಮಾತು
ಕೇಳುವ ಅವಕಾಶ
ಪಡೆಯಬೇಕು.
ವೈಯಕ್ತಿಕ ಹೊಣೆಗಾರಿಕೆಯಿರಬೇಕು.
ನಾನು ಮಾತನಾಡುವ
ಭಾಷೆಯಲ್ಲಿ,
ನಾನು ಪಾಲಿಸುವ
ಮೌಲ್ಯಗಳಲ್ಲಿ,ನಾನು
ಬದುಕುವ ರೀತಿಯಲ್ಲಿ
—
ಸಂಸ್ಕೃತಿ ಪ್ರತಿಫಲಿಸಬೇಕು.
ಸಂಸ್ಕೃತಿ ಭೂತಕಾಲದ
ಸ್ಮಾರಕವಲ್ಲ; ಅದು
ಭವಿಷ್ಯಕ್ಕೆ ದಾರಿ
ತೋರಿಸುವ ಬೆಳಕು.
ಪರಂಪರೆ ಮತ್ತು
ಆಧುನಿಕತೆಯ ನಡುವೆ
ಸೇತುವೆ ನಿರ್ಮಿಸಿದಾಗ
ಮಾತ್ರ ನಾವು
ಸಾಂಸ್ಕೃತಿಕ ಪತನವನ್ನು
ಪುನರುತ್ಥಾನವನ್ನಾಗಿ ಮಾಡಬಹುದು. ಸಾಂಸ್ಕೃತಿಕ
ಪತನ ಅನಿವಾರ್ಯವಲ್ಲ;
ಅದು ಮಾನವ
ನಿರ್ಮಿತ ಸಮಸ್ಯೆ.
ಆದ್ದರಿಂದ ಅದರ
ಪರಿಹಾರವೂ ಮಾನವ
ಪ್ರಯತ್ನದಿಂದಲೇ ಸಾಧ್ಯ.
ಪರಂಪರೆ ಮತ್ತು
ಆಧುನಿಕತೆಯ ನಡುವೆ
ಸಮತೋಲನ ಸಾಧಿಸಿದಾಗ
ಮಾತ್ರ ಸಾಂಸ್ಕೃತಿಕ
ಪುನರುತ್ಥಾನ ಸಾಧ್ಯ.
ಸಂಸ್ಕೃತಿಯನ್ನು ಕೇವಲ
ಭೂತಕಾಲದ ಸ್ಮರಣೆಯಾಗಿ
ಅಲ್ಲ, ಭವಿಷ್ಯದ
ಮಾರ್ಗದರ್ಶಕ ಶಕ್ತಿಯಾಗಿ
ರೂಪಿಸಬೇಕಾಗಿದೆ.
======================================================================================================================================================
.
ಸುಮನಾಂಬರ - ೨೨
ʻʻ ಗ್ರಾಮ ಮತ್ತು ನಗರ
ʼʼ
ʻʻ
ಬಸವಳಿದಿದೆ ಹಳ್ಳಿ
ಬಸಿರಾಗಿದೆ ನಗರ
ಸೃಷ್ಟಿಯಾಗಿದೆ ನಡುವೆ ನಿರ್ವಾತ ಕಂದರ.
ಇಲ್ಲಿದೆ ಮುರುಕು
ಸೂರು, ಮುದುಕರಾಗಾರ
ಅಲ್ಲಿದೆ ಅಧಿಕಾರ ಸಂಪತ್ತು, ಧಾರಾಕಾರ.ʼʼ
ಒಂದಾನೊಂದು ಕಾಲದಲ್ಲಿ
ಏಸೊಂದು ಮುದವಿತ್ತ, ಮುದಕೊಂದು
ಹದವಿತ್ತ, ಕನಸಿಗೆ ಕಾವಿತ್ತ,
ಕರುಳಲ್ಲಿ ಕಸುವಿತ್ತ. ಏನಿಲ್ಲದೆಯೂ
ಪ್ರೀತಿ ಚೆಲ್ಲುವರಿದಿತ್ತ.
ಇದು ಒಂದು ಕಾಲದ ಹಳ್ಳಿಯ
ವಾಸ್ತವ. ಎಂದಿನಿಂದಲೂ ಭಾರತೀಯ
ಸಾಮಾಜಿಕ ವ್ಯವಸ್ಥೆಯಲ್ಲಿ, ನಗರ ಮತ್ತು ಗ್ರಾಮ
ಎಂಬ ಎರಡು ಅಕ್ಷಗಳು, ಪರಸ್ಪರ ಅವಿಭಾಜ್ಯವಾಗಿದ್ದರೂ ಅವುಗಳ ಜೀವನ
ಶೈಲಿ ಮೌಲ್ಯಗಳು, ಮತ್ತು ಚಿಂತನೆಗಳಲ್ಲಿ ಸ್ಪಷ್ಟವಾದ
ವೈಶಿಷ್ಟ್ಯಗಳು ಇದ್ದೇ ಇತ್ತು. ಸಾಮಾಜಿಕ
ಸಂಬಂಧಗಳು, ಪ್ರೀತಿ ವಿರೋಧ ನಂಬಿಗೆ ಅಪನಂಬಿಕೆಗಳ
ನಡುವೆ, ಪರಸ್ಪರ ಅವಲಂಬನೆಯಿಂದ
ಒಂದರ ಪ್ರಭಾವ ಮತ್ತೊಂದರ
ಮೇಲೆ ಸದಾ ಹರಿದಾಡುತ್ತಲೇ
ಇತ್ತು.
ಪ್ರಾಚೀನ ಚರಿತ್ರೆಯನ್ನು
ಅವಲೋಕಿಸಿದರೆ, ರಾಜಧಾನಿಗೆ, ಅರಮನೆಗೆ
ಊರಂಚಿನ ಕಾಡ ಸೆರಗಿನ ಋಷ್ಯಾಶ್ರಮಗಳಿಂದ ಚಿಂತನೆಯ
ಹರಿವು ನಿರಂತರವಾಗಿತ್ತು. ರಾಜಕುಮಾರರಿಗೆ
ಶಿಕ್ಷಣ ದೊರಕುವುದು ಹಸಿರು ಆಶ್ರಮಗಳ ಒಡಲಲ್ಲಿ.
ನಗರ ಮತ್ತು ನಿಸರ್ಗಗದ
ನಡುವೆ ಸಂಬಂಧಗಳಿಗೊಂದು ಜೀವಂತಿಕೆಯಿತ್ತು.
ಬದಲಾಗುವುದೇ
ಕಾಲದ ಸಹಜ ಗುಣ. ಕಾಲ ಸಮೃದ್ದಗೊಳ್ಳುವುದೇ ಸಂಸ್ಕೃತಿಯ
ಕಲರವದಲ್ಲಿ. ಆಗ ಅಕ್ಷರವಿರಲಿಲ್ಲ. ದೇಶೀ ಚಿಂತನೆಯಿತ್ತು. ವೈಭೋಗವಿರಲಿಲ್ಲ, ನೆಮ್ಮದಿಯಿತ್ತು. ಕೀಳರಿಮೆಯಿಲ್ಲದ ಬಡತನ, ಆತ್ಮವಿಶ್ವಾಸ
ತುಂಬಿದ ಬದುಕು. ಪ್ರೀತಿ
ಜಗಳ ತಾರತಮ್ಯದ ನಡುವೆ ಬೆಸೆದ ಮುಗ್ಧ ಜೀವನ.
ಧ್ಯಾನಸ್ಥ
ಭಾರತ ವಿಚಲಿತಗೊಂಡಿದ್ದು, ಜಗತ್ತಿನ ವಿವಿಧ ಸಂಸ್ಕೃತಿಗಳ ಅಪಾರ ಆಕ್ರಮಣಗಳಿಂದ. ಅವು ಬೀರಿದ ಸಾಂಸ್ಕೃತಿಕ
ಪ್ರಭಾವಗಳಿಂದ.
ಅಲೆಗ್ಝಾಂಡರ್ ಎಂಬ ವಿದೇಶೀ ಆಕ್ರಮಣಕಾರ,
ಭಾರತದ ಕೆಲವು ಭಾಗಗಳನ್ನು ಆಕ್ರಮಿಸಿ
ಗೆದ್ದು ಬೀಗುತ್ತಿದ್ದ. ಒಂದುದಿನ ದಾರಿಯಮೇಲೆ
ಅವನ ಮೆರವಣಿಗೆ ಸಾಗುತ್ತಿತ್ತು.
ದಾರಿಯ ಪಕ್ಕದಲ್ಲಿ ಒಂದು ಮರದ
ಕೆಳಗೆ ಸನ್ಯಾಸಿಯೊಬ್ಬ ಕಣ್ಣುಮುಚ್ಚಿ ಕುಳಿತಿದ್ದ. ಅಲೆಗ್ಝಾಂಡರನಿಗೆ ಕುತೂಹಲ
ಕೆರಳಿತು. ತನ್ನ ಈ ವೈಭವದ ಮೆರವಣಿಗೆ
ಅಬ್ಬರದಲ್ಲಿ ಸಾಗುತ್ತಿದ್ದರೂ, ಈತ ಮಾತ್ರ ವಿಚಲಿತಗೊಳ್ಳದೇ ಕುತೂಹಲಿಯಾಗದೇ
ಕಣ್ಣುಮುಚ್ಚಿ ಕುಳಿತಿದ್ದಾನಲ್ಲ !! ಎಂದು
ಆಶ್ಚರ್ಯಕ್ಕೊಳಗಾದ. ಮೆಲ್ಲನೇ ಅವನಬಳಿ ಸಾಗಿ,ʻʻ
ನೀನು ಯಾರು, ಇಲ್ಲೇಕೆ ಕುಳಿತಿದ್ದೀಯ
ನಿನಗೇನು ಬೇಕು, ಹೇಳು,ʼʼ ಎಂದ. ಸನ್ಯಾಸಿ ಮೆಲ್ಲನೇ
ಕಣ್ಣುಬಿಟ್ಟು ನೀನು ಯಾರು. ನನಗೇನು ಕೊಡಬಲ್ಲೆ...?
ಎಂದು ಕೇಳಿದ.
ನಾನು
ಅರ್ಧ ಜಗತ್ತಿನ ಒಡೆಯ. ಸಾಮ್ರಾಟ,
ಚಕ್ರವರ್ತಿ. ಎಂದ.
