Monday, 22 July 2024

ʻʻಕನ್ನಡದ ಮುದ್ದು.... ಮುದ್ದಣ.ʼʼ

 

ಕನ್ನಡದ  ಮುದ್ದುಕಾಜಾಣ  ಮುದ್ದಣ

ಹೊನ್ನ ಹಾರಕ್ಕೆ ರತ್ನ, ನುಡಿ ತೋರಣ

ಪದ ಪದಕೆ ಹೊಸ ಮಿಂಚು ನವ ಜೀವೋದಯ

ಪಾದವೂರುವ ಮೊದಲೇ ಪಾರಾದೆಯ....?

 

      ಕನ್ನಡದ ಮುಂಗೋಳಿ, ಸಹಸ್ರಮಾನದ ಪ್ರತಿಭೆ, ಹಿರಿಯ ಸಾಧನೆಗೈದು ಕಿರಿವಯದಲ್ಲೇ ಕಾಣೆಯಾದ ಕನ್ನಡದ ಮಹಾಕವಿ ಮುದ್ದಣ, ಕನ್ನಡದ ಮಣ್ಣು ಸೃಷ್ಟಿಸಿದ ಅನುಪಮ ಪ್ರತಿಭೆ. ಒಂದೂವರೆ ಶತಮಾನದ ಪೂರ್ವದಲ್ಲೇ ಜನಿಸಿ,(ನಂದಳಿಕೆ, ಉಡುಪಿ ೧೮೭೦ - ೧೯೦೧) ಶತ ಶತಮಾನಗಳ ಕಾಲ ಕನ್ನಡದ ಮನೋನಂದನದಲ್ಲಿ ಹೂವಾಗಿ ಅರಳಿ, ಸದಾ ಬಾಡದಂತೇ ಜೀವಂತವಾಗಿ ನಮ್ಮೊಂದಿಗೆ ಬಾಳಿ ಬೆಳಗುತ್ತಿರುವ ಮುದ್ದಣ, ಯಾವ ವಿಶ್ವವಿದ್ಯಾಲಯದ ಉತ್ಪನ್ನವಲ್ಲ. ಅದ್ಯಾವ ಗುರುಕುಲವೂ ಮುದ್ದಣನನ್ನು ಸಾಕಿಲ್ಲ. ಸಂಸ್ಕೃತಿ ನಿಷ್ಠೆ, ಕಲೆಯಮೇಲಣ ಪ್ರೀತಿ, ಶೋಧನಾಸಕ್ತಿ, ಸಂವೇದನಾ ಶೀಲತೆ, ನುಡಿಯಬಗೆಗಿನ ಧ್ಯಾನ,ಸ್ವಯಂ ಅಧ್ಯಯನ. ಮುದ್ದಣನನ್ನು ಸೃಷ್ಟಿಶೀಲತೆಯ ಶೃಂಗಕ್ಕೆ ಕರೆದೊಯ್ದು ಕನ್ನಡ ಕಾವ್ಯಾಕಾಶದ ಧ್ರುವತಾರೆಯಾಗಿಸಿತೆಂದರೆ ಅತಿಶಯೋಕ್ತಿಯಂತೂ ಅಲ್ಲ.

    ಕಿತ್ತು ತಿನ್ನುವ ಬಡತನ, ಬದುಕಿಗಾಗಿ ಅಂಡಲೆಯುವಂತ ದಯನೀಯತೆ, ಅಧ್ಯಯನಕ್ಕೆ ಯಾವ ಕನಿಷ್ಠ ಸೌಲಭ್ಯವೂ ಇಲ್ಲದ ವಾತಾವರಣದಲ್ಲಿ, ಮುದ್ದಣ ಹೇಗೆ ಮಹಾಕವಿಯಾಗಿ ರೂಪುಗೊಂಡ ಎಂಬುದೇ ಬಗೆಹರಿಯದ ಸವಾಲು. 

    ದಕ್ಷಿಣ ಕನ್ನಡ ಹತ್ತೊಂಬತ್ತನೆಯ ಶತಮಾನದ ಪ್ರಾರಂಭಕ್ಕೇ ಆಧುನಿಕತೆಗೆ  ಸ್ಪಂದಿಸತೊಡಗಿತ್ತು. ಮುದ್ದಣ ಪ್ರಾಯಕ್ಕೆ ಬರುವಾಗಲೇ ರೆವರೆಂಡ್‌ ಕಿಟ್ಟೆಲ್‌ ರ  ಕನ್ನಡದ ಪ್ರಪ್ರಥಮ ವೈಜ್ಞಾನಿಕವಾದ ಕನ್ನಡ ಶಬ್ದಕೋಶ ಪ್ರಕಟವಾಗಿ ಜನಪ್ರಿಯವಾಗಿತ್ತು.   ಪಂಪ ಕನ್ನಡ ಜನಮಾನಸದಲ್ಲಿ ಪ್ರಕಟಗೊಂಡು  ಸಂಚಲನ ಮೂಡಿಸಿದ್ದ. ಮಂಗಳೂರು ನಗರದಲ್ಲಿ ಕನ್ನಡದ ಪ್ರಥಮ ಸುದ್ದಿಪತ್ರಿಕೆ ಪ್ರಕಟಗೊಂಡು ಪ್ರಸಾರ ಗೊಳ್ಳುತ್ತಿತ್ತು.

  ಸಾಕಷ್ಟು ಬ್ರಿಟಿಶ್‌ ಸಂಶೋಧಕರು, ಕನ್ನಡದ ಭಾಷೆ ಸಂಸ್ಕೃತಿ ಮತ್ತು ಇತಿಹಾಸಗಳನ್ನು ಬೆಳಕಿಗೆ ತರುವಲ್ಲಿ ಶ್ರಮಿಸುತ್ತಿದ್ದರು. 

