Vishwambhara –4
ಸುಮನಾಂಬರ
– ೧೬.
ʻʻʻʻ ಅಲ್ಲಿ ಮನೆ
- ಇಲ್ಲಿ ಸುಮ್ಮನೆ. ʼʼ
ಕಳೆದೊಂದು ದಶಕದಾಚೆಗಿನ
ಘಟನೆ. ರಾಜ್ಯದ ಅತಿದೊಡ್ಡ ಆಣೇಕಟ್ಟು, ಆ ವರ್ಷದ
ಕಟು ಬೇಸಿಗೆಗೆ ಪೂರ್ತಿ ಆರಿಹೋಗಿತ್ತು. ಆರಿ ಮರುಭೂಮಿಯಂತಾದ ಹಿನ್ನೀರಿನ
ಪ್ರದೇಶವನ್ನು ಕಣ್ತುಂಬಿಕೊಳ್ಳಲೆಂದೇ ಸಾವಿರ ಸಾವಿರ ಪ್ರವಾಸಿಗರು
ಆಸ್ಥಳಕ್ಕೆ ಭೇಟಿಯಿತ್ತಿದ್ದರು. ಕುತೂಹಲಕ್ಕೆ
ನಾನೂ ಅಲ್ಲಿಗೆ ತೆರಳಿದ್ದೆ.
ಅರ್ಧ ಶತಮಾನಕ್ಕೂ ಹಿಂದೆ ಮುಳುಗಿಹೋಗಿದ್ದ
ನೂರಾರು ಗ್ರಾಮಗಳು, ಸಮೃದ್ದ ಅರಣ್ಯಗಳು ತಮ್ಮ ಗತವೈಭವವನ್ನು ಸಾರುತ್ತಿದ್ದವು. ಗ್ರಾಮದ
ರಸ್ತೆ, ಕುಸಿದ ಮನೆಗೋಡೆಗಳು,
ಪಾಳುಬಿದ್ದ ದೇವಾಲಯಗಳು, ಕುಸಿದ ಗೋಡೆಗಳ ಮೂಲೆಯಲ್ಲಿ
ಅಲ್ಲೇ ರಾಶಿಹಾಕಿದ ಮಣ್ಣಿನ
ಅಲ್ಯುಮಿನಮ್ಮಿನ, ಪಾತ್ರೆ ಪಗಡೆಗಳು, ತಮ್ಮ ಕತೆ
ಹೇಳುತ್ತಿದ್ದವು. ಅಲ್ಲಲ್ಲಿ ಒಣಗಿನಿಂತ
ಗಂಧ ಬೀಟೆ ಮರಗಳನ್ನು
ಹಿಂದಿನ ರಾತ್ರಿ ಕದ್ದೊಯ್ದ ಕಳ್ಳತನದ ಗುರುತು
ಕಣ್ಣಿಗೆ ರಾಚಿತು. ಅದೊಂದು ವಿಶಾಲವಾದ
ಪಾಳುಬಿದ್ದ ಮನೆ ಅವಶೇಷದಲ್ಲಿ, ಕುಳಿತ ಸುಮಾರು ಎಂಭತ್ತರ
ವೃದ್ಧರೊಬ್ಬರು ತಲೆಯಮೇಲೆ ಕೈ ಹೊತ್ತು,
ಆಕಾಶ ದಿಟ್ಟಿಸುವುದನ್ನು ಕಂಡು, ಕುತೂಹಲದಿಂದ ಅವರ ಬಳಿ ಸಾರಿದೆ. ಅವರನ್ನು ಪರಿಚಯಿಸಿಕೊಂಡು ಮಾತಿಗೆಳೆದೆ.
ಅರ್ಧ ಶತಮಾನದ ಹಿಂದೆಯೇ ಈ ಮನೆ
ತೊರೆದು, ನಿರಾಶ್ರಿತರಾಗಿ ಬೇರೆಡೆ
ವಲಸೆಹೋದ ಹಿರಿಯರು ಅವರು. ಅವರದ್ದೇ ಹದಿನಾರಂಕಣದ
ಮನೆಯ ಅವಶೇಷವಂತೆ ಇದು. ಮಕ್ಕಳು
ಮೊಮ್ಮಕ್ಕಳು ಮರಿಮಕ್ಕಳ ಕಲರವದಿಂದ
ಮೊಳಗುತ್ತಿದ್ದ, ಹಿರಿಕಿರಿಯರೆಲ್ಲ ಸೇರಿ ಐವತ್ತು ಜನರಿದ್ದ ಮನೆ, ಇಂದು ಮಂಜಾಣವಾಗಿದೆ. ಎಂದೆನ್ನುತ್ತ,
ಮತ್ತೆ ಆಕಾಶ ದಿಟ್ಟಿಸತೊಡಗಿದರು. ಅವರ ಮುಖದಲ್ಲಿ ಹತಾಶೆ ಆಕ್ರೋಶ ದುಃಖ ಮಡುಗಟ್ಟಿತ್ತು.
ಅಷ್ಟು ಕಾಲಾನಂತರವೂ ಅವರನ್ನು ತಮ್ಮ ಮೂಲಕ್ಕೆ ಎಳೆದು
ತಂದಿತ್ತು. ಆ ವೃದ್ಧರ ಸುಂದರ ಬಾಲ್ಯ, ಆಟ ಪಾಠ, ಪರಂಪರೆ,
ಹಿರಿ ಕಿರಿಯರ ಎಲ್ಲ ನೆನಪುಗಳನ್ನು ಕೆದಕಿತ್ತು. ಒತ್ತಾಯದಲ್ಲಿ
ಎತ್ತೊಯ್ದ ಬೇರುಸಹಿತ ಕಿತ್ತೊಯ್ದ
ದುರಂತವನ್ನು ಆ ಬರಿದಾದ
ಆಣೆಕಟ್ಟು ಅಣಕಿಸಿತ್ತು.
ʻʻ
ಮನೆʼʼ ಅಂದರೆ ಅದು ಕೇವಲ
ಮಣ್ಣು ಕಲ್ಲಿನ ಗೋಡೆಯಲ್ಲ. ಮನು಼ಷ್ಯನ ಜೀವಕೇಂದ್ರ.
ಮನೆ. ಅದೊಂದು ಮನೆತನದ ದೇವಾಲಯ. ಬಾಹ್ಯ ಸಮುದಾಯ
ದೇಹವಾದರೆ, ಮನೆಯೆಂಬುದು, ಸಂಸ್ಕೃತಿಯ ಆತ್ಮವಿದ್ದಂತೇ.
ಸಂಪ್ರದಾಯ, ಪರಂಪರೆಗಳ ಗಂಗೋತ್ರಿಯಂತೆ. ಭಕ್ತಿ, ಪ್ರೀತಿ ಜಗಳ, ಪ್ರೇಮ, ಕಾಮ, ಹುಟ್ಟು
ಸಾವು ಗಳೆಲ್ಲ ಸೇರಿದ ಪುಟ್ಟ
ಮಾನವ ಜಗತ್ತು ಅದು.
ಪುಟ್ಟ ಗುಬ್ಬಿಗೂ ಗೂಡಿನಾಸೆ.
ಬಡವನಿಗೆ ಗುಡಿಸಲಾಸೆ, ಸಾಮಾನ್ಯನಿಗೆ
ಸುಂದರ ಮನೆಯ ಕನಸು, ಶ್ರೀಮಂತನಿಗೆ
ಬೃಹತ್ ಬಂಗಲೆಯ ಆಸೆ, ರಾಜನಿಗೋ ಅರಮನೆಯ
ಹಿರಿಯಾಸೆ. ಒಟ್ಟಿನಲ್ಲಿ, ಮನುಷ್ಯನ
ಬದುಕಿನಲ್ಲಿ ಬಹುದೊಡ್ಡ ಪ್ರಭಾವ ಬೀರುವ ಮನೆ ಎಂಬ ಒಂದು ವ್ಯವಸ್ಥೆ
ಅವನ ರಕ್ಷಣೆಗೆ, ಸುರಕ್ಷಿತತೆಗೆ,
ಪ್ರತಿಷ್ಠೆಗೆ ಮತ್ತು ಮನೆತನವೆಂಬ
ಭಾವಕ್ಕೆ ಚೈತನ್ಯ ನೀಡುವ ಅತಿ ಮುಖ್ಯ ಅಂಗ
ಎಂಬುದಂತೂ ಖಚಿತ. ಊರು ಬದಲಾದೀತು, ಮನುಷ್ಯ ಬದಲಾದಾನು, ಆದರೆ ಮನೆಯಾಸೆ
ಮತ್ತಷ್ಟು ಆಳಗೊಳ್ಳುತ್ತದೆ. ಆಧುನಿಕತೆ ಇನ್ನಷ್ಟು ಸುಂದರಗೊಳಿಸುತ್ತದೆ.
ಸ್ವಂತ
ಮನೆ ಮನುಷ್ಯನ ಜೀವನದ ಒಂದು ಹಂತ ಮಾತ್ರವಲ್ಲ; ಅದು ಅಸ್ತಿತ್ವದ ಆಳವಾದ ಅನುಭವ. ಗೃಹವು ನಮ್ಮ ಸಂಬಂಧಗಳ, ಮೌಲ್ಯಗಳ, ಧರ್ಮಾಚರಣೆಯ, ಮೌನದ, ಮತ್ತು ಆತ್ಮಜ್ಞಾನದ ಮೂಲಸ್ಥಳ.
ಅದೆಲ್ಲಸರಿ, ಆದರೆ ಸುಂದರ ಭವ್ಯ
ಮನೆಯ ಆಸೆಯಲ್ಲಿ, ಆರ್ಥಿಕ ಮಿತಿಯನ್ನೂ ಉಲ್ಲಂಘಿಸಿ,
ಮನೆನಿರ್ಮಿಸಿ, ನಂತರದ ಕಾಲದಲ್ಲಿ ಬಡ್ಡಿ ತೀರಿಸಲಾಗದೇ ಮನೆಮಾರಿ, ಮತ್ತೆ ಬಾಡಿಗೆ ಮನೆಯಲ್ಲಿ ವಾಸಿಸಿದ ಅದೆಷ್ಟೋ
ಜನರನ್ನು ಕಂಡಿದ್ದೇವೆ. ಇಲ್ಲವೇ ಭವ್ಯಮನೆ
ಭದ್ರ ಕಂಪೌಂಡ್ ಅದಕ್ಕೆ
ಬೀಗ. ನಿರ್ಜನ, ಸೊಳ್ಳೆಗೂ ಸುಳಿಯಲಾಗದ
ಸ್ಥಿತಿ. ಆಧ್ಯಾತ್ಮಿಕವಾಗಿ ಮನೆ ಎಂದರೆ
ಸಂಪತ್ತಿನ ಡೌಲಿನ
ಪ್ರದರ್ಶನವಲ್ಲ ತಾತ್ವಿಕವಾಗಿ
ಮನೆ ಎಂದರೆ ಅಸ್ತಿತ್ವಕ್ಕೆ ನೆಲೆ, ಜೀವನಕ್ಕೆ ದಾರಿದೀಪ.
ಗೃಹವೆಂಬ ಕಲ್ಪನೆ ಮನುಷ್ಯನ
ಜೀವನದಲ್ಲಿ ಅತ್ಯಂತ ಆಳವಾದ ಸ್ಥಾನವನ್ನು ಪಡೆದಿದೆ. “ಸ್ವಂತ ಮನೆ” ಎನ್ನುವುದು ಕೇವಲ ಒಂದು ಕಟ್ಟಡವಲ್ಲ; ಅದು ಮನಸ್ಸಿನ ನೆಲೆ, ಭಾವನೆಯ ಆರಾಮ, ಆಧ್ಯಾತ್ಮಿಕ ಶಾಂತಿಯ ತೀರ್ಥ, ತಾತ್ವಿಕ ಅನ್ವೇಷಣೆಯ ಆರಂಭ. ಮನುಷ್ಯ ತನ್ನ ಅಸ್ಥಿರ ಜೀವನದಲ್ಲಿ ಹುಡುಕುತ್ತಿರುವ ಅತ್ಯಂತ ದೊಡ್ಡ ನೆಮ್ಮದಿ ಎಂದರೆ ‘ಸ್ವಂತ ಮನೆ’ಯ ಅನುಭವ. ಆದರೆ
ಈ ಕಲ್ಪನೆಗೆ ಭೌತಿಕ ಮತ್ತು ಆಧ್ಯಾತ್ಮಿಕ ಎನ್ನುವ ಎರಡು ಆಯಾಮಗಳಿವೆ. “ಗೃಹಸ್ಥೋ
ಹಿ ಗೃಹಸ್ಥಾನಾಂ ಧರ್ಮಂ ಪಾಯತಿ ಸಂಯತಃ।” ಗೃಹಸ್ಥನ ಧರ್ಮವೇ ಇಡೀ ಸಮಾಜದ ಧರ್ಮಕ್ಕೆ ಪೋಷಕ.
ಆದರೆ
ಮನೆಯೆಂಬುದು ತೋರಿಕೆಗೆ, ಪ್ರತಿಷ್ಠೆಗೆ,
ಅಹಮಿನ ಹರವಿಗೆ, ವೈಭೋಗದ
ಆಕಾಂಕ್ಷೆಗೆ ಕಾರಣವಾದರೆ, ಭೌತಿಕತೆ ಹಿಗ್ಗಿ, ಅಂತರಂಗ ಶೂನ್ಯವಾಗುತ್ತದೆ. ಅಲ್ಲಿ ಮಾನವತೆಯ
ಪರಿಮಳದ ಬದಲು, ರಾಕ್ಷಸೀಯ ಗುಣಗಳು
ವಿಜ್ರಂಭಿಸತೊಡಗುತ್ತವೆ.
ಮನೆಯೊಳಗಿನ
ವಾತಾವರಣಕ್ಕೂ ಬಾಹ್ಯದ ಚರ್ಯೆಗೂ ಕೊಂಚ ಅಂತರವಿದೆ. ವೃತ್ತಿ ಅಂತಸ್ತು ಸ್ವಯಂರಕ್ಷಣೆ ಪ್ರತಿಷ್ಠೆ
ಮುಂತಾದ ಆವರಣಗಳು ಹೊರಗೆ ಮುತ್ತಿಕೊಂಡರೆ, ಮನೆಯೊಳಗೆ
ಸರಳತೆ ಪ್ರಾಮಾಣಿಕತೆ, ನೈಜತೆ ಮತ್ತು
ನಿಷ್ಕಲ್ಮಷತೆಗಳು ನೆಲೆಸಬೇಕು. ಅಲ್ಲಿ ಪ್ರೀತಿ ಮಮತೆ
ನಂಬಿಗೆ ಮತ್ತು ಕ್ರಿಯಾಶೀಲ
ಗುಣಗಳು ಸಜೀವವಾಗಿರಬೇಕು.
ನೈತಿಕತೆ, ನ್ಯಾಯಪ್ರಜ್ಞೆ, ಸಾತ್ವಿಕತೆ,
ಮತ್ತು ಆಧ್ಯಾತ್ಮಿಕತೆ ಯಂತಹ ನಾಲ್ಕು ಗುರಿಗಳು ಮನೆಯಲ್ಲಿ ಅನ್ವಯವಾದರೆ, ಅದು ಸಮುದಾಯವನ್ನೂ ತನ್ನಂತಾನೇ ವ್ಯಾಪಿಸುತ್ತದೆ. ಸಂಸಾರವೆಂಬ ಪುಟ್ಟ ಜಗತ್ತು
ಸಮುದಾಯವೆಂಬ ಬೃಹತ್
ಪ್ರಪಂಚದೊಂದಿಗೆ ಸಮರ್ಥ ಸಂಬಂಧ
ಸ್ಥಾಪಿಸಿಕೊಳ್ಳುತ್ತದೆ.