ಓಹೋ ಹಾಗೋ, ನಾನು ಇಡೀ ಬ್ರಹ್ಮಾಂಡದ
ಒಡೆಯನ ಸೇವಕ. ನನಗೆ ಬೇಕಾದ್ದನ್ನು ಪಡೆಯುವ ಸ್ವಾತಂತ್ರ್ಯ
ನನಗಿದೆ. ನಿನ್ನಿಂದ ಏನೂ ಆಗಬೇಕಾಗಿಲ್ಲ.. ನೀನು ಅರ್ಧಜಗತ್ತಿಗೆ
ಮಾತ್ರ ಅಧಿಕಾರಿ. ಎಂದುತ್ತರಿಸಿದ
ಸನ್ಯಾಸಿ ಮತ್ತೆ ಕಣ್ಮುಚ್ಚಿ ಮೌನವಾದ. ಅಲೆಗ್ಝಾಂಡರ
ಬೆರಗಾದ. ಸಾಮ್ರಾಜ್ಯ ವಿಸ್ತರಣೆ, ಯುದ್ಧದಾಹ, ಕ್ರೌರ್ಯಗಳಿಂದ ಕಲುಷಿತ ಗೊಂಡ
ಆತನಲ್ಲಿ ವಿಚಿತ್ರ ಸಂಚಲನವುಂಟಾಯಿತು ಭಾರತೀಯ ಕುಗ್ರಾಮದ ಬಡ ಸನ್ಯಾಸಿಯ, ನಿರ್ಭಯ, ನಿರ್ಭಾವಗಳನ್ನು ಕಂಡು ದಿಗ್ಭ್ರಮೆಗೊಳಗಾದ. ಗೆದ್ದಭಾಗವನ್ನೆಲ್ಲ ತೊರೆದು, ಸೈನ್ಯದೊಂದಿಗೆ ತನ್ನ ಪ್ರದೇಶಕ್ಕೆ ಹಿಂತಿರುಗಿ ಬಿಟ್ಟ.
ಅಲೆಗ್ಝಾಂಡರ್ ಆಕ್ರಮಿಸಿದ
ಸ್ಥಳೀಯ ಸಂಸ್ಕೃತಿಯ ಸ್ವಾದಕ್ಕೆ
ಆಕರ್ಷಿತನೂ ಆದ. ಕೆಲವೇ
ಸಾವಿರ ಸೈನ್ಯ ಬಲದಲ್ಲಿ, ಗೆದ್ದರೂ
ಅರೆ ನಗ್ನ ಸನ್ಯಾಸಿಯೊಬ್ಬನ ಸಂಪರ್ಕಕ್ಕೆ ಬಂದು ಅಧಿಕಾರ, ಸಂಪತ್ತು,
ವೈಭವಗಳ ದಾಹದಿಂದ ಭ್ರಮನಿರಸನ ಗೊಂಡ.
ಆಗ ಗ್ರಾಮ ಸ್ವಾಯತ್ತವಾಗಿತ್ತು. ಬಡತನಕ್ಕೆ
ಆಧ್ಯಾತ್ಮಿಕತೆಯ ಸ್ಪರ್ಶವಿತ್ತು. ಆರ್ಥಿಕ
ವ್ಯವಹಾರ ಸ್ಥಳೀಯವಾದ ಕೊಡಕೊಳ್ಳುವಿಕೆಯ ಮಿತಿಯಲ್ಲೇ
ತೃಪ್ತವಾಗಿತ್ತು. ಜಾತಿ ಮತ ಮೇಲು ಕೀಳುಗಳಿದ್ದರೂ ಶೋಷಣೆಗಳ
ಕ್ರೌರ್ಯ ಅಪಾಯದ ಮಟ್ಟ ತಲುಪಿರಲಿಲ್ಲ, ಇದು ವಿದೇಶೀ
ವಿದ್ವಾಂಸರ ಅಭಿಪ್ರಾಯ.
ಇದು ಚರಿತ್ರೆಯೋ
ದಂತಕತೆಯೋ, ಏನೇ ಇರಲಿ. ಎಲ್ಲ ದಾಹ ಭೋಗಗಳಿಗೂ
ಒಂದು ಮಿತಿಯಂತೂ ಇದ್ದೇ ಇದೆ. ಯಾವ ತರ್ಕ,
ಕಾನೂನುಗಳು ನಿಗ್ರಹಿಸಲಾರದ ಚಟುವಟಿಕೆಗಳನ್ನು ಪ್ರಕೃತಿಯೇ
ತಹಬಂದಿಗೆ ತರುವಂತಹ ಘಟನೆಗಳನ್ನು ನಾವು ನೋಡುತ್ತಲೇ
ಇರುತ್ತೇವೆ. ಅತಿ ಜನಸಂಖ್ಯೆಯಾದಾಗ, ಮಹಾರೋಗ,
ಮಹಾಪ್ರವಾಹ, ಬರಗಾಲದಂತಹ ಪ್ರತಿರೋಧಗಳು ಉಂಟಾದ ಹಾಗೇ,
ಗಂಡು ಸಂಖ್ಯೆ ಅತಿಯಾದಾಗಲೆಲ್ಲ, ಮಹಾಯುದ್ಧಗಳು ಜರುಗುತ್ತದೆ
ಎನ್ನುತ್ತಾರೆ.
ಅತಿ ಆಸ್ತಿಕತೆ ನಾಸ್ತಿಕತೆಯ
ಹುಟ್ಟಿನ ಮೂಲ. ಅತಿಯಾದ
ಕ್ರೌರ್ಯದ ಕೊನೆ ತಾತ್ವಿಕತೆಯ
ಹುಡುಕಾಟಕ್ಕೆ ಮೂಲ. ಅದೆಷ್ಟೋ
ಬದಲಾವಣೆಗಳು ಪತನದಂತೇ ತೋರಿದರೂ,
ಮತ್ತೊಂದು ಆಶಾವಾದದ ದ್ವಾರವಾಗುವ
ಸಾಧ್ಯತೆಯೂ ಇದೆ.
ಬಲಪಂಥ ಭೃಷ್ಠಗೊಂಡಾಗಲೆಲ್ಲ ಎಡಪಂಥ ವಿಜ್ರಂಭಿಸಿದೆ. ಎಡ ಪಂಥ ಎಡವಿದಾಗ ಬಲಪಂಥ ಚಿಗುರಿಕೊಂಡಿದೆ. ಈ ಎಲ್ಲ
ಏಳು ಬೀಳುಗಳ ನಡುವೆ ಜಗತ್ತಿನ
ಬದುಕು ಸಾಗುತ್ತಲೇ ಇದೆ.
ಗಾಂಧಿಯವರ ಗ್ರಾಮಮುಖೀ
ಚಿಂತನೆ, ನೆಹರೂರವರ ನಗರ ಮತ್ತು
ಕೈಗಾರಿಕೆಗಳಿಗೆ ಸ್ಪಂದಿಸಿದ ಆಡಳಿತ,
ಭಾರತ ಮತ್ತು ಇಂಡಿಯಾಗಳನ್ನು ಸೃಷ್ಟಿಸಿ ದ್ವಂದ್ವದಲ್ಲಿ
ತೇಲತೊಡಗಿತು. ಗ್ರಾಮಗಳು ಒಂದು ಹೆಜ್ಜೆ
ಮುಂದಿಟ್ಟರೆ ದೇಶವೇ ಒಂದು ಹೆಜ್ಜೆ
ಮುಂದಿಟ್ಟಂತೆ, ಎಂಬ ಗಾಂಧಿಯವರ
ನುಡಿ,, ಜಡ ಕಾಗದದಲ್ಲೇ ಉಳಿಯಿತು.
ನಗರ ಕೇಂದ್ರಿತ ಅಭಿವೃದ್ಧಿ ಗ್ರಾಮಗಳನ್ನು ನುಚ್ಚುನೂರಾಗಿಸಿತು.
ವರ್ಷದಿಂದ ವರ್ಷಕ್ಕೆ
ಗ್ರಾಮಗಳಿಂದ ನಗರದ ದಿಕ್ಕಿಗೆ
ಪ್ರವಾಹದಂತೇ ವಲಸೆ ವೃದ್ಧಿಸುತ್ತಿದೆ. ಪ್ರತಿವರ್ಷ
ಪ್ರತಿಶತ ೨೦ ರಷ್ಟು ಜನಸಂಖ್ಯೆ ಗ್ರಾಮಗಳಿಂದ
ನಗರಕ್ಕೆ ಗುಳೆ ಹೋಗುತ್ತಿದ್ದಾರೆಂದು ಸಮೀಕ್ಷೆಗಳು
ತಿಳಿಸುತ್ತಿವೆ. ಅಕುಶಲ, ಅಶಿಕ್ಷಿತ, ಅರೆ
ಶಿಕ್ಷಿತ ಯುವಕರ ದಂಡಿಗೆ
ದಂಡೇ ನಗರಗಳಿಗೆ ಉದ್ಯೋಗಾಕಾಂಕ್ಷೆಯಿಂದ ದಾಳಿಯಿಡುತ್ತಿವೆ. ಇದರಿಂದ
. ನಗರದ ಕೊಳೆಗೇರಿಗಳ ಸಂಖ್ಯೆ
ಮಿತಿಮೀರುತ್ತಿದೆ ಎನ್ನುತ್ತದೆ
ಸಮೀಕ್ಷೆ. ದೇಶದ ಅತಿಹೆಚ್ಚು
ವಲಸಿಗರನ್ನು ಆಕರ್ಷಿಸುವ ರಾಜ್ಯಗಳಲ್ಲಿ ಕರ್ನಾಟಕ
ಮುಂಚೂಣಿಯಲ್ಲಿದೆ. ಬೆಂಗಳೂರೊಂದರಲ್ಲೇ ಶೇ. ೭೦ ರಷ್ಟು
ಜನಸಂಖೆ ವಿವಿಧ ರಾಜ್ಯ ವಿವಿಧ ಭಾಷಾ ಜನರಿಂದ ತುಂಬಿ ತುಳುಕಾಡುತ್ತಿದೆ.