    ಇಂತಹ ಸುವರ್ಣ ಸಂದರ್ಭದಲ್ಲಿ  ಮುದ್ದಣ ಜನ್ಮಿಸುತ್ತಾನೆ.  ಪದ್ಯಂ ವದ್ಯಂ, ಗದ್ಯಂ ಹೃದ್ಯಂ. ಎಂದು ಘೋಷಿಸುತ್ತಾ  ಕನ್ನಡದ ಪ್ರಾಚೀನ ಹೆಜ್ಜೆಗಳಿಗೆ ಹೊಸತನದ ಗೆಜ್ಜೆ ಸೇರಿಸುತ್ತ, ನವೋದಯದ ಕನಸು ಕಂಡ ಅಪೂರ್ವ ಪ್ರತಿಭೆ ಆತ.  ಕನ್ನಡದ ಪರಂಪರೆಯೊಂದೇ ಅಲ್ಲ, ಇಡೀ ಭಾರತೀಯ ಭಾಷೆಗಳಲ್ಲೆಲ್ಲ, ಸಾಹಿತ್ಯ ಕಲೆ, ವಿಜ್ಞಾನ, ಆರೋಗ್ಯ, ಜೋತಿಷ್ಯ, ಗಣಿತ ಎಲ್ಲ ಶಾಸ್ತ್ರಗಳೂ, ಶ್ಲೋಕ, ಪದ್ಯ, ಮುಕ್ತಕಗಳಲ್ಲಿಯೇ ಅಭಿವ್ಯಕ್ತಿಸುವ ಪದ್ಧತಿಯಿಂದ ಜಡಗೊಂಡಿದ್ದ ಜ್ಞಾನ ಪರಂಪರೆಗೆ  ಸರಳ ಗದ್ಯದ ತಿರುವನ್ನು ಮೂಡಿಸುವ ಕನಸಿನಲ್ಲಿ ಮುದ್ದಣನಿದ್ದ. ಹಳೆ ಮತ್ತು ಹೊಸಗನ್ನಡದ ಶಬ್ದ ಸಾಮ್ರಾಜ್ಯವನ್ನೇ ತನ್ನ ಮನೋಭಿತ್ತಿಯಲ್ಲಿ ಸಂಗ್ರಹಿಸಿಕೊಂಡಿದ್ದ ಮುದ್ದಣ, ಕಾವ್ಯರಚನಾ ಕ್ಷೇತ್ರಕ್ಕೆ ಹೆಬ್ಬಾಗಿಲಾಗಿಸಿಕೊಂಡಿದ್ದು, ಯಕ್ಷಕಾವ್ಯ ಸೃಷ್ಟಿಯಿಂದ. ಹೊಸ ತಿಳಿಗನ್ನಡದಲ್ಲಿ ರತ್ನಾವತಿ ಕಲ್ಯಾಣ, ಮತ್ತು ಕುಮಾರವಿಜಯ ಯಕ್ಷಗಾನ ಕೃತಿ ರಚಿಸಿ, ಅದನ್ನು ಪ್ರಯೋಗಿಸುವಲ್ಲೂ ಸಫಲನಾದ.  ಸ್ವಥಃ  ಯಕ್ಷಗಾನ ಅರ್ಥಧಾರಿಯಾಗಿಯೂ ಆತ ಪ್ರಸಿದ್ಧನಾಗಿದ್ದ. ಯಕ್ಷ ಕಲಾ ಪ್ರತಿಭೆ ಅವನಿಗೆ ಹುಟ್ಟಿನಿಂದಲೇ ಬಂದಿದ್ದು. ದಕ್ಷಿಣ ಕನ್ನಡದ ಸಾಂಸ್ಕೃತಿಕ ಜೀವ ಮತ್ತು ಉಸಿರೇ ಯಕ್ಷಗಾನ.  ಆ ಕಲೆಗೆ ಮುದ್ದಣ ತನ್ನ ಅನುಪಮ ಕೊಡುಗೆಯನ್ನೂ ನೀಡಿದ. ಯಕ್ಷ ಗೀತೆಗೆ ಸಮೃದ್ಧ ಅರ್ಥ ಮತ್ತು ಆಳಗಳನ್ನು ಒದಗಿಸಿದ. ಸರಳ ಸುಂದರ ಭಾಷಾಶಕ್ತಿಯಿಂದ ಮುಂದಿನೆಲ್ಲ ಯಕ್ಷಕವಿಗಳಿಗೆ  ಮಾದರಿಯಾದ.

   ಮುದ್ದಣ ಅಸಾಧ್ಯ ಬಡತನದಲ್ಲೂ ತನ್ನ ಪ್ರಾಥಮಿಕ ಶಿಕ್ಷಣವನ್ನು ತನ್ನ ಗ್ರಾಮ ನಂದಳಿಕೆಯ ಸರಕಾರಿ ಶಾಲೆಯಲ್ಲಿ ಪೂರೈಸಿ, ಉದ್ಯೋಗದ ನಿರೀಕ್ಷೆಯಲ್ಲಿ, ವ್ಯಾಯಾಮ ಶಿಕ್ಷಣ ತರಬೇತಿಯನ್ನು ಮದರಾಸಿನಲ್ಲಿ ಪಡೆದು, ಉಡುಪಿ ಮತ್ತು ಕುಂದಾಪುರ  ಸರಕಾರಿ ಪ್ರೌಢಶಾಲೆಯ ವ್ಯಾಯಾಮ ಶಿಕ್ಷಕನಾಗುತ್ತಾನೆ.  ಆ ಕಾಲದಲ್ಲಿ ಆತನ ಮಾಸಿಕ ವೇತನ ಕೇವಲ ಹತ್ತುರೂಪಾಯಿಯಾಗಿತ್ತು.

   ಮುದ್ದಣನ ಕಾಲಕ್ಕಾಗಲೇ ಕನ್ನಡ ಸಾಹಿತ್ಯದಲ್ಲಿ, ಹೊಸಗನ್ನಡ ಗದ್ಯ ಗಟ್ಟಿ ಹೆಜ್ಜೆಯೂರುತ್ತಿತ್ತು. ಸರಳೀಕರಣ ಗೊಳ್ಳುತ್ತ, ಕತೆ ಕಾದಂಬರಿ ಭಾವಗೀತೆಗಳು ಸಾಮಾನ್ಯ ಓದುಗರನ್ನು ಆಕರ್ಷಿಸತೊಡಗಿತ್ತು. ಬ್ರಿಟಿಶ್‌ ಪಾದ್ರಿಗಳಲ್ಲಿ ಅನೇಕರು,  ಏಸುವಿನ ಸಂದೇಶಗಳನ್ನು, ಪದ್ಯ ಖಂಡಕಾವ್ಯಗಳನ್ನು ಸರಳಕನ್ನಡದಲ್ಲಿ ರಚಿಸಿ ಮುದ್ರಿಸಿ ವಿತರಿಸುತ್ತಿದ್ದರು. ಎಲ್ಲರಿಗೂ ಸಲ್ಲುವಂತಹ ಶಿಷ್ಟಕನ್ನಡ ಭಾಷೆಯೊಂದು ಕನ್ನಡ ನಾಡಿನಾದ್ಯಂತ ಪಸರಿಸುತ್ತಿತ್ತು.

   ಛಂದೋ ಬದ್ಧ ಷಟ್ಪದಿಗಳೇ ಕನ್ನಡ ಕಾವ್ಯಗಳು ಎನ್ನುತ್ತ, ಪುಟ್ಟ ಮಕ್ಕಳಿಗೆ ಕಷ್ಟಕೊಡುತ್ತಿದ್ದ ಪಾಠಕ್ರಮಕ್ಕೆ ಪ್ರತಿಯಾಗಿ, ಸರಳ ಕನ್ನಡದ ಸುಲಲಿತ ಪದ್ಯಗಳು ರಚನೆಯಾಗಲು ಪ್ರಾರಂಭಗೊಂಡಿತ್ತು.  ಒಟ್ಟಿನಲ್ಲಿ ಹತ್ತೊಂಭತ್ತನೆಯ ಶತಮಾನದ ಕೊನೆಯ, ಮತ್ತು ಇಪ್ಪತ್ತನೆಯ ಶತಕದ ಪ್ರಾರಂಭದ ಕಾಲ, ಹೊಸಗನ್ನಡದ ನವೋದಯ ಕಾಲವೆನ್ನಬಹುದು.  ಈ ಸಂಧಿಕಾಲದಲ್ಲಿಯೇ ಮುದ್ದಣ ಮಹಾಕವಿ ಜನ್ಮಿಸುತ್ತಾನೆ. 