ಅನಿಕೇತನನಾಗು, ಎನ್ನುತ್ತಾರೆ, ಕವಿ ಕುವೆಂಪು. ಮನೆಯಲ್ಲಿ ಮಾನವೀಯ ಮೌಲ್ಯವನ್ನು ರೂಢಿಸಿಕೊಂಡು,
ಮಾನಸಿಕವಾಗಿ ನಾಲ್ಕುಗೋಡೆಗಳಿಂದ ಹೊರಬಂದು,
ವಿಶ್ವವನ್ನೇ ನಿನ್ನ ಪ್ರೀತಿಯ ತೆಕ್ಕೆಗೆ ಸೆಳೆದು ಕೊಂಡರೆ, ಮಾನವ
ಬದುಕೆಂಬುದು ಸುಂದರ ನಂದನವಾಗುತ್ತದೆ. ಸ್ವಂತ
ಮನೆಯನ್ನು ಕಟ್ಟುವುದು ಮನುಷ್ಯನ ಶ್ರಮ, ಪರಿಶ್ರಮ, ತಾಳ್ಮೆ ಮತ್ತು ಸೃಜನಶೀಲತೆಯ ಫಲ. ಹೊರಗಿನ ಮನೆ ನಿರ್ಮಿಸುವಾಗ ಮನುಷ್ಯ ತನ್ನೊಳಗಿನ ಶಕ್ತಿಗಳನ್ನು ಜಾಗೃತಿಗೊಳಿಸಿಕೊಳ್ಳಬೇಕು. ಗೃಹ
ನಿರ್ಮಾಣದ ಪ್ರಕ್ರಿಯೆ ಮನುಷ್ಯನ ಆಂತರ್ಯ ನಿರ್ಮಾಣದ ಪ್ರತಿಬಿಂಬವಾಗಬೇಕು. ಪರಿವಾರ ಮತ್ತು ಸಂಬಂಧಗಳು ಮನೆಗೆ ಚೈತನ್ಯವನ್ನು ನೀಡುತ್ತವೆ.
ಮನೆ ಎಲ್ಲ ಸಂಬಂಧಗಳ ಮೂಲವಾದ ಸ್ಥಳ. , ಮನೆ
ಎನ್ನುವುದು ಕರ್ಮಯೋಗ, ಭಕ್ತಿಯೋಗ ಮತ್ತು ಜ್ಞಾನಯೋಗಗಳ ನಿತ್ಯಾಭ್ಯಾಸದ ಸ್ಥಳ.
ಪತಿಪತ್ನಿಗಳ ಪರಸ್ಪರ
ಸಹಕಾರವು ಕರ್ಮಯೋಗದ ಅಭ್ಯಾಸ
ಮಕ್ಕಳಿಗೆ ಸಲ್ಲಿಸಿದ ಪ್ರೀತಿ
ಮತ್ತು
ಸತ್ಕಾರ
ಭಕ್ತಿಯೋಗದ ಅಭಿವ್ಯಕ್ತಿ
ಮನೆಯಲ್ಲಿ ನಡೆಯುವ
ಸಂವಾದಗಳು, ಚಿಂತನೆಗಳು ಜ್ಞಾನಯೋಗಕ್ಕೆ ದಾರಿಗಳು
ಅದಕ್ಕಾಗಿ ಮನೆ
ಎಂದರೆ
ಕೇವಲ
ಬಾಳಿನ
ಕೇಂದ್ರವಲ್ಲ;ಅದು
ಸಂಬಂಧಗಳ ಶಿಕ್ಷಣಶಾಲೆ. ಹೊರಗಿನ ಜಗತ್ತು ವ್ಯವಹಾರ,
ಗದ್ದಲ, ಸ್ಪರ್ಧೆಗಳ ನಡುವೆ ಅಸ್ಥಿರವಾದ ಸ್ಥಳ.
ಮನೆ ಮಾತ್ರ ಮನುಷ್ಯನಿಗೆ ಸಿಗುವ ಒಂಟಿತನದ ಪವಿತ್ರ ಜಾಗ, ಅಲ್ಲಿ ಆತನು ತನ್ನ ಮನಸ್ಸನ್ನು ಮೌನಗೊಳಿಸಬಹುದು. ತಾತ್ವಿಕ ದೃಷ್ಟಿಯಲ್ಲಿ ಮನೆಯ ಮೌನವೇ ಧ್ಯಾನಕ್ಕೆ ಆಹ್ವಾನ;
ಧ್ಯಾನವೇ ಆಧ್ಯಾತ್ಮಿಕ ಜಾಗೃತಿ. ಮನೆಯನ್ನು ಗರ್ಭಗುಡಿ ಎಂದು ಕಾಣುವುದರ ಅರ್ಥ, ಅಲ್ಲಿ
ಮೌಲ್ಯ ಹುಟ್ಟುತ್ತದೆ. ಬೆಳೆದು ಬಾಳುತ್ತದೆ. ಅದು
ಮನುಷ್ಯನ ಮನಸ್ಸು ಶಾಂತವಾಗುವ ಕೇಂದ್ರ. ಮೌನದಲ್ಲಿ ಮಾತ್ರ ಆತ್ಮದ ಶಬ್ದ ಕೇಳತೊಡಗುತ್ತದೆ.
ಹೊಣೆಗಾರಿಕೆ,
ಸಹನೆ, ಶಿಸ್ತು, ಯೋಜನೆಯ ದೃಷ್ಟಿ ಈ ಗುಣಗಳು ಮನಸ್ಸಿನಲ್ಲಿ
ಆಧ್ಯಾತ್ಮಿಕ ದೃಢತೆ ತಂದಿಡುತ್ತವೆ. ಗೃಹ ನಿರ್ಮಾಣದ ಪ್ರಕ್ರಿಯೆ ಅಂದರೆ
ಹಣವ್ಯಯ, ಶ್ರಮ ಮಾತ್ರವಲ್ಲ. ಮನುಷ್ಯನ ಆಂತರಂಗವನ್ನು ಸಮೃದ್ಧಗೊಳಿಸುವ
ದಿವ್ಯ ಚಟುವಟಿಕೆ. .
ತತ್ತ್ವಶಾಸ್ತ್ರ ಹೇಳುತ್ತದೆ. ಮನೆ
ಒಂದು ಬಾಹ್ಯ ಗಡಿಗೋಡೆ, ನಿಜವಾದ ಮನೆ ಅಂತರಂಗದ ಗಡಿಗೋಡೆ.ಬಾಹ್ಯ ಮನೆ ಹಾಳಾಗಬಹುದು; ಆದರೆ ಆ
ಮನೆ ಸೃಷ್ಟಿಸಿದ ಮಾನವೀಯ ಮೌಲ್ಯಗಳು, ಆತ್ಮದ ಶಾಂತಿ, ಮತ್ತು ಜ್ಞಾನದ ಬೆಳಕು ಇವು ಶಾಶ್ವತ.
ಸ್ವಂತ ಮನೆ ಮನುಷ್ಯನ ಜೀವನದ ಒಂದು ಹಂತ ಮಾತ್ರವಲ್ಲ; ಅದು ಅಸ್ತಿತ್ವದ ಆಳವಾದ ಅನುಭವ.
ಗೃಹವು ನಮ್ಮ ಸಂಬಂಧಗಳ, ಮೌಲ್ಯಗಳ, ಧರ್ಮಾಚರಣೆಯ, ಮೌನದ, ಮತ್ತು ಆತ್ಮಜ್ಞಾನದ ಮೂಲಸ್ಥಳ.
ಆಧ್ಯಾತ್ಮಿಕವಾಗಿ ಮನೆ ಎಂದರೆ ಹೊರಗಿನ ಗೋಡೆಗಳಿಗಿಂತ ಒಳಗಿನ ಶಾಂತಿಗೆ ಹೆಸರು.
. ಅದು
ಮನಸ್ಸಿಗೆ ಆಂತರಿಕ ಭದ್ರತೆ ಮತ್ತು ವಿಶ್ವಾಸ ನೀಡುತ್ತದೆ. ಕವಿ ಹೇಳುತ್ತಾನೆ, ʻʻ
ಅಲ್ಲಿರುವುದು ನಮ್ಮನೆ, ಇಲ್ಲಿರುವುದು
ಸುಮ್ಮನೆ.ʼʼಎಂದು.
ಮನೆಯೊಳಗೆ ಬೆಳೆಸಲ್ಪಡುವ
ಸಂಬಂಧಗಳು—ಪ್ರೀತಿ, ಕಾಳಜಿ, ಕರುಣೆ, ನಂಬಿಕೆ—ಇವುಗಳು ಗೃಹವನ್ನು ಆಧ್ಯಾತ್ಮಿಕ ಶಕ್ತಿಕೇಂದ್ರವನ್ನಾಗಿಸುವ ಮೂಲಘಟಕ. ಭಾರತೀಯ
ಸಂಸ್ಕೃತಿಯಲ್ಲಿ ಮನೆಗೆ “ಗೃಹ” ಎಂಬ ಪದ, “ಗೃಹಸ್ಥ” ಎಂಬ ಆಶ್ರಮ, ಮತ್ತು “ಗೃಹಧರ್ಮ” ಎಂಬ ಶಾಶ್ವತ ಕಲ್ಪನೆಗಳ ಮೂಲಕ ಇದು ಅತ್ಯಂತ ಪವಿತ್ರ ನೆಲೆ ಎಂದು ಬಿಂಬಿತವಾಗಿದೆ.
ಸುಮನಾಂಬರ – ೧೭.
ʻʻ
ಕೇಳು ಧನಂಜಯ.......ʼʼ
ಇತ್ತೀಚಿನ ದಶಕಗಳಲ್ಲಿ,
ತನ್ನ ಪ್ರಾದೇಶಿಕ ವೈವಿಧ್ಯ, ವಿವಿಧ ಜನಾಂಗೀಯ ವೈಶಿಷ್ಟ್ಯ, ಸಾಂಸ್ಕೃತಿಕ ಶ್ರೀಮಂತಿಕೆ, ಮತ್ತು ಸಾಹಿತ್ಯಿಕ ಸೃಷ್ಟಿಪ್ರಕ್ರಿಯೆಗಳಿಂದ ಉತ್ತರಕನ್ನಡ
ಜಿಲ್ಲೆ ತನ್ನ ಅಸ್ಮಿತೆಯನ್ನು ಪ್ರಪಂಚದೆದುರು ಯಶಸ್ವೀಯಾಗಿ
ಆಭಿವ್ಯಕ್ತಿಸುತ್ತಿದೆ. ಜಿಲ್ಲೆಯ ಪ್ರತಿಭೆಗಳು,
ದೇಶದ ರಾಜ್ಯದ ಅದ್ಯಾವುದೇ
ಭಾಗದಲ್ಲಿರಲಿ, ಜಿಲ್ಲೆಯಬಗೆಗೆ ಧ್ಯಾನಿಸುತ್ತಿರುವ ಪರಿಯನ್ನು ಕಂಡಾಗ ಅಭಿಮಾನ ಉಕ್ಕಿ ಬರುತ್ತಿದೆ. ಪಶ್ಚಿಮ ಘಟ್ಟವನ್ನೇ ಕೇಂದ್ರವನ್ನಾಗಿಸಿಕೊಂಡು, ಅಲ್ಲಿಯ
ಸಂಸ್ಕೃತಿಯ ಅನನ್ಯತೆಯನ್ನು ಸೂಕ್ಷ್ಮವಾಗಿ ಚಿತ್ರಿಸುತ್ತಿರುವ ಇನ್ನೊಂದು
ಸಾಹಿತ್ಯಿಕ ಕೃತಿ ಇತ್ತೀಚೆಗೆ
ಪ್ರಕಟಗೊಂಡು ಕುತೂಹಲ ಮೂಡಿಸುತ್ತಿದೆ. ಅದು ಒಂದು ಕಾದಂಬರಿ.
ʻʻಕಾದಂಬರಿʼʼ ಸಾಹಿತ್ಯಪ್ರಿಯರಿಗೆ ರೋಮಾಂಚನ
ಬೆರಗು ವಿಸ್ಮಯಗಳನ್ನು ಏಕಕಾಲದಲ್ಲಿ ಒಮ್ಮೆಲೇ
ಮೂಡಿಸುವ ಶಬ್ದ. ಮಹಾಕಾವ್ಯದ ಪ್ರತಿನಾಯಕನಾಗಿ
ವಿಶ್ವದಲ್ಲಿ ವಿಜ್ರಂಭಿಸುತ್ತಿರುವ ಕಾದಂಬರಿ
ಎಂಬ ಈ
ಕಲಾಮಾಧ್ಯಮ, ತನ್ನ ಅಪರಿಮಿತ ವೈಶಾಲ್ಯ,
ಅನುಭವ ಸಾಮ್ರಾಜ್ಯ, ತಾತ್ವಿಕತೆ ಆಧ್ಯಾತ್ಮಿಕತೆಗಳ ನಡುವೆ,
ವಾಸ್ತವದ ಬದುಕಿನ ನಿಜವನ್ನು ಕಾಣುತ್ತ, ರಂಜನೆ ಕುತೂಹಲ ಮತ್ತು ಮಾನವ ಲೋಕದ ವೈಚಿತ್ರ್ಯಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡ, ಮಹಾ ಪ್ರವಾಹವಾಗಿ ಪ್ರವಹಿಸುತ್ತಿದೆ. ಕನ್ನಡ
ಕಾದಂಬರಿ ಪ್ರಪಂಚಕ್ಕೆ ಶತಮಾನ ಕಳೆಯುತ್ತಿದೆ ಅಷ್ಟೇ.
ಅಷ್ಟರಲ್ಲೇ ವಿಶ್ವಸಾಹಿತ್ಯಕ್ಕೆ ಸರಿಸಾಟಿಯಾಗಿ
ಬೆಳೆದಿರುವ ಕನ್ನಡ ಕಾದಂಬರಿ ದಿನದಿಂದ
ದಿನಕ್ಕೆ ತಲೆಮಾರಿಂದ ತಲೆಮಾರಿಗೆ
ಸಾಗುತ್ತ, ಆಧುನಿಕ ತಂತ್ರಜ್ಞಾನದ
ಅಲೆಯಲ್ಲೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.
ಸಾಹಿತ್ಯದ ಉಳಿದೆಲ್ಲ ಪ್ರಕಾರಗಳಿಗಿಂತ, ಕಾದಂಬರಿ ಪ್ರಕಾರಕ್ಕೆ,
ಅದರದ್ದೇ ಆದ ಅನುಕೂಲವಿದೆ.
ಮುಕ್ತ ಸ್ವಾತಂತ್ರ್ಯವಿದೆ. ಕಾಲ ಪ್ರದೇಶ ಗಳನ್ನು
ಮೀರಿ, ಹೊಸ ಹೊಸ ಕಲ್ಪನೆಯ ಜಗತ್ತನ್ನು ಸೃಷ್ಟಿಸುವ ಸೌಲಭ್ಯವಿದೆ.
ಬಂಗಾಲಿಯ ಆನಂದ ಮಠ ದಂತಹ ಕೃತಿ, ಪ್ರೇಮಚಂದರ
ʻಗೋದಾನ್ ದಂತಹ ಕೃತಿಗಳು
ಮೂಡಿಸಿದ ಕ್ರಾಂತಿ ಸರ್ವವಿದಿತ.
ಕನ್ನಡದ ಕಾರಂತ, ಕುವೆಂಪು, ನಿರಂಜನ,
ತ.ರಾ.ಸು. ಅನಕೃ, ಕಟ್ಟೀಮನಿ,
ದೇವುಡು, ಭೈರಪ್ಪ ರವರಂತಹ ದಿಗ್ಗಜ ಕೃತಿಕಾರರು
ಮೂಡಿಸಿದ ಸಂಚಲನ ಅನನ್ಯ.