ಈಗಲೂ
ಗ್ರಾಮಗಳು ತಮ್ಮ ಅಸ್ಮಿತೆಯನ್ನು ಕಾಯ್ದುಕೊಳ್ಳುತ್ತಲೇ ನಗರಗಳಿಗೆ
ವಶವಾಗುತ್ತಿವೆ. ಗ್ರಾಮ ಸಂಸ್ಕೃತಿ ಮಾನವನ
ಮೂಲಭೂತ
ಜೀವನಕ್ಕೆ ಹತ್ತಿರವಾಗಿರುವ ಸಂಸ್ಕೃತಿ. ಇದು ಪ್ರಕೃತಿ, ಭೂಮಿ,
ಕೃಷಿ,
ಸಂಪ್ರದಾಯ, ಆಚರಣೆಗಳೊಂದಿಗೆ ನೇರ
ಸಂಬಂಧ
ಹೊಂದಿದೆ. ‘ನಾವು’ ಎಂಬ ಭಾವನೆ
ಪ್ರಧಾನ.ವಾಗಿದೆ ಇಲ್ಲಿ. ಪರಸ್ಪರ ಸಹಾಯ ಗ್ರಾಮದ ಸಹಜ ಕ್ರಿಯೆ. ಕೂಲಿ, ಹಬ್ಬ, ಮದುವೆ,
ಸಾವು,
ಸಂಕಷ್ಟಗಳನ್ನೆಲ್ಲ ಸಾಮೂಹಿಕವಾಗಿ ಎದುರಿಸಲಾಗುತ್ತಿದೆ. : ಹಬ್ಬಗಳು, ಜಾತ್ರೆಗಳು, ಪೂಜೆಗಳು ಜೀವನದ
ಭಾಗವಾಗಿಯೇ ಇದೆ. : ಹಿರಿಯರಿಗೆ ಗೌರವ, ಸಂಯಮ, ಸರಳತೆಗಳು ನೈತಿಕ ಮೌಲ್ಯಗಳಾಗಿ ಉಸಿರಾಡುತ್ತಿವೆ. ಮಳೆ
ಬೆಳೆ ಋತುಚಕ್ರಗಳ ಅರಿವು, ಅಂದರೆ
ಈಗಲೂ ಪ್ರಕೃತಿಯೊಂದಿಗಿನ ಸಂಬಂಧ
ಜೀವಂತವಾಗಿವೆ. ಗ್ರಾಮವು ಕೇವಲ
ಜನವಸತಿಯಲ್ಲ; ಅದು
ಜೀವನದ ತತ್ವಶಾಸ್ತ್ರ. ಎಂಬ
ಸತ್ಯವನ್ನು ಈಗಲೂ ಕಾಣಬಹುದಾಗಿದೆ.
ಹಾಗೆಂದು ನಗರಕ್ಕೂ
ತನ್ನದೇ ಆದ ವಿಶಿಷ್ಟ ಸಂಸ್ಕೃತಿಯಿದೆ. ಚಲನೆಯಿದೆ. ಕೈಗಾರಿಕೀಕರಣ, ತಂತ್ರಜ್ಞಾನ, ಆಧುನಿಕ
ಶಿಕ್ಷಣ
ಮತ್ತು
ಉದ್ಯೋಗಾವಕಾಶಗಳೊಂದಿಗೆ ಬೆಳೆದ
ಸಂಸ್ಕೃತಿ ಅದು.
ಜನಾರಣ್ಯವಾದರೂ ನಾನು ಎಂಬುದೇ
ಇಲ್ಲಿ ಪ್ರಧಾನ ಅಸ್ತಿತ್ವ. ಗ್ರಾಮ ಎಂಬ
ಅಭಿಮಾನ ವಿದ್ದಂತೇ ಇದು ನನ್ನ ನಗರ ಎಂಬ
ಅಭಿಮಾನ ಮಾತ್ರ ಶೂನ್ಯ.
ಗ್ರಾಮಗಳಲ್ಲಿ ನಿಧಾನವೇ ಪ್ರಧಾನವಾದರೆ,
ನಗರ ವೇಗದ ಜೀವನಕ್ಕೆ
ದಾಸ. ಇಲ್ಲಿ ಸಮಯವೇ ಸಂಪತ್ತು.
ವಿವಿಧ ವೈವಿಧ್ಯಮಯ
ಜನಾಂಗಗಳು ವೈವಿಧ್ಯಮಯ ವೃತ್ತಿ, ಪ್ರವೃತ್ತಿಗಳು ಆಹಾರ
ಭಾಷೆ ನಡೆ ನುಡಿಗಳಲ್ಲಿ ಭಿನ್ನತೆ, ನಗರಗಳ
ವೈಶಿಷ್ಟ್ಯ. ಜೀವನದ ಬಹುರೂಪಗಳನ್ನು ಪ್ರದರ್ಶಿಸುವ ನಗರಗಳು
ಸ್ವಾತಂತ್ರ್ಯ ಮತ್ತು ಸಮಾನತೆಗೆ ತುಡಿಯುತ್ತವೆ.
ನಗರವು ಸಾಧನೆಗೊಂದು ಅವಕಾಶವಾದರೆ, ಸ್ಪರ್ಧೆಯ
ಸಂಕೇತವೂ ಹೌದು.
ಗ್ರಾಮಗಳು ಪ್ರಾಕೃತಿಕ
ಸೃಷ್ಟಿಯಾಗಿ ತೋರಿದರೆ, ನಗರಗಳೆಲ್ಲಾ
ಕೃತಕ ರಚನೆಗಳಾಗಿ ತೋರುತ್ತವೆ.
ನಗರದ ಪ್ರತಿಯೊಬ್ಬನ ಧ್ಯಾನವೂ
ತನ್ನ ಮೂಲವಾದ ಯಾವುದೋ ಒಂದು ಹಳ್ಳಿಯಲ್ಲೇ ನೆಲೆಸಿರುತ್ತದೆ.
ನಗರ ಮತ್ತು ಗ್ರಾಮಗಳ ಸಂಸ್ಕೃತಿಗಳು
ಪರಸ್ಪರ ವಿರೋಧಿಗಳಂತೇ ಕಂಡರೂ
ವಾಸ್ತವದಲ್ಲಿ ಪರಸ್ಪರ ಅವಲಂಬಿತವಾಗಿಯೇ
ಇವೆ.
ಶಿಕ್ಷಣ, ತಂತ್ರಜ್ಞಾನ ವೈದ್ಯಕೀಯ,
ಮತ್ತು ಸಂಪರ್ಕವ್ಯವಸ್ಥೆಗೆ ನಗರ ಸಂಪರ್ಕ ಅನಿವಾರ್ಯ.
ಗ್ರಾಮದಿಂದ ಜನವಲಸೆ ನಗರದ ದಿಕ್ಕಿಗಾದರೆ, ಹೊಸ
ಆಲೋಚನೆಗಳು, ನಗರದಿಂದ ಗ್ರಾಮಕ್ಕೆ ಆಗಮಿಸುತ್ತದೆ.
ಹಬ್ಬಗಳು ಭಾಷೆಗಳು,
ಸಂಪ್ರದಾಯಗಳೆಲ್ಲ ಗ್ರಾಮಗಳ ಸೃಷ್ಟಿಯಾದರೂ
ನಗರಗಳಲ್ಲಿ ಅದು ವೈಭವವನ್ನು
ಪಡೆಯುತ್ತವೆ. ಅದೆಷ್ಟೇ ವೈರುಧ್ಯವಿರಲಿ,
ಗ್ರಾಮ ಮತ್ತು ನಗರಗಳಲ್ಲಿ ದೇಹ
ಮತ್ತು ಉಸಿರಿನ ಸಂಬಂಧದಂತೇ ಅಂತರಂಗದಲ್ಲಿ ಜೀವಂತವಾಗಿಯೇ ಇರುತ್ತವೆ.
ವೈರುಧ್ಯಗಳಿಲ್ಲವೆಂದಲ್ಲ. ಗ್ರಾಮದ
ಜೀವನಶೈಲಿ, ನಿಧಾನವಾದರೆ, ನಗರಗಳ ಜೀವನ
ವೇಗ, ಮತ್ತು ಯಾಂತ್ರಿಕ. ಹಳ್ಳಿಯ
ಸಂಬಂಧಗಳಲ್ಲಿ ಆತ್ಮೀಯತೆ ನೆಲೆಸಿರುತ್ತದೆ. ಬಹುಕಾಲ
ಬಾಳುತ್ತದೆ. ನಗರದಲ್ಲಿ ಅದು ಸೀಮಿತ, ಮತ್ತು ಅಗತ್ಯಕ್ಕೆ ತಕ್ಕವಾಗಿರುತ್ತವೆ. ಗ್ರಾಮಗಳು
ತಮ್ಮ ಪರಂಪರೆಗೆ
ನಿಷ್ಠವಾಗಿದ್ದರೆ, ನಗರ ಆಧುನಿಕತೆಯ
ಸ್ಪರ್ಶದಲ್ಲಿ ಪರಂಪರೆಯನ್ನು
ತೆಳುವಾಗಿಸುತ್ತವೆ. ರಂಜನೀಯವಾಗಿಸುತ್ತದೆ.
ಇಲ್ಲಿ ಕೃಷಿಆಧಾರಿತ ಚಟುವಟಿಕೆಯಾದರೆ, ಅಲ್ಲಿ ಸೇವಾ ವಲಯ, ಮತ್ತು ಕೈಗಾರಿಕೆಗಳಲ್ಲಿ
ತೊಡಗಿಕೊಳ್ಳುತ್ತದೆ. ಹೆಚ್ಚಿನ ಪ್ರಕ್ರಿಯೆಗಳು
ಸಮೂಹಾಧಾರಿತವಾಗಿ ಗ್ರಾಮಗಳಲ್ಲಿ
ಜರುಗಿದರೆ, ನಗರಗಳಲ್ಲಿ ವೈಯಕ್ತಿಕತೆಯನ್ನು ಅವಲಂಬಿಸಿರುತ್ತದೆ.
ಗ್ರಾಮಕ್ಕೆ ನಗರವೊಂದು ನಿಗೂಢತೆಯ
ಮೊತ್ತವಾಗಿ ತೋರುತ್ತದೆ. ಶೀಘ್ರ
ಬದಲಾವಣೆಯ
ಸಂಕೇತವೆಂದೆನ್ನಿಸುತ್ತದೆ.
ಹಾಗೆಯೇ ನಗರಕ್ಕೆ ಗ್ರಾಮ ಜಡವಾಗಿ,
ಹಳೆಯದಾಗಿ ಕಾಣುತ್ತದೆ.
ಭಾರತ ಈಗಲೂ ಹಳ್ಳಿಗಳ
ದೇಶವೇ. ಕೃಷಿಪ್ರಧಾನತೆಯೇ ಇಲ್ಲಿ
ಮುಖ್ಯ. ನಗರ ಮತ್ತು
ಗ್ರಾಮಗಳು ಪರಸ್ಪರ ವಿರೋಧಿಗಳಲ್ಲ.
ಗ್ರಾಮಸಂಸ್ಕೃತಿಯ ಒಡಲಲ್ಲಿ ಈಗಲೂ
ಜೀವಂತವಾಗಿರುವ ಮಾನವೀಯತೆ, ನೈತಿಕತೆ,
ಮನುಷ್ಯ ಬಂಧುತ್ವ ನಗರಕ್ಕೆ
ಆದರ್ಶವಾಗಬೇಕು. ಸಮನ್ವಯತೆ ಉಂಟಾಗಬೇಕು.