   ಕನ್ನಡದ ಶ್ರೀಮಂತ ಪರಂಪರೆ, ಮತ್ತು ಹೊಸಗನ್ನಡದ ಹೊಸ ನಿರೀಕ್ಷೆಗಳನ್ನು ಕಸಿಮಾಡಿ, ಶೈಲಿ ತಂತ್ರ, ಅಭಿವ್ಯಕ್ತಿಗಳಲ್ಲಿ ಹೊಸ ದಾರಿ ನಿರ್ಮಿಸುವ ಹರಿಕಾರನಾಗುತ್ತಾನೆ. ಛಂದೋಬದ್ಧ ಕಾವ್ಯರಚನೆಯ ಜೊತೆಗೆ, ಗದ್ಯಮಹಾಕಾವ್ಯ ಶ್ರೀ ರಾಮಾಶ್ವಮೇಧ ವೆಂಬ ಕೃತಿಯನ್ನೂ ರಚಿಸಿ, ಆಧುನಿಕತೆಯ ಆಕರ್ಷಣೆಯೊಂದಿಗೆ, ಹಳೆಗನ್ನಡದ ಸೊಗಸು, ಘನತೆ ಗಾಂಭೀರ್ಯಗಳನ್ನು ಚಿಮ್ಮಿಸುತ್ತಾನೆ.

   ವ್ಯವಹಾರದ ಅನುಕೂಲಕ್ಕಾಗಿ, ಶಿಷ್ಟ ಕನ್ನಡ ಸೃಷ್ಟಿಯಾಗಿದೆ ಸರಿ, ಆದರೆ ಭಾರತೀಯ ಭಾಷೆಗಳಲ್ಲೇ ಪ್ರಾಚೀನವಾದ ಸಮೃದ್ಧ ಕನ್ನಡ  ಹಳೆಗನ್ನಡವೆಂಬ ನಾಮಧೇಯ ಪಡೆದು, ಲಕ್ಷಾಂತರ ಶಬ್ದಗಳನ್ನು ಮೂಲೆಗುಂಪಾಗಿಸಿಕೊಂಡಿತು. ಕ್ಲಿಷ್ಟ, ಕಠಿಣ ವೆಂಬ ಆರೋಪಕ್ಕೊಳಗಾಯಿತು. ತನ್ನ ಆದ್ಭುತ ಶಕ್ತಿ, ಘನತೆ ಗಾಂಭೀರ್ಯ, ಶಬ್ಧ ಶ್ರೀಮಂತಿಕೆಗಳನ್ನು  ಪ್ರಕಟಿಸಿಕೊಳ್ಳಲಾಗದೇ ನರಳಿತು. ಕನ್ನಡ ಭಾಷೆಯ ಈ ಸಂಕಟಸ್ಥಿತಿಯನ್ನು ಮನಗಂಡ  ಕವಿ ಮುದ್ದಣ,  ಆಧುನಿಕ ಯುಗದಲ್ಲೂ ಪರಂಪರೆಯನ್ನು ಮತ್ತೆ ಎತ್ತಿ ಮೆರಗು ನೀಡುವ ಮಹತ್ವಪೂರ್ಣ ಪ್ರತಿಭಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾನೆ.

   ಹೊಸ ತಂತ್ರಕ್ಕೆ ಹಳೆಯ ಭಾಷೆಯನ್ನು ಒಗ್ಗಿಸುವ, ಹೊಸ ಕಾಲಕ್ಕೆ ಕನ್ನಡದ ನೈಜ ಶಕ್ತಿ, ಕೆಚ್ಚುಗಳನ್ನು ಪರಿಚಯಿಸುವ ಕೈಂಕರ್ಯಕ್ಕೆ  ತನ್ನನ್ನು ಒಪ್ಪಿಸಿಕೊಳ್ಳುತ್ತಾನೆ.

   ಕನ್ನಡಮೇ ಕತ್ತುರಿಯಲ್ತೇ...?,  ನೀರಿಳಿಯದ ಗಂಟಲೋಳ್‌ ಕಡುಬಂ ತುರುಕಿದಂತಾಯ್ತು...!! ಕರಿಮಣಿಯ ಸರದೋಳ್‌, ಕೆಂಬವಳಂ ಪೋಣಿಸಿದಂತೆ....!!   ತಿರುಳು ಗನ್ನಡದ ಬೆಳ್ನುಡಿಯಲ್ಲಿ, ಪುರುಳೊಂದೇ ಪೇಳ್ವುದು...!!  ಪದ್ಯಂ- ವಧ್ಯಂ, ಗದ್ಯಂ ಹೃದ್ಯಂ,...!!

   ಎಂಬೆಲ್ಲ ನುಡಿಗಳಿಂದ ಶತಮಾನಗಳ ಕಾಲ ಜೀವಂತವಾಗಿ ನಮ್ಮೊಂದಿಗೆ ಒಡನಾಡುತ್ತಿದ್ದಾನೆ. ರಾಮಾಶ್ವಮೇಧ ಕೃತಿ ಮಿಂಚುವುದು ಅದರ ಕಥಾವಸ್ತುವಿಗಿಂತ ಅದರ ಅಭಿವ್ಯಕ್ತಿಯಲ್ಲಿಯ ಆಧುನಿಕ ತಂತ್ರದಿಂದ. ಕವಿ ತನ್ನ ಪ್ರಿಯತಮೆಗೆ ಮಳೆಗಾಲದ ಒಂಟಿತನ ಬೇಸರವನ್ನು ಕಳೆಯಲು ಕಥೆಹೇಳಲು ತೊಡಗುತ್ತಾನೆ. ಪತ್ನಿ ಕೇವಲ ಏಕಮುಖೀ ಕೇಳುಗಳಲ್ಲ. ಕನ್ನಡ ಭಾಷೆ ಸಾಹಿತ್ಯ ಪರಂಪರೆಗಳ ಬಗೆಗೆ ತಿಳುವಳಿಕೆಯುಳ್ಳವಳು. ಮಹಾಕಾವ್ಯ, ಪ್ರಾರ್ಥನೆ,ದೇವತಾಸ್ತುತಿ, ಸ್ವಪ್ರಶಂಸೆ, ಯಂತಹ ಸಾಂಪ್ರದಾಯಿಕ ವಿಧಾನದ ಬದಲು, ಕಾವ್ಯದ ಸುಂದರ ಚರ್ಚೆಯಮೂಲಕ ಪ್ರಾರಂಭಗೊಳ್ಳುತ್ತದೆ. ಅದೇʻʻ ಮುದ್ದಣ ಮನೋರಮೆಯರ ಸಲ್ಲಾಪʼʼ ಎಂದು ಪ್ರಸಿದ್ಧಗೊಂಡಿತು. ಕಳೆದ ಶತಮಾನದಲ್ಲಿ ಕನ್ನಡ ಭಾಷಾಪ್ರಪಂಚದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತು.  ಗಂಡ ಹೆಂಡತಿಯರ ಸರಸ ಸಲ್ಲಾಪ ಮುದ ನೀಡುವುದರ ಜೊತೆಗೆ, ಅವರ ನಡುವಣ ಬೌದ್ಧಿಕ ಚರ್ಚೆ ಕುತೂಹಲ ಕೆರಳಿಸಿತು.