ಕೃತಿಯೊಂದು ಕಾಡಬೇಕು, ಇಡೀ ವ್ಯಕ್ತಿತ್ವವನ್ನು ಆವರಿಸಬೇಕು, ಬಾಹ್ಯ ಬದುಕೇ
ಪರಮಸತ್ಯ ಎಂದು ತಿಳಿದು, ತನ್ನ ಕುಟುಂಬ,
ತಾನು, ತನ್ನ ಆಸ್ತಿ ಪಾಸ್ತಿ, ಎಂಬ ಹಳವಂಡದಲ್ಲೇ ಬಿದ್ದು ಒದ್ದಾಡುವ ಸಾಮಾನ್ಯನಿಗೆ,
ನಮ್ಮ ಅಂತರಂಗವೂ ಒಂದು ಪ್ರತ್ಯೇಕ ಪ್ರಪಂಚ.
ಅದಕ್ಕೂ ಕೊಂಚ ಬೆಳಕ ಸುರುವಬೇಕೆಂಬ ಅರಿವನ್ನು
ಮೂಡಿಸುವ ಶ್ರೇಷ್ಠ ಕೃತಿಗಳು
ಮಾನವ ಮನಸ್ಸಿಗೊಂದು ಮಾನವತ್ವದ ತರಬೇತಿಯ
ವಿಶಾಲ ಅಂಗಣವಿದ್ದಂತೆ.
ಇಂತಹ ಒಂದು ಮಹಾತ್ವಾಕಾಂಕ್ಷೆಯಿಂದ ರಚಿತಗೊಂಡು, ಇತ್ತೀಚೆಗೆ ಪ್ರಕಟಗೊಂಡು, ಸಹೃದಯರ
ಗಮನಸೆಳೆದು ಸಂಚಲನ ಮೂಡಿಸಿದ ಕಾದಂಬರಿ, ʻʻ ಕೇಳು ಧನಂಜಯ....ʼʼ
ಯುವ ಪತ್ರಕರ್ತರಾಗಿ, ರಾಜ್ಯಾದ್ಯಂತ
ಅಲೆಯುತ್ತ, ವೃತ್ತಿಯ ಸಂಕೀರ್ಣ ಸ್ಥಿತಿಯಲ್ಲೂ, ಸಮಾಜ, ಸಂಸ್ಕೃತಿ ಪರಂಪರೆ,
ಪರಿಸರ, ಮತ್ತು ಕಲೆ ಇವೆಲ್ಲವುಗಳನ್ನೂ ತನ್ನ ಪ್ರವೃತ್ತಿಯ ತೆಕ್ಕೆಯಲ್ಲಿ
ಒಳಗಾಗಿಸಿಕೊಂಡ, ರಾಜಶೇಖರ
ಜೋಗಿನಮನೆಯವರು ಅದೊಂದು ವಿಶಿಷ್ಠ
ವೈವಿಧ್ಯಪೂರ್ಣ ಕಾದಂಬರಿಯೊಂದನ್ನು ನಮ್ಮ ಕೈಗಿತ್ತಿದ್ದಿದ್ದಾರೆ.
ಆಕರ್ಷಕ ಶೀರ್ಷಿಕೆಯಿಂದಲೇ ಸಹೃದಯನನ್ನು
ಆಕರ್ಷಿಸುವ ಕೇಳು ಧನಂಜಯ ಕೃತಿ,
ಮುಖ್ಯವಾಗಿ, ಕೃತಿಕಾರನ ಜನ್ಮಭೂಮಿ, ಉತ್ತರಕನ್ನಡದ ವೈವಿಧ್ಯಮಯ
ಪರಿಸರವನ್ನೇ ಪ್ರಧಾನ ಪಾತ್ರವನ್ನಾಗಿಸಿದೆ. ಕೃತಿಯೊಳಗಿನ
ಪಾತ್ರಗಳಿಗಿಂತ, ಜಿಲ್ಲೆಯ ಬಹುಭಾಗ ವ್ಯಾಪಿಸಿದ ದಟ್ಟ ಕಾನನವೇ
ತನ್ನ ನಿಗೂಢತೆ, ರುದ್ರಸೌಂದರ್ಯ,
ಪ್ರಾಣಿ ಪಕ್ಷಿಗಳು, ಹೆಮ್ಮರಗಳಿಂದ
ಇಲ್ಲಿ ಪುನಹ ಜೀವತಳೆದಿದೆ.
ಶಿವರಾಮ ಕಾರಂತರಂತಹ
ಲೇಖಕರು, ಕಳೆದ ಶತಮಾನದ
ಪ್ರಾರಂಭದಲ್ಲೇ ತಮ್ಮ ತಮ್ಮ ನೆಲದ ಅಸ್ಮಿತೆಯನ್ನು
ವಿವರವಾಗಿ, ಆಳವಾಗಿ ಚಿತ್ರಿಸಿ
ಕನ್ನಡವನ್ನು ಶ್ರೀಮಂತಗೊಳಿಸಿದ್ದರು. ಆದರೆ ನಮ್ಮ
ಉತ್ತರಕನ್ನಡ ಜಿಲ್ಲೆ, ತನ್ನತನವನ್ನು
ಕಂಡುಕೊಳ್ಳಲು, ಮತ್ತೆ ಮೂರು ತಲೆಮಾರುಗಳನ್ನು ಕಳೆಯಬೇಕಾಯಿತು.
ವಿ.ಟಿ. ಶೀಗೇಹಳ್ಳಿ, ವಿಷ್ಣುನಾಯಕ್, ನಾಸು ಭರತನಹಳ್ಳಿ, ಶಿವಾನಂದ
ಕಳವೆ, ಭಾರತಿ ಹೆಗಡೆ,
ಉದಯಕುಮಾರ್ ಹಬ್ಬು, ಭಾಗೀರತಿ ಹೆಗಡೆ, ಭಾರತಿ
ಹೆಗಡೆ, ಮುಂತಾದವರು ಈಗಾಗಲೇ ಉತ್ತರ ಕನ್ನಡದ
ಸಂಸ್ಕೃತಿಯನ್ನೇ ಪ್ರಧಾನ ಧಾರೆಯನ್ನಾಗಿಸಿ ಕೃತಿ ರಚಿಸಿ ಯಶ ಪಡೆದಂತೇ ರಾಜಶೇಖರರೂ
ನಾಲ್ಕೈದು ಶತಮಾನ ಹಿಂದಕ್ಕೆ
ಕಾಲಯಂತ್ರದಲ್ಲಿ ಕುಳಿತು ಸಾಗಿ, ಅಪರೂಪದ
ವಿವರಗಳನ್ನು ಸಂಗ್ರಹಿಸುತ್ತ, ಜಿಲ್ಲೆಯ ಬದುಕು ಬಾಳಿಬದುಕಿದ
ಪರಿಯನ್ನು ಆಕರ್ಷಕವಾಗಿ, ಕುತೂಹಲಕಾರಿಯಾಗಿ ಚಿತ್ರಿಸಲು
ಪ್ರಯತ್ನಿಸಿದ್ದಾರೆ. ಜಿಲ್ಲೆಯಲ್ಲೇ ಹುಟ್ಟಿ,
ಜಿಲ್ಲೆಯ ತುಂಬ ಹರಿಯುತ್ತ,
ಜಿಲ್ಲೆಯಲ್ಲೇ ಸಾಗರ ಸೇರುವ ಅಘನಾಶಿನೀ ನದಿಯನ್ನೇ
ಕೃತಿಯ ಶ್ರುತಿಯನ್ನಾಗಿಸಿ, ಅದರ ದಡದಲ್ಲಿ ಬೆಳೆದ ಸಾಂಸ್ಕೃತಿಕ ಸಂಪತ್ತನ್ನು
ಕಟ್ಟಿಕೊಡುವ ಅವರ ಪ್ರಾಮಾಣಿಕ
ಪ್ರಯತ್ನ ಖುಷಿನೀಡುತ್ತಿದೆ.
ಕಾದಂಬರಿಯ ಮುಖ್ಯ ಪಾತ್ರ ಅನಂತಜ್ಜ,
ಪಧಾನ ನಿರೂಪಕನೂ ಹೌದು.
ಅನಂತಜ್ಜ ಒಂದು ಸಂದರ್ಭದಲ್ಲಿ
ʻʻ .... ಆದರೆ ಒಂದು ಮಾತು ಸತ್ಯ. ಹಿಂದೆ ಅವರೆಲ್ಲ
ಬದುಕಿದ್ದ ಕಾರಣದಿಂದಲೇ ನಾವು ಇಂದು ಈ ಜಗತ್ತಿಗೆ
ಬರಲು ಸಾಧ್ಯವಾಗಿದೆ. ಆದ್ದರಿಂದ
ನಾವು ಅವರನ್ನು ಅರಿಯುವುದು
ಅಂದರೆ. ನಮ್ಮ ನಿನ್ನೆಗಳನ್ನು
ನೆನಪಿಸಿಕೊಂಡ ಹಾಗೆ. ಇತಿಹಾಸ
ವರ್ತಮಾನಕ್ಕೆ ಗೊತ್ತಿದ್ದಾಗ ಮಾತ್ರ ಭವಿಷ್ಯ
ರೂಪಿಸಲು ಸಾಧ್ಯ ಎಂದು ಅನ್ನಿಸಿದ್ದರಿಂದ ಆ ಮನೆತನದ
ಕುರಿತು ಇಷ್ಟನ್ನಾದರೂ ಸಂಗ್ರಹಿಸಲು
ಸಾಧ್ಯವಾಯಿತು. ʼʼ
ಎಂದು ಆಡುವ ಮಾತು ಇಡೀ ಕೃತಿಯ
ಸಂದೇಶವನ್ನೇ ಸಾರುತ್ತದೆ. ಅನಂತಜ್ಜ ಮತ್ತು ಮೊಮ್ಮಗ ಧನಂಜಯರ
ನಡುವೆ ನಡೆಯುವ ಸಂವಾದ,
ಈ ಮಣ್ಣಿನ ಏಳು ಬೀಳುಗಳ
ಕಥನವಾಗಿ ಆಕಾರ ಪಡೆಯುತ್ತ ಸಾಗುತ್ತದೆ.
ಭಾರತೀಯ ಕಥನ ಪರಂಪರೆಗೆ ತನ್ನದೇ
ಆದ ವೈಶಿಷ್ಟ್ಯವಿದೆ. ಮಹಾಭಾರತದಂತಹ
ಕೃತಿಯೂ ಸಹ, ಒಬ್ಬ ಇನ್ನೊಬ್ಬನಿಗೆ. ಇನ್ನೊಬ್ಬ ಮತ್ತೊಬ್ಬನಿಗೆ, ಆತ ಮಗದೊಬ್ಬನಿಗೆ
ಹೇಳುವ ಕತೆಯೊಂದು, ಪ್ರತಿಯೊಬ್ಬನ ಮೂಲಕ ಸುಪುಷ್ಠವಾಗಿ
ಬೆಳೆಯುತ್ತಲೇ ಸಾಗುತ್ತದೆ. ಇಲ್ಲಿಯೂ
ಹಾಗೆಯೇ, ಕೃಷ್ಣಾರ್ಜುನ ಸಂವಾದದಂತೆ
ಅನಂತಜ್ಜ, ಧನಂಜಯನಿಗೆ ಕತೆ ಹೇಳಿದರೂ,
ಅದು ಮತ್ತೊಬ್ಬರಿಂದ ಆತ ಕೇಳಿದ್ದು. ಮತ್ತೆಲ್ಲೋ
ಓದಿದ್ದು. ಕೆಲವು ತಾಳೆಗರಿಗಳಲ್ಲಿ ದೊರಕಿದ್ದು. ಮತ್ತಷ್ಟು ದಂತಕತೆಗಳಿಂದ ಸಂಗ್ರಹಿಸಿದ್ದು. ಅವೆಲ್ಲ
ಒಂದು ಸಂವೇದನೆಯ ಮೂಸೆಯಲ್ಲಿ ಬೆರೆತು
ಹರಳುಗಟ್ಟಿದ ಸಂಗತಿಗಳು, ಮನುಷ್ಯ
ಮತ್ತು ಪ್ರಕೃತಿಯ ಸಂಬಂಧ, ಪ್ರೀತಿ ಧ್ವೇಷ,
ಪ್ರೇಮ ಕಾಮ, ವ್ಯವಹಾರ,
ಮತ್ತು ರಾಜಕಾರಣಗಳೆಲ್ಲ ತಳಿಕೆಗೊಂಡು,
ಒಂದು ಸಂಸ್ಕೃತಿಯಾಗಿ ಎದ್ದುನಿಲ್ಲುವ
ಪ್ರಕ್ರಿಯೆ ಅನಾವರಣಗೊಳ್ಳುತ್ತ ಸಾಗುತ್ತದೆ.
ಕೃತಿಯ ವಸ್ತುವಿಗೂ, ಹೇಳುವ ತಂತ್ರಕ್ಕೂ, ನಿರೂಪಿತ
ಭಾಷೆಗೂ ಸಾವಯವ ಸಂಬಂಧ ಗಟ್ಟಿಯಾಗಿರುವುದರಿಂದ, ಕೃತಿಗೊಂದು
ವಿಶಿಷ್ಟ ಆಕರ್ಷಣೆ ಮತ್ತು ಜೀವಂತಿಕೆಯೊದಗಿದೆ.
ವರ್ತಮಾನದಲ್ಲಿ ನೆಲೆಸಿದ
ಕಥನ ಸರಿ ಸುಮಾರು ಐದುನೂರುವರ್ಷಗಳಷ್ಟು ಕಾಲ ಹಿಂದಕ್ಕೆ ಸಾಗುತ್ತದೆ.
ಒಂದು ಮನೆತನದ ಪ್ರಾರಂಭದಿಂದ
ವಿನಾಶದ ವರೆಗಿನ ಹರಿವಿನ ನಡುವೆ,
ಒಂದು ಗ್ರಾಮೀಣ ಕಲಾಪ್ರೇಮೀ
ವಂಶವೊಂದರ ಏಳು ಬೀಳುಗಳು, ಕಲಾಚಟುವಟಿಕೆಗಳು, ಪ್ರಕೃತಿಯೊಂದಿಗೆ ಸೆಣಸಾಟ,
ಸಾಂಸಾರಿಕ ಸಂಘರ್ಷ, ಕೃಷಿಬದುಕಿನಲ್ಲಿಯ ಅವಿರತ ಹೋರಾಟ,
ಇವುಗಳ ನಡುವೆ ಮನುಷ್ಯ ಸಂಬಂಧಗಳ ತಾಕಲಾಟಗಳನ್ನು
ಒಳಗೊಳ್ಳುತ್ತ, ಸಾಗುತ್ತದೆ.
ಸಾಮಾನ್ಯ ಜನರಿಗೆ ನಗರವೆಂದರೆ
ಅದೊಂದು ಕನಸು. ಇಡೀ ಊರಿಗೆ
ಒಬ್ಬನೋ ಇಬ್ಬರೋ ನೂರಾರು ಮೈಲಿ
ದೂರದ ನಗರವನ್ನೋ ರಾಜನ ರಾಜಧಾನಿಯನ್ನೋ ನೋಡಿರುತ್ತಾರೆ.
ನೋಡಿದವರ ಅಲ್ಲಿಯ ವೈಭವವನ್ನು ವರ್ಣಿಸಿದರೆ ಅದೇ ಒಂದು ಅಚ್ಚರಿ.
ಬೆರಗು.