ಎರಡೂ ಸಂಸ್ಕೃತಿಗಳ ಧನಾತ್ಮಕ
ಅಂಶಗಳು ಒಂದಾಗಬೇಕು. ಗ್ರಾಮಗಳ
ಆಲಸ್ಯ, ಜಡತೆಗಳು ದೂರವಾಗಿ,
ಚಲನಶೀಲತೆ ಸೃಷ್ಟಿಯಾಗಬೇಕು.
ನಗರ
ಸಂಸ್ಕೃತಿಯ ಜ್ಞಾನ, ವಿಜ್ಞಾನ, ಮತ್ತು ತಂತ್ರಜ್ಞಾನ ಗ್ರಾಮಗಳಿಗೆ
ದೊರಕಬೇಕು.
ಕಿರು
ಕೈಗಾರಿಕೆಗಳು, ಆಧುನಿಕ ಕೃಷಿತಂತ್ರ,
ಗ್ರಾಮಗಳಿಗೆ ನವ ಚೈತನ್ಯ ನೀಡೀತು.
ವಿಶ್ವದಲ್ಲೇ ಗ್ರಾಮದ
ನಗರ ಪಲಾಯನವನ್ನು ನಿಗ್ರಹಿಸಿದ ಕೀರ್ತಿ
ಚೈನಾದೇಶಕ್ಕೆ ಸಲ್ಲುತ್ತದೆ. ಕೃಷಿಯನ್ನೇ
ಸವಾಲಾಗಿ ಸ್ವೀಕರಿಸುತ್ತೇನೆಂದು ಮುಂದೆ
ಬರುವ ಸುಶಕ್ಷಿತ ಯುವಕರಿಗೆ
ಅಲ್ಲಿನ ಸರಕಾರ, ಸೂಕ್ತ
ಸೌಲಭ್ಯಗಳನ್ನು ಒದಗಿಸಿ, ಸರಕಾರಿ
ಜಮೀನನ್ನು ನೀಡುತ್ತದೆ. ಈಗಾಗಲೇ
ಸಾವಿರಾರು ಯುವಕರು ಯಶಸ್ವೀಯಾಗಿ
ಆಧುನಿಕ ಕೃಷಿಯನ್ನು ಸ್ವೀಕರಿಸಿದ್ದಾರೆ.
ಅವರ ಯಶಸ್ಸು ಮೂಲ
ಕೃಷಿಕರನ್ನೂ ಪ್ರಭಾವಿಸುತ್ತಿದೆ.
ಗ್ರಾ,ಮಾಂತರಗಳಿಗೆ, ರಸ್ತೆ, ವಿದ್ಯುನ್ಮಾನ
ಸೌಲಭ್ಯ, ವ್ಯವಸ್ಥಿತ ತರಬೇತಿ,
ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು
ಸರಕಾರ ಪ್ರಾಮಾಣಿಕವಾಗಿ ಸೃಷ್ಟಿಸಿದರೆ,
ನಮ್ಮ ದೇಶದ ಚಿತ್ರಣವೂ ಆಶಾದಾಯಕವಾಗಿ
ಬದಲಾಗಬಹುದಾಗಿದೆ. ನಗರಗಳಲ್ಲಿಯ ಜನಸಂಖ್ಯಾ
ಸ್ಫೋಟಕ್ಕೂ ಕಡಿವಾಣ ತೊಡಿಸಿದಂತಾಗುತ್ತದೆ.
ನಿಜಕ್ಕೂ ಭಾರತವನ್ನು ಆಳವಾಗಿ
ಅರಿತ ಏಕೈಕ ವ್ಯಕ್ತಿಯಾಗಿ
ನಮಗೆ ಮಹಾತ್ಮಾ ಗಾಂಧಿಯವರೊಬ್ಬರೇ ಗೋಚರಿಸುತ್ತಾರೆ. ನಮ್ಮ ದೇಶದ
ಕೋಟಿ ಕೋಟಿ ಹೆಕ್ಟೇರ್
ಫಲವತ್ತಾದ ಕೃಷಿಭೂಮಿ, ಯಥೇಚ್ಧ
ನೀರಿನ ಸೌಲಭ್ಯವನ್ನು ಕಂಡ
ಇಸ್ರೇಲ್ ದೇಶದ ಕೃಷಿತಂತ್ರಜ್ಞಾನಿಯೊಬ್ಬರು, ʻʻ ವ್ಯವಸ್ಥಿತವಾಗಿ ಭೂಮಿ
ಮತ್ತು ನೀರನ್ನು ಬಳಸಿಕೊಂಡರೆ, ಆಧುನಿಕ
ಕೃಷಿತಂತ್ರಜ್ಞಾನವನ್ನು
ಅನ್ವಯಿಸಿಕೊಂಡರೆ, ಭಾರತವೊಂದೇ
ಇಡೀ ಜಗತ್ತಿಗೆ ಆಹಾರವನ್ನೊದಗಿಸಲು ಸಾಧ್ಯವಾಗುತ್ತದೆʼʼ ಎಂದು
ಉದ್ಗರಿಸಿದ್ದು, ನಮ್ಮ ಕಣ್ಣು ತೆರೆಸಬೇಕು.
ಸುಶಿಕ್ಷಿತರಲ್ಲಿಯ ಅತಿಯಾದ ನಗರವ್ಯಾಮೋಹ,
ಸ್ವಯಮ್ ಉದ್ಯೋಗ ಕೈಗೊಳ್ಳುವಲ್ಲಿ
ಹಿಂಜರಿಕೆ, ಹೊಸಕಾಲಕ್ಕೆ, ಹೊಸ
ಚಿಂತನೆಯನ್ನು ಸವಾಲಾಗಿ ಸ್ವೀಕರಿಸುವ
ಮನೋಭಾವದ ಕೊರತೆ, ನಮ್ಮನ್ನು
ಇನ್ನೂ ಶತಮಾನಗಳ ಹಿಂದೆಯೇ
ನೂಕುತ್ತಿದೆ.
ಚಿಂತನಶೀಲ
ಸಮಾಜ ವಿಜ್ಞಾನಿ, ಎಂ.ಎನ್. ಶ್ರೀನಿವಾಸ್ ಅವರು ಈ ಸಂಘರ್ಷವನ್ನು
“ಸಂಸ್ಕೃತೀಕರಣ ಮತ್ತು ಪಶ್ಚಿಮೀಕರಣದ ಒತ್ತಡ” ಎಂದು ವಿವರಿಸುತ್ತಾರೆ (Srinivas,
1966).ಅವರ ಪ್ರಕಾರ, ಗ್ರಾಮ ಮತ್ತು ನಗರಗಳು ಕೇವಲ ಭೌಗೋಳಿಕ ಘಟಕಗಳಲ್ಲ; ಅವು ವಿಭಿನ್ನ ಮೌಲ್ಯ ವ್ಯವಸ್ಥೆಗಳ ಪ್ರತಿನಿಧಿಗಳು.
ಇನ್ನೊಬ್ವ
ಜನಾಂಗೀಯ ಅಧ್ಯಯನಿ, ಲೂಯಿಸ್
ವರ್ತ್( ೧೯೩೮) ನಗರ ಸಂಸ್ಕೃತಿ ಕೈಗಾರಿಕೀಕರಣ
ಮತ್ತು, ಆಧುನಿಕ ಆರ್ಥಿಕ ವ್ಯವಸ್ಥೆಯಿಂದ
ರೂಪುಗೊಂಡಿದೆ. ಅದು ವೈಯಕ್ತಿಕತೆ
ಮತ್ತು ಅನಾಮಿಕತೆಯ ನೆಲೆಯಲ್ಲಿ
ಸೃಷ್ಟಿಯಾದ ಸಂಸ್ಕೃತಿʼʼ ಎನ್ನುತ್ತಾರೆ.
ರಾಧಾಕಮಲ್ ಮುಖರ್ಜಿ,
ಗ್ರಾಮಗಳ ಬಗೆಗೆ “ಸಾಮಾಜಿಕ
ಸಂಬಂಧಗಳ ಜೀವಂತ ಪ್ರಯೋಗಾಲಯ” ಎಂದು ವರ್ಣಿಸುತ್ತಾರೆ (Mukerjee,
1957). ಗ್ರಾಮ ನಗರಗಳು
ವಿರೋಧಿಗಳಲ್ಲ. ಪರಸ್ಪರ ಪೂರಕವಾಗುವಂತಹವು. ಗ್ರಾಮದ
ಮಾನವ ಸಂಭಂಧೀ ಗುಣ, ನಗರದ ಕ್ರಿಯಾಶೀಲತೆ
ಸೇರಬೇಕು. ದೇಶ ಸಾರವತ್ತಾಗುತ್ತದೆʼʼ ಎಂದು
ನುಡಿಯುತ್ತಾರೆ.
ಸಮಾಜ ಶಾಸ್ತ್ರಜ್ಞ
ಪಿಟಿರಿಂ ಸೋರೋಕಿನ್ ಅವರ
ಪ್ರಕಾರ,
“ಗ್ರಾಮ
ಮತ್ತು
ನಗರಗಳು
ಒಂದೇ
ಸಾಮಾಜಿಕ
ನಿರಂತರತೆಯ
ಎರಡು
ಅಂಚುಗಳು”
(Sorokin & Zimmerman, 1929).
ನಗರದ ಕೈಗಾರಿಕೆಗಳು
ಗ್ರಾಮೀಣ ಕಚ್ಚಾ ವಸ್ತುಗಳ ಮೇಲೆ ಅವಲಂಬಿತವಾಗುವುದು ಅನಿವಾರ್ಯ. ಗ್ರಾಮೀಣ ಸಮಾಜವು
ನಗರ ಮಾರುಕಟ್ಟಯನ್ನೇ ನಂಬಿಕೊಂಡಿದೆ.
ಇದು ವ್ಯಾವಹಾರಿಕ ಸಂಬಂಧವಾಯಿತು.
ಆದರೆ ಭಾವನಾತ್ಮಕವಾಗಿ ಸಮೀಪಿಸಲು, ಗ್ರಾಮಗಳು ತಮ್ಮ ಹಿಂಜರಿಕೆಯನ್ನು ಬಿಟ್ಟು ಮುಂದೆ
ಸಾಗಬೇಕು. ನಗರ ತನ್ನ ಅಹಮಿಕೆ, ಮೇಲರಿಮೆಗಳಿಂದ ಮುಕ್ತಗೊಂಡು
ಗ್ರಾಮಗಳಿಗೆ ಪ್ರೀತಿಯ ಉಡುಗೊರೆ ನೀಡಬೇಕು.
