ಸಾವಿರದ ಕವಿಯೇ.....
ಅಂಬಾರದೊಡಲಿಂದ ಅಂಬರಕೆ ನೆಗೆದ
ಬಾಳ ಮರವೇ
ಅಂತರಂಗ ಬಹಿರಂಗದ ಗಡಿಮೀರಿ
ಗಂಗಾತರಂಗವಾಗಿ ಮೆರೆದ ಹರಿವೇ
ಹಟ್ಟಿಯ ಹುಟ್ಟಿಗೆ ಹೊಸ ಹುಟ್ಟು ನೀಡಿ
ಹಿಡಿಯೊಳಗೆ ಹಡಗ, ಎದೆಯಲ್ಲಿ ಗುಡುಗ
ಹಿಡಿದು ಗುಡುಗಿದ ಗಾಡಿಗ ತನವೇ
ಬಹತ್ತರದಲ್ಲೂ ಬುಹು ಎತ್ತರ
ಬಾ...ಹತ್ತಿರ ಎಂಬ ದನಿಯೇ...
ಒಳಗಿಳಿ
ದರೆ ಕಾಣುವುದು ಒಂದಿಷ್ಟು ಅಕ್ಕರೆ
ಸಿಡಿಮಿಡಿಯ ತುಡಿತದಲ್ಲೂ ಸಿಕ್ಕರೆ
ಅದು ಸವಿ ಸಕ್ಕರೆ.
ನೋವು ಪ್ರೀತಿಯ ನಡುವಲ್ಲೂ
ಬೆಳದಿಂಗಳು.
ಮುಗುಳು ನಕ್ಕರೆ.
ಹತ್ತು ಅವತರಣ, ಹೊತ್ತು ಗೊತ್ತಿದೆ.
ಅದಕೆ ಗತ್ತಿದೆ
ಅದಕೆಲ್ಲ ಕಾರಣ ಅವಧಾರಣ.
ಕಾಡ ಕವಿತೆಗಳು ಕಾದು ಕುಳಿತಿವೆ
ಕಾಯ ಬೇಕು ಎಂದು.
ಭೂತ ಗಾಯಗಳು ಕೀತು ಕುಳಿತಿವೆ
ಇನ್ನಾದರೂ ಮಾಯಬೇಕೆಂದು.
==============
ನೆರಳು ನರಳುವಲ್ಲಿ ನಿಜಗೊರಳ
ಮೊಳಗಿಸಿದ
ನೂರೆಂಟು ಕಿಟಕಿಗಳ ತಂಗಾಳಿಯೇ...
ಎದೆಗೆ ಬಿದ್ದಕ್ಷರಕೆ ಬೆದೆಬರಿಸಿ ಭುವಿಯಲ್ಲಿ
ಸಾವಿರದ ಸಸಿ ಬೆಳೆದ ಸಿರಿ ಗೂಳಿಯೇ
ಸಾಗರವ ಮೀರಿ ಗೌರೀಶಂಕರಕ್ಕೇರಿದ
ನ್ಯಗ್ರೋಧ ಬೀಜವೇ
ದಿನಕರನ ಕಿರಣ ಪ್ರವಾಹವೇ
ಹಾಲಕ್ಕಿ ಹಾಲುಂಡು, ಹೊಲೆತನವ ತೊಳೆದಿಕ್ಕಿ
ಹಾಲಾಹಲಕೂ ಎದುರಾಗಿ
ಎದ್ದ ಹಚ್ಚ ಹಸಿರೇ
ಬಾಳ ಮರ ಅಮರವಾಗಲೇ ಬೇಕು.
ವಿಷ್ಣು ಜಿಷ್ಣು ಸಹಿಷ್ಣು
ಕವಿತೆಯುಳಿಸಲು ನೀನೂ ಬೇಕು ಬೇಕು.
ಅಕ್ಷರದ ಅಂಬಲಿ,ಎಲ್ಲೆಲ್ಲೂ ಹಂಬಲು
ಶತಮಾನ ಸಂಕಲ್ಪ ಈಡೇರಬೇಕು.
(20 -10
-2018. ಶಿರಸಿಯ ನೆಮ್ಮದಿಯಲ್ಲಿ,
ವಿಷ್ಣುನಾಯಕರ ಎಪ್ಪತ್ತರ ಅಭಿನಂದನಾ
ಸಭೆಯಲ್ಲಿ ಪ್ರಸ್ತುತ ಪಡಿಸಿದ
ಅಭಿನಂದನಾ ನುಡಿ. )
Comments
Post a Comment