ಆ ಕಾಲದ ದಟ್ಟ
ಮಲೆನಾಡಿನ ಸೌಲಭ್ಯರಹಿತ ಸ್ಥಿತಿ,
ಕುದುರೆ ಚಕ್ಕಡಿಗಾಡಿ, ಪಾದಯಾತ್ರೆ
ಮಾತ್ರ ಸಂಪರ್ಕಮಾಧ್ಯಮ ಆಗಿರುವಂತಹ
ಸ್ಥಿತಿಯಲ್ಲಿ, ನೆಲೆನಿಂತಿದ್ದ ಬದುಕಿಗೆ, ಮನರಂಜನೆಯೆಂದರೆ, ಯಕ್ಷಗಾನದಂತಹ,
ಕಲಾಚಟುವಟಿಕೆ ಮಾತ್ರ. ರೋಗಗಳಿಗೆ ನಾಟೀ ಮದ್ದು, ವಿವಾದಕ್ಕೆ
ಸ್ಥಳೀಯ ಪಂಚಾಯತಿಕೆ, ಸಾಲಸೋಲಕ್ಕೆ
ಶ್ರೀಮಂತರಮೇಲಿನ ಅವಲಂಬನೆ, ಇವುಗಳನ್ನೂ ಮೀರಿ ಸಮಸ್ಯೆಗಳು
ಎದುರಾದರೆ ಸ್ಥಳೀಯ ಸಂಸ್ಥಾನಿಕರ
ಮೊರೆಹೋಗುವುದು, ಇದೇ ಬದುಕಾಗಿದ್ದ ಕಾಲದಲ್ಲಿ, ಕೆಲವರಾದರೂ
ಹೊರಪ್ರಪಂಚಕ್ಕೆ ಧಾವಿಸುತ್ತಿದ್ದರು. ಲೋಕದ ಅನುಭವಗಳನ್ನು
ಗ್ರಹಿಸಿ ಸ್ಥಳೀಯ ಅನುಭವದ
ಕೊರತೆಯನ್ನು ತುಂಬುತ್ತಿದ್ದರು.
ಧಾರ್ಮಿಕ ನಂಬುಗೆ, ದೈವಭಕ್ತಿ, ಪ್ರಕೃತಿಯ ಆಘಾತಗಳಿಗೆ ಶರಣಾಗುವುದು,
ಸಾಧು ಸಂತರು ಅವಧೂತರುಗಳಿಂದ, ಆಧ್ಯಾತ್ಮಿಕ ಜ್ಞಾನ ಪಡೆಯುವುದು, ಹಳ್ಳಿಗಳ
ಸಹಜ ವಿದ್ಯಮಾನವಾಗಿತ್ತು. ಸದಾ ಮಹಾ ರೋಗ,
ಮಹಾ ಮಳೆ, ಮಹಾಪೂರಗಳ
ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುತ್ತಿದ್ದ
ಮನುಷ್ಯನಿಗೆ, ಅವನ ಆತ್ಮಶಕ್ತಿ, ದೈವಭಕ್ತಿ, ಮತ್ತು ಪ್ರಕೃತಿಗೆ ಶರಣಾಗುವ ಮೂಲಕವೇ
ಬದುಕು ಮುನ್ನಡೆಯುತ್ತಿತ್ತು.
ಸಾಮಾನ್ಯನನ್ನು ಕಾಲವೇ ಕಟ್ಟಿಹಾಕಿದರೆ, ಕಲಾವಿದ
ಮಾತ್ರ ಕಾಲವನ್ನೇ ಕಟ್ಟಿಹಾಕುತ್ತಾನೆ, ಎಂಬ ನುಡಿಗಟ್ಟೊಂದಿದೆ. ಪ್ರಸ್ತುತ
ಕಾದಂಬರಿ ಕಾಲವನ್ನು ಕಟ್ಟುವ ಕ್ರಿಯೆಯಲ್ಲಿ
ತೊಡಗಿಕೊಂಡಿದೆ.
ದಟ್ಟಡವಿಯನ್ನು
ಕಡಿದು, ನೆಲವನ್ನು ಹದಗೊಳಿಸಿ, ಕೃಷಿಗೆ ಸಜ್ಜುಗೊಳಿಸುವ
ಅಸಾಮಾನ್ಯ ಶ್ರಮದ ವಿವರದೊಂದಿಗೆ, ಮೌಲ್ಯದ
ಅರಿವಿದ್ದೂ ಪ್ರಜ್ಞೆಯ ಆಳಕ್ಕೆ ಮಾನವೀಯ ಅನುಭವಗಳನ್ನು ನಾಟಿಗೊಳಿಸುವ ಪ್ರಕ್ರಿಯೆಯಲ್ಲಿ ಮನಸ್ಸನ್ನೂ
ಹದಗೊಳಿಸಬೇಕಾಗುತ್ತದೆ. ಪ್ರಕೃತಿಯೊಂದಿಗೆ ಸೆಣಸಾಡಿ
ಕೃಷಿಗೈದಂತೇ, ಚಂಚಲ ಮನಸ್ಸುಗಳೊಂದಿಗೂ ಸೆಣಸಾಡಬೇಕಾಗುತ್ತದೆ. ಆಗ ಮಾತ್ರ ಸಂಸ್ಕೃತಿ
ಫಲಭರಿತ ಕಲ್ಪವೃಕ್ಷವಾಗುತ್ತದೆ.
ಕೃತಿಯ ಪಾತ್ರಗಳೆಲ್ಲ ತಮ್ಮ ಸಾತ್ವಿಕ ಗುಣದಿಂದ, ಸಂಪ್ರದಾಯ
ಪರಂಪರೆಯ ಅನುಸರಣೆಯಿಂದ ಬದುಕು ಸಾಗಿಸುತ್ತವೆ. ಹೇರಂಭ ,
ಚಿದಂಬರ ಗಿರಿಜಾ ಮದುವೆಗೆ ಅಡ್ಡಗಾಲು
ಹಾಕಿ, ಆಸ್ತಿ ಲಪಟಾಯಿಸಲು ಸಂಚು ಹೂಡುವ, ಹೇರಂಭ ಮತ್ತು ರಘುವೀರ ಭಟ್ಟ, ಮುಂತಾದ
ಪಾತ್ರಗಳಲ್ಲಿ ಕೆಲವು ದುರ್ಗುಣಗಳು
ಕಂಡಂತಾದರೂ, ಸಂಬಂಧಗಳೇ ತುಂಡಾಗುವಂತಹ
ಸ್ಥಿತಿ ನಿರ್ಮಾಣವಾಗುವುದಿಲ್ಲ.. ಮಾನವ ಸಹಜವಾದ ಈರ್ಷೆ ಮತ್ಸರಗಳ
ಪ್ರಭಾವ ಪಾತ್ರಗಳ ಬದುಕಿನಮೇಲಾದರೂ
ಅದು ಜೀವವಿರೋಧಿಯಾಗಲಿಲ್ಲ. ನಾಲ್ಕಾರು
ಅವಧೂತ ಪಾತ್ರಗಳ ಆಧ್ಯಾತ್ಮಿಕ ಪ್ರಭಾವ,
ಇಡೀ ಸಮುದಾಯವನ್ನು ಸುಸ್ಥಿತಿಯಲ್ಲಿರಿಸಲು ಸಹಾಯವಾಗುತ್ತದೆ. ಒಂದು ಕಾಲದಲ್ಲಿ ಧರ್ಮ ತನ್ನ ಧಾರ್ಮಿಕ ಮೌಲ್ಯದಲ್ಲೇ
ಸ್ಥಿರವಾಗಿದ್ದುಕೊಂಡು, ಸಾಮಾನ್ಯನ ಬದುಕು ನೈತಿಕಸುಸ್ಥಿರತೆಯಲ್ಲಿರುವಂತೇ ಕಾದುಕೊಂಡಿದ್ದನ್ನು ಕೃತಿ ಚಿತ್ರಿಸುತ್ತದೆ.
ಬದುಕು ಮತ್ತು ಮೌಲ್ಯಗಳ ಸಂಘರ್ಷಗಳನ್ನು
ಚಿತ್ರಿಸುತ್ತಲೇ. ತನ್ನ ಮಣ್ಣಿನ ಸಮಗ್ರ ವಿವರಗಳನ್ನೂ ತೆಕ್ಕೆಗೆ
ಬಾಚುವ ಉತ್ಸಾಹದಲ್ಲಿ, ಇತಿಹಾಸ
ಪುರಾಣ ದಂತಕತೆಗಳು ಕತೆಯೊಳಗೆ
ಸಾವಯವ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುವಲ್ಲಿ, ಸೋತಂತೆನ್ನಿಸಿದರೆ ಆಶ್ಚರ್ಯವಿಲ್ಲ. ಸ್ವಥಃ
ಪತ್ರಕರ್ತರಾಗಿದ್ದು ಕಾದಂಬರಿಯಂತಹ ಕಲಾ ಚಟುವಟಿಕೆಯಲ್ಲಿ ತೊಡಗಿದಾಗ ವಿವರಗಳು
ಕೆಲವೊಮ್ಮೆ ಯಾಂತ್ರಿಕವಾಗಿ, ಅಥವಾ ವರಿದಿಯಂತಾಗಿ ತೋರುವುದೂ
ಇದೆ.
೧೮೦ ಪುಟಗಳ ಕೃತಿಯಲ್ಲಿ ಐವತ್ತಕ್ಕೂ
ಹೆಚ್ಚು ಪಾತ್ರಗಳು ಇಡಿಕಿರಿದಿವೆ. ಅದೆಷ್ಟೂ ಪಾತ್ರಗಳು ಜೀವಪಡೆಯುವ ಮೊದಲೇ ನಿರ್ಗಮಿಸಿ
ಬಿಡುತ್ತವೆ. ಸ್ತ್ರೀ ಪಾತ್ರಗಳು
ಇಲ್ಲಿ ಕೇವಲ ಸಹಾಯಕ ಪಾತ್ರಗಳಾಗಿ
ಮಾತ್ರ ಕಾಣಿಸಿಕೊಳ್ಳುತ್ತವೆ.
ಏಳೆಂಟು ತಲೆಮಾರುಗಳ ಸುದೀರ್ಘ ಕಥನದಲ್ಲಿ, ಗೋವಿಂದ,ಹೆಗಡೆ, ಶ್ರೀಧರ, ಈಶ್ವರಹೆಗಡೆ, ಕಮಲಾಕರ ಹೆಗಡೆ, ಮುಂತಾದ
ಪಾತ್ರಗಳು ಗಮನಸೆಳೆಯುತ್ತವೆ. ಯಕ್ಷಗಾನ ಕಲೆಯ
ವರ್ಣನೆಗಳು, ಪುರಾಣಗಳ ತಳಪಾಯದಲ್ಲಿ
ವರ್ತಮಾನದ ಸವಾಲುಗಳಿಗೆ ಸ್ಪಂದಿಸುತ್ತವೆ. ಹಿಂದುಸ್ಥಾನಿ ಸಂಗೀತದ ಪ್ರವೇಶದ
ವಿವರಗಳು ಕುತೂಹಲ ಮೂಡಿಸುತ್ತವೆ. ದೈವ ಮೈಮೇಲೆ ಬಂದು ಬದುಕಿಗೊಂದು
ದಾರಿತೋರಿಸುವ ಘಟನೆಗಳು, ಪ್ಲೇಗ್
ಮಲೇರಿಯಾ ರೋಗಗಳ ದಾರುಣತೆ, ಇಡೀ ಊರಿಗೆ
ಊರೇ ಖಾಲಿಯಾಗುವ ದುರಂತದ
ವಿವರಗಳು ಇತಿಹಾಸದ ಬಗೆಗೆ ಗಮನಸೆಳೆಯುತ್ತವೆ.
ತಮ್ಮ ಪ್ರಾರಂಭಿಕ ಪ್ರಯತ್ನದಲ್ಲೇ ಕೃತಿಕಾರರು
ಗಂಭೀರವಾಗಿ ಬದುಕಿನ ನಿಗೂಢ ಚಲನೆಯನ್ನು
ಅರ್ಥಮಾಡಿಕೊಳ್ಳಲು ಹೊರಟಿರುವುದು ಗಮನಾರ್ಹ.
ತನ್ನ ನೆಲದ ಚರಿತ್ರೆಯನ್ನು ಹಲವು ಮೂಲಗಳಿಂದ ಸಂಗ್ರಹಿಸಿಕೊಳ್ಳುತ್ತ ವರ್ತಮಾನದ
ತಲೆಮಾರಿನಲ್ಲಿ ಪರಂಪರೆಯ ಅರಿವನ್ನು ಬಿತ್ತುವ ಮಹತ್ವಾಕಾಂಕ್ಷೆ
ಖುಷಿ ನೀಡುತ್ತದೆ.
ಕತೆ ಕಾಲ್ಪನಿಕವಾದರೂ
ಬದುಕಿನ ನಿಜರೂಪದ ಬಿಂಬವಾಗಿ, ಮಾಟ ಮರೂಡಿ ದೈವ ಗಳೆಲ್ಲ
ಭವಿಷ್ಯಕ್ಕೆ ಒಂದೊಂದು ರೂಪಕವಾಗುತ್ತ, ಸಾಗುವ ಇಲ್ಲಿಯ ನಿರೂಪಣೆಗೆ
ಇನ್ನಷ್ಟು ಕಲಾತ್ಮಕತೆಯೊದಗಿದ್ದರೆ ಕೃತಿ ಇನ್ನೂ ಮಿಂಚುತ್ತಿತ್ತು. ಆದರೂ ಕಾದಂಬರಿ
ಕಲೆಯನ್ನು ಜೀವನದ ಕ್ಷಣಿಕತೆ,
ಅದರೊಳಗೇ ಸೃಷ್ಟಿಯಾಗುವ ವೈಶಿಷ್ಟ್ಯಪೂರ್ಣ ಸಂಸ್ಕೃತಿಯ ಮಹತ್ವವನ್ನು
ಕಂಡುಕೊಳ್ಳಲು ಗೈದ ಸಾಹಸ ಮೆಚ್ಚುವಂಥಹದ್ದಾಗಿದೆ. ಪ್ರತೀ
ಪ್ರದೇಶಕ್ಕೂ ಪ್ರತೀ ಸಮುದಾಯಕ್ಕೂ
ಅದರದ್ದೇ ಆದ ಭಿನ್ನತೆಯಿದೆ.
ಪರಂಪರೆಯಿದೆ. ಚರಿತ್ರೆಯಿದೆ. ಅವೆಲ್ಲ ಒಗ್ಗೂಡಿ ಸೃಷ್ಟಿಸುವ
ಮಾನವೀಯ ಚಟುವಟಿಕೆ ಸಾರ್ವತ್ರಿಕವಾಗುತ್ತದೆ. ಪ್ರಸ್ತುತ
ಕೃತಿಯ ಮಹತ್ವವಿರುವುದು ಇಲ್ಲಿಯೇ. ಮಲೆನಾಡಿನಲ್ಲಿ ಬೇರೂರಿ, ಕೊಂಬೆ ರೆಂಬೆಗಳನ್ನು ವಿಶಾಲ ಲೋಕಕ್ಕೆ ಚಾಚಿಕೊಳ್ಳಲು ಹವಣಿಸಿದೆ.