ಆರ್ಥಿಕ ಬಲವಾಗಬೇಕು. ಶಿಕ್ಷಣ
ಆರೋಗ್ಯ ರಸ್ತೆ ಮುಂತಾದ
ಮೂಲಭೂತ ಸೌಲಭ್ಯಗಳನ್ನು ಉದಾರವಾಗಿ ನೀಡುವಂತಾಗಬೇಕು.
ಅಭಿವೃದ್ಧಿಯ
ಕನಸು ಕೇವಲ ಸರಕಾರವನ್ನು
ನಂಬಿಕುಳಿತರೆ ನನಸಾಗದು. ನಗರಗಳ
ಸಾರ್ವಜನಿಕ ಸಂಪನ್ಮೂಲ ಗ್ರಾಮಕ್ಕೆ ಹರಿದು ಬರಬೇಕು. ಏಕೆಂದರೆ…….
ಪ್ರಭುತ್ವಕ್ಕೆ
ರಾಜಕಾರಣದ ರೋಗ ಆವರಿಸಿದೆ. ವೈಚಾರಿಕತೆಯ
ಶೂನ್ಯ, ಮುಂದಾಲೋಚನೆಯ ಕೊರತೆ , ಆಡಳಿತೆಯನ್ನು ಬಾಧಿಸುತ್ತಿದೆ. ಇನ್ನೂ
ಪಾಶ್ಚಾತ್ಯಮಾದರಿಯ ಅಭಿವೃದ್ಧಿಯೇ ಆದರ್ಶವಾಗಿ
ಉಳಿದಿದೆ. ಈ ಎಲ್ಲ
ದೋಷ, ದೌರ್ಬಲ್ಯಗಳು ನಮ್ಮ
ದೇಶವನ್ನು ಕಾಡುತ್ತಿದೆ. ಕೋಟಿ
ಕೋಟಿ ಯುವ ಬಾಹುಗಳನ್ನು
ರಚನಾತ್ಮಕವಾಗಿ ಬಳಸಿಕೊಳ್ಳುವ, ಧ್ಯೇಯ
ಮತ್ತು ಇಚ್ಛಾಶಕ್ತಿ ಇಲ್ಲದ ಪ್ರಭುತ್ವವನ್ನು ನೆಚ್ಚಿಕೊಂಡರೆ,
ಇನ್ನೂ ಶತಮಾನಕಾಲ ನಾವು
ಜಗತ್ತಿನೆದುರು ತಲೆಯೆತ್ತಿ ನಡೆದಾಡಲು
ಸಾಧ್ಯವಾಗಲಾರದು.
ಕ್ಯೂಬಾದ ನಗರ ಕೃಷಿ, ಚೈನಾ
ಗ್ರಾಮ ಕೈಗಾರಿಕೆ, ಇಸ್ರೇಲಿನ ಸಮಗ್ರ
ಕೃಷಿ ನಮ್ಮನ್ನು ಎಚ್ಚರಿಸಬೇಕಿದೆ. ಐದೂವರೆ
ಲಕ್ಷ ಹಳ್ಳಿಗಳ ಜಾಗ್ರತಿಯಲ್ಲಿ, ನಮ್ಮ ಭವಿಷ್ಯ
ಅಡಗಿದೆ.
==========================================================
ಸುಮನಾಂಬರ -೨೩ ʻʻ ಸಂಗೀತʼʼ
ಸಂಸ್ಕೃತಿಯ ಆತ್ಮಗೀತ.
ಆ ತನೀತನವಂತ ಯಾತನದ ಯಾತನೆಯ
ಯಾತ ಕಿರುಗುಟ್ಟೋದು ನಿಂದ್ಹಾಂಗ |
ಆನೀನ ನುಡಿನುಂಗಿ ತಾನೀನ ತಾನಾಗಿ
ತನ್ನಂತೆ ತನನನ ಬಂದ್ಹಾಂಗ
|| ( ದ.ರಾ. ಬೇಂದ್ರೆ )
ಸಂಗೀತ ಎಂದರೇನೆ
ಮೈ ನವಿರೇಳಿಸುವ ಸಂಗತಿ. ಪ್ರಕೃತಿ
ಮೌನಿಯಲ್ಲ, ಸದಾ ವಿವಿಧ ನಾದಗಳಿಂದ
ಮೈದುಂಬಿಕೊಂಡಿರುವ ಒಂದು ವಿಸ್ಮಯದ
ಜಗತ್ತು ಅದು. ಸ್ಥಬ್ಧ ಜಗತ್ತನ್ನು ಊಹಿಸಲೂ
ಸಾಧ್ಯವಾಗದು. ಗಾಳಿಗೆ ನೀರಿಗೆ ನದಿಗೆ ಸಾಗರಕ್ಕೆ,
ಮಳೆಗೆ ಮೋಡಕ್ಕೆ, ಕಾನನಕ್ಕೆ ಜೀವಸಂಕುಲಕ್ಕೆ
ಅದರದರದ್ದೇ ಲಯವಿದೆ. ನಾದವಿದೆ.
ಸರ್ವಂ ನಾದಮಯಂ ಜಗತ್.
ಆದರೆ ಆ ಲಯದ,
ಆ ನಾದದ ಸೂಕ್ಷ್ಮ ಧ್ವನಿಯನ್ನು ಕೇಳುವ ಆಸ್ವಾದಿಸುವ
ಮನಸ್ಸು ಮಾತ್ರ ಬದುಕಿನ ಸೂಕ್ಷ್ಮಗಳನ್ನು
ಅರಿತೀತು. ಜೀವನದ ನಿಜವಾದ
ಅರ್ಥವನ್ನು ಶೋಧಿಸೀತು. ಹಾಗೆಂದು
ಎಲ್ಲ ಲಲಿತ ಕಲೆಗಳ ಮೂಲಧ್ಯೇಯವೂ ಮಾನವ ಬದುಕಿನ ನಿಜವಾದ
ತಾತ್ವಿಕ ಶೋಧನೆಯೇ ಆಗಿದೆ.
ಪ್ರಕೃತಿ ಜೀವಿಗಳಿಗೆ ನೀಡಿದ ಚೈತನ್ಯದಾಯಕ
ವರವೇ ಸಂಗೀತ. ಶೃತಿ ಲಯ
ವಿಲ್ಲದ ಒಂದು ಕ್ಷಣವೂ
ಪ್ರಕೃತಿಯಲ್ಲಿಲ್ಲ. ತಾಳ ಭೌತಿಕ ಶರೀರವಾದರೆ
ರಾಗ ಅದರ ಆತ್ಮ. ʻʻ ಸ
ರಿʼʼ ಅಂದರೆ ದೋಣಿ. ʻʻಗ
ಮʼʼ ಅಂದರೆ ಚಲಿಸು ಎಂದು ಅರ್ಥೈಸುವುದಿದೆ. ಘೋರ ಭವಸಾಗರವನ್ನುತ್ತರಿಸಲು ಜೀವನದ ದೋಣಿ
ಸುರಕ್ಷಿತವಾಗಿ ಚಲಿಸಬೇಕು. ಎದುರಾಗುವ, ಬಿರುಗಾಳಿ ಚಂಡಮಾರುತ
ಗಳ ಏರಿಳಿತಗಳೊಂದಿಗೆ ಸೆಣಸಾಡುತ್ತ ಧೃಢವಾದ ನೆಲೆಗೆ ಸೇರಲು, ಸಂಗೀತ
ಜೀವಧಾತುವಾಗಿ ಸಹಕರಿಸುತ್ತದೆ.
ನಮ್ಮ ದೇಹವೂ ಸಹ ಪ್ರಕೃತಿಯ ಒಂದು ಸಂಗೀತದ
ಉಪಕರಣವೇ ಆಗಿದೆ. ರಕ್ತದ ಚಲನೆ,
ಹೃದಯದ ಬಡಿತ, ನಿರ್ದಿಷ್ಠ ಲಯದಲ್ಲಿದ್ದರೇನೆ ಸುರಕ್ಷೆ.
ನಮ್ವ ನುಡಿವಳಿ, ನಡಾವಳಿಗೂ ಲಯವೇ ಸೌಂದರ್ಯ.
ವರಕವಿ ಬೇಂದ್ರೆ
ತಮ್ಮ ಲೇಖನವೊಂದರಲ್ಲಿ ನಾದದ ಬಗೆಗೆ ಪ್ರಸ್ಥಾಪಿಸುತ್ತಾರೆ. ನಾ... ಎಂದರೆ
ಪ್ರಾಣವಾಯು. ದ.... ಎಂದರೆ ಪ್ರಾಣಾಗ್ನಿ.
ಅವೆರಡೂ ಸಂಧಿಸಿದಾಗ ಆಗುವ ಸ್ಫೋಟವೇ ನಾದ. ಅದೇ
ಸೃಷ್ಟಿ. ಅದೇ ಪ್ರಕೃತಿ. ಇತ್ತೀಚಿನ ಬಿಗ್ ಬ್ಯಾಂಗ್
ಥಿಯರಿಯೂ ಸಹ, ಈ ಜಗತ್ತು ಒಂದು ಸ್ಫೋಟದ
ಮೂಲಕ ಸೃಷ್ಟಿಯಾಯಿತು ಎಂಬುದನ್ನು
ಸಾಬೀತು ಗೊಳಿಸಿದೆ. ನಾದದ ಮೂಲಕ ಸೃಷ್ಟಿಯಾದ ಈ ಜಗತ್ತಿನ ಎಲ್ಲ ಜೀವಿಗಳು, ತಿಳಿದೋ ತಿಳಿಯದೆಯೋ
ನಾದಕ್ಕೆ ಸ್ಪಂದಿಸುತ್ತವೆ. ಅತ್ಯಂತ
ಪುರಾತನ ತಾತ್ವಿಕ ಗ್ರಂಥವಾದ
ವೇದ, ಮೂಲಭೂತವಾಗಿ ಸ್ವರವನ್ನೇ
ಅವಲಂಬಿಸಿದೆ. ಭಾರತೀಯ ಸಂಗೀತವೂ
ವೇದದಿಂದಲೇ ಜನ್ಮಿಸಿತು ಎಂಬ ನಂಬುಗೆ ನಮ್ಮದು.
ಸಂಗೀತ ಕೇವಲ ಸಂಗೀತಗಾರನ ಸ್ವತ್ತಲ್ಲ.