   ಯಕ್ಷಗಾನ ತಾಳಮದ್ದಲೆಯ ಯಶಸ್ವೀ ಅರ್ಥಧಾರಿಯಾಗಿದ್ದ, ಮುದ್ದಣ, ಅದರ ಧನಾತ್ಮಕ ಪರಿಣಾಮವನ್ನು, ಪಾತ್ರಗಳ ನಡುವಣ ರೋಚಕ ತರ್ಕಗಳಲ್ಲಿ ಮೂಡಿಸಿದ್ದಾನೆ.  ಮುದ್ದಣನ ಶಬ್ದಸಾಮರ್ಥ್ಯ ಅದೆಷ್ಟಿದೆ ಎಂಬುದಕ್ಕೆ, ಕವಿಯʻʻ ಶ್ರೀರಾಮ ಪಟ್ಟಾಭಿಷೇಕಂʼʼ ಎಂಬ ಛಂದೋಬದ್ಧ ಖಂಡಕಾವ್ಯದ ಒಂದು ಪದ್ಯವನ್ನು ಕುತೂಹಲಕ್ಕೆ ಗಮನಿಸಬಹುದು.

ʻʻತೊಟ್ಟಿಲೋಳ್‌ ಪುಟ್ಟಮಗು ಪಟ್ಟಿರಲ್‌ ಮುಟ್ಟಿ ಮೈ

ನಿಟ್ಟಿಸುತ ಮೊಟ್ಟಿರಿಂದೊಟ್ಟಿ ಗನನಿಟ್ಟಿವನ

ಬಿಟ್ಟು ಪಣೆಗಿಟ್ಟು ಪೊಂಬೊಟ್ಟನೆದೆಗಟ್ಟಿಯಾ ದಿಟ್ಟೆ ಬಿಣ್ಬಟ್ಟ ಮೊಲೆಗೆ.

ತೊಟ್ಟುಡಿಗೆ ಪಟ್ಟೆ ನೆರಿದುಟ್ಟು ಕೊಂಡೊಟ್ಟಜದ

ಪಟ್ಟಣಿಗರಿಟ್ಟೆಡೆಯ ಬಟ್ಟೆಯಂ ಮೆಟ್ಟಿ ಬರೆ

ದಿಟ್ಟಿಗೆಡೆಗೊಟ್ಟು  ಪಿಂದಟ್ಟೊರ್ವಳಟ್ಟಸದಿ ಕೊಟ್ಟಿ ಪೊರಮಟ್ಟಳಾಗ.ʼʼ

     ಸುದೀರ್ಘ ವನವಾಸದಿಂದ ಅಯ್ಯೋಧ್ಯೆಗೆ ಮರಳುತ್ತಿರುವ ರಾಮಚಂದ್ರನನ್ನು ಸ್ವಾಗತಿಸಲು ಹೊರಟ ತರುಣಿಯೋರ್ವಳು, ಪುಟ್ಟ ಮಗುವನ್ನು ತೊಟ್ಟಿಲಲ್ಲಿ ತಟ್ಟಿ, ಪಟ್ಟೆಯನ್ನುಟ್ಟು, ಸಡಗರದಿಂದ ಹೊರಟ ಸಂಭ್ರಮವನ್ನು, ಕವಿ ಏಕಾಕ್ಷರ ಅನುರಣನ( ಪ್ರಾಸಾನು ಪ್ರಾಸ) ದಿಂದ ಸಿಂಗರಿಸಿದ ಪದ್ಯವಿದು.  ಲಕ್ಷ್ಮೀಶ ಕವಿ ಉಪಮಾಲೋಲ ನಿದ್ದಂತೇ ಮುದ್ದಣ ಶಬ್ದ ಸಾಮ್ರಾಟ. ಚತುರ ತರ್ಕಿ.

  ತನ್ನ ಇಪ್ಪತ್ತೈದರ ಯುವ ಪ್ರಾಯದಲ್ಲಿ ಕಾವ್ಯರಚನೆಯನ್ನು ಪ್ರಾರಂಭಿಸಿದ ಮುದ್ದಣ ಕೇವಲ ನಾಲ್ಕೇ ವರ್ಷದಲ್ಲಿ  ನಾಲ್ಕಾರು ಖಂಡಕಾವ್ಯ, ಯಕ್ಷಗಾನ ಕೃತಿ, ಮತ್ತು ರಾಮಾಶ್ವಮೇಧ ದಂತ ಮಹಾಕಾವ್ಯಗಳನ್ನು ರಚಿಸಿದ ಶತಮಾನದ ಪ್ರತಿಭಾವಂತ.  ಸಂಸ್ಕೃತ ಮತ್ತು ಇಂಗ್ಲಿಶ್‌ ಮಾತ್ರ ಬುದ್ದಿವಂತಿಕೆಯ, ಪ್ರತಿಭಾವಂತಿಕೆಯ ಸಂಕೇತ ವೆಂಬ ಭ್ರಮೆಯಲ್ಲಿ, ವಿಶ್ವವಿದ್ಯಾವಂತರು ತೇಲುತ್ತಿರುವಾಗ, ಕನ್ನಡ ಕಸ್ತೂರಿಯ ಪರಿಮಳವನ್ನು ರಾಜ್ಯದಾದ್ಯಂತ ಬೀರಿದ ಈ ಮಹೋನ್ನತ ಪ್ರತಿಭೆ, ತನ್ನ ಕೇವಲ ಮೂವತ್ತೊಂದನೆಯ ವಯಸ್ಸಿನಲ್ಲೇ ಜೀವನವನ್ನು ಪೂರ್ತಿಗೊಳಿಸಿದ ದುರ್ದೈವಿ.  ಆಗಲೇ ಹೊಸಗನ್ನಡದಲ್ಲಿ ಕಾದಂಬರಿ ರಚನೆಯಲ್ಲೂ ತೊಡಗಿಕೊಂಡಿದ್ದ ಎಂಬುದು ಬೆರಗು ಮೂಡಿಸುವಂತಹ ಘಟನೆ.

     ಕನ್ನಡ ಸಾಹಿತ್ಯ ತನ್ನೆಲ್ಲ ಸತ್ವವನ್ನು ಕಳೆದುಕೊಂಡು ನಿಂತನೀರಾದ ಈ ವರ್ತಮಾನದಲ್ಲಿ, ಮತ್ತೆ ನಾವು ನಮ್ಮ ಪರಂಪರೆಯ ಪ್ರತಿಭಾ ಖಜಾನೆಯ ಬೀಗವನ್ನೊಡೆಯ ಬೇಕಿದೆ. ಕನ್ನಡದ ಮೂಲಭೂತ ಶಕ್ತಿ, ಚೈತನ್ಯಗಳ ಮೂಲಕ್ಕೆ ಸಾಗಬೇಕಿದೆ. ಪಂಪನಿಂದ ಮುದ್ದಣ, ಮುದ್ದಣನಿಂದ ಕುವೆಂಪು ಗೋಕಾಕ್‌, ಬೇಂದ್ರೆ, ಮುಂತಾದ ಕನ್ನಡ ಪಭ್ರತಿಗಳು, ಕನ್ನಡದ ಪಾರಂಪರಿಕ ಖಜಾನೆಯಿಂದಲೇ ಬೆಳೆದು ಬೆಳಗಿದವರು ಎಂಬುದನ್ನು  ನಾವಿಂದು ಮತ್ತೆ ಸ್ಮರಿಸಬೇಕಾಗಿದೆ.

ಸುಮಸಂಪದ, ಅಂಕಣಕ್ಕೆ. ತಾ-೨೨-೭-೨೦೨೪.     ಸುಬ್ರಾಯ ಮತ್ತೀಹಳ್ಳಿ.