ಒಟ್ಟಿನಲ್ಲಿ
ಕೃತಿಕಾರರ ಇಂಥದೊಂದು ಪರಂಪರೆಯ ಬಗೆಗಿನ ಆಸಕ್ತಿ
, ಮಾನವ ಬದುಕಿನ
ಶಕ್ತಿ ದೌರ್ಬಲ್ಯಗಳನ್ನು ಗುರುತಿಸುತ್ತ,
ಮತ್ತೊಂದು ಉಜ್ವಲ ಬದುಕಿನ ಕನಸನ್ನು
ಉಣಿಸುವ ಧನಾತ್ಮಕ ಭಾವವನ್ನು ಹುಟ್ಟಿಸುವಲ್ಲಿ ಯಶ ಪಡೆದಿದೆ ಎನ್ನಬಹುದಾಗಿದೆ. ಮುಂದಿನ
ಕೃತಿಗಳು ಇನ್ನಷ್ಟು ಕಲಾತ್ಮಕ ಮೌಲ್ಯಾತ್ಮಕ
ಚೈತನ್ಯವನ್ನು ಪಡೆದು ಕೊಳ್ಳಲಿ ಎಂದು ಹಾರೈಸುತ್ತಿದ್ದೇನೆ.
ಕೃತಿ – ಕೇಳು
ಧನಂಜಯ. ಪುಟ – ೧೮೮. ಬೆಲೆ.- ರೂ- ೨೦೦-೦೦
ಲೇಖಕ – ರಾಜಶೇಖರ ಜೋಗಿನಮನೆ. ಪ್ರಕಾಶಕರು. –ಸಮನ್ವಿತ, ಬೆಂಗಳೂರು.
ಸುಮನಾಂಬರ, ೧೮.
ವ್ಯಕ್ತಿ, ವ್ಯಕ್ತಿತ್ವ ಮತ್ತು ಜೀವನ
ಎನಿತು
ಜನ್ಮದಲಿ ಎನಿತು ಜೀವರಲಿ
ಎನಿತು ನಾವು ಋಣಿಯೋ,
ನಾಲ್ಕು ದಿನದ ಈ ಬಾಳು
ಎಂಬುದು,
ಋಣದ ರತ್ನ ಖಣಿಯೋ ʼʼ
( ಜಿ.ಎಸ್.ಶಿವರುದ್ರಪ್ಪ)
ಒಮ್ಮೆ
ಇಬ್ಬರು ವ್ಯಕ್ತಿಗಳಲ್ಲಿ ಭಾರೀ ವಿವಾದ ಏರ್ಪಡುತ್ತದೆ. ಒಬ್ಬ
ಸಾಲಮಾಡುವುದರಲ್ಲಿ ಪರಿಣತ. ಸಾಲ
ಮರಳಿಸಿದೇ ಮುಳುಗಿಸುವಲ್ಲಿ ಎತ್ತಿದ ಕೈ.
ಕೊಂಡ ಸಾಲವನ್ನು ಅವನೆಂದೂ ತಿರುಗಿ
ಕೊಡಲೇ ಇಲ್ಲ. ಅದು ಅವನ ಜೀವನದ ಮಹಾ ಸಾಧನೆ.
ಇನ್ನೊಬ್ಬ ಅವನಿಂದ ವಸೂಲಿ ಪಡೆಯಲು ಅವನ
ಮನೆಗೇ ಧಾವಿಸುತ್ತಾನೆ. ಆತ ಸಾಲ
ವಸೂಲಿಯಲ್ಲಿ ಪರಿಣತ. ಆತ ಹೋದ ಎಂದರೆ ಸಾಲ
ವಸೂಲಿಯಾಯಿತೆಂದೇ ಅರ್ಥ. ಇಬ್ಬರೂ
ಮುಖಾಮುಖಿಯಾಗುತ್ತಾರೆ. ಇವ ಕೊಡಲಾರ. ಆತ
ಬಿಡಲಾರ. ಜಗಳ ತಾರಕಕ್ಕೇರಿತು.
ಪರಸ್ಪರ ಚೂರಿಯಲ್ಲಿ ಇರಿದುಕೊಂಡು
ಇಬ್ಬರೂ ಪ್ರಾಣಬಿಡುತ್ತಾರೆ. ಇದನ್ನೆಲ್ಲ ಪಕ್ಕದ ಮನೆಯಾತ
ಕಿಟಕಿಯಲ್ಲಿ ಕುತೂಹಲದಿಂದ ನೋಡುತ್ತಲೇ
ಇರುತ್ತಾನೆ. ಅವನಿಗೆ ಇಬ್ಬರ ಪರಿಚಯವೂ
ಇದೆ. ವಸೂಲಿಮಾಡದೇ ಆತ
ಹಿಂದಿರುಗಲಾರ, ಈತ ಸಾಲವನ್ನು ಎಂದೂ
ಮರಳಿಸಲಾರ ಎಂಬ ಅರಿವಿರುವ
ಆತನಿಗೆ, ಆಘಾತವಾಗುತ್ತದೆ, ಯಾರು
ಗೆಲ್ಲುತ್ತಾರೆ ಎಂಬ ಅವನ ಪ್ರಶ್ನೆ
ಹಾಗೆಯೇ ಉಳಿಯುತ್ತದೆ. ಇಬ್ಬರೂ ಪರಸ್ಪರ
ಕೊಂದುಕೊಂಡರು ಸರಿ. ಆದರೆ ನರಕದಲ್ಲಿ ಮತ್ತೆ ಸೇರುತ್ತಾರಲ್ಲ. ಅಲ್ಲಿಯಾದರೂ
ಒಬ್ಬರು ಗೆಲ್ಲಬೇಕಲ್ಲ. ನಾನೂ
ನೋಡಿಯೇ ಬಿಡುತ್ತೇನೆ ಎಂದುಕೊಂಡ ಪಕ್ಕದ ಮನೆಯಾತ,
ತಾನೂ ಚೂರಿಯಿಂದ ಇರಿದುಕೊಂಡು
ಸತ್ತುಬಿಡುತ್ತಾನೆ.
ಇಲ್ಲಿ ವ್ಯಕ್ತಿಗಳ
ವ್ಯಕ್ತಿತ್ವ ವಿಭಿನ್ನವಾಗಿದೆ. ಇಬ್ಬರು
ತಮ್ಮ ಉದ್ದೇಶಗಳಿಗೆ ಬದ್ಧರಾದವರು.
ಉದ್ದೇಶ ಒಳ್ಳೆಯದೋ ಕೆಟ್ಟದೋ
ನಂತರದ ಮಾತು. ಅವರು ರೂಢಿಸಿಕೊಂಡಿದ್ದು ಅದು.
ಆದರೆ ಪಕ್ಕದ ಮನೆಯಾತ
ಮಾತ್ರ, ಅವಶ್ಯವಿಲ್ಲದ
ಕುತೂಹಲಕ್ಕೆ ಬಲಿಯಾಗುತ್ತಾನೆ.
ಅನುಭವಗಳು ಪ್ರವಾಹದಂತೇ
ಮನುಷ್ಯನನ್ನು
ಆವರಿಸುತ್ತಿರುತ್ತದೆ. ಆದರೆ ಅವುಗಳಲ್ಲಿಯ
ಆಯ್ಕೆಯಲ್ಲಿ ಮನುಷ್ಯನ ಭವಿಷ್ಯ ಅಡಗಿದೆ. ಸೂಕ್ತ ಅನುಭವಗಳ
ಸ್ವೀಕಾರದಿಂದ ಮಾತ್ರ ಸಮರ್ಥ
ವ್ಯಕ್ತಿತ್ವದ ಸೃಷ್ಟಿ ಸಾಧ್ಯ.
ಮನುಷ್ಯ
ದೇವರಾಗಿ ಹುಟ್ಟುತ್ತಾನೆ. ಸಮಾಜ ಅವನನ್ನು ದೆವ್ವವಾಗಿಸುತ್ತದೆ. ಎಂಬ ನಾಣ್ಣುಡಿಯಿದೆ. ಕ್ರಿಶ್ಚಿಯನ್
ನಂಬುಗೆ ಭಿನ್ನವಾಗಿದೆ. ಹುಟ್ಟುವಾಗ
ಮಗು ಪಾಪಿ. ಧರ್ಮ ಮಗುವನ್ನು ಪುನೀತನನ್ನಾಗಿಸುತ್ತದೆ ಎಂದು. ಆದರೆ ಭಾರತೀಯ
ತತ್ವಪರಂಪರೆ, ಮಗು ತನ್ನ ಹಿಂದಿನ ಜನ್ಮದಿಂದಲೇ ಒಂದಿಷ್ಟು ಗುಣಗಳನ್ನು ಹೊಂದಿಯೇ ಜನ್ಮಿಸುತ್ತದೆ.
ಒಳ್ಳೆಯ ಕೆಟ್ಟ ಗುಣಗಳೆಲ್ಲ ಸೇರಿರುತ್ತದೆ. ಅದಕ್ಕಾಗಿ
ಸಂಸ್ಕಾರ ನೀಡಬೇಕು. ಮಗುವಿನ ಮನಸ್ಸನ್ನು ಸಂಸ್ಕರಿಸಬೇಕು. ಎಂದೆನ್ನುತ್ತದೆ.
ಮಾನವ
ಸಮಾಜ ಎಂದರೆ ವ್ಯಕ್ತಿಗಳ ಗುಂಪು.
ಸಮಾಜದ ಅಸ್ತಿತ್ವ ಸೃಷ್ಟಿಯಾಗುವುದು ವ್ಯಕ್ತಿ ಯಿಂದಲೇ. ಪ್ರತಿಯೊಂದು
ವ್ಯಕ್ತಿತ್ವ ವಿಭಿನ್ನವಾಗಿದ್ದರೂ, ಸಮುದಾಯ
ಆತನಿಗೆ ಅನಿವಾರ್ಯ.
ತನ್ನದೇ ಆದ
ಭಾವನೆಗಳು, ಆಲೋಚನೆಗಳು, ಆಕಾಂಕ್ಷೆಗಳು,
ಮತ್ತು ಮೌಲ್ಯಗಳು, ವಿಭಿನ್ನವಾಗಿದ್ದರೂ, ಸಂಘಜೀವಿಯಾದುದರಿಂದ, ಸಮುದಾಯದ
ಶ್ರೀರಕ್ಷೆ ಅವಶ್ಯವಿರುವುದರಿಂದ, ತನ್ನೆಲ್ಲ ವೈಯಕ್ತಿಕ
ಪ್ರವೃತ್ತಿಯನ್ನು ಸಂಯಮದಿಂದ ನಿರ್ವಹಿಸುತ್ತ, ಸಹನೆ ಮತ್ತು
ಸಹಕಾರ ಗುಣಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ.
ಒಬ್ಬ ವ್ಯಕ್ತಿಯೊಳಗಿನ
ಶಕ್ತಿಗಳು, ದುರ್ಬಲತೆಗಳು, ಮತ್ತು ಜೀವನಾನುಭವಗಳು ಅವನ ವೈಯಕ್ತಿಕತೆಯನ್ನು ನಿರ್ಮಾಣಮಾಡುತ್ತವೆ. ಪ್ರತಿಯೊಬ್ಬರೂ ವಿಶಿಷ್ಟರು ಎಂದು ಹೇಳುವುದಕ್ಕೆ ಕಾರಣ ಅವರೊಳಗಿನ ಈ ಅದ್ವಿತೀಯತೆಯೇ.
ಹುಟ್ಟುವಾಗ ವ್ಯಕ್ತಿ. ಬೆಳೆದಂತೇ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತ ಸಾಗುತ್ತದೆ. ವ್ಯಕ್ತಿತ್ವ
ಅಂದರೆ ವ್ಯಕ್ತಿಯ ಆಂತರಿಕ
ಗುಣಗಳು, ಮತ್ತು ಬಾಹ್ಯ ಪ್ರದರ್ಶನಗಳ ಒಟ್ಟೂ ಮೊತ್ತ
ಎನ್ನಬಹುದಾಗಿದೆ.
ಸಾಮಾನ್ಯವಾಗಿ
ಚಿಂತನೆಯ ವಿಧಾನ, ಮಾತನಾಡುವ
ಶೈಲಿ, ನಡೆ ನುಡಿ, ಸ್ವಭಾವ, ಸಾಮಾಜಿಕ ವರ್ತನೆ, ಆತ್ಮವಿಶ್ವಾಸ,
ಮತ್ತು ನೈತಿಕ ಮೌಲ್ಯಗಳು, ಇವು ಮೂಲಭೂತವಾಗಿ ವ್ಯಕ್ತಿತ್ವ ರೂಪುಗೊಳ್ಳಲು ಕಾರಣವಾಗುತ್ತದೆ.
ಒಬ್ಬ ಯಶಸ್ವೀ ಮಾತುಗಾರ ಸಾವಿರ ಮನಸ್ಸುಗಳನ್ನು
ತಿದ್ದಬಲ್ಲ. ಉತ್ತೇಜಿಸ ಬಲ್ಲ. ಸಮರ್ಥ ಲೇಖಕ ತನ್ನ ಅಕ್ಷರದ
ಶಕ್ತಿಯಿಂದ, ಸಮುದಾಯವನ್ನೇ ಆಕರ್ಷಿಸಬಲ್ಲ. ಒಬ್ಬನೇ ಒಬ್ಬ ಸಮರ್ಥ ಆಡಳಿತಗಾರ, ವಿಕಾಸದೆತ್ತರಕ್ಕೆ ತನ್ನ ಪ್ರದೇಶವನ್ನು ಕೊಂಡೊಯ್ಯಬಲ್ಲ.
ಅದೇ ರುಣಾತ್ಮಕವಾದ ವಿಧ್ವಂಸಕ
ವಿಚಾರಗಳನ್ನು ಆಕರ್ಷಕವಾಗಿ ಬಿಂಬಿಸುತ್ತಾ ಹೊರಟರೆ, ಮುಗ್ಧ ಮನಸ್ಸುಗಳು ಸಮಾಜಕ್ಕೆ
ಅಪಾಯಕಾರಿಯಾದ ಶಕ್ತಿಯಾಗಿ ಪರಿವರ್ತನೆಯಾಗಿಬಿಡುತ್ತದೆ. ಅಂತಹ ಬೆಳವಣಿಗೆಗಳನ್ನು ಜಗತ್ತಿನಾದ್ಯಂತ
ನಾವು ನೋಡುತ್ತಿದ್ದೇವೆ. ಅನುಭವಿಸುತ್ತಿದ್ದೇವೆ.
ಅದೆಷ್ಟು ಪ್ರಚೋದಕ ವಾತಾವರಣ ಎದುರಾದರೂ, ತನ್ನ ಮನಸ್ಸನ್ನು ನ್ಯಾಯವಾದ ದಾರಿಯಲ್ಲಿ ಪಳಗಿಸುವುದು ಮಾತ್ರ, ವ್ಯಕ್ತಿಯ ಜವಾಬ್ದಾರಿ. ಯಾವುದು ನ್ಯಾಯ, ಯಾವುದು ಅನ್ಯಾಯ ಎಂಬ ಗೊಂದಲದಿಂದ ಪಾರಾಗುವ
ಸವಾಲನ್ನು ಬಗೆಹರಿಸಿ ಕೊಳ್ಳುವಲ್ಲಿ ಎಡವಿದಾಗ, ಮಾತ್ರ ಸಮುದಾಯ
ದಿಕ್ಕು ತಪ್ಪುತ್ತದೆ.
ಜೀವನ ಮೌಲ್ಯಗಳನ್ನು ಸಾರ್ವತ್ರಿಕವಾಗಿ ಪರಿಣಾಮಕಾರಿಯಾಗಿ ನೀಡಿದರೆ
ಒಂದೇ ಬಗೆಯ ವ್ಯಕ್ತಿತ್ವ ರೂಪುಗೊಳ್ಳಬೇಕಲ್ಲ…? ಹಾಗಾಗದು.