ಸಹೃದಯನ ಸ್ವತ್ತೂ ಹೌದು. ಕಲಾವಿದನ ಪ್ರಸ್ತುತಿ
ಏಕಕಾಲದಲ್ಲಿ, ಕಲಾವಿದನನ್ನು ತಣಿಸುತ್ತ,
ಕೇಳುಗನ ಹೃದಯದಾಳಕ್ಕೂ ಪ್ರವೇಶಿಸುತ್ತದೆ. ಬುದ್ಧಿ ಭಾವಗಳನ್ನು ಪ್ರಚೋದಿಸುತ್ತದೆ. ಅರಿವು ಭಾವನೆ ವರ್ತನೆಗಳಮೇಲೆ
ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಮನೋದೈಹಿಕ
ಖಾಯಿಲೆಗಳು ಸಂಗೀತ ಚಿಕಿತ್ಸೆಯ ಮೂಲಕ ಗುಣ
ಕಾಣುವುದನ್ನು, ಚಿಕಿತ್ಸಕರು ಕಂಡುಕೊಂಡಿದ್ದಾರೆ.
ಲಲಿತ ಕಲೆಗಳು
ಮನುಷ್ಯರನ್ನು ಮತ್ತಷ್ಟು ಮಾನವೀಯತೆಯ
ದಿಕ್ಕಿಗೆ ಕೊಂಡೊಯ್ಯುತ್ತವೆ ಎಂಬುದಕ್ಕೆ
ವಿದೇಶದ ಸಮೀಕ್ಷೆಯೊಂದು ಸಾಕ್ಷಿನುಡಿಯುತ್ತದೆ. ಸಾಮಾನ್ಯ
ಜನರಲ್ಲಿ ಇರಬಹುದಾದ ಮೋಸ ವಂಚನೆ ಕಪಟ ಅಪರಾಧ ಪ್ರವೃತ್ತಿಯ
ಶೇಕಡಾವಾರು ಪ್ರಮಾಣಕ್ಕಿಂತ, ಕಲಾವಿದ ಮತ್ತು ಕಲೆಯ
ಆಸ್ವಾದಕರಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ, ನೈತಿಕ ಗುಣಗಳು
ಜಾಗ್ರತವಾಗಿರುತ್ತವೆ, ಎಂಬ ಸತ್ಯವನ್ನು
ಆ ಸಮೀಕ್ಷೆಯಲ್ಲಿ ಕಂಡುಕೊಂಡಿದ್ದಾರೆ. ಅಂದರೆ
ಕಲೆ ಕೇವಲ ರಂಜನೆಯನ್ನು
ಒದಗಿಸುವುದೊಂದೇ ಅಲ್ಲ, ನಮ್ಮ ಅಂತರಂಗದ
ಅಮಾನವೀಯ ಗುಣಗಳನ್ನು ದೌರ್ಬಲ್ಯಗಳನ್ನು ನಾಶಪಡಿಸುತ್ತದೆ, ಎಂಬುದು ಸಿದ್ಧಗೊಂಡಂತಾಯಿತು.
ಮಾನವ ಸಂಸ್ಕೃತಿ ಬನಿಗೊಳ್ಳುವುದು
ಹರಳುಗಟ್ಟುವುದು ಕಲೆಯ ಒಡಲಿನಲ್ಲಿ. ಒಂದು
ಸಮುದಾಯದ ಅಸ್ಮಿತೆ ನೆಲೆಗೊಂಡಿರುವುದೇ ಕಲಾತ್ಮಕ
ಚಟುವಟಿಕೆಗಳಲ್ಲಿ. ಯಾವ ಜನಾಂಗ ಕಲೆ ಸಾಹಿತ್ಯ ಸಂಸ್ಕೃತಿ ಮತ್ತು ವಿಜ್ಞಾನಕ್ಕೆ ಮಹತ್ವಕೊಡುವುದೋ ಅದು ಶ್ರೇಷ್ಠಾತಿ ಶ್ರೇಷ್ಟ ಜನಾಂಗ
ಎನ್ನಬಹುದಾಗಿದೆ. ನಮ್ಮ ಇತಿಹಾಸದ ಸಹಸ್ರಾರು
ರಾಜರುಗಳಲ್ಲಿ ಕಲಾಚಟುವಟಿಕೆಯನ್ನು ಪ್ರೀತಿಸಿ, ಪ್ರೋತ್ಸಾಹಿಸಿರುವ ಅನೇಕ ಅರಸುಗಳು ಕಾಣಸಿಗುತ್ತಾರೆ. ಅವರ ಆಡಳಿತವೂ ಜನಪರತೆ
ಮಾನವೀಯತೆಯಿಂದ ಕೂಡಿತ್ತು ಎಂಬ ವಿವರಗಳು
ದೊರಕುತ್ತವೆ. ಕೃಷ್ಣದೇವರಾಯ, ಅಕ್ಬರ್,
ನಮ್ಮ ಮೈಸೂರ ಅರಸುಗಳು, ಮುಂತಾದವರು,
ಸಂಗೀತ ನೃತ್ಯಗಳಿಗೆ ನೀಡಿದ ಕೊಡುಗೆ
ಸದಾ ಸ್ಮರಣೀಯ.
ಹಿಂದೂಸ್ಥಾನೀ ಸಂಗೀತದ
ಸಾಮ್ರಾಟನಾಗಿ ಮಿಂಚಿದ್ದ, ಈಗಲೂ ಆದರಣೀಯ ಸ್ಥಾನವನ್ನಲಂಕರಿಸಿರುವ ʻʻತಾನಸೇನ ʼʼ
ಅಕಬರ ಆಸ್ಥಾನದ ಮಹಾನ್ ಸಂಗೀತಗಾರನಾಗಿದ್ದ. ತಾನಸೇನ್ ಅಕ್ಬರ ಬಾದಶಹನಿಗೆ ಸಂಗೀತದ
ಹುಚ್ಚನ್ನೇ ಹಿಡಿಸಿದ್ದ ಎಂಬುದು
ಸರ್ವ ವಿದಿತ. ತಾನಸೇನ ಹಾಡತೊಡಗಿದರೆ, ಇಡೀ ಸಭೆ ಮೈ ಮರೆಯುತ್ತಿತ್ತು. ಆಸ್ಥಾನದ
ನರ್ತಕಿಯರು ಉತ್ಸಾಹ ತಡೆಯಲಾಗದೇ
ಬಂದು ಅಪ್ಪಿಕೊಳ್ಳುತ್ತಿದ್ದರು. ಆತನ ಸಂಗೀತ ಕೇಳಲು ಜನ ತುದಿಗಾಲಲ್ಲಿ
ನಿಂತಿರುತಿದ್ದರು. ಅಕ್ಬರನಿಗಿಂತಲೂ ತಾನಸೇನ
ರಾಜ್ಯದಲ್ಲಿ ಜನಪ್ರಿಯನಾಗಿದ್ದ. ಇದನ್ನು ಸಹಿಸದ
ಅಕಬರನ ಮಗ ಸಲೀಮ ತಾನಸೇನನಿಗೆ ವಿಷಪ್ರಾಶನ
ಮಾಡಿಸಲೂ ಹೇಸಲಿಲ್ಲ. ಆದರೂ ತಾನಸೇನ್ ಬದುಕಿದ.
ಸುಪ್ರಸಿದ್ಧ ಲೇಖಕ ದಿ.
ಶಂಕರ ಮುಖಾಶಿ ಪುಣೇಕರ ತಮ್ಮ ಬಿಲಾಸಖಾನ್ ಎಂಬ ಲೇಖನವೊಂದರಲ್ಲಿ, ತಾನಸೇನರ
ಸಮಗ್ರ ಜೀವನ ವೃತ್ತಾಂತ ವನ್ನು, ಅದ್ಭುತವಾಗಿ
ಚಿತ್ರಿಸಿದ್ದಾರೆ. ಲೇಖನದಲ್ಲಿಯ ಒಂದು ಘಟನೆಯನ್ನು ಉದಹರಿಸಲೇ
ಬೇಕಾಗಿದೆ.
ಸುಲ್ತಾನನ ಮಗ ಸಲೀಮನ ಮದುವೆಯ
ಅದ್ದೂರಿ ತಯಾರಿ ನಡೆಯುತ್ತಿತ್ತು. ಮದುವೆಯ
ಹಿಂದಿನ ದಿನ ಬಾದಶಹ
ತಾನಸೇನನನ್ನು ಕರೆದು, ʻʻಶಾದಿ ಮುಬಾರಕ್ ಆಗುವಂತ
ನಿನ್ನದೇ ಆದ ಚೀಜ್ ಹಾಡು. ಹಳೆಯ ಸಂಸ್ಕೃತ ಅವಧಿ ಭಾಷೆಗಳ
ಹಾಡುಗಳನ್ನು ಕೇಳಿ ಕೇಳಿ ಬೇಸರ ಬಂದಿದೆ. ನಿನ್ನ
ಪ್ರಸಿದ್ಧಿಗೆ ಭೂಷಣವಾಗುವಂತೇ ಕರಾಮತ್
ತೋರಿಸುʼʼ ಎಂದು ಆಜ್ಞಾಪಿಸಿದ.
ʻʻ
ನಾನು ಹಾಡುತ್ತೇನೆ. ಸ್ವೀಕರಿಸುವುದು
ಬಿಡುವುದು ಹುಜೂರರಿಗೆ ಸೇರಿದ್ದುʼʼ
ತಾನಸೇನ ನಮ್ರನಾಗಿ ಉತ್ತರಿಸಿದ.
ಇದೀಗ ಬಿಗಿ ಬಂದಿತು.
ಇಷ್ಟು ದಿನವೂ ದರ್ಬಾರಿನ ಅನುಪಮ ಗಾಯಕನೆಂದು ದಶದಿಕ್ಕುಗಳಲ್ಲಿ ಹೆಸರಾದರೂ, ಸ್ವಂತದ ಕೃತಿ ರಚಿಸಿರಲಿಲ್ಲ. ಏನೇಆಗಲಿ
ಸುದೈವದಿಂದ ಬಾದಶಹರು ಹೊಸ ರಾಗ ರಚಿಸಲು ಕೇಳಿಕೊಳ್ಳಲಿಲ್ಲ. ನನ್ನ ಪುಣ್ಯ ಹೊಸ ಚೀಜು ರಚಿಸಲು
ಮಾತ್ರ ಹೇಳಿದ್ದಾರೆ. ಆದರೂ ಆತಂಕದಲ್ಲಿ ನರಳಿದ.
ಸಂಗಾತಿ ರಹಮತ್ ಖಾನರು ಧೈರ್ಯ ನೀಡಿದರು. ಬಾದಶಹನ
ಮಾತನ್ನೇ ಚೀಜನ್ನಾಗಿ ಪರಿವರ್ತಿಸಿ
ರಾತ್ರಿಯಿಡೀ ರಿಯಾಜ್ ಮಾಡಿದರು.