Saturday, 20 July 2024

ಸಹಕಾರ ಸರದಾರ – ಸಂಸ್ಕೃತಿಯ ಹರಿಕಾರ

 

                 ʻʻ ಶ್ರೀಪಾದ ಹೆಗಡೆ  ಕಡವೆ ʼʼ

ʻʻಈ ನೆಲದಿ  ಅವಿತಿರುವನೊಬ್ಬ, ಅಸದೃಷ  ವ್ಯಕ್ತಿ.  ಸಹಕಾರ  ಸೌಮನಸ್ಯದ  ಮಾರ್ಗಾನುಗಾಮಿ

ಓದಿ  ಓದಿ ಓಡಾಡಿ ಕಾಡಿ,  ಗುಣಕೆ ಮಣಿದು ಜಡತೆಗೆ  ಸಿಡಿದ

ಧ್ಯಾನಿ, ಜಗದ ಜ್ಞಾನಿ, ಛಲದ ಕಣಿ  ತಾರತಮ್ಯವ ಮುರಿದ ವೀರಾಗ್ರಣಿ.

ಅಪರೂಪದ  ಅನುಪಮ ಜನಪರ  ರಾಜಕಾರಣಿ. 

ದಿಲ್ಲಿಯೇರಲಿಲ್ಲ,  ದಿಲ್ಲಿಯನ್ನೇ ಇಲ್ಲಿ ಕರೆದ, ʻಇಲ್ಲʼ ಸೊಲ್ಲಳಿಸಿ  ಎಲ್ಲವನು ತಂದು ಸುರಿದ

.ಕಡವೆಗೆ  ಕಡವೆಯೇ  ಉಪಮೆ.  ಸಹಕಾರದ  ಸಮರ್ಥ  ಪ್ರತಿಮೆ.ʼʼ

 

           ಮಾನವ ಜಗತ್ತಿನಲ್ಲಿ  ಸಾಮಾನ್ಯವಾಗಿ  ಎರಡು ಬಗೆಯ ವ್ಯಕ್ತಿಗಳನ್ನು ನಾವೆಂದೂ  ಕಾಣುತ್ತೇವೆ.  ಸಂಸಾರ ನಿಷ್ಠರು, ಮತ್ತು ಸಮುದಾಯ ನಿಷ್ಠರು, ಎಂದು ಸರಳವಾಗಿ ವಿಭಾಗಿಸಬಹುದಾಗಿದೆ.  ಸಮುದಾಯ ನಿಷ್ಠರು ಸಾಮಾನ್ಯವಾಗಿ ಅಲ್ಪಸಂಖ್ಯಾತರೇ. ಆದರೆ ಸಮಾಜ ಚಲನಶೀಲವಾಗಿ  ಜೀವಂತವಾಗಿರುವುದೇ ಅಂತಹ ವ್ಯಕ್ತಿಗಳಿಂದ.  ಅವರು ಇರುವ ವರೆಗೂ ಸಮುದಾಯದ ಪ್ರಗತಿಯ ಧ್ಯಾನದಲ್ಲೇ ಇರುತ್ತಾರೆ. ನಂತರ ಅವರೇ ಮುಂದಿನ ಪೀಳಿಗೆಗೆ ಸ್ಫೂರ್ತಿಚಿಲುಮೆಯಾಗಿ, ಸದಾ ಮನಸ್ಸಿನಲ್ಲಿ ಹಸಿರಾಗಿರುತ್ತಾರೆ. ಭೌತಿಕವಾಗಿ ಅವರಿಲ್ಲವಾದರೂ, ಸ್ಮರಣೆಯಲ್ಲಿ  ಸದಾ ಬೆಳಗುತ್ತಲೇ ಇರುತ್ತಾರೆ.

  ಈ ನುಡಿಗೆ  ಅನ್ವರ್ಥಕರಾದವರು, ನಮ್ಮ ಉತ್ತರಕನ್ನಡ ಜಿಲ್ಲೆಯ  ಸಹಕಾರಿ ಸಾಧಕ, ಸಾಮಾಜಿಕ ಪ್ರತಿಭೆ  ದಿ. ಕಡವೆ ಶ್ರೀಪಾದ ಹೆಗಡೆಯವರು.  ಜಿಲ್ಲೆಯ ಶಿರಸಿ, ಸಿದ್ದಾಪುರ  ಯಲ್ಲಾಪುರ ತಾಲೂಕುಗಳು ಅವರ ಕರ್ಮಭೂಮಿಯಾದರೂ, ಹೆಗಡೆಯವರು ಸೃಷ್ಟಿಸಿದ ಸಹಕಾರ ಕ್ರಾಂತಿ, ಇಡೀ ರಾಜ್ಯಕ್ಕೇ ಮಾದರಿಯಾಯಿತು. ಇಡೀ ದೇಶದಲ್ಲೇ ಬೆರಳೆಣಿಕೆಯಲ್ಲಿರುವ ಯಶಸ್ವೀ ಸಹಕಾರಿ ಸಂಘಗಳಲ್ಲಿ ಒಂದಾದ  ಶಿರಸಿಯ  ತೋಟಗಾರರ ಸಹಕಾರಿ ಸಂಘ ( ಟಿ.ಎಸ್ಎಸ್‌ ) ಇಂದೂ  ಸಹ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಕೃಷಿಕರಿಗೆ, ಸಹಕಾರಿ ಧುರೀಣರಿಗೆ, ಅಧಿಕಾರಿಗಳಿಗೆ, ಈ ಸಂಘವೊಂದು ಅಧ್ಯಯನಕ್ಕೆ ಅನುಪಮ ಕ್ಷೇತ್ರವಾಗಿ ಬೆಳೆದು ಬಾಳುತ್ತಿದೆ. ರಾಷ್ಟ್ರದಾದ್ಯಂತ, ಕೇಂದ್ರ ಮತ್ತು ವಿವಿಧ ರಾಜ್ಯಗಳ ಸಹಕಾರಿ ಪ್ರತಿನಿಧಿಗಳು, ವರ್ಷವಿಡೀ ಭೇಟಿನೀಡುತ್ತಲೇ ಇರುತ್ತಾರೆ. ಇತ್ತೀಚೆಗೆ ವಿದೇಶದಿಂದಲೂ ಸಹಕಾರಿ ಆಂದೋಲನದ ಅಧ್ಯಯನಕ್ಕೆ ಜಾಗತಿಕ ಮಟ್ಟದ ನಿಯೋಗ ಭೇಟಿನೀಡಿ, ಸಂಸ್ಥೆಯ ಕಾರ್ಯಶೈಲಿ, ಪ್ರಾಮಾಣಿಕ ಸೇವೆ, ಕೃಷಿಕರ ಹಿತಾಸಕ್ತಿಗಾಗಿನ ಸ್ಪಂದನೆ, ಮತ್ತು ಕೃಷಿಕಪರ ವೈವಿಧ್ಯಮಯ ಚಟುವಟಿಕೆಗಳನ್ನು ಕಂಡು ಮನಃಪೂರ್ವಕವಾಗಿ ಮೆಚ್ಚಿ ಹಾರೈಸಿದ್ದಾರೆ.