ಒಂದೇ ತರಬೇತಿ ಪಡೆದ ಒಂದೊಂದು ವ್ಯಕ್ತಿಯೂ ವಿಭಿನ್ನನಾಗಿಯೇ
ಇರುತ್ತಾನೆ. ಅದು ಪ್ರಕೃತಿಯ ಮಹಿಮೆ.
ಅದಕ್ಕೆ
ಎರಡು ಕಾರಣಗಳಿವೆ ಎನ್ನುತ್ತಾರೆ, ಮನೋವಿಜ್ಞಾನಿಗಳು. ಒಂದು ಜನ್ಮಸಿದ್ಧ ಗುಣ ವೈಶಿಷ್ಟ್ಯಗಳು ಎಂದೆನ್ನುತ್ತಾರೆ ( innate traits )
ಒಂದಿಷ್ಟು ವೈಶಿಷ್ಟ್ಯಗಳನ್ನು ಹುಟ್ಟಿನಿಂದಲೇ ಮಗು ಪಡೆದಿರುತ್ತದೆʼ ಎರಡನೆಯದು
ಅನುಭವ ಸಿದ್ಧ ಗುಣಗಳು. (Acquired traits )
ಇವು ಮನೆ ಶಾಲೆ ಸ್ನೇಹಿತರು, ಮತ್ತು ಜೀವನದ ವಿವಿಧ ಘಟನೆಗಳ
ಪ್ರಭಾವದಿಂದ, ವ್ಯಕ್ತಿತ್ವದ ವೈಶಿಷ್ಟ್ಯ
ರೂಪುಗೊಳ್ಳುತ್ತದೆ. ಸಮಾಜ ಅದೆಷ್ಟೇ
ಬ್ರಹತ್ತಾಗಿರಲಿ, ಅದು ವ್ಯಕ್ತಿ ಎಂಬ ಮೂಲಘಟಕದ ಸುತ್ತ ಸುತ್ತುತ್ತಿರುತ್ತದೆ.
ಮೂರನೆಯದು
ಜೀವನ. ಜೀವನವೆಂದರೆ ಕೇವಲ ಬದುಕಿರುವ ಕ್ರಿಯೆಯಲ್ಲ. ಅದೊಂದು ಕುತೂಹಲ
ಬೆರಗು ವಿಸ್ಮಯಗಳ ಪಯಣ. ಈ ಪ್ರಯಾಣದಲ್ಲಿ
ಸಂಭವಿಸುವ ಅಸಂಖ್ಯಾತ ಏರಿಳಿವುಗಳು,
ಪ್ರೀತಿ- ಸಂಘರ್ಷಗಳು, ಸವಾಲುಗಳು, ಸುಖ ದುಃಖಗಳು, ಕನಸು ನನಸುಗಳು, ಸಾಧನೆ ವಿಫಲತೆಗಳು, ಇವುಗಳು ಕಲಿಸಿದ ಪಾಠಗಳು, ಇವೆಲ್ಲ ಒಗ್ಗೂಡಿ ವ್ಯಕ್ತಿಯ ಜೀವನ ಮಟ್ಟವನ್ನು ನಿರ್ಧರಿಸುತ್ತವೆ.
ಜೀವನಕ್ಕೊಂದು ಉದ್ದೇಶವಿದೆ ಎಂದಾದರೆ
ಅದರ ಅರ್ಥವನ್ನು ಅನ್ವೇಷಿಸುವುದು ಮುಖ್ಯ.
ಅನ್ವೇಷಣೆಯ ಹಿನ್ನೆಲೆಯಲ್ಲಿ
ನೈತಿಕತೆ ಮತ್ತು ಮಾನವೀಯತೆಗಳು ಬಹುದೊಡ್ಡ ಪಾತ್ರ ನಿರ್ವಹಿಸುತ್ತವೆ. ತನ್ನ ಕುಟುಂಬ
ಮತ್ತು ಸುತ್ತಲಿನ ಸಮಾಜದೊಂದಿಗಿನ ಬಾಂಧವ್ಯದ ಗುಣಮಟ್ಟ, ವ್ಯಕ್ತಿಯ ಜೀವನದ ಮಟ್ಟವನ್ನು
ನಿರ್ಧರಿಸುತ್ತದೆ.
ವ್ಯಕ್ತಿ
ವ್ಯಕ್ತಿತ್ವ ಮತ್ತು ಜೀವನ ಇದೊಂದು
ತ್ರಿಕೋನಸ್ವರೂಪದ ಅವಿನಾಭಾವ ಸಂಬಂಧ. ಪರಸ್ಪರ
ಪ್ರಭಾವಿಸುವ ಜೈವಿಕ ಚಕ್ರದಂತೆ.
ವ್ಯಕ್ತಿ
ತನ್ನ ಅನುಭವದ ತಳಪಾಯದ ಮೇಲೆ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾನೆ. ವ್ಯಕ್ತಿತ್ವದ
ಪ್ರಭಾವ ಆತನ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ. ವ್ಯಕ್ತಿತ್ವ
ಸ್ಥಿರವಲ್ಲ. ನಿಂತ ನೀರಲ್ಲ. ಜೀವನದ ನೀಗೂಢ ತಿರುವುಗಳು, ವಿವಿಧ ಪ್ರಭಾವಗಳು, ವ್ಯಕ್ತಿತ್ವವನ್ನೇ ಬದಲಾಯಿಸಬಹುದು.
ಲೇ ಮಿಸರೇಬಲ್ಸ, ಎಂಬ ನೋಬೆಲ್ ಪ್ರಶಸ್ತಿವಿಜೇತ ಇಂಗ್ಲಿಶ್ ಕಾದಂಬರಿ ಯಲ್ಲಿಯ ನಾಯಕ ಜೀನವೇಲ್ ಜೀನ್ ಎಂಬ,
ವ್ಯಕ್ತಿ ಪರೋಪಕಾರಿ. ಸಜ್ಜನ. ಶ್ರಮಜೀವಿ. ಆದರೆ ಒಮ್ಮೆಲೇ
ಆತನಿಗೆ ದಾರಿದ್ರ್ಯ ಆಕ್ರಮಿಸುತ್ತದೆ. , ಹೆಂಡತಿ
ಮತ್ತು ಪುಟ್ಟ ಮಕ್ಕಳಿಗೆ ಆಹಾರ ಒದಗಿಸಲೂ, ಸಾಧ್ಯವಾಗದ ಪರಿಸ್ಥಿತಿಯಲ್ಲಿ, ಕಳ್ಳತನ ಮಾಡುತ್ತಾನೆ. ಸಿಕ್ಕಿ ಬಿದ್ದು ಬಂಧೀಖಾನೆಯ ಪಾಲಾಗುತ್ತಾನೆ.
ಮಕ್ಕಳಮೇಲಿನ ಪ್ರೀತಿ, ಅವರ ಸಂಕಟಗಳನ್ನು
ನೆನೆದು, ಜೇಲಿನಿಂದ ಪಾರಾಗಲು ವಿಫಲ
ಸಾಹಸ ಮಾಡುತ್ತಾನೆ. ಮತ್ತೆ ಸಿಕ್ಕಿ ಬೀಳುತ್ತಾನೆ. ಅವನ ಕುಟುಂಬ ಮೋಹ ಮತ್ತೆ ಮತ್ತೆ
ಅಪರಾಧಗೈಯ್ಯುವಂತೇ ಪ್ರೇರೇಪಿಸುತ್ತದೆ. ಪ್ರತಿ ಪುಟ್ಟ ಪುಟ್ಟ ಅಪರಾಧಕ್ಕೂ ಶಿಕ್ಷೆಯ
ಅವಧಿ ಹೆಚ್ಚಾಗುತ್ತ, ಒಂದೆರಡು ದಶಕಗಳೇ ಕಳೆದು ಹೋಗುತ್ತದೆ. ಬಿಡುಗಡೆಯಾಗಿ
ಬಂದಾಗ, ಅವನ ಸಂಸಾರ ನಿರ್ನಾಮ ಹೊಂದಿರುತ್ತದೆ.
ಸಜ್ಜನ ವ್ಯಕ್ತಿಯೊಬ್ಬ, ಬದುಕಿನ ವಿಚಿತ್ರ ತಿರುವಿನಲ್ಲಿ, ಕಳ್ಳನಾಗಿ ಬದಲಾಗುವ ಅನಿವಾರ್ಯ ಸ್ಥಿತಿಯನ್ನು ಆ ಕೃತಿ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.
ಸಾಮಾನ್ಯ ಮನುಷ್ಯರಾಗಿದ್ದ ಗಾಂಧಿ,
ಮಹಾತ್ಮರಾಗಲು ಅವರು ತಮ್ಮ ಬಾಲ್ಯದಲ್ಲಿ ನೋಡಿದ ಸತ್ಯ
ಹರಿಶ್ಚಂದ್ರ ನಾಟಕ ಕಾರಣವಾಯಿತು.
ರಾಮಕೃಷ್ಣ ಪರಮಹಂಸರ ಗಾಢ ಆಧ್ಯಾತ್ಮಿಕ ಪ್ರಭಾವ
ನರೇಂದ್ರ ಎಂಬ ಉಗ್ರ ಯುವಕನನ್ನು ಸ್ವಾಮೀ
ವಿವೇಕಾನಂದರನ್ನಾಗಿಸಿತು. ಮಾನವ
ತನ್ನನ್ನು ತಾನು ಅರಿತುಕೊಳ್ಳುವ ಸಾಮರ್ಥ್ಯ (self-awareness) ಹೊಂದಿರುವ ಏಕೈಕ ಪ್ರಾಣಿ. ಇದೇ ಸ್ವ-ಅರಿವು ವ್ಯಕ್ತಿಯನ್ನು ಸಮಾಜದಲ್ಲಿ ಒಂದು ಜವಾಬ್ದಾರಿಯುತ ಅಸ್ತಿತ್ವವನ್ನಾಗಿಸುತ್ತದೆ.
ಇತ್ತೀಚಿನ ವರ್ಷದಲ್ಲಿ ಮೃತರಾದ ಜಗತ್ಪ್ರಸಿದ್ಧ
ಖಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ರ ಬದುಕು, ವ್ಯಕ್ತಿ ಮತ್ತು ವ್ಯಕ್ತಿತ್ವದ ಜ್ವಲಂತ ಉದಾಹರಣೆಯಾಗಿದೆ. ಇಡೀ ದೇಹ ನಿಶ್ಚೇಷ್ಟಿತ ಗೊಳ್ಳುವ ಅತ್ಯಂತ
ಅಪರೂಪದ ರೋಗಪೀಡಿತರಾದ ಅವರ
ಆಯುಷ್ಯ ಆರೋಗ್ಯವಿಜ್ಞಾನಿಗಳ ದೃಷ್ಟಿಯಲ್ಲಿ ಕೇವಲ ಎರಡು ವರ್ಷ.
ಕಣ್ಣು ಕೈ ಬೆರಳು ಮಾತ್ರ ಚಲನೆಯಲ್ಲಿದ್ದು,
ಸಂಪೂರ್ಣ ದೇಹ ಸ್ತಬ್ಧಗೊಂಡಿರುವಂತಹ ವಿಷಾದಮಯ
ಸ್ಥಿತಿಯಲ್ಲಿ, ವಿಶ್ವಕ್ಕೇ ಬೆರಗು ಮೂಡಿಸಿದ ಹಾಕಿಂಗ್ ಅವರ ವೈಜ್ಞಾನಿಕ ಸಾಧನೆ, ಮಾನವ ಲೋಕಕ್ಕೊಂದು ಅನುಪಮ ಕೊಡುಗೆ. ಎರಡೇ ಎರಡು ವರ್ಷ ಬದುಕುತ್ತಾರೆಂಬ
ವೈದ್ಯರ ಮಾತನ್ನು ಸುಳ್ಳಾಗಿಸಿ ೭೬ ವರ್ಷ
ಉಸಿರಾಡಿ, ಖಗೋಳ ವಿಜ್ಞಾನಕ್ಕೆ ಹೊಸ ಬೆಳಕು ನೀಡಿದ ಸ್ಟೀಫನ್
ನಮ್ಮಂತೇ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಅದ್ಭುತ
ವ್ಯಕ್ತಿತ್ವವಾಗಿದ್ದರು. ಬದುಕಿಯೇ ಬದುಕುತ್ತೇನೆ.
ಬದುಕಿ ಸಾಧಿಸುತ್ತೇನೆ ಎಂಬ ಅವರ ಆತ್ಮಸಂಕಲ್ಪ,
ಆತ್ಮ ಸ್ಥೈರ್ಯ, ಆತ್ಮ ವಿಶ್ವಾಸ ಮಾನವ ಜಗತ್ತಿಗೇ
ಒಂದು ಅಪೂರ್ವ ಸಂದೇಶ.
ಜೀವನದ ಅಂತಿಮ ಹಂತವೆಂದರೆ ಆತ್ಮದ ಅರಿವು—‘ಹುಟ್ಟಿದ್ದೇನೆ, ಬದುಕುತ್ತಿದ್ದೇನೆ, ಆದರೆ ಏಕೆ?’ ಎಂಬ ಪ್ರಶ್ನೆಗಳ ಉತ್ತರ ಹುಡುಕುವ ಹಾದಿ.
ಈ ಹಂತದಲ್ಲಿ ವ್ಯಕ್ತಿ ತಾನು ಸಮಾಜಕ್ಕೆ ಕೊಡುವ ಕೊಡುಗೆಯನ್ನು ಅರಿಯುತ್ತಾನೆ.
ವ್ಯಕ್ತಿ
ಅಂದರೆ ಅದೊಂದು ಜೈವಿಕ ಅಸ್ತಿತ್ವ. ಮಾನಸಿಕ
ಅಸ್ತಿತ್ವ, ಸಾಮಾಜಿಕ ಅಸ್ತಿತ್ವ. ಮತ್ತು ಆಧ್ಯಾತ್ಮಿಕ
ಅಸ್ತಿತ್ವ. ಇವೆಲ್ಲ ಒಗ್ಗೂಡಿದ ಒಂದು ಮಹತ್ವಪೂರ್ಣ
ರಚನೆಯೇ ವ್ಯಕ್ತಿತ್ವ. ವ್ಯಕ್ತಿತ್ವ ಅಂದರೆ ವ್ಯಕ್ತಿಯ ಅಸ್ತಿತ್ವದ
ಗುಣಮಟ್ಟ. ಜೀವನ ಅಂದರೆ ಅದೇ
ಗುಣಮಟ್ಟದಿಂದ ಚಲಿಸುವ ಅಪೂರ್ವ ಅನುಭವ ಯಾನ.
ಸುಮನಾಂಬರ, ಅಂಕಣ ಮಾಲೆ – ೧೯.
ʻʻಮರಣವೇ ಮಹಾನವಮಿʼʼ
ʻʻ
ನನ್ನ ದೇಹದ ಬೂದಿ ಗಾಳಿಯಲಿ
ತೂರಿಬಿಡಿ ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ ʼʼ ಎಂದು ಸಂತಸದಿಂದ ಉದ್ಗೋಷಿಸಿದ
ಕವಿ ದಿನಕರ ದೇಸಾಯಿ, ಮುಕ್ತವಾಗಿ
ಮರಣವನ್ನು ಸ್ವಾಗತಿಸುತ್ತಾರೆ. ವರಕವಿ ಬೇಂದ್ರೆ, ʻʻ ನಾನು ಇರುವವರೆಗೆ ಸಾವು ಬಳಿ ಬರುವುದಿಲ್ಲ. ಸಾವು ಬಂದಾಗ ನಾನು ಇರುವುದೇ
ಇಲ್ಲ.ʼʼ ಎಂದು ಸಾವನ್ನು
ನೀವು ಹೇಗೆ ಎದುರಿಸುತ್ತೀರಿ
ಎಂಬ ಪ್ರಶ್ನೆಗೆ ಉತ್ತರಿಸಿದ್ದರು.