ಬಾದಶಹರಿಗೆ ಅತ್ಯಂತ ಪ್ರಿಯವಾದ ದರ್ಬಾರಿ
ರಾಗದ ಸ್ವರಗಳ ಪ್ರಾರಂಭ
ಬೆಳವಣಿಗೆ ಮುಕ್ತಾಯಕ್ಕೆ ಅನುಗುಣವಾಗುವಂತೇ ಹರುಕು
ಮುರುಕು ಅರ್ಥಹೀನ ಶಬ್ದಗಳನ್ನೇ
ಕೂಡಿಸಿ ಹಾಡಿದರು. ಈಗಲೂ ಅತ್ಯಂತ ಪ್ರಸಿದ್ಧವಾಗಿ
ಬಳಕೆಯಲ್ಲಿರುವ ಚೀಜ್ ಹೀಗಿದೆ.
ಸೋ ಸೋ ಮುಬಾರಕ್
ಬಾದಿಯಾ/ ಶಾದಿಯಾ /
ಐಸೇ ಶಾದಿ ಹೋ
/ ಲಾಖೋ
ಹಜಾರ್ / ಸೋ... ಸೋ ಮುಬಾರಕ್ .../
( ವಿವಾಹಕ್ಕೆ ನೂರು ನೂರು ಶುಭಾಶಯ. ಇಂಥಹ ಸಾವಿರ ಸಾವಿರ ಮದುವೆಗಳಾಗಲಿ
)
ಹಿಂದೂಸ್ಥಾನೀ ಸಂಗೀತಕ್ಕೆ
ಹೊಸ ಹರಹು, ಹೊಸ ಮೆರಗು ನೀಡಿದ ತಾನಸೇನ್,
ತನ್ನ ಮಗ ಬಿಲಾಸಖಾನ ಸತ್ತಾಗ
ಅತೀವ ದುಃಖದಿಂದ, ಅವನ ಕಳೇಬರದೆದುರು, ತೋಡಿ ರಾಗವನ್ನು
ಸೃಷ್ಟಿಸಿ ಹಾಡುತ್ತಾನೆ. ಅದೇ ʻʻಬಿಲಾಸಖಾನೀ ತೋಡಿ ʼʼ
ಎಂಬ ಹೆಸರಿನಲ್ಲಿ, ಇಂದಿಗೂ ಸುಪ್ರಸಿದ್ಧವಾಗಿದೆ.
ಭಾರತೀಯ ಶಾಸ್ತ್ರೀಯ
ಸಂಗೀತ ಪ್ರಪಂಚ, ಅಸಂಖ್ಯಾತ ಸಂಗೀತಗಾರರ ಕತೆ, ದಂತಕಥೆಗಳಿಂದ ಕಿಕ್ಕಿರಿದಿದೆ.
ಅದೇ ಒಂದು ಮಹಾಕಾವ್ಯವಾಗುವಷ್ಟು ಸಮೃದ್ಧವಾಗಿದೆ. ಅಲ್ಲಿ ಮಾನವ ಪ್ರತಿಭೆಯ ಉತ್ತುಂಗವಿದೆ. ಅಮಾನವೀಯತೆಯ
ಕಟು ಸತ್ಯವೂ ಇದೆ. ಪ್ರೀತಿ ಪ್ರೇಮ ಪ್ರಣಯ ವ್ಯಭಿಚಾರ ಸಂಘರ್ಷಗಳ
ಮುಖಾಮುಖಿಯಿದೆ. ಜೊತೆಯಲ್ಲಿಯೇ ಸಂಗೀತದ
ಮಹೋನ್ನತ ಸಾಧನೆಯ ಪರಾಕಾಷ್ಠೆ ತಲುಪಿ ಜಗತ್ತಿನ
ಶ್ರೀಮಂತ ಕಲೆಯಾಗಿ ವಿಜ್ರಂಭಿಸುತ್ತಿದೆ.
ಸಂಗೀತ ಚರಿತ್ರೆಯ
ಕರುಣಾಪೂರ್ಣ ಘಟನೆಯೊಂದನ್ನು ನಾನಿಲ್ಲಿ ಪ್ರಸ್ಥಾಪಿಸಲೇ
ಬೇಕಿದೆ. ಕನ್ನಡದ ಸುಪ್ರಸಿದ್ಧ ಸಂಗೀತ ವಿಮರ್ಶಕರೆಂದು ಹೆಸರಾದ
ಬಿ.ವಿ.ಕೆ.ಶಾಸ್ತ್ರಿ ಕಲೆಯ ಗೊಂಚಲು ಎಂಬ ತಮ್ಮ
ಕೃತಿಯಲ್ಲಿ ಹಲವಾರು ಸಂಗೀತ ದಿಗ್ಗಜರ ಜೀವನ ವೃತ್ತಾಂತವನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಅದರಲ್ಲಿ ಶತಮಾನದ ಹಿಂದೆ ಆಗಿಹೋದ ಮಹಾನ್
ಹಿಂದುಸ್ಥಾನಿ ಕಲಾವಿದ ʻʻಬಾಬಾ ದೀಕ್ಷಿತ್ʼʼ
ಒಬ್ಬರು.
ತಾನ್ಸೇನ ನ ಜನ್ಮಭೂಮಿಯೆಂದೇ
ಪ್ರಸಿದ್ಧವಾದ ಗ್ವಾಲಿಯರ್ ಗೆ ಸಂಗೀತ ಕಲಿಯಲಾಗಿಯೇ ಒಬ್ಬ ಬಡ ಬಾಲಕ
ಅದಮ್ಯ ಆಕಾಂಕ್ಷೆಯಿಂದ ಒಂಟಿಯಾಗಿ
ಬರುತ್ತಾನೆ. ಗ್ವಾಲಿಯರ್ ಖಾನದಾನಿಯ
ಸ್ಥಾಪಕರೆಂದೇ ಹೆಸರಾದ ಹದ್ದೂಖಾನ್
ಹಸ್ಸೂಖಾನ್ ಸಹೋದರರಲ್ಲಿ ಸಂಗೀತ ಕಲಿಯುವ ಆಸೆ ಆ ಬಾಲಕನಿಗೆ. ಹದ್ದೂಖಾನ್
ಸಹೋದರರು ಗ್ವಾಲಿಯರ್ ಸಂಸ್ಥಾನದ
ಮಹಾರಾಜರಾದ ಜಿಯಾಜಿರಾವ್ ಸಿಂಧಿಯಾ
ರವರ ಆಸ್ಥಾನ ಗಾಯಕರು. ಸಂಗೀತಗಾರರ
ಮನೆಯ ಪಕ್ಕದಲ್ಲಿರುವ ಛತ್ರದಲ್ಲಿ ಉಳಿದುಕೊಂಡ
ಬಾಲಕ ಹಲವು ತಿಂಗಳುಗಳ ಕಾಲ ಸಂಗೀತದ
ಪಾಠಗಳನ್ನು ಶ್ರದ್ಧೆಯಿಂದ ಹೊರಗೇ ನಿಂತು ಆಲಿಸುತ್ತಾನೆ. ಛತ್ರದಲ್ಲಿ ಉಳಿದುಕೊಂಡು ರಾತ್ರಿಯಿಡೀ
ಅಭ್ಯಸಿಸುತ್ತ, ರಾಗಗಳನ್ನು ಆತ್ಮಸಾಥ್ ಮಾಡಿಕೊಳ್ಳುತ್ತಾನೆ. ಅಲ್ಲಲ್ಲಿ
ಹಾಡಲೂ ಪ್ರಾರಂಭಿಸುತ್ತಾನೆ. ಕೆಲವೇ ದಿನಗಳಲ್ಲಿ ಬಾಲಕನ ಜನಪ್ರಿಯತೆಯನ್ನು ಗಮನಿಸಿದ
ಖಾನ್ ಸಹೋದರರು, ಆತ ಹಾಡುವುದನ್ನು
ಗಮನಿಸುತ್ತಾರೆ. ಆಶ್ಚರ್ಯಚಕಿತರಾಗುತ್ತಾರೆ.
ತಮ್ಮ ಶಿಷ್ಯನಲ್ಲದಿದ್ದರೂ ಈತ ತಮ್ಮ
ಪರಂಪರೆಯ ಸಂಗೀತವನ್ನು ಇಷ್ಟು ಸುಂದರವಾಗಿ ಹಾಡುತ್ತಾನೆ
ಎಂಬುದೇ ಅರ್ಥವಾಗದ ಸ್ಥಿತಿ
ಅವರಿಗೆ. ಬಾಲಕನನ್ನು ಬಳಿಗೆ ಕರೆದು, ವಿಚಾರಿಸಿ
ತಮ್ಮ ಸಂಗೀತ ಶಾಲೆಗೆ ಸೇರಿಸಿಕೊಳ್ಳುತ್ತಾರೆ. ಆತನೇ ʻʻ ಬಾಬಾ
ದೀಕ್ಷಿತ್ʼʼ
ಹತ್ತು ವರ್ಷ ಅವಿರತವಾಗಿ
ಖಾನ್ ಸಹೋದರರ ಗರಡಿಯಲ್ಲಿ ಸಿದ್ಧಗೊಂಡ
ಬಾಬಾ ದೀಕ್ಷಿತ್ ಮಹಾರಾಜರಿಂದಲೂ ಸಮ್ಮಾನಿತಗೊಳ್ಳುತ್ತಾನೆ. ಇಡೀ ಗ್ವಾಲಿಯರ್
ನಗರದಲ್ಲಿ ಬಾಬಾ ಮನೆಮಾತಾಗುತ್ತಾನೆ.
ಒಂದು ದಿನ ಸಂಗೀತ ಶಿಕ್ಷಣ ಮುಗಿಸಿ
ಬಾಬಾ ಹೊರಟು ನಿಂತಾಗ, ಹಸ್ಸೂಖಾನ್
ಶಿಷ್ಯನನ್ನು ಕರೆದು ಕುಳ್ಳಿರಿಸಿ, ಗುರುಕಾಣಿಕೆಯನ್ನು ಏನು ಕೊಡುತ್ತೀಯಾ ಎಂದು ಕೇಳುತ್ತಾರೆ. ಶಿಷ್ಯ ನಾನು ಬಡವ. ಒಂಟಿ. ನಾನೇನು
ಕೊಡಬಲ್ಲೆ ಗುರುಗಳೇ ಎಂದು ಕೇಳುತ್ತಾನೆ.
ನಿನ್ನಿಂದ ಸಾಧ್ಯವಾಗುವುದನ್ನೇ ಕೇಳುತ್ತೇನೆ,
ಕೊಡುತ್ತೀಯಾ...? ಎಂದು ಕೇಳಿದಾಗ
ಖುಷಿಯಿಂದ ಹುಡುಗ ಹೂಂ ಗುಡುತ್ತಾನೆ.