   ಇಪ್ಪತ್ತನೆಯ ಶತಮಾನದ ಪ್ರಾರಂಭದ ದಶಕದಲ್ಲಿ,( ೧೯೨೫ -೧೯೯೫ ) ಕಡವೆ ಎಂಬ ಪುಟ್ಟಗ್ರಾಮದಲ್ಲಿ, ಕಡವೆ ಗಾಂಧಿ ಎಂದೇ ಹೆಸರಾದ, ಸ್ವಾತಂತ್ರ್ಯಹೋರಾಟಗಾರ,  ಕಡವೆ ರಾಮಕೃಷ್ಣ ಹೆಗಡೆಯವರ ಮಗನಾಗಿ ಜನಿಸಿದ  ಶ್ರೀಪಾದ ಹೆಗಡೆಯವರು, ತಂದೆಯವರ ಗಾಂಧೀ ತತ್ವದ ಪ್ರಭಾವದಲ್ಲೇ ಬೆಳೆದು, ತಮ್ಮ ಇಡೀ  ಬದುಕನ್ನೇ ಸಹಕಾರೀ ಚಳುವಳಿಗೆ ಸಮರ್ಪಿಸಿದ ಅನನ್ಯ ವ್ಯಕ್ತಿ.

   ಶ್ರೀಮಂತ ಜಮೀನುದಾರರಾಗಿದ್ದ ಹೆಗಡೆಯವರು, ಆ ಕಾಲದಲ್ಲೆ ತಮ್ಮ ಗ್ರಾಮದಲ್ಲಿ ಪ್ರೌಢಶಾಲೆ ಸ್ಥಾಪಿಸುತ್ತಾರೆ. ತಮ್ಮ ತಾಲೂಕಾ ಸ್ಥಳದಲ್ಲಿ  ಕಾಲೇಜು ಸ್ಥಾಪನೆಗೆ ಕಾರಣಕರ್ತರಾಗುತ್ತಾರೆ. ಹಿಂದುಳಿದ  ಶೋಷಿತ ಜನರಿಗಾಗಿ, ಹರಿಜನ ಹೌಸಿಂಗ್‌ ಸಹಕಾರಿ ಸಂಸ್ಥೆಯನ್ನೇ ಹುಟ್ಟುಹಾಕಿ, ಸ್ವಥಃ ಮೇಲ್ವರ್ಗದವರಾದರೂ  ದಶಕಗಳ ಕಾಲ ಹರಿಜನ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಅವರ ಪ್ರಾಮಾಣಿಕತೆ, ಹೋರಾಟ ಮತ್ತು ದಲಿತರ ಬಗೆಗಿನ ಕಳಕಳಿಯಂತಹ ಗುಣಗಳೇ  ಅಧ್ಯಕ್ಷತೆಯ ಗೌರವವನ್ನು ನೀಡಿದೆಯೆನ್ನಬಹುದಾಗಿದೆ.

   ಜಿಲ್ಲೆಗೆ  ನವೋದಯ ಶಾಲೆ ಮಂಜೂರಾಗಿತ್ತು. ಜಿಲ್ಲೆಯ ಯಾವ ತಾಲೂಕುಗಳಲ್ಲೂ ಆವಶ್ಯಕ ಸ್ಥಳ ದೊರೆಯದೇ ಪರಜಿಲ್ಲೆಗೆ ಸ್ಥಳಾಂತರಿಸಬೇಕಾದ ಅನಿವಾರ್ಯಸಂದರ್ಭ  ಕಡವೆಯವರಿಗೆ ತಿಳಿದ ತಕ್ಷಣವೇ ತಮ್ಮ ಖಾಸಗಿ ಜಮೀನಿನಲ್ಲೇ ಮೂವತ್ತು ಎಕರೆ ಸ್ಥಳವನ್ನು ದಾನ ನೀಡಿ, ಶಾಲೆ ಸ್ಥಾಪನೆಯಾಗುವಂತೇ ಮಾಡಿದ ಅವರ ಉದಾರತೆಯನ್ನು  ಇಂದೂ ಜನ ಸ್ಮರಿಸುತ್ತಾರೆ.  ಜಿಲ್ಲೆಯ ಶೈಕ್ಷಣಿಕ ಹರಿಕಾರ ದಿ. ದಿನಕರ ದೇಸಾಯಿಯವರು ಅದೇ ಸಂದರ್ಭದಲ್ಲಿ, ಕಡವೆಯವರ ಶಿಕ್ಷಣ ಸಾಧನೆಯನ್ನು ಮನದುಂಬಿ ಶ್ಲಾಘಿಸಿದ್ದಾರೆ.

   ಐವತ್ತರ ದಶಕದವರೆಗೂ, ಕೃಷಿಹುಟ್ಟುವಳಿಯ ವ್ಯಾಪಾರ ಖಾಸಗಿ ವ್ಯಾಪಾರಸ್ಥರ ಕೈಯಲ್ಲೇ ಸಿಲುಕಿತ್ತು. ಕೃಷಿಕ ಬೆಳೆದ ಫಸಲು ಮಾರಾಟವಾಗಲು, ಅದರ ಹಣ ಪಡೆಯಲು ಖಾಸಗಿಯವರ ಮರ್ಜಿಕಾಯಬೇಕಾಗಿತ್ತು. ನ್ಯಾಯಯುತ ಬೆಲೆ ಸಿಗದೇ ಅನ್ಯಾಯವಾಗುತ್ತಿತ್ತು. ಪಡೆದ ಸಾಲಕ್ಕೆ ಅತ್ಯಧಿಕ ಬಡ್ಡಿಆಕರಿಸಿ, ಸದಾ ಸಾಲದಲ್ಲೇ ತೊಳಲಾಡುವ ದಯನೀಯ ಸ್ಥಿತಿ ರೈತನದ್ದಾಗಿತ್ತು. ಆ ಕಾಲದ ಶೋಷಣೆಯನ್ನು ಕಣ್ಣಾರೆ ಕಂಡ  ಶ್ರೀಪಾದ ಹೆಗಡೆಯವರು, ಸಹಕಾರ ಚಳುವಳಿಯನ್ನು ಸಂಘಟಿಸಲು, ಪಣ ತೊಟ್ಟರು. ದಶಕಗಳ ಕಾಲ ಹಳ್ಳಿ ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿ ರೈತರ ಮನವೊಲಿಸಿ, ಸಹಕಾರ ಕ್ಷೇತ್ರಕ್ಕೇ ಆಹ್ವಾನಿಸಿದರು.  ಶಿರಸಿ ನಗರದ ತುಂಬೆಲ್ಲ ಚದುರಿಹೋಗಿದ್ದ ಖಾಸಗಿ ದಲಾಲರ ಲಾಭಕೋರತನದ ವಿರುದ್ಧ  ಸಿಡಿದೆದ್ದು, ನಗರದ ಹೊರ ಆವರಣದಲ್ಲಿ ವ್ಯವಸ್ಥಿತ ಮಾರುಕಟ್ಟೆ ರಚಿಸಿ, ಸಹಕಾರಸಂಘವೊಂದಲ್ಲದೇ ಖಾಸಗಿಯವರನ್ನೂ ಒಂದೇ ಸ್ಥಳದಲ್ಲಿ ಸ್ಥಾಪಿಸಿದ್ದು  ಅವರ ಬಹುದೊಡ್ಡ ಸಾದನೆ.

   ಸಹಕಾರ ತತ್ವದಡಿಯಲ್ಲಿ, ಕೃಷಿಕರ ಪ್ರಗತಿಗೆ ಅದೆಷ್ಟು ಸಾಧ್ಯತೆಯಿದೆಯೆಂಬುದನ್ನು ಹೊರಜಗತ್ತಿಗೆ ತಮ್ಮ ಸಾದನೆಯಮೂಲಕವೇ ಬಿತ್ತರಿಸಿದರು. ಅವರು ಸೃಷ್ಟಿಸಿದ  ಟಿ.ಎಸ್.ಎಸ್.‌ ಸಂಸ್ಥೆಯ ‍ಕೃಷಿಕಪರ ಸಾಧನೆಯನ್ನು ಗಮನಿಸಿದ ಆಗ ಮುಖ್ಯಮಂತ್ರಿಯಾಗಿದ್ದ  ದೇವರಾಜ ಅರಸ್‌ ರವರು  ಕಡವೆಯವರನ್ನು ಸಹಕಾರಿ ಮಂತ್ರಿಗಳಾಗಲು ಆಮಂತ್ರಿಸಿದ್ದರು. ಆದರೆ ಕಡವೆಯವರು ನಿರಾಕರಿಸಿದರು.

  ಒಂದು ಅವಧಿ ಶಾಸಕರಾದರೂ, ಮತ್ತೆ ಚುನಾವಣೆಗೆ ನಿಲ್ಲುವ ಆಸಕ್ತಿಯನ್ನೂ ತೊರೆದರು. ಆದರೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ದಶಕಗಳ ಕಾಲ ಪಕ್ಷದ ಬೆನ್ನೆಲುಬಾಗಿ ಸೇವೆಸಲ್ಲಿಸಿದರು.  ಪಕ್ಷಕ್ಕೆ ಸಾಕಷ್ಟು ಯುವ ನೇತಾರರನ್ನು ಸೃಷ್ಟಿಸಿದರು.

  ದೇಶದಲ್ಲೇ ಪ್ರಪ್ರಥಮ ರಾಷ್ಟ್ರಮಟ್ಟದ ಪರಿಸರ ಸಮ್ಮೇಳನವನ್ನು ಶಿರಸಿ ನಗರದಲ್ಲಿ, ಟಿ.ಎಸ್.ಎಸ್.‌ ಪ್ರಾಂಗಣದಲ್ಲಿ ಯಶಸ್ವೀಯಾಗಿ ಜರುಗಿಸಿದ ಅಪೂರ್ವ ಸಾಧನೆ ಕಡವೆಯವರದ್ದಾಗಿದೆ. ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಸ್ತುತ ಸಮ್ಮೇಳನದಲ್ಲಿ (೧೯೮೦ ) ರಾಷ್ಟ್ರದ ಪ್ರಮುಖ ಪರಿಸರ ವಿಜ್ಞಾನಿಗಳು ಉಪಸ್ಥಿತರಿದ್ದು, ಪರಿಸರ ನಾಶದ ಅಪಾಯವನ್ನು ಸಾಮಾನ್ಯ ಜನತೆಗೆ ತಿಳಿಹೇಳುವಲ್ಲಿ ಯಶಪಡೆದರು.  ನಂತರ ನಡೆದ ಬೇಡ್ತಿ ಅಘನಾಶಿನಿ ಜಲವಿದ್ಯುತ್‌ ವಿರೋಧಿ ಚಳುವಳಿ ಯಶ ಕಾಣಲು  ಪ್ರಸ್ತುತ ವಿಚಾರ ಸಂಕಿರಣ ಕಾರಣವಾಗಿದ್ದನ್ನು ಮರೆಯಲಾಗದು.

   ತೋಟಗಾರರ ಸಹಕಾರಿ ಸಂಘ ರಾಜ್ಯಕ್ಕೇ ಮಾದರಿಯಾಗಿ, ಬೆಳೆದದ್ದು ನಿಜ. ಸಹಕಾರಿ ತತ್ವದ ನೆಲೆಯಲ್ಲಿ, ಜನಪರ, ಕೃಷಿಕ ಪರ ಧ್ಯೇಯದಲ್ಲಿ, ಅದೆಷ್ಟು ವೈವಿಧ್ಯಮಯ ಚಟುವಟಿಕೆಗಳನ್ನು ನಿರ್ವಹಿಸಬಹುದೆಂಬುದಕ್ಕೆ,( ವಾರ್ಷಿಕವಾಗಿ ೨೦೦೦ ಕೋಟಿ ಆಯ ವ್ಯಯ) ಸಮರ್ಥ ಉದಾಹರಣೆಯಾಗಿ ಇಂದು ಈ ಸಹಕಾರಿ ಸಂಘ ಬೆಳಗಿ ಬಾಳುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ, ಚುನಾವಣೆಯ ಸೋಲು, ಸ್ವಜನಪಕ್ಷಪಾತ, ಆರ್ಥಿಕ ಅಪವ್ಯಯದಂತಹ  ಋಣಾತ್ಮಕ ಚಟುವಟಿಕೆಗಳು, ನ್ಯಾಯಾಲಯದ ಕಟ್ಟೆಯನ್ನೂ ಏರಿ, ನಲ್ವತ್ತು ಸಾವಿರಕ್ಕೂ ಮೀರಿದ ಕೃಷಿಕ ಸಹಕಾರಿ ಸದಸ್ಯರ ಬದುಕೇ ಅತಂತ್ರತೆಗೆ ಸಿಲುಕುವಂತಹ ಸ್ಥಿತಿ ನಿರ್ಮಾಣವಾಗುತ್ತಿರುವುದು, ವಿಷಾದನೀಯ. ಸಹಕಾರ ತತ್ವದ ನೆಲೆಯಲ್ಲಿ ರೈತರ ಬದುಕನ್ನು ಬೆಳಗಿಸುವ ಅದೆಷ್ಟು ಸಾಧ್ಯತೆಯಿದೆ  ಎಂಬುದನ್ನು  ಸೃಷ್ಟಿಸಿಯೇ ತೋರಿಸಿದ, ಅಭಿವೃದ್ಧಿಯಲ್ಲಿ ಪ್ರತಿ ಸರಕಾರವೇ ಆದ,  ಇಂಥದೊಂದು ಬೃಹತ್‌ ಸಂಘಟನೆ ಎಂದೂ ಸೋಲಬಾರದು.  ಕಡವೆ ಶ್ರೀಪಾದ ಹೆಗಡೆಯವರ ಜನಪರ ನಿಲುಮೆ, ಹೋರಾಟಗಳು ಹುಸಿಯಾಗಬಾರದು.

   ಕನ್ನಡದ ಮಹತ್ವಪೂರ್ಣ ಲೇಖಕ  ಗೌರೀಶ ಕೈಕಿಣಿಯವರು, ಶ್ರೀಪಾದ ಹೆಗಡೆಯವರ ಬಗೆಗೆ ಮನತುಂಬಿ ಅಭಿವ್ಯಕ್ತಿಸಿದ ಅಭಿಪ್ರಾಯವನ್ನು ಇಲ್ಲಿ ಸ್ಮರಿಸಲೇ ಬೇಕು.