ಹುಟ್ಟಿನಿಂದಲೇ ಸಾವು ನೆರಳಾಗಿ ಹಿಂಬಾಲಿಸುತ್ತಿದ್ದರೂ, ಮನುಷ್ಯ ಎಂಬ
ಪ್ರಾಣಿ ಸಾವನ್ನು ಮುಂದೂಡಲು
ಪ್ರಯತ್ನಿಸುತ್ತಾನೆ. ಭಯದಿಂದ ತತ್ತರಿಸುತ್ತಾನೆ. ತನ್ನ ದೇಹ
ನಾಶವಾದರೂ ತನ್ನ ಹೆಸರು ಅಜರಾಮರವಾಗಿ
ಉಳಿಯಬೇಕೆಂಬ ಹೆದ್ದಾಸೆಯಲ್ಲಿ ಏನೇನನ್ನೋ
ಮಾಡಹೋಗಿ ಏನೋ ಆಗುತ್ತಾನೆ.
ಸಾವು ಎದುರಾದಾಗ ಹಳಹಳಿಸುತ್ತಾನೆ.
ಮನುಷ್ಯನಿಗೆ
ಸದಾ ಕಾಡುತ್ತಿರುವ ವಸ್ತುವಲ್ಲಿ
ಸಾವಿನ ಪಾತ್ರವೇ ಅತ್ಯಂತ
ಹಿರಿದಾದದ್ದು. ನಂತರದ ಸ್ಥಾನದಲ್ಲಿ
ಬದುಕಿನ ಉಳಿದೆಲ್ಲ ಆಸೆ, ಬಯಕೆ
ಕನಸು ಗುರಿ, ಕಾಮ, ಮತ್ತು ಸಂಬಂಧಗಳ ಪಾತ್ರವಿದೆ.
ಇತ್ತೀಚಿನ
ದಿನಗಳಲ್ಲಿ ಮನುಷ್ಯನ ಮೂಲಭೂತ
ಆತಂಕವಾದ ಮರಣದ ಕುರಿತು
ಜಗತ್ತಿನಲ್ಲಿ ಸಾಕಷ್ಟು ಸಂಶೋಧನಾತ್ಮಕ
ವೈಜ್ಞಾನಿಕ ತಾತ್ವಿಕ ಆಧ್ಯಾತ್ಮಿಕ
ಗ್ರಂಥಗಳು ಪ್ರಕಟಗೊಂಡಿವೆ.
ಭಾರತೀಯ
ಪರಂಪರೆಯಲ್ಲಿ, ಕಠೋಪನಿಷತ್ತು, ನಚೀಕೇತ
ಯಮನೊಂದಿಗೆ ಸಂವಾದಿಸಿದ ಪ್ರಕರಣ,
ಸತ್ತ ಸತ್ಯವಾನನ್ಯು ಸಾವಿತ್ರಿ ಯಮನಿಂದ
ಮರಳಿ ಜೀವಂತನನ್ನಾಗಿಸಿದ್ದು, ಒಳ್ಳೆಯ
ಉದಾಹರಣೆಯಾದರೆ, ಗರುಢ ಪುರಾಣವಂತೂ ಸಾವಿನಾಚೆಯ
ನಿಗೂಢತೆಯನ್ನು ಅರಿಯುವ ಕುತೂಹಲದಾಯಕ
ಪ್ರಯತ್ನ ಎಂದು ಹೇಳ ಬಹುದಾಗಿದೆ. ಭಗವದ್ಗೀತೆ
ಮರಣವನ್ನು ತಾತ್ವಿಕವಾಗಿ, ಆಧ್ಯಾತ್ಮಿಕವಾಗಿ ಅರಿತುಕೊಳ್ಳುವ,
ಮತ್ತು ಕ್ಷಣಿಕ ಬದುಕನ್ನು ಅರ್ಥಪೂರ್ಣವಾಗಿಸುವ ಬಹುದೊಡ್ಡ ಸಂಪನ್ಮೂಲ ಎಂಬುದು
ನಿರ್ವಿವಾದ.
ಮರಣ
ಎಂಬ ವಿಷಯದಲ್ಲಿ ಜಗತ್ತಿನಾದ್ಯಂತ ತಾತ್ವಿಕರು,
ವೈದ್ಯವಿಜ್ಞಾನಿಗಳು, ಕವಿಗಳು ಹೇಗೆ ಚಿಂತಿಸಿದ್ದಾರೆ ಎಂಬ ಕುತೂಹಲದಿಂದ ಅಂತರ್ಜಾಲವನ್ನು
ತಡಕಾಡಿದಾಗ, ಹಲವು ಕೃತಿಗಳ ನಡುವೆ, ಅರ್ನೆಸ್ಟ ಬೇಕರ್
ಎಂಬ ಜಗತ್ಪ್ರಸಿದ್ದ ಚಿಂತಕನ The Denial
of Death, ( ಸಾವಿನ ನಿರಾಕರಣೆ) ಗಮನ ಸೆಳೆಯಿತು.
ಮಾನವನ
ಇತಿಹಾಸದಾದ್ಯಂತ ಸಾವು ಎಂಬುದು ಅತ್ಯಂತ ಗಂಭೀರ, ಅಸಹಜ ಮತ್ತು ಅರ್ಥಪೂರ್ಣ ಪ್ರಶ್ನೆಯಾಗಿ ಉಳಿದಿದೆ. ವಿಜ್ಞಾನವು ಸಾವಿನ ಜೈವಿಕ ಯಾಂತ್ರಿಕತೆಯನ್ನು
ವಿವರಿಸಿದರೂ, ಮಾನವ ಮನಸ್ಸಿನ ಮೇಲೆ ಸಾವಿನ ಪರಿಣಾಮವನ್ನು ಸಂಪೂರ್ಣವಾಗಿ ಹಿಡಿದಿಡಲು ಅದು ಸಾಕಾಗುವುದಿಲ್ಲ.
ತತ್ವಶಾಸ್ತ್ರ ಮತ್ತು ಮನಶ್ಯಾಸ್ತ್ರಗಳ ಸಂಧಿಯಲ್ಲಿ ಬರೆಯಲ್ಪಟ್ಟಿರುವ ಎರ್ನೆಸ್ಟ್ ಬೆಕರ್ ಅವರ The
Denial of Death (1973) ಈ ಕೊರತೆಯನ್ನು ತುಂಬುವ ಮಹತ್ವದ ಕೃತಿಯಾಗಿದೆ. ಈ ಕೃತಿಯ ಮೂಲ ವಾದವೇನೆಂದರೆ — ಮಾನವ ಸಂಸ್ಕೃತಿ, ಧರ್ಮ, ಶಕ್ತಿ ಮತ್ತು ಸೃಜನಶೀಲತೆಗಳ ಮೂಲದಲ್ಲಿರುವ ಪ್ರೇರಕ ಶಕ್ತಿ ಸಾವಿನ ಭಯವೇ ಎಂಬುದು.
ಬೆಕರ್
ಈ ಕೃತಿಯಲ್ಲಿ ಮರಣಭಯವನ್ನು ಕೇವಲ ವೈಯಕ್ತಿಕ ಆತಂಕವಲ್ಲ, ಬದಲಾಗಿ ಮಾನವ ನಾಗರಿಕತೆಯ ಆಧಾರಶಿಲೆ ಎಂದು ಪ್ರತಿಪಾದಿಸುತ್ತಾನೆ.
ಈ ಕಾರಣದಿಂದಲೇ ಈ ಕೃತಿ ತತ್ವಶಾಸ್ತ್ರ, ಮನಶ್ಯಾಸ್ತ್ರ, ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರಗಳ ನಡುವೆ ಸೇತುವೆಯಾಗಿ ಪರಿಣಮಿಸಿದೆ.
ಬೆಕರ್ನ ಪ್ರಕಾರ, ಮಾನವನು ಇತರ ಪ್ರಾಣಿಗಳಿಗಿಂತ ಭಿನ್ನನಾಗಿರುವುದಕ್ಕೆ ಕಾರಣ ಅವನಿಗೆ ತನ್ನ ಮರಣದ ಅರಿವು ಇರುವುದಾಗಿದೆ. ಪ್ರಾಣಿಗಳು ಸತ್ತರೂ, ಅವುಗಳಿಗೆ “ನಾನು ಸಾಯುತ್ತೇನೆ” ಎಂಬ ಬೌದ್ಧಿಕ ಅರಿವು ಇರುವುದಿಲ್ಲ. ಆದರೆ ಮಾನವನು ಜೀವಂತವಾಗಿರುವಾಗಲೇ
ತನ್ನ ಅಂತ್ಯದ ಕಲ್ಪನೆಯನ್ನು ಹೊತ್ತುಕೊಂಡು ಬದುಕುತ್ತಾನೆ. ಈ ಅರಿವು ಅವನೊಳಗೆ ಆಳವಾದ ಅಸ್ತಿತ್ವಾತ್ಮಕ ಆತಂಕವನ್ನು ಹುಟ್ಟಿಸುತ್ತದೆ.
ಮರಣವನ್ನೇ ಉದ್ದೇಶಿಸಿ
ಹಲವು ಕೃತಿಗಳು ನಮ್ಮ ಗಮನ ಸೆಳೆದರೂ
ಬೇಕರ್ ನ ಮರಣ ನಿರಾಕರಣೆ ಕೃತಿ
ಪ್ರತ್ಯೇಕವಾಗಿ ನಿಲ್ಲುವುದು, ಅದರ
ಸಾಂಸ್ಕೃತಿಕ ಮನೋವೈಜ್ಞಾನಿಕ ಮತ್ತು ತಾತ್ವಿಕ ಅನ್ವೇಷಣೆಯಿಂದ. ಅದರಲ್ಲಿಯೂ
೧೯೭೪ ರಲ್ಲಿ ಪ್ರಸ್ತುತ ಕೃತಿಗೆ ಜಾಗತಿಕ
ಪ್ರಸಿದ್ಧಿಯ ʻʻ ಪುಲಿಜ್ಜರ್ ಪ್ರಶಸ್ತಿʼʼ
ದೊರಕಿ ವಿಶ್ವದ ಗಮನ ಸೆಳೆಯಿತು. ಲಕ್ಷ ಸಂಖ್ಯೆಯಲ್ಲಿ ಪುಸ್ತಕ ಮಾರಾಟಗೊಂಡಿತು.
ಕನ್ನಡ ಸಾಹಿತ್ಯವೂ ಹಿಂದಿಲ್ಲ. ಕುವೆಂಪುರವರ ಶ್ರೀ
ರಾಮಾಯಣ ದರ್ಶನಂ, ಕೃತಿಯಲ್ಲಿ,
ಜೀವನ ಮರಣ
ಮತ್ತು ಧರ್ಮಗಳ ತಾತ್ವಿಕ
ವಿಶ್ಲೇಷಣೆಯಿದ್ದರೆ, ಬೇಂದ್ರೆಯವರ ಕವನಗಳು, ಸಾವು ಎಂಬುದು ಬ್ರಹ್ಮಾಂಡದ ನಿಯಮಗಳೆಂದು ಪ್ರತಿಪಾದಿಸುತ್ತವೆ. ಶಿವರಾಮ
ಕಾರಂತರು ʻʻಮರಣದ ಕ್ರೀಡೆʼʼ
ಎಂಬ ಸುದೀರ್ಘ ಲೇಖನವನ್ನೇ
ಬರೆಯುತ್ತಾರೆ. ಗೋರೂರರು ವ್ಯಕ್ತಿ ಮತ್ತು ಮರಣ ಈ
ನಡುವಿನ ಸಂಘರ್ಷ ಸಂಧಾನಗಳ
ರೋಚಕ ವಿವರ ನೀಡುತ್ತಾರೆ.
ಸತ್ಯಕಾಮರ ʻʻ ಅಲ್ಲಿರುವುದು ನಮ್ಮನೆ – ಇಲ್ಲಿರುವುದು ಸುಮ್ಮನೆ ʼʼ
ಈ ಮಾತು ಜನಪ್ರಿಯವಾಗಿದೆ.
ಅದರಂತೇ
ಪಾಶ್ಚಿಮಾತ್ಯ ಚಿಂತಕರ ಕೃತಿಗಳೂ ಸಾವಿನ ಜೊತೆಯಲ್ಲಿ ಸಮರ್ಥವಾಗಿ ಒಡನಾಡುತ್ತವೆ. ಇರ್ವಿನ್ ಎಲೋಮ್, ಎಂಬ ಲೇಖಕ,
ಸ್ಟಾರಿಂಗ್ ಎಟ್ ದಿ ಸನ್ ಕೃತಿಯಲ್ಲಿ, ಮರಣ ಭಯವನ್ನು ಎದುರಿಸುವ
ಮನೋಚಿಕಿತ್ಸಾ ಉಪಾಯಗಳನ್ನು ತಿಳಿಸುತ್ತಾನೆ.
ಮರಣಕ್ಕೆ ಹತ್ತಿರವಾದ ಅನುಭವಗಳು
ಜೀವನದ ಅರ್ಥವನ್ನು ಹೇಗೆ
ಬದಲಾಯಿಸುತ್ತವೆ, ಎಂದು ʻವಿಕ್ಟರ್ ಫ್ರಾಂಕಲ್ʼ
ʻʻ ಮನುಷ್ಯನ ಅರ್ಥಾನ್ವೇಷಣೆ,ʼʼ ಎಂಬ
ಕೃತಿಯಲ್ಲಿ ವಿವರಿಸುತ್ತಾರೆ.
ಲಿಯೋ ಟಾಲಸ್ಟಾಯ್ ಅವರ
ಸುಪ್ರಸಿದ್ಧ ಕಾದಂಬರಿ, ʻʻ ಡೆತ್ ಆಫ್ ಇವಾನ್ ಇಲ್ಲಿಚ್ʼʼಮರಣದ ಭೀತಿಯಿಂದ
ಆತ್ಮಜಾಗ್ರತಿಯೆಡೆಗೆ ಸಾಗುವ ಮಾರ್ಗವನ್ನು ಅನ್ವೇಷಿಸುತ್ತದೆ.
ಅರ್ನೆಸ್ಟ ಬೇಕರ್ ನ ಕೃತಿಯನ್ನು
ಓದುತ್ತಿರುವಾಗಲೇ ನಮಗೆ ಭಗವದ್ಗೀತೆ
ಕಣ್ಣೆದುರು ನಿಂತು ಮುಖಾ ಮುಖಿಯಾಗ ತೊಡಗುತ್ತದೆ.
ಪಾಶ್ಚಾತ್ಯ ತಾತ್ವಿಕ
ಪರಿಕಲ್ಪನೆಯಲ್ಲಿ ಪುನರ್ಜನ್ಮ ವಿಲ್ಲ. ಗೀತೆ ಆಶಾವಾದವನ್ನು ಮೂಡಿಸುವ ಕೃತಿ.
ಗೀತೆಗೂ ಬೇಕರ್ ಗೂ ಸಾವಿರಾರು ವರ್ಷದ ಅಂತರವಿದ್ದರೂ ಎರಡರ
ಉದ್ದೇಶವೂ ಮಾನವ ಬದುಕಿನ ಸಾರ್ಥಕತೆಯನ್ನು ಅನ್ವೇಷಿಸುವುದೇ ಆಗಿದೆ.
ಎರಡೂ ಮಾನವ ಜೀವನದ ಶಕ್ತಿ ದೌರ್ಬಲ್ಯಗಳೆಡೆಗೆ ಸೂಕ್ಷ್ಮ ದೃಷ್ಟಿ ಹಾಯಿಸುತ್ತದೆ. ಆದರೆ
ದಾರಿ ಮಾತ್ರ ವಿಭಿನ್ನ.