ಗಂಭೀರವಾಗಿ
ಗುರು ಹಸ್ಸೂಖಾನ್ ತನ್ನ ಬೇಡಿಕೆಯನ್ನು ಮಂಡಿಸುತ್ತಾನೆ.
ʻʻ ನೀನು ಇಂದಿನಿಂದ ಸಾರ್ವಜನಿಕವಾಗಿ
ಎಲ್ಲೂ ಎಂದೂ ಹಾಡಕೂಡದು.
ರಾಜನ ಆಸ್ಥಾನದಲ್ಲೂ ಸಹ. ಆದರೆ ದೇವಾಲಯದಲ್ಲಿ ಹಾಡಲು ಯಾವ ತಡೆಯಿಲ್ಲʼʼ ಎಂಬ ನಿಯಮವನ್ನು ಕೇಳಿದಾಗ
ಬಾಬಾ ಒಮ್ಮೆ ಬೆಚ್ಚಿಬೀಳುತ್ತಾನೆ. ಅದುರುವ
ಧ್ವನಿಯಲ್ಲೇ ʻʻ ಯಾಕೆ ಇಷ್ಟು ಕಠಿಣ
ನಿಯಮ ಗುರುಗಳೇ...?ʼʼ ಎಂದು ಪ್ರಶ್ನಿಸಿದಾಗ, ಹಸ್ಸೂಖಾನ್
ʻʻ ಇದು ನನ್ನ ಮಕ್ಕಳ ಭವಿಷ್ಯದ ಪ್ರಶ್ನೆ.
ನೀನು ಹಾಡುತ್ತಿದ್ದರೆ ನನ್ನ ಮಕ್ಕಳು ಅನಾಥರಾಗುತ್ತಾರೆ. ನಮ್ಮ ವಂಶದ
ಈ ಕಲೆ ಅವರಿಗೇ ದಕ್ಕದಂತಾಗುತ್ತದೆ. ನಾನು ಕೇಳುತ್ತಿರುವುದು ಗುರು ದಕ್ಷಿಣೆಯನ್ನಲ್ಲ, ನಿನ್ನಿಂದ
ಭಿಕ್ಷೆʼʼ ಎಂದಾಗ, ಬಾಬಾ ದೀಕ್ಷಿತ್ ನ ಕಣ್ಣಲ್ಲಿ ನೀರು ತುಂಬುತ್ತದೆ. ಎದೆ ಭಾರವಾಗುತ್ತದೆ. ಕೃಷ್ಣಾರ್ಪಣ
ಎಂದು ಉದ್ಗರಿಸುತ್ತ, ಗುರು ದಕ್ಷಿಣೆಯನ್ನು
ಸ್ವೀಕರಿಸಿ, ಎಂದೆನ್ನುತ್ತ ನಮಸ್ಕರಿಸುತ್ತಾನೆ.
ಆಗ ಬಾಬಾನಿಗೆ
ಕೇವಲ ಇಪ್ಪತ್ಮೂರು ವರ್ಷ. ಅಲ್ಲಿಂದ ಕಾಶಿಗೆ
ಪ್ರಯಾಣಿಸಿದ ದೀಕ್ಷಿತ್ ತಮ್ಮ ತೊಂಬತ್ತು
ವರ್ಷದ ಸುದೀರ್ಘ ಸಂಗೀತ ಜೀವನದಲ್ಲಿ ಒಮ್ಮೆಯೂ
ಸಾರ್ವಜನಿಕವಾಗಿ ಹಾಡಲೇ ಇಲ್ಲ. ದೀಕ್ಷಿತರ ಅಭಿಮಾನಿ
ಗ್ವಾಲಿಯರ್ ಮಹಾರಾಜ ಸಹ, ಬಾಬಾ
ಇದ್ದಲ್ಲೇ ಬಂದು ಕಾಶಿ ವಿಶ್ವನಾಥ ಮಂದಿರದಲ್ಲಿ
ಸಂಗೀತವನ್ನಾಲಿಸಿ ತೃಪ್ತಿ ಪಟ್ಟ.
ನೂರಾರು ಪ್ರತಿಭೆಗಳನ್ನು
ಸೃಷ್ಟಿಸುತ್ತ, ಗ್ವಾಲಿಯರ್ ಸಂಗೀತ ಪರಂಪರೆ ಉಳಿದು ಬೆಳೆಯಲು
ಕೊನೆಗೂ ಬಾಬಾ ನೇ ಕಾರಣನಾದ.
ವೇದ ಉಪನಿಷತ್, ಕುರಾನ್, ಬೈಬಲ್ ಗಳಂತೇ ಎಲ್ಲ ಸಂಗೀತ
ಪರಂಪರೆಗಳೂ ಇಡೀ ಮಾನವ ಲೋಕಕ್ಕೆ
ಸಮರ್ಪಣೆಯಾಗಬೇಕೇ ಹೊರತು, ಯಾವುದೇ ಒಂದು
ವಂಶದ ಆಸ್ತಿಯಾಗುವುದಲ್ಲ. ಮಹಾಭಾರತದ
ಭೀಷ್ಮಪ್ರತಿಜ್ಞೆ, ಅಥವಾ ಏಕಲವ್ಯ ಪ್ರಕರಣವನ್ನು ನೆನಪಿಸುವ
ಈ ಸಂಗತಿ, ಸಂಗೀತ ಚರಿತ್ರೆಯಲ್ಲಿ ಒಂದು ವಿಷಾದಪೂರ್ಣ
ಘಟನೆ.
ಕಲೆಯನ್ನೇ ಉಸಿರಾಗಿಸಿಕೊಂಡು ಬದುಕಿಡೀ
ಸಂಗೀತ ಸಾಧನೆಯಲ್ಲೇ ನಿರತರಾಗಿದ್ದ, ಪಂಡಿತ್
ಕುಮಾರ ಗಂಧರ್ವರು ತಮ್ಮ ಕೃತಿಯೊಂದರಲ್ಲಿ,
ಹೇಳುತ್ತಾರೆ,
ʻʻ ನಾನೊಬ್ಬ ಅಲೆಮಾರಿ.
ಹಾಡುಗಾರಿಕೆ ಒಂದು ಅಂತ್ಯವಿಲ್ಲದ
ಪಯಣ. ರಾಗದ ಬಗೆ ಬಗೆಯ ರೂಪಗಳನ್ನು ನೋಡುವುದು,
ನಿರ್ಮಾಣ ಮಾಡುವುದು ನನ್ನ ಜಾಯಮಾನ. ಒಂದು ರಾಗ ಒಂದೇ ಬಗೆಯಲ್ಲಿ ಸುಂದರವಾಗಿದೆ ಎಂದು ಭಾವಿಸದೇ ರಾಗದ ವೈವಿಧ್ಯಮಯ ಸೌಂದರ್ಯವನ್ನು ಶೋಧಿಸುತ್ತಲೇ ಇರುತ್ತೇನೆ. ಯಾವುದು ನನಗೆ
ಸಂಪೂರ್ಣ ಕರಗತವಾಗುವುದಿಲ್ಲವೋ ಅದನ್ನು ಸಂಪೂರ್ಣ ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ನಾನು ಎಂದು ತೃಪ್ತನಾಗುತ್ತೇನೆಯೋ ಅಂದೇ ನನ್ನ ಹಾಡುಗಾರಿಕೆ ಮುಕ್ತಾಯವಾಗುತ್ತದೆ. ನಾನು ಸದಾ
ಅತೃಪ್ತ. ಅಂತೆಯೇ ನಾನು ಹಾಡುತ್ತಲೇ
ಇರುತ್ತೇನೆ. ʼʼ
ಎಂದು ಉದ್ಗರಿಸಿದ
ಕುಮಾರ ಗಂಧರ್ವರು ಕೇವಲ ಹಾಡಲಿಲ್ಲ.
ನಾದದ ಮೂಲಕ್ಕೆ ಸಾಗಿದರು. ಇಪ್ಪತ್ತಕ್ಕೂ
ಹೆಚ್ಚು ನವರಾಗಗಳನ್ನು ಸೃಷ್ಟಿಸಿ, ನಾದಲೋಕವನ್ನು ಸಮೃದ್ಧ ಗೊಳಿಸಿದರು. ಅವುಗಳಲ್ಲಿ
ʻʻ ಗಾಂಧೀ ಮಲ್ಹಾರ್ʼʼ ರಾಗ
ವಿವಾದ ಮತ್ತು ಪ್ರಸಿದ್ಧಿ ಎರಡನ್ನೂ ಪಡೆಯಿತು. ಸಂಕೀರ್ಣವಾದ
ಮಲ್ಹಾರ್ ರಾಗಕ್ಕೆ ಹೊಸ ಆಯಾಮ,
ಹೊಸ ಹೊಳಪು, ಹೊಸ ಹರಿವುಗಳನ್ನು ನೀಡಿದರು. ತೀವ್ರ ಮಧ್ಯಮ
ಸ್ವರವು ಇಡೀ ರಾಗಕ್ಕೆ ಸುಕೋಮಲ
ಸ್ಪರ್ಶವನ್ನು ನೀಡಿತು. ರಾಗದ ಆಳದಲ್ಲಿ ಮಹಾತ್ಮರ
ಸತ್ಯ ಅಹಿಂಸೆ ಮತ್ತು ಭಕ್ತಿ ಭಾವಗಳು ತುಂಬಿ ಹರಿಯುತ್ತಿತ್ತು.
ಭಾರತೀಯ ಗುರುಶಿಷ್ಯ ಪರಂಪರೆಯ ಶಿಕ್ಷಣವನ್ನು ಶಾಸ್ತ್ರೀಯ ಕಲೆಗಳು, ಇನ್ನೂ ಜೋಪಾನವಾಗಿ ತನ್ನ ಒಡಲೊಳಗಿಟ್ಟು ಪೋಷಿಸುತ್ತಿದೆ.
ಸಾಕಷ್ಟು ಅತ್ಯುನ್ನತ ಕಲಾವಿದರುಗಳನ್ನು ನೀಡುತ್ತಿದೆ.
ಹಾಗೆಂದು, ಆಧುನಿಕವೆಂಬ ವರ್ತಮಾನದ
ಸಂಗೀತ ವಿಶ್ವವಿದ್ಯಾಲಯಗಳಿಂದ ಒಂದೇ ಒಂದು ಹೆಸರಿಸಬಹುದಾದ
ಪ್ರತಿಭೆ ಸೃಷ್ಟಿಯಾಗಿಲ್ಲ.
ನಾದಲೋಕಕ್ಕೆ ಅದು ನೀಡುವ
ಮೋದಕ್ಕೆ ನನ್ನದೊಂದು ಸಲಾಮ್.