Posts

Showing posts from August, 2011

ಕವನವೆಂದರೆ.......................

ಕವನ ಕಟ್ಟುವುದು ಸುಲಭ ಕಾಯಕ ಕಟ್ಟಿ ಎನ್ನುವ ಜನರಿದ್ದರೆ   ಕವಿಯಾಗುವುದು ಸುಲಭವಲ್ಲ   ಸಾಲದು ಒಂದಿಷ್ಟು ಶಬ್ಧವಿದ್ದರೆ ಶಬ್ದಗಳೆಲ್ಲ ಪದ್ಯವಾದರೆ ಸದ್ದುಗಳೆಲ್ಲ ಕಾವ್ಯಗಳೇ ಹೃದ್ಯತೆಯಿಲ್ಲದ ಪ್ರತಿಮೆಗಳಿದ್ದರೆ ಪದ್ಯಗಳಲ್ಲ ; ಅವು ವದ್ಯಗಳೇ         ಕಾವ್ಯವೆಂದರೆ ಹುಡುಗಾಟವಲ್ಲ     ಸತ್ಯದ ಸೂಕ್ಷ್ಮ ಹುಡುಕಾಟ     ಕವನವೆಂದರೆ ಗುಡುಗಾಟವಲ್ಲ     ದಿವ್ಯ ಮೌನಕೆ ತಡಕಾಟ ಕಾವ್ಯವೆಂದರೆ ಹೂದೋಟ ಅರಳಿ ಉದುರುವ ಆಟ ಹೂಮುಟ್ಟಿ ಹಿಸುಕಿದರೆ ಹಿಟ್ಟು ಹಿಟ್ಟು ಹೀರಿ ಅರಗಿಸಿದಲ್ಲಿ   ಸವಿಜೇನು ಹುಟ್ಟು     ಕಾವ್ಯವೆಂದರೆ ಧ್ಯಾನ , ಅಂತರಂಗದಿ ಯಾನ     ತುರೀಯತೆಯ ತಾರಕಕೆ ಉಲ್ಲಂಘನ     ಏರುತ್ತ ಎಡವುತ್ತ ಇಳಿಯುತ್ತ ಕಳಿಯುತ್ತ     ಅಗ್ನಿ ದಿವ್ಯದ ನಡುವೆ ಒಡಲ ಹವನ ಗೋಡೆ ಛಾವಣಿಯೊಳಗೆ ಕಾವ್ಯ ಜನಿಸುವುದಿಲ್ಲ ಬೇಕದಕೆ   ಅವನಿ ಅಂಬಾರ ಹೊರ ಬಂದು ನೆಲಮುಟ್ಟಿ   ತಲೆಯೆತ್ತಿ ನೋಡಿದರೆ ತೆರೆದೀತು ನಿಗೂಡ ಮುಗಿಲ ದ್ವಾರ ಧರೆಯ ನಿರಿ ನಿರಿ ಯೊಳಗೆ ಸುರಿದೀತು ನವಕವನ ; ಧಾರಾಕಾರ. =========================== ಸುಬ್ರಾಯ ಮತ್ತೀಹಳ್ಳಿ   . --

ಓ ಕವಿತೆ; ನೀನೆಲ್ಲಿ ಅವಿತೆ ??

ಕವಿತೆಗಳ ಸೃಷ್ಟಿಯಾಗಿರುವುದೇ   ಮಾನವನ ಅಂತರಂಗ ದರ್ಶನಕ್ಕಾಗಿ ನಿಜವಾಗಿಯೂ   ಕಾವ್ಯ ಮನುಷ್ಯ ಜಗತ್ತಿನ ಅನನ್ಯ ಅನ್ವೇಷಣೆ. ಬಾಹ್ಯ ಜಗತ್ತನ್ನೇ ಅವಲಂಬಿಸಿ ಆಮೂಲಕ ಅಂತರಂಗದ ವಿಶಿಷ್ಟ ವೈವಿಧ್ಯಮಯ   ಪ್ರಪಂಚವನ್ನು ಕಾಣಿಸುವ ಕಾವ್ಯ , ಸಹೃದಯನನ್ನು ಹೊಸದೊಂದು ಅನುಭವ   ಲೋಕಕ್ಕೆ ಕೊಂಡೊಯ್ಯುವ ಅಪ್ರತಿಮ ಕೆಲಸ ಮಾಡುತ್ತದೆ.   ಮನುಷ್ಯ ಜಗತ್ತಿನಲ್ಲಿ   ಕವಿಗಳ ಸಂಖ್ಯೆ   ಎಂದಿಗೂ ಕಡಿಮೆಯೇ. ಹಾಗೆಂದು ಕಾವ್ಯವನ್ನು ನೇರವಾಗಿ ಆಸ್ವಾದಿಸುವವರೂ ಸಹ ಅಲ್ಪಸಂಖ್ಯಾತರೆ.   ಇದೇ ಕಾರಣಕ್ಕೇ ಗಮಕಿಗಳು , ವ್ಯಾಖ್ಯಾನಕಾರರು , ಮೀಮಾಂಸಕರು , ವಿಮರ್ಶಕರು ಸೃಷ್ಟಿಯಾದರು.   ಇವರೆಲ್ಲ ಕಾವ್ಯಕ್ಕೂ ಮತ್ತು ಶ್ರೀಸಾಮಾನ್ಯರಿಗೂ   ಸಮರ್ಥ ಕೊಂಡಿಯಾಗಿ ಕಾರ್ಯ ನಿರ್ವಹಿಸಿದರು. ನಿರ್ವಹಿಸುತ್ತಿದ್ದಾರೆ. ಹಾಗಾದರೆ ಕಾವ್ಯವೆಂದರೇನು ಎಂಬ ಪ್ರಶ್ನೆ ಮೂಡಬಹುದು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಹೋರಾಟವೂ ಇಂದು ನಿನ್ನೆಯದಲ್ಲ. ಗೌರೀಶ ಕೈಕಿಣಿ ಯವರು ಒಂದು ಲೇಖನದಲ್ಲಿ   ಕಾವ್ಯದ ಬಗೆಗೆ ಬರೆಯುತ್ತ , ಒಂದು ರೂಪಕವನ್ನು ಉದಹರಿಸುತ್ತಾರೆ. “ ಸತ್ಯವೆಂದರೇನು ?” ಆಕುಚೋದ್ಯಗಾರ ಪೈಲತ ಯೇಸುಕ್ರಿಸ್ತನಿಗೆ ಸವಾಲು ಹಾಕಿದ ’; ಆದರೆ ಉತ್ತರಕ್ಕಾಗಿ ಕಾಯಲೇ ಇಲ್ಲ , ಕ್ರಿಸ್ತನನ್ನು ನೇರ ಸಿಲುಬೆಗೇರಿಸಲು ಅಪ್ಪಣೆಯಿತ್ತ. ಇದೀಗ ಕಾವ್ಯವೆಂದರೇನು ? ಎಂದು ನನಗೆ ನಾನೇ ಸವಾಲು ಹಾಕಿಕೊಳ್ಳುತ್ತಿದ್ದೇನೆ. ಆದ...