ಭಗವದ್ಗೀತೆಯಲ್ಲಿ ಕೃಷ್ಣನು ಸಾವನ್ನು “ದೇಹದ ಬದಲಾವಣೆ” ಎಂದು ವರ್ಣಿಸುತ್ತಾನೆ.
ಆತ್ಮನಿಗೆ ಜನನವಿಲ್ಲ, ಮರಣವಿಲ್ಲ. ಮರಣವೆಂಬುದು, ಕೇವಲ ಹಳೆಯ ವಸನ ಬಿಟ್ಟು ಹೊಸ ವಸ್ತ್ರ ತೊಟ್ಟಂತೆ. ಜೀವನದ
ಕರ್ತವ್ಯ ಮತ್ತು ಧರ್ಮವನ್ನು ಮರಣ ಪ್ರಜ್ಞೆ ಅರಿವಿಗೆ ತರುತ್ತದೆ. ಎಂದು ಅಭಿಪ್ರಾಯ
ನೀಡಿದರೆ
, ಬೇಕರ್ ಬುದ್ಧಿವಂತ ಪ್ರಾಣಿಯಾದ ಮನುಷ್ಯನಿಗೆ
ತಾನು ಮರಣಶೀಲ ಎಂಬ ಅರಿವಿದೆ. ಅದೇ ಅವನನ್ನು ದ್ವಂದ್ವಸ್ಥಿತಿಗೆ ಒಡ್ಡುತ್ತದೆ. ಆತಂಕ, ಅಹಂಕಾರ ಅತಿರೇಕ
ಅಧಿಕಾರಾಸಕ್ತಿಗೆ ಎಳೆದೊಯ್ಯುತ್ತದೆ. ಪ್ರಾಣಿಗಳಿಗೆ
ಮರಣವಿದೆ. ಮರಣದ ಅರಿವು ಮಾನವನಿಗಷ್ಟೇ ಇದೆ.
ಇದು ಮನುಷ್ಯನಲ್ಲಿ ಆಂತರಿಕ
ಸಂಘರ್ಷವನ್ನು ಸೃಷ್ಟಿಸುತ್ತದೆ. ಮರಣದ ಭಯವನ್ನು ಎದುರಿಸಲು ಸಂಸ್ಕೃತಿ ಧರ್ಮ
ಶಕ್ತಿ ಖ್ಯಾತಿ ನಾಯಕತನ ಮತ್ತು ಅರ್ಥವ್ಯವಸ್ಥೆಗಳನ್ನು
ಬಲಗೊಳಿಸುವ ಕಾಯಕದಲ್ಲಿ ನಿರತನಾಗುತ್ತಾನೆ.
ಮಾನವ
ಸಾವಿನಿಂದ ತಪ್ಪಿಸಿಕೊಳ್ಳಲು ಬದುಕುವುದಿಲ್ಲ. ಆದರೆ ಸಾವಿನ ಭಯವನ್ನು ಮರೆಮಾಚಲು ಹೋರಾಡುತ್ತಾನೆ.
ಎಂದು ಬೇಕರ್ ಪ್ರತಿಪಾದಿಸುತ್ತಾನೆ. ಮರಣದ ಸೂಕ್ತ ಅರಿವು ಅಹಂಕಾರವನ್ನು ಕುಗ್ಗಿಸುತ್ತದೆ. ನೈತಿಕತೆ ಮತ್ತು ಮಾನವೀಯತೆಯನ್ನು ಜಾಗ್ರತಗೊಳಿಸುತ್ತದೆ. ಅವನ ಬದುಕನ್ನು ಇನ್ನಷ್ಟು
ಜವಾಬ್ದಾರಿಯುತವಾಗಿಸುತ್ತದೆ,
ಆದರೆ ಗೀತೆಯಲ್ಲಿ ಮರಣಭಯವನ್ನು ಅಜ್ಞಾನದಿಂದ ಹುಟ್ಟಿದ ಭ್ರಮೆಯೆಂದು ಕಾಣಲಾಗುತ್ತದೆ.
“ನ ಹನ್ಯತೇ ಹನ್ಯಮಾನೇ ಶರೀರೇ” ಎಂಬ ಶ್ಲೋಕದಂತೆ, ಆತ್ಮನು ಅಮರ. ಮರಣವು ಕೇವಲ ದೇಹದ ಬದಲಾವಣೆ. ಹೀಗಾಗಿ ಗೀತೆಯಲ್ಲಿಆತ್ಮ ಜ್ಞಾನವೇ ಕೇಂದ್ರ.
ಗೀತೆ ಕೂಡ ದೇಹ–ಆತ್ಮದ ದ್ವಂದ್ವವನ್ನು ಒಪ್ಪುತ್ತದೆ. ಆದರೆ ಇಲ್ಲಿ ದ್ವಂದ್ವವು ಸಮಸ್ಯೆಯಲ್ಲ; ಅದು ಅಜ್ಞಾನದಿಂದ ಉಂಟಾದ ತಪ್ಪು ಗುರುತಿಸುವಿಕೆ. ಆತ್ಮವನ್ನು ಅರಿತಾಗ ದ್ವಂದ್ವವೇ ಇಲ್ಲ.ಅಮರತ್ವ ಭ್ರಮೆಯಲ್ಲ, ಪರಮಸತ್ಯ .ಆತ್ಮ ನಿತ್ಯ, ಶಾಶ್ವತ, ಅವಿನಾಶಿ. ದೇಹ ನಾಶವಾಗುತ್ತದೆ, ಆತ್ಮವಲ್ಲ.
ಬೇಕರ್ ಪೂರ್ಣ ನಾಸ್ತಿಕನಲ್ಲ. ಧರ್ಮವನ್ನು
ಪೂರ್ತಿ ತಿರಸ್ಕರಿಸುವುದಿಲ್ಲ. ಅದು ಮಾನವ
ಮನಸ್ಸನ್ನು ಸ್ಥಿರಗೊಳಿಸುವ ಶಕ್ತಿಯುತ ವ್ಯವಸ್ಥೆ ಎಂಬುದನ್ನು ಒಪ್ಪಿಕೊಂಡರೂ ಪ್ರತಿಯೊಂದು
ಧರ್ಮ ಸಂಸ್ಕೃತಿಯೂ ತನ್ನ Hero
system ನ್ನು ಸರ್ವಶ್ರೇಷ್ಠ ಎಂದುಕೊಳ್ಳುತ್ತದೆ.
ಅದರಿಂದಲೇ ಸಂಘರ್ಷ ವಿವಾದ
ಯುದ್ಧಗಳು ಪ್ರಾರಂಭಗೊಳ್ಳುತ್ತವೆ. ಎಂಬ
ಅಭಿಪ್ರಾಯ ಅರ್ನೆಸ್ಟ ಬೇಕರ್ ನದು. The
Denial of Death ಕೃತಿಯ ಒಂದು ಮಹತ್ವದ ಲಕ್ಷಣವೆಂದರೆ—ಬೆಕರ್ ಸ್ಪಷ್ಟವಾದ ಅಂತಿಮ ಪರಿಹಾರ ನೀಡುವುದಿಲ್ಲ. ಆದರೆ ಅವನು ಸೂಚಿಸುವ ದಿಕ್ಕು ಹೀಗಿದೆ:
·
ಮರಣವನ್ನು ಸಂಪೂರ್ಣವಾಗಿ ನಿರಾಕರಿಸದೆ ಅದರ ಅರಿವಿನೊಂದಿಗೆ ವಿನಮ್ರವಾಗಿ ಬದುಕುವುದು
·
ಅಹಂಕಾರ ಮತ್ತು ಶ್ರೇಷ್ಠತೆಯ ಭ್ರಮೆಯನ್ನು ಕಡಿಮೆ ಮಾಡುವುದು
·
ಮಾನವೀಯತೆ ಮತ್ತು ಸಹಾನುಭೂತಿಯನ್ನು ಬೆಳೆಸುವುದು
ದ್ವಂದ್ವವೇ ಮಾನವನ ಅಂತರಂಗದ ಸಂಘರ್ಷಕ್ಕೆ ಮೂಲ. ದೇಹ ನಾಶವಾಗುವುದು ಖಚಿತವಾಗಿರುವಾಗಲೂ,
ಚೈತನ್ಯ ಶಾಶ್ವತತೆಯನ್ನು ಬಯಸುತ್ತದೆ. ಈ ವೈರುಧ್ಯವೇ ಮಾನವನೊಳಗೆ ಅಹಂಕಾರ, ಆತಂಕ ಮತ್ತು ಅತಿರೇಕದ ಸಾಧನೆಯ ಆಸೆಯನ್ನು ಹುಟ್ಟಿಸುತ್ತದೆ. ಬೆಕರ್ನ ದೃಷ್ಟಿಯಲ್ಲಿ, ಮನುಷ್ಯನ ಅಹಂಕಾರ (ego) ಕೂಡ ಮರಣಭಯದ ರಕ್ಷಣಾತ್ಮಕ ಗೋಡೆ.
·
ಬೆಕರ್ → ಧರ್ಮ =
psychological necessity
·
ಗೀತೆ → ಧರ್ಮ =
spiritual discipline
ಗೀತೆ
ಇಲ್ಲಿ ಭಿನ್ನವಾಗುತ್ತದೆ. ಧರ್ಮವು ಮರಣಭಯದ ಔಷಧವಲ್ಲ; ಆತ್ಮಜ್ಞಾನದ ಮಾರ್ಗ.
ಗೀತೆಯ ಧರ್ಮ ಅಂತರಂಗದ ಪರಿವರ್ತನೆಗೆ ಸಂಬಂಧಿಸಿದ್ದು, ಹೊರಗಿನ ಶ್ರೇಷ್ಠತೆಯ ಘೋಷಣೆಯಲ್ಲ.
ಬೆಕರ್; ಧರ್ಮ ಒಂದು ಮಾನಸಿಕ ರಕ್ಷಣಾ ವ್ಯವಸ್ಥೆ ಎಂದರೆ. ಗೀತೆ ಆತ್ಮಜ್ಞಾನ ಮತ್ತು ಕರ್ತವ್ಯದ ಮಾರ್ಗ ಎನ್ನುತ್ತದೆ.
ಬೇಕರ್ ಅಮರತ್ವವೆಂಬುದು ಮಾನವ ನಿರ್ಮಿತ ಭ್ರಮೆ ಎಂದರೆ
ಗೀತೆ ಅಸ್ತಿತ್ವದ ಪರಮಸತ್ಯ ಎಂದು ಅಭಿಪ್ರಾಯ ಪಡುತ್ತದೆ. ಬೇಕರ್ ಮಾನವ ಕ್ರಿಯೆಗಳು ಮರಣಭಯದಿಂದ ಪ್ರೇರಿತ. ಸಾಧನೆ, ಅಧಿಕಾರ, ಸೃಜನಶೀಲತೆ—all
are attempts to feel immortal. ಎನ್ನುತ್ತಾನೆ.
ಬೇಕರ್ ಮನುಷ್ಯನ ಚಟುವಟಿಕೆಗಳೆಲ್ಲ ಭಯದಿಂದ ಹುಟ್ಟಿದ ಪ್ರತಿಕ್ರಿಯೆ ಎಂದರೆ,
ಗೀತೆ ಜ್ಞಾನದಿಂದ ಹುಟ್ಟಿದ ಕರ್ತವ್ಯ ಎನ್ನುತ್ತದೆ. ಕರ್ಮ
ಮರಣಭಯದಿಂದಲ್ಲ, ಕರ್ತವ್ಯ ಬೋಧದಿಂದ
ಎಂದು ಉತ್ತರಿಸುತ್ತದೆ.
ಹಿಂಸೆ ಇದು
ಸೃಷ್ಟಿಯಾಗುವುದು ಮರಣಭಯದಿಂದ ಎಂದು ಬೇಕರ್
ಸಾರಿದರೆ, ಹಿಂಸೆ ಅಜ್ಞಾನದಿಂದ
ಉಲ್ಬಣಿಸುತ್ತದೆ, ಆತ್ಮಜ್ಞಾನದಿಂದ ಯುದ್ಧ
ಧರ್ಮಯುದ್ಧವಾಗುತ್ತದೆ ಎಂದು ಗೀತೆ
ಅದಕ್ಕುತ್ತರಿಸುತ್ತದೆ.
ಭೌತವಾದದ ಹಿನ್ನೆಲೆಯಲ್ಲಿ
ಬೆಳೆಯುವ ಬೇಕರ್ ವಾದಕ್ಕೆ ಒಂದಿಷ್ಟು
ಮಿತಿಗಳಿವೆ. ಧರ್ಮಗಳ ತಾತ್ವಿಕತೆಯನ್ನು ಹಿಂದಾಗಿಸಿ, ಕೇವಲ ಮನೋವೈಜ್ಞಾನಿಕವಾಗಿ ಮಾತ್ರ ನೋಡುತ್ತಾನೆ.
ಮನುಷ್ಯನ ಸೃಷ್ಟಿಶೀಲತೆ, ಪ್ರತಿಭೆ
ಗಳನ್ನೆಲ್ಲವನ್ನೂ ಮರಣಭಯಕ್ಕೆ ಕಟ್ಟಿಹಾಕುವುದು,
ಅತಿರೇಕವೆನ್ನಿಸುತ್ತದೆ. ಹಾಗೆಂದು ಕೃತಿಯ
ಬೌದ್ಧಿಕ ಮಹತ್ವವನ್ನು ಅಲ್ಲಗಳೆಯಲಾಗದು.
ಬೆಕರ್ ಮಾನವ ಸಮಾಜದ ಕಾರ್ಯವಿಧಾನವನ್ನು
ವಿವರಿಸುತ್ತಾನೆ; ಗೀತೆ ಅಸ್ತಿತ್ವದ ಅಂತಿಮ ಸತ್ಯವನ್ನು ಪ್ರತಿಪಾದಿಸುತ್ತದೆ.
ಒಂದನ್ನು ಅನುಭವಾತ್ಮಕ
(phenomenological) ಸತ್ಯವೆಂದರೆ, ಮತ್ತೊಂದನ್ನು ಪರಮಾರ್ಥಿಕ (metaphysical) ಸತ್ಯವೆಂದು ನೋಡಬಹುದು.
ಬೆಕರ್, ಸ್ಪಷ್ಟ
ಮೋಕ್ಷವಿಲ್ಲ.ಮರಣವನ್ನು ಒಪ್ಪಿಕೊಂಡು, ಅಹಂಕಾರವನ್ನು ನಿಯಂತ್ರಿಸಿ, ವಿನಮ್ರತೆಯಿಂದ ಬದುಕುವುದು—ಇದಷ್ಟೇ ಸಾಧ್ಯ. ಎಂಬ ನಿರ್ಣಯ
ನೀಡಿದರೆ.
ಗೀತೆ
- ಆತ್ಮಜ್ಞಾನ ಭಕ್ತಿ ನಿಷ್ಕಾಮ ಕರ್ಮ ಇವುಗಳಿಂದ ಮರಣಭಯ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಎಂಬ
ಭರವಸೆ ನೀಡುತ್ತದೆ. ಒಟ್ಟಿನಲ್ಲಿ,
ಬೇಕರ್ ಆಗಲೀ ಗೀತೆಯಾಗಲೀ ಅವುಗಳ ತಾತ್ವಿಕ
ಗುರಿ ಯಾವುದೆಂದರೆ,
ಭಯದಿಂದ ಆರಂಭಿಸಿ, ಜ್ಞಾನದಲ್ಲಿ ಅಂತ್ಯಗೊಳ್ಳುವ ಪಥ ನಿರ್ಮಾಣ ಅಷ್ಟೇ.
=====================================================