 ʻʻ ಹೆಗಡೆಯವರ ವ್ಯಕ್ತಿತ್ವ ನಿರಾಡಂಬರವಿದ್ದಷ್ಟೇ ನಿರಾವರಣ.  ಉಗ್ರವಲ್ಲದ ಗಾಂಭೀರ್ಯ. ಹಗುರಾಗದ ಹಾಸ್ಯ. ದೌರ್ಬಲ್ಯವಾಗದ ಸೌಜನ್ಯ. ಚಾಲಾಕು ಎನಿಸದ ಚಾತುರ್ಯ. ಅಕೃತ್ರಿಮ ಸಂಯಮ.  ಪ್ರದರ್ಶನವಿಲ್ಲದ ವೈಚಾರಿಕತೆ, ಆಢ್ಯತೆಗೆ ಹಾಯದ ಮಾರ್ಗದರ್ಶಿತನ, ಅಹಂಕಾರವಾಗದ ಸ್ವಾಭಿಮಾನ.  ತಾಪವಲ್ಲದ ತೇಜಸ್ಸು.  ಸಂಪ್ರದಾಯಸ್ಥರು ಆದರೆ ಕರ್ಮಠರಲ್ಲ. ಸಜ್ಜನ ಹಿತೈಷಿಗಳು ಅನ್ಯರಿಗೆ ದ್ರೋಹಿಗಳಲ್ಲ.  ಶಿಸ್ತು ನಿಷ್ಠೆ ಅವರ ವೃತ.  ಜಿಲ್ಲೆಯಲ್ಲಿ ಕಾಂಗ್ರೆಸ್‌ ಭದ್ರವಾಗಲು ಸುದೀರ್ಘ ಕಾಲದ ಅವರ ಅಧ್ಯಕ್ಷತೆಯೇ ತಳಪಾಯ.

   ಈ ಟಿ.ಎಸ್ಎಸ್‌, ಎಂಬ ಮಹಾ ಸಂಸ್ಥೆಯೇ ಸಾಕು ಅವರ ಚರಿತ್ರೆ ಚಾರಿತ್ರ್ಯಗಳ ಭವ್ಯ ಸ್ಮಾರಕವಾಗಿ ಗೆಲುವಿನ ಗೋಪುರವಾಗಿ ನಿಲ್ಲಲಿಕ್ಕೆ. ʼʼ

   ಅವರು ಸಂಸ್ಥಾಪಕರಾಗಿ ಅಧ್ಯಕ್ಷರಾಗಿ ಸೇವೆಸಲ್ಲಿಸಿದ  ಹತ್ತಾರು  ಸಂಸ್ಥೆಗಳು ಇಂದೂ ಮಾದರಿಯಾಗಿ ಮುನ್ನಡೆಯುತ್ತಿದೆ. ಒಬ್ಬ ಜನನಾಯಕನಲ್ಲಿರಲೇ ಬೇಕಾದ, ಛಲ, ಪ್ರಾಮಾಣಿಕತೆ, ನ್ಯಾಯ ನಿಷ್ಠುರತೆ. ಜನಪ್ರೀತಿ, ಪರಂಪರೆಯ ಬಗೆಗಿನ ಪ್ರೀತಿ, ಮತ್ತು ನಿರಂತರ ಕ್ರಿಯಾಶೀಲತೆ ಯಂತಹ ಎಲ್ಲ ಗುಣಗಳ ಗಣಿಯಾಗಿ, ಮುಂದಿನ ನಾಯಕರುಗಳಿಗೊಂದು ಸಮರ್ಥ ಆದರ್ಶವಾಗಿ ರಾಜ್ಯದ ಜನಮಾನಸದಲ್ಲಿ ಜೀವಂತ ಸ್ಫೂರ್ತಿಯಾಗಿ ನಮ್ಮೊಂದಿಗಿದ್ದಾರೆ, ಕಡವೆ ಶ್ರೀಪಾದ ಹೆಗಡೆಯವರು.

                                               ಸುಬ್ರಾಯ ಮತ್ತೀಹಳ್ಳಿ.  ತಾ- ೨-೭-೨೦೨೪.

  

 

ʻʻ ನಯನೋತ್ಸವ.ʼʼ

 

ನಿಯಮ ವಿನಯ ನೇಹದಲ್ಲಿ,

ಸ್ವಚ್ಛಸಿರಿಯ  ಸಹಜದಲ್ಲಿ

ವಿಜ್ಞಾನ ಆಧ್ಯಾತ್ಮದ  ಸಾನ್ನಿಧ್ಯದಲ್ಲಿ

           ನಿತ್ಯೋತ್ಸವ, ನಿತ್ಯ ನಯನೋತ್ಸವ.

 

ಸರಳತೆಯ ಸಾಕಾರ, ಸೂಕ್ಷ್ಮ ಗಂಭೀರ

ಸೌಮನಸ್ಯದ  ಸೂಸು, ಆದರೋಪಚಾರ.

ತೃಣವೊಂದೆ ಧನವೊಂದೆ,  ಸೇವೆಯೊಂದೇ  ಸಾರ

          ನಿತ್ಯೋತ್ಸವ.......ನಿತ್ಯ ನಯನೋತ್ಸವ.

 

ನವದೃಷ್ಟಿ ನವಸೃಷ್ಟಿ, ನವಕಿರಣ ವೃಷ್ಟಿ

ಹಣತೆ ಬಳ್ಳಿಯಲಿ  ಬೆಳಕ ಪುಷ್ಟಿ

ಒಂದಾಗಿದೆ ಶಿವ ಭಕ್ತಿ, ಸೇತೂ ರಾಮಶಕ್ತಿ.

ನಡೆದಿದೆ ನಿತ್ಯ  ದೃಷ್ಟಿಕಾಮೇಷ್ಟಿ.

         ನಿತ್ಯೋತ್ಸವ......ನಿತ್ಯ ನಯನೋತ್ಸವ.

 

ತಣ್ಣನೆಯ ಕಣ್ಣಿನಲಿ,  ಹೊನ್ನಮಣಿ ಮಿನುಗಿತೋ

ಮಣ್ಣಕಣದಿ ಜೀವಚಿಗುರು, ನಕ್ಕು ನಲಿಯಿತೋ.

ದೃಷ್ಟಿಯಿತ್ತರೋ, ಮನಕೆ ಪುಷ್ಟಿ ಕೊಟ್ಟರೋ

ಕತ್ತಲ, ಕಷ್ಟ ಕಳೆದರೋ, ನಡುವೆ ಬೆಳಕನಿಟ್ಟರೋ.

        ನಿತ್ಯೋತ್ಸವ  ನಿತ್ಯ ನಯನೋತ್ಸವ.

 

ಒಳಗಣ್ಣು ತೆರೆಯಲಿ, ಮನಸು ತಿಳಿಯಾಗಲಿ

ಅರಿ ಅಳಿಯಲಿ, ಅರಿವು ಹೊಳೆಯಲಿ

ಸೌಹಾರ್ದ  ಸಿರಿಯಲ್ಲಿ ಸಮುದಾಯ ನೆಲೆಸಲಿ

ಅನುದಿನವೂ ನಡೆಯಲಿಲ್ಲಿ   ದೀಪಾವಳಿ.

        ನಿತ್ಯೋತ್ಸವ  ನಿತ್ಯ ನಯನೋತ್ಸವ.

 

 

                                                         ಸುಬ್ರಾಯ  ಮತ್ತೀಹಳ್ಳಿ.

                                                          ೧೯- ೭ – ೨೦೨೪.