ಬದುಕುವವರೆಲ್ಲ್ರರಿಗೂ ಬದುಕಿನ ಬಗೆಗೆ
ಮಾತನಾಡುವ ಹಕ್ಕಿದೆ.
ಬದುಕಲು ಇಚ್ಛಿಸುವ ಎಲ್ಲರಿಗೂ ಬದುಕು ದಕ್ಕಿದೆ...?
ಛೇ...ಛೇ.. ಸುಳ್ಳು ಸುಳ್ಳು. ದಕ್ಕದೆಯೂ ಬದುಕಿದ್ದಾರೆ ಅಷ್ಟೇ.
ಬದುಕೆಂದರೇನೆಂದು ಹುಡುಕ ಹೊರಟವರೆಲ್ಲ ಎದುರಾದ ಅಸಂಖ್ಯ
ದಾರಿಗಳಲ್ಲಿ
ದಿಕ್ಕು ತಪ್ಪಿ, ತಡಕಾಡಿದ್ದಾರೆ. ತಪ್ಪು ದಿಕ್ಕಿಗೆ ಢಿಕ್ಕಿ
ಹೊಡೆದಿದ್ದಾರೆ.
ಅರ್ಥವಾಗದಿದ್ದರೂ ಅರ್ಥಕ್ಕಾಗಿ
ಬದುಕಿದ್ದಾರೆ.
ಕತ್ತಲೆ ಬತ್ತಲೆ ಸುತ್ತಲೂ, ಹೊತ್ತು ಕಳೆದಂತೆ ಉರುಳು, ಕತ್ತ ಸುತ್ತಲೂ.
ಅಲ್ಲಿ ಹಗಲಿಲ್ಲ, ಇರುಳಿಲ್ಲ ಬೆಳಕಿಲ್ಲ
ಹೊಳೆವ ಸೆಳಕಿಲ್ಲ
ಬಂದ ದಾರಿಯ ನೆನಪಿಲ್ಲ, ಸಾಗುವ ದಾರಿಗೆ ಫಲಕವಿಲ್ಲ.
ಯಾಕೆ ಸುಮ್ಮನೇ ಇಂಥ ಭಂಡ ಸಾಹಸ...?
ಅನ್ವೇಷಣೆಯ ನಿರರ್ಥಕ ಆಯಾಸ.
ಬದುಕು ಅಂದರೆ ಹೀಗೆ ಎಂದು ಬೊಗಳೆ ಬಿಡಲೇ ?
ನಂಬುವ ಮಿದುಳಲ್ಲಿ ಸುಳ್ಳ ಬಿತ್ತಿ ಬಿಡಲೇ..?
ಯಾಕೆ ಬೇಕು,? ಇದೆಯಲ್ಲ.. ಈಗಲೇ ಸಾಕಷ್ಟು ತಿಂದು ಮಿಗುವಷ್ಟು
ನೂರಾರು ಜನ್ಮಕ್ಕೆ ಸಾಕಾಗುವಷ್ಟು.
ಅಷ್ಟಕ್ಕೂ ಇದಕ್ಕೇಕೆ ಉತ್ತರಿಸಬೇಕು..?
ನನ್ನ ಹೆಜ್ಜೆಗುರುತೇ ಹೇಳಬಹುದಲ್ಲ ನೀನೆಷ್ಟರವನೆಂದು.
ಬದುಕು ಮಾತಿನಲ್ಲಿಲ್ಲ. ಅಹಮಿಕೆಯ ಆಟದಲ್ಲಿಲ್ಲ.
ಉತ್ತರಿಸುವ ಒಣ ಜಂಬದಲ್ಲೂ ಇಲ್ಲ.
.ಗದ್ದಲದ ಗೂಡಲ್ಲಿ ಬದುಕು ಹಾಡುವುದಿಲ್ಲ.
ಸುಮ್ಮನಿದ್ದರೆ ಸಾಕು, ಗುಮ್ಮ ಕಾಡುವುದಿಲ್ಲ
ಸಮಾಜ ಮುಖಿ (ಬೆಂಗಳೂರು ಪತ್ರಿಕೆಯಲ್ಲಿ ಪ್ರಕಟಿತ) ೨೬-೩-೨೩
No comments:
Post a